
ಬೆಂಗಳೂರು (ನ.08): ಕಳೆದ 2 ದಿನಗಳಿಂದ ಯಶವಂತಪುರ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಈರುಳ್ಳಿ ಸಗಟು ದರ ಏರಿಕೆಯಾಗುತ್ತಿದ್ದು, ಹೀಗೆ ಮುಂದುವರಿದರೆ ಚಿಲ್ಲರೆ ಮಾರುಕಟ್ಟೆಯಲ್ಲಿ ಕೆಜಿ ಈರುಳ್ಳಿ 100 ರು. ಆಗುವ ಎಲ್ಲ ಸಾಧ್ಯತೆಗಳಿವೆ. ಗುರುವಾರ ನಗರದ ಚಿಲ್ಲರೆ ಮಾರುಕಟ್ಟೆಯಲ್ಲಿ ಉತ್ತಮ ಗುಣಮಟ್ಟದ ಈರುಳ್ಳಿ ಗರಿಷ್ಠ ಕೆಜಿಗೆ 70- 80 ರು. ವರೆಗೆ ಮಾರಾಟವಾಗಿದೆ. ಆದರೆ ಕೆಜಿಗೆ 40 ರು. ಈರುಳ್ಳಿಯೂ ಸಿಗುತ್ತಿದೆ.
ಆದರೆ, ಇದು ತೀರಾ ಕಳಪೆ ಗುಣಮಟ್ಟದಿಂದ ಕೂಡಿವೆ. ಮುಂದಿನ 15 ದಿನಗಳಲ್ಲಿ ಇನ್ನಷ್ಟು ಬೆಲೆ ಹೆಚ್ಚಾಗುವ ಸಾಧ್ಯತೆಗಳಿವೆ ಎಂದು ವ್ಯಾಪಾರಿಗಳು ತಿಳಿಸಿದ್ದಾರೆ. ಎಪಿಎಂಸಿಗೆ 100480 ಚೀಲ ಈರುಳ್ಳಿ ಬಂದಿದೆ. ಮಹಾರಾಷ್ಟ್ರದಿಂದ ಬಂದಿರುವ 8-10 ಲಾರಿ ಹಳೇ ದಾಸ್ತಾನಿನ ಈರುಳ್ಳಿ ಗುಣಮಟ್ಟದಿಂದ ಕೂಡಿದೆ. ಕ್ವಿಂಟಲ್ಗೆ ಗರಿಷ್ಠ 7200 ರು. ರಿಂದ 7500 ರು. ಹಾಗೂ ಕನಿಷ್ಠ 3500 ರು. ರಿಂದ 5000 ರು. ಬೆಲೆಯಲ್ಲಿವೆ. ಕರ್ನಾಟಕದಿಂದ 500 ಕ್ಕೂ ಹೆಚ್ಚು ಲಾರಿಗಳು ಬಂದಿದ್ದರೂ ತೀರಾ ಕಳಪೆಯಾಗಿದ್ದು, ಕ್ವಿಂಟಲ್ಗೆ ಕನಿಷ್ಠ 1500 ರು.ರಿಂದ ಗರಿಷ್ಠ 5500 ರು. ಎಂದು ವರ್ತಕರು ತಿಳಿಸಿದ್ದಾರೆ.
ಲೋಕಾಯುಕ್ತ ಪೊಲೀಸರ ವಿಚಾರಣೆ ಬಳಿಕ ಸಿಎಂ ಸಿದ್ದರಾಮಯ್ಯಗೆ ಈಗ ಇ.ಡಿ. ನೋಟಿಸ್?
ಅಕ್ಟೋಬರ್ ಕೊನೆಯ ವಾರದಲ್ಲಿ ತೀವ್ರ ಮಳೆಯಾದ ಪರಿಣಾಮ ರಾಜ್ಯದ ಈರುಳ್ಳಿ ಸಂಪೂರ್ಣ ನೆಲಕಚ್ಚಿದೆ. ಒಂದೆರಡು ದಿನಗಳಲ್ಲಿ ಬಳಸಬೇಕು, ಇಲ್ಲವಾದರೆ ಕೊಳೆತುಹೋಗುತ್ತವೆ. ಹೀಗಾಗಿ ರಾಜ್ಯದ ಈರುಳ್ಳಿಗೆ ಬೆಲೆ ಕಡಿಮೆಯಿದೆ. ಸದ್ಯ ಚಿತ್ರದುರ್ಗದ ಆಚೆಗೆ ಉತ್ತರ ಕರ್ನಾಟಕದ ಬಾಗಲಕೋಟೆ, ಗದಗ, ಕೊಪ್ಪಳ ಸೇರಿ ಇತರೆಡೆಯಿಂದ ಬೆಂಗಳೂರಿನ ಮಾರುಕಟ್ಟೆಗೆ ಈರುಳ್ಳಿ ಬರುತ್ತಿದೆ ಎಂದು ಯಶವಂತಪುರ ಎಪಿಎಂಸಿಯ ವರ್ತಕ ಬಿ.ರವಿಶಂಕರ್ ಹೇಳಿದರು.
ತರಕಾರಿ ಬೆಲೆಯಲ್ಲಿ ಭಾರಿ ಹೆಚ್ಚಳ: ತರಕಾರಿ ಧಾರಣೆ ವಾರದಿಂದ ವಾರಕ್ಕೆ ಹೆಚ್ಚುತ್ತಿದೆ. ತರಕಾರಿ ಮಾರುಕಟ್ಟೆಗೆ ಹೋದ ಗ್ರಾಹಕರು ದರ ಕೇಳಿ ಹೌಹಾರುತ್ತಿದ್ದಾರೆ. ಉತ್ತರ ಕನ್ನಡದಲ್ಲಿ ತರಕಾರಿ ಬೆಳೆ ತುಂಬ ಕಡಿಮೆ. ಅದೂ ಒಂದು ಸೀಜನ್ಗೆ ಮಾತ್ರ ಕೆಲವೆಡೆ ಸೀಮಿತವಾಗಿ ಬೆಳೆಯಲಾಗುತ್ತದೆ. ಜಿಲ್ಲೆಗೆ ಬೆಳಗಾವಿ, ಹಾವೇರಿ, ಧಾರವಾಡ, ಗದಗ ಮತ್ತಿತರ ಜಿಲ್ಲೆಗಳಿಂದ ತರಕಾರಿ ಬರುತ್ತಿದೆ. ಈ ಬಾರಿ ತರಕಾರಿ ಬೆಳೆಯುವಲ್ಲಿ ಭಾರಿ ಮಳೆ. ಈಗಲೂ ಮಳೆ ಮುಂದುವರಿದಿದೆ. ಕಾಯಿಪಲ್ಲೆಗಳು ಮಳೆಗೆ ಸಿಲುಕಿ ಕೊಳೆತುಹೋಗುತ್ತಿವೆ. ಬೇಡಿಕೆ ಇರುವಷ್ಟು ತರಕಾರಿಗಳು ಲಭ್ಯವಿಲ್ಲ. ಹೀಗಾಗಿ ಧಾರಣೆ ವಾರದಿಂದ ವಾರಕ್ಕೆ ಏರುತ್ತಿದೆ.
ಸಿಎಂ ಪತ್ನಿ ಪ್ರಕರಣದ ಎಫೆಕ್ಟ್: ಮುಡಾ ಎಲ್ಲ 50:50 ಸೈಟ್ ರದ್ದು!
ದೀಪಾವಳಿ ಹಬ್ಬದಲ್ಲಿ ತರಕಾರಿಗೆ ಬೇಡಿಕೆ ಹೆಚ್ಚು. ಆದರೆ ಇಳುವರಿ ಕಡಿಮೆ. ಮಾರುಕಟ್ಟೆಗೆ ಬಂದ ಗ್ರಾಹಕರು ದರ ಕೇಳಿ ಕಂಗಾಲಾಗಿದ್ದಾರೆ. ಕೆಜಿಯೊಂದಕ್ಕೆ ₹30, ₹40ಕ್ಕೆ ಮಾರಾಟವಾಗುತ್ತಿದ್ದ ಕಾಯಿಪಲ್ಲೆಗಳ ದರ ₹80 ಗಳಿಗೇರಿದೆ. ತಿಂಗಳ ಹಿಂದಿನ ದರಕ್ಕೆ ಹೋಲಿಸಿದರೆ ಡಬಲ್ ಆಗಿದೆ. ನಿಂಬೆಹಣ್ಣಿನ ದರವೂ ಭಾರಿ ಏರಿಕೆಯಾಗಿದೆ. ಒಂದು ಲಿಂಬು ₹5ಕ್ಕೆ ಒಂದರಂತೆ ಮಾರಾಟವಾಗುತ್ತಿದೆ. ಬೆಳೆಯೇ ಇಲ್ಲ. ಬೆಳೆಗಾರರ ಸಂಖ್ಯೆಯೂ ಕಡಿಮೆಯಾಗುತ್ತಿದೆ. ದರ ಹೆಚ್ಚಳವಾಗದೆ ಮತ್ತೇನು ಎಂದು ಮಾರಾಟಗಾರರು ಹೇಳುತ್ತಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ