National Bravery Award: ಕರ್ನಾಟಕದ 3 ಬಾಲಕರಿಗೆ ಶೌರ್ಯ ಪ್ರಶಸ್ತಿ

By Kannadaprabha NewsFirst Published Jan 25, 2023, 11:37 AM IST
Highlights

ಆಪತ್ಕಾಲದಲ್ಲಿ ಯುಕ್ತಿ ಬಳಸಿ ಶೌರ್ಯ ಮೆರೆದ ಮೂವರು ಕನ್ನಡ ಕುವರರಿಗೆ ಒಲಿದು ಬಂದ ರಾಷ್ಟ್ರಮಟ್ಟದ ಶೌರ್ಯ ಪ್ರಶಸ್ತಿ. 

ನವದೆಹಲಿ(ಜ.25):  ‘ಧೈರ್ಯಂ ಸರ್ವತ್ರ ಸಾಧನಂ’ ಎನ್ನುವಂತೆ ಆಪತ್ಕಾಲದಲ್ಲಿ ಯುಕ್ತಿ ಬಳಸಿ ಶೌರ್ಯ ಮೆರೆದ ಮೂವರು ಕನ್ನಡ ಕುವರರಿಗೆ ರಾಷ್ಟ್ರಮಟ್ಟದ ಶೌರ್ಯ ಪ್ರಶಸ್ತಿ ಒಲಿದು ಬಂದಿದೆ. ದಾವಣಗೆರೆ ಜಿಲ್ಲೆ ಜಗಳೂರಿನ ಕೀರ್ತಿ ವಿವೇಕ್‌, ಹುಬ್ಬಳಿ ಹುಡುಗ ಆದಿತ್ಯ ಮಲ್ಲಿಕಾರ್ಜುನ ಶಿವಳ್ಳಿ ಹಾಗೂ ಕೊಡಗಿನ ಸೋಮವಾರಪೇಟೆಯ ಮಾಸ್ಟರ್‌ ಕೆ.ಪಿ.ದೀಕ್ಷಿತ್‌ನ ಸಾಹಸ ಮೆಚ್ಚಿ ಭಾರತೀಯ ಮಕ್ಕಳ ಕಲ್ಯಾಣ ಪರಿಷತ್‌ ಶೌರ್ಯ ಪ್ರಶಸ್ತಿಗೆ ಆಯ್ಕೆ ಮಾಡಿದೆ. ಬುಧವಾರ ದೆಹಲಿಯಲ್ಲಿ ಆಯೋಜಿಸಿರುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ.

ಈ ಮೂವರು ‘ಕನ್ನಡಪ್ರಭ’ ಜೊತೆ ಮಾತನಾಡಿ ಆಪತ್ಕಾಲದಲ್ಲಿ ತಾವು ಮರೆದ ಶೌರ್ಯದ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ.

Shaurya Puraskar : ಗಿರಣಿಯಿಂದ ತಾಯಿ ರಕ್ಷಿಸಿದ ಕೊಡಗಿನ ದೀಕ್ಷಿತ್‌ಗೆ ರಾಷ್ಟ್ರೀಯ ಶೌರ್ಯ ಪ್ರಶಸ್ತಿ!

ವಿವೇಕ್‌ನ ‘ವಿವೇಕ’: 

ಜಗಳೂರಿನ ಬಳಿಯ ಅಗಸನಹಳ್ಳಿಯ ದೇಗುಲಕ್ಕೆ ಹೋಗುತ್ತಿದ್ದಾಗ ದಾರಿ ಮಧ್ಯೆ ವಿವೇಕ್‌, ಕುಟುಂಬ ಸದಸ್ಯರಿದ್ದ ಕಾರು ಅಪಘಾತಕ್ಕೀಡಾಗುತ್ತದೆ. ಕೂಡಲೇ ತನ್ನ ಬಳಿ ಇದ್ದ ನೀರಿನ ಬಾಟಲಿಯಿಂದ ಕಾರಿನ ಮುಂಭಾಗದ ಗಾಜು ಒಡೆದು ವಿವೇಕ್‌ ಹೊರಬಂದಿದ್ದಾನೆ. ಬಳಿಕ ಕಲ್ಲಿಂದ ಪೂರ್ತಿ ಗಾಜು ಒಡೆದು ತೀವ್ರ ಗಾಯಗೊಂಡಿದ್ದ ತಾಯಿ, ತಂದೆ ಹಾಗೂ ಸೋದರಿಯನ್ನು ಹೊರ ತಂದಿದ್ದಾನೆ. ಪೊಲೀಸ್‌ ಮತ್ತು ತುರ್ತುಚಿಕಿತ್ಸಾ ವಾಹನಕ್ಕೆ ಕರೆ ಮಾಡಿ, ಕುಟುಂಬ ಸದಸ್ಯರಿಗೆ ಸಕಾಲದಲ್ಲಿ ಆಸ್ಪತ್ರೆ ತಲುಪುವಂತೆ ನೋಡಿಕೊಂಡಿದ್ದಾನೆ.

Shaurya Puraskar ಹುತಾತ್ಮನಾದ ಕರ್ನಾಟಕದ ಯೋಧನಿಗೆ ಮರಣೋತ್ತರ ಶೌರ್ಯಪ್ರಶಸ್ತಿ

ಅಮ್ಮನನ್ನು ರಕ್ಷಿಸಿದ ದೀಕ್ಷಿತ್‌: 

ಸೋಮವಾರಪೇಟೆಯ ಕುದ್ಲೂರಿನಲ್ಲಿ ದೀಕ್ಷಿತ್‌ ಕುಟುಂಬ ಹಿಟ್ಟಿನ ಗಿರಣಿ ನಡೆಸುತ್ತಿದ್ದಾರೆ. ಒಂದು ದಿನ ದೀಕ್ಷಿತ್‌ ತಾಯಿ ಕೆಲಸ ಮಾಡುವಾಗ ಗಿರಣಿ ಯಂತ್ರಕ್ಕೆ ಆಕೆ ಕೂದಲು ಸಿಕ್ಕಿಕೊಂಡಿದೆ. ಆಗ ಆಕೆ ಜೋರಾಗಿ ಕಿರುಚಿದ್ದಾರೆ. ಪಕ್ಕದಲ್ಲೇ ಆಟವಾಡುತ್ತಿದ್ದ 7 ವರ್ಷದ ದೀಕ್ಷಿತ್‌ ಕೂಡಲೇ ವಿದ್ಯುತ್‌ ಮೈನ್‌ ಸ್ವಿಚ್‌ ಆಫ್‌ ಮಾಡಿ ರಕ್ತದ ಮಡುವಿನಲ್ಲಿದ್ದ ತಾಯಿಯನ್ನು ರಕ್ಷಿಸಿದ್ದಾನೆ. ಬಳಿಕ ತನ್ನ ತಂದೆಗೆ ಫೋನ್‌ ಮಾಡಿ ಮಾಹಿತಿ ಮುಟ್ಟಿಸಿ, ಕೂಡಲೇ ತಾಯಿ ಆಸ್ಪತ್ರೆಗೆ ದಾಖಲಾಗುವಂತೆ ನೋಡಿಕೊಂಡಿದ್ದಾನೆ.

ಫಾಲ್ಸ್‌ನಲ್ಲಿ ಬಿದ್ದವರ ರಕ್ಷಣೆ: 

ಅದು 2020 ಜನವರಿ. ಸಂಕ್ರಾಂತಿ ಹಬ್ಬದ ಹಿನ್ನೆಲೆಯಲ್ಲಿ ಹುಬ್ಬಳಿಯ ಆದಿತ್ಯ ತನ್ನ ಕುಟುಂಬಸ್ಥರ ಜೊತೆ ಶಿರಸಿ ಬಳಿಯ ಮೋರೆಗಾರ ಫಾಲ್ಸ್‌ಗೆ ಹೋಗಿದ್ದ. ಈ ಸಂದರ್ಭದಲ್ಲಿ ನೀರಿಗಳಿಯಲು ಹೋಗಿ ನೀರು ಪಾಲಾಗುತ್ತಿದ್ದ ಮೂವರನ್ನು ಸಮಯಪ್ರಜ್ಞೆ ಮೆರೆದು ಜೀವ ಉಳಿಸಿದ್ದಾನೆ. ಈತನ ಸಾಹಸ ಮೆಚ್ಚಿ ಕರ್ನಾಟಕ ಸರ್ಕಾರ ಈಗಾಗಲೇ ಹೊಯ್ಸಳ ಪ್ರಶಸ್ತಿ ಕೂಡ ನೀಡಿದೆ.

click me!