ರಾಜ್ಯದಲ್ಲಿ ಹೊಸ ಶಿಕ್ಷಣ ನೀತಿ ಆ.20ರೊಳಗೆ ಜಾರಿ: ಸಚಿವ

By Kannadaprabha NewsFirst Published Aug 1, 2020, 8:33 AM IST
Highlights

ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಅಳವಡಿಸಿಕೊಳ್ಳಲಾದ ನೂತನ ಕರ್ನಾಟಕ ಶಿಕ್ಷಣ ನೀತಿಯನ್ನು ಆ.20ರೊಳಗೆ ಲೋಕಾರ್ಪಣೆ ಮಾಡಲು ಅಗತ್ಯ ಕ್ರಮ ಕೈಗೊಳ್ಳುವಂತೆ ಪ್ರಾಥಮಿಕ ಶಿಕ್ಷಣ ಸಚಿವ ಎಸ್‌.ಸುರೇಶ್‌ ಕುಮಾರ್‌ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಬೆಂಗಳೂರು(ಆ.01): ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಅಳವಡಿಸಿಕೊಳ್ಳಲಾದ ನೂತನ ಕರ್ನಾಟಕ ಶಿಕ್ಷಣ ನೀತಿಯನ್ನು ಆ.20ರೊಳಗೆ ಲೋಕಾರ್ಪಣೆ ಮಾಡಲು ಅಗತ್ಯ ಕ್ರಮ ಕೈಗೊಳ್ಳುವಂತೆ ಪ್ರಾಥಮಿಕ ಶಿಕ್ಷಣ ಸಚಿವ ಎಸ್‌.ಸುರೇಶ್‌ ಕುಮಾರ್‌ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ರಾಷ್ಟ್ರೀಯ ಶಿಕ್ಷಣ ನೀತಿ ಕುರಿತು ಇಲಾಖೆ ಅಧಿಕಾರಿಗಳು ಹಾಗೂ ಶಿಕ್ಷಣ ಕ್ಷೇತ್ರದ ವಿಧಾನ ಪರಿಷತ್‌ ಸದಸ್ಯರೊಂದಿಗೆ ಶನಿವಾರ ಸಭೆ ನಡೆಸಿದ ಸಚಿವರು, ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿರುವ ಪ್ರಮುಖಾಂಶಗಳನ್ನು ಕರ್ನಾಟಕದ ಅಗತ್ಯಗಳಿಗೆ ತಕ್ಕಂತೆ ಅಳವಡಿಸಿಕೊಳ್ಳಲು ಅನುಕೂಲವಾಗುವಂತಹ ಪ್ರಸ್ತಾವನೆ ಸಿದ್ಧಪಡಿಸಲು ಅಧಿಕಾರಿಗಳಿಗೆ ಸೂಚಿಸಿದರು.

ವರಮಹಾಲಕ್ಷ್ಮಿ ಹಬ್ಬದಂದು ಶಿಕ್ಷಕರಿಗೆ ಸಿಹಿ ಸುದ್ದಿ ನೀಡಿದ ಸಚಿವ ಸುರೇಶ್ ಕುಮಾರ್...!

ಸ್ವಾತಂತ್ರ್ಯಾನಂತರ ಕೇವಲ ಎರಡು ಬಾರಿ ಮಾತ್ರ ಶಿಕ್ಷಣ ನೀತಿ ಪರಿಷ್ಕರಣೆಗೊಂಡಿದೆ. ಆಧುನಿಕ ಸಮಾಜದ ಸವಾಲುಗಳನ್ನು ಎದುರಿಸಲು ಅಗತ್ಯವಾದ ಪರಿಷ್ಕರಣೆಯೊಂದಿಗೆ ಹೊಸ ಶಿಕ್ಷಣ ನೀತಿಯನ್ನು ಕೇಂದ್ರ ಸರ್ಕಾರ ಘೋಷಿಸಿದೆ. ಈ ನೀತಿಯನ್ನು ಸಾಧ್ಯವಾದಷ್ಟುಬೇಗ ರಾಜ್ಯದಲ್ಲಿ ಅಳವಡಿಸಿಕೊಳ್ಳಲು ಶ್ರಮಿಸಬೇಕು ಎಂದರು.

ಕಸ್ತೂರಿ ರಂಗನ್‌ಗೆ ಭರವಸೆ: ಇದಕ್ಕೂ ಮುನ್ನ ಶುಕ್ರವಾರ ರಾಷ್ಟ್ರೀಯ ಶಿಕ್ಷಣ ನೀತಿ ಕರಡು ಸಮಿತಿ ಅಧ್ಯಕ್ಷರಾದ ಡಾ.ಕೆ.ಕಸ್ತೂರಿರಂಗನ್‌ ಅವರೊಂದಿಗೆ ಶನಿವಾರ ವೆಬಿನಾರ್‌ ಮೂಲಕ ಶಿಕ್ಷಣ ನೀತಿ ಕುರಿತು ಚರ್ಚಿಸಿದ ಅವರು, ರಾಷ್ಟ್ರೀಯ ಶಿಕ್ಷಣ ನೀತಿಯನ್ನು ವ್ಯವಸ್ಥಿತವಾಗಿ ಜಾರಿಗೊಳಿಸುವ ಮೊದಲ ರಾಜ್ಯಗಳ ಸಾಲಿನಲ್ಲಿ ಕರ್ನಾಟಕವೂ ಒಂದಾಗಲಿದೆ ಎಂದು ಭರವಸೆಯನ್ನು ನೀಡಿದರು.

ಉದ್ಯೋಗ ನೇಮಕದಲ್ಲಿ ಬೆಂಗಳೂರು ಮುಂಚೂಣಿ

ಪ್ರಸ್ತುತ ಹಾಗೂ ಭವಿಷ್ಯದ ಶೈಕ್ಷಣಿಕ ಸವಾಲುಗಳನ್ನು ಗಮನದಲ್ಲಿಟ್ಟುಕೊಂಡು ರೂಪಿಸಿರುವ ಈ ಶಿಕ್ಷಣ ನೀತಿ ಸಮಗ್ರವಾಗಿದೆ. ಸರ್ವರಿಗೂ ಉತ್ತಮ ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ಸುಸ್ಥಿರ, ಸಮಾನ ಹಾಗೂ ಜೀವಂತಿಕೆಯುಳ್ಳ ಸಮಾಜ ನಿರ್ಮಿಸುವ ಗಟ್ಟಿಯಾದ ನೀತಿಯಾಗಿದೆ. ಇಂತಹ ನೀತಿಯನ್ನು ಅನುಷ್ಠಾನಗೊಳಿಸಲು ರಾಜ್ಯ ಸರ್ಕಾರ ಉತ್ಸುಕವಾಗಿದೆ ಎಂದು ಹೇಳಿದರು.

ಕರ್ನಾಟಕದಿಂದಲೇ ಕ್ರಾಂತಿ ಆರಂಭ- ಕಸ್ತೂರಿ ರಂಗನ್‌:

ಇದೇ ವೇಳೆ ಮಾತನಾಡಿದ ಕಸ್ತೂರಿ ರಂಗನ್‌, ರಾಷ್ಟ್ರೀಯ ಶಿಕ್ಷಣ ನೀತಿಯಿಂದ ದೇಶದಲ್ಲಿ ಶೈಕ್ಷಣಿಕ ಕ್ರಾಂತಿಯಾಗಲಿದ್ದು, ಅದರ ಶ್ರೀಕಾರ ಕರ್ನಾಟಕದಿಂದಲೇ ಆರಂಭವಾಗಲಿ. ನೂತನ ರಾಷ್ಟ್ರೀಯ ನೀತಿಯಲ್ಲಿರುವ ಬಹುತೇಕ ಅಂಶಗಳನ್ನು ಕರ್ನಾಟಕ ಈಗಾಗಲೇ ಅನುಷ್ಠಾನಗೊಳಿಸಿದೆ. ಈ ಅರ್ಥದಲ್ಲಿ ಹೊಸ ಶೈಕ್ಷಣಿಕ ನೀತಿಗೆ ಕರ್ನಾಟಕದ ಕೊಡುಗೆ ದೊಡ್ಡದು. ರಾಷ್ಟ್ರೀಯ ನೀತಿಯಲ್ಲಿರುವ ಹಲವು ಅಂಶಗಳು ಈಗಾಗಲೇ ರಾಜ್ಯದಲ್ಲಿ ಜಾರಿಯಲ್ಲಿರುವುದರಿಂದ ಕರ್ನಾಟಕ ಇತರ ರಾಜ್ಯಗಳಿಗಿಂತ ಸಹಜವಾಗಿಯೇ ಮುಂದಿರುತ್ತದೆ ಎಂದರು

ವಿಮಾನಯಾನ ಕ್ಷೇತ್ರದಲ್ಲಿ 4 ಲಕ್ಷ ಜನರ ಉದ್ಯೋಗ ಡೋಲಾಯಮಾನ!

ನಾನು ಕೇರಳದಲ್ಲಿ ಜನಿಸಿದ್ದರೂ ಕರ್ನಾಟಕ ನನ್ನ ಕರ್ಮಭೂಮಿ. ಆದ್ದರಿಂದ ಕರ್ನಾಟಕ ನನ್ನ ರಾಜ್ಯ ಎಂದು ಹೆಮ್ಮೆಯಿಂದ ಹೇಳುತ್ತೇನೆ ಎಂದು ಹೇಳಿದರು. ಭಾರತವು ವಿವಿಧ ರೀತಿಯ ಸಾಮಾಜಿಕ, ಭಾಷೆ, ಧರ್ಮ, ಸಂಸ್ಕೃತಿ, ಗ್ರಾಮೀಣ, ನಗರ, ಗುಡ್ಡಗಾಡು, ಅಭಿವೃದ್ಧಿ ಹೊಂದಿದ, ಹಿಂದುಳಿದ ಪ್ರದೇಶಗಳಂತಹ ಹಲವು ಸ್ತರಗಳ ಪ್ರದೇಶಗಳನ್ನು ಒಳಗೊಂಡಿದೆ. ಇದೆಲ್ಲವನ್ನು ಗಮನದಲ್ಲಿಟ್ಟುಕೊಂಡು ಮುಂದಿನ 20 ವರ್ಷಗಳಲ್ಲಿ ದೇಶವು ಕ್ಷಿಪ್ರವಾಗಿ ಅಭಿವೃದ್ಧಿ ಹೊಂದುವಕ್ಕೆ ಪೂರಕವಾಗಿ ಹೊಸ ಶಿಕ್ಷಣ ನೀತಿ ರೂಪಿಸಲಾಗಿದೆ ಎಂದು ಹೇಳಿದರು.

click me!