ಮೈಸೂರು ದಸರಾದಲ್ಲಿ ಭೀಮಾ ಎಂದಾಕ್ಷಣ ಸೊಂಡಿಲೆತ್ತಿ ನಮಿಸುತ್ತಿದ್ದ ಭೀಮ ಆನೆ ಹಿಂದಿದೆ ರೋಚಕ ಇತಿಹಾಸ!

By Sathish Kumar KHFirst Published Oct 18, 2024, 6:44 PM IST
Highlights

ಮೈಸೂರು ದಸರೆಯಲ್ಲಿ ಜನಮನ ಗೆದ್ದ ಭೀಮಾ ಆನೆಯ ಹಿಂದೆ ಅಚ್ಚರಿಯ ರಣರೋಚಕ ಕಥೆಯಿದೆ. ತಾಯಿಯನ್ನು ಕಳೆದುಕೊಂಡು, ಸಾವಿನ ದವಡೆಯಿಂದ ಪಾರಾಗಿ ಬಂದ ಭೀಮ, ಇಂದು ದಸರೆಯ ಪ್ರಮುಖ ಆಕರ್ಷಣೆಯಾಗಿದ್ದಾನೆ. ಭವಿಷ್ಯದಲ್ಲಿ ಅಂಬಾರಿ ಹೊರುವ ಸಾಮರ್ಥ್ಯವನ್ನು ಹೊಂದಿರುವ ಈ ಆನೆ, ಜನರ ಪ್ರೀತಿಗೆ ಪಾತ್ರನಾಗಿದ್ದಾನೆ.

ಮೈಸೂರು (ಅ.18): ವಿಶ್ವವಿಖ್ಯಾತ ಮೈಸೂರು ದಸರಾದಲ್ಲಿ ಈ ಬಾರಿ ಅಂಬಾರಿಯನ್ನು ಹೊತ್ತು ಸಾಗಿದ ಅಭಿಮನ್ಯು ಆನೆಗಿಂತ ಅತಿಹೆಚ್ಚು ಪ್ರಸಿದ್ಧಿ ಪಡೆದಿದ್ದೇ ಭೀಮಾ ಆನೆ. ದಸರಾ ಮಹೋತ್ಸವದಲ್ಲಿ ಸಾರ್ವಜನಿಕರು ಜೋರಾಗಿ ಭೀಮಾ.. ಎಂದು ಕೂಗಿದಾಕ್ಷಣ ನಿಂತು ಅವರಿಗೆ ಸೋಂಡಿಲೆತ್ತು ಪ್ರತಿಕ್ರಿಯೆ ನೀಡುತ್ತಿದ್ದ ಭೀಮನ ನಡೆಗೆ ದಸರಾ ವೀಕ್ಷಕರೆಲ್ಲರೂ ಫಿದಾ ಆಗಿದ್ದರು. ಆದರೆ, ಈ ಭೀಮಾ ಆನೆಯ ಹಿಂದೆ ಒಂದು ರಣರೋಚಕ ಕಥೆಯೇ ಇದೆ. ಭೀಮಾ ಆನೆ ಬದುಕಿ ಬಂದಿದ್ದೇ ಒಂದು ದೊಡ್ಡ ಪವಾಡವೆಂದೇ ಹೇಳಬಹುದು.

ಹೌದು, ಭೀಮಾ ಎಂದು ಕರೆದಾಕ್ಷಣ ತಿರುಗಿ ನೋಡಿ ರಿಯಾಕ್ಟ್ ಮಾಡುವಂತಹ ಈ ಆನೆಯ ಕಥೆ ಯಾವುದೇ ಸಿನಿಮಾ ಕಥೆಗಿಂತ ಕಡಿಮೆಯೇನಿಲ್ಲ. ಹಾಲಿ ಮೈಸೂರು ದಸರಾದಲ್ಲಿ ಕಾಣಿಸಿಕೊಂಡಿರುವ ಭೀಮಾ ಆನೆಗೆ ಮಾವುತರು ಹಾಗೂ ಅರಣ್ಯ ಅಧಿಕಾರಿಗಳು ತುಂಟ, ತಿಂಡಿಪೋತ ಎಂತಲೇ ಕರೆಯುತ್ತಾರೆ. ಇನ್ನು ಟೈಮಿಗೆ ಸರಿಯಾಗಿ ತಿಂಡಿಯನ್ನು ಕೊಡುತ್ತಿದ್ದರೆ ಎಲ್ಲವನ್ನೂ ಭರ್ಜರಿ ಬ್ಯಾಟಿಂಗ್ ಮಾಡಿ ಬಿಡುತ್ತಾನೆ. ಇನ್ನು ಹೊಟ್ಟೆ ತುಂಬಿತೆಂದರೆ ಸಾಕು ತನ್ನೊಂದಿಗಿರುವ ಆನೆಗಳು, ಮಾವುತರು ಯಾರೇ ಇದ್ದರೂ ಅವರೊಂದಿಗೆ ತುಂಟತನವನ್ನು ಆರಂಭಿಸುತ್ತಾನೆ. ಭೀಮಾ ಆನೆ ಸೌಮ್ಯ ಸ್ವಭಾವದವನಾಗಿದ್ದು, ಯಾರೇ ತನ್ನ ಹೆಸರು ಕರೆದರೂ ರಿಯಾಕ್ಟ್ ಮಾಡುತ್ತಾನೆ. ಅವನ ಈ ಗುಣಕ್ಕೆ ಎಲ್ಲ ಕಾವಾಡಿಗರೂ ಕೂಡ ಭೀಮಾ ಆನೆಯನ್ನು ತುಂಬಾ ಇಷ್ಟಪಡುತ್ತಾರೆ.

Latest Videos

ಇದನ್ನೂ ಓದಿ: ದಸರಾದಲ್ಲಿ ಆನೆ ಸಗಣಿ ತುಳಿದ ಜನ, ಏನಿದರ ಲಾಭ?

ಭೀಮಾ ಆನೆಯ ರಣರೋಚಕ ಇತಿಹಾಸ:
ಭೀಮಾ ಆನೆಯು 2001ರಲ್ಲಿ ತನ್ನ ತಾಯಿಯನ್ನು ಕಳೆದುಕೊಂಡು ಕಾಡಿನಲ್ಲಿ ಅಲೆಯುತ್ತಿದ್ದ ಮರಿಯಾನೆ ಭೀಮನಿಗೆ ಹೆಜ್ಜೆ ಹೆಜ್ಜೆಗೂ ಶತ್ರುಗಳ ಕಾಟವಿತ್ತು. ತನ್ನ ಇಡೀ ಆನೆಯ ಹಿಂಡಿನ ಗುಂಪನ್ನು ಕಳೆದುಕೊಂಡು ಒಬ್ಬಂಟಿಯಾಗಿ ಸುತ್ತಾಡುವಾಗ ನಾಗರಹೊಳೆ - ಮತ್ತಿಗೋಡು ಅರಣ್ಯ ವಲಯದ ಭೀಮನಕಟ್ಟೆಯಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಯ ಕೈಗೆ ಸಿಗುತ್ತಾನೆ. ಇದೇ ವರ್ಷದಲ್ಲಿ ಒಟ್ಟು ಭೀಮನಕಟ್ಟೆ ಅರಣ್ಯ ವ್ಯಾಪ್ತಿಯಲ್ಲಿ ಭೀಮ ಆನೆಯನ್ನು ಸೇರಿಸಿದಂತೆ ಒಟ್ಟು 5 ಆನೆಮರಿಗಳು ಸಿಗುತ್ತವೆ. ಆದರೆ, ಈ ಪೈಕಿ ನಾಲ್ಕು ಆನೆ ಮರಿಗಳು ತಾಯಿ ಹಾಲು ಇಲ್ಲದೇ ಆರೋಗ್ಯದಲ್ಲಿ ಸಮಸ್ಯೆ ಉಂಟಾಗಿ ಸಾವಿಗೀಡಾಗುತ್ತವೆ. ಆದರೆ, ಅರಣ್ಯ ಸಿಬ್ಬಂದಿಗೆ ಸಿಕ್ಕ ಆನೆ ಮರಿಗಳಲ್ಲಿ ಜೀವಂತವಾಗಿ ಉಳಿದ ಗಟ್ಟಿ ಗುಂಡಿಗೆ ಆನೆ ಎಂದರೆ ಭೀಮ ಆನೆ ಮಾತ್ರ.

Wait for Bheema 🤩pic.twitter.com/HMpsTgLEHu

— 👑Che_Krishna🇮🇳💛❤️ (@CheKrishnaCk_)

ಇದೀಗ ಭೀಮ ಆನೆಗೆ 24 ವರ್ಷ ವಯಸ್ಸಾಗಿದೆ. 2.87 ಮೀಟರ್ ಎತ್ತರವಿರುವ ಈ ಭೀಮ 5,000 ಕೆ.ಜಿ. ತೂಕವನ್ನು ಹೊಂದಿದ್ದಾನೆ. ಇನ್ನು ಮುಂದಿನ ದಿನಗಳಲ್ಲಿ ಭೀಮ ಆನೆ ಇದೇ ರೀತಿ ಬಲಿಷ್ಠವಾಗಿ ಬೆಳೆಯುತ್ತಾ ಹೋದಲ್ಲಿ ಮೈಸೂರು ದಸರಾ ಅಂಬಾರಿ ಹೊರುವ ದೇಹದಾರ್ಡ್ಯತೆಯನ್ನು ಪಡೆದುಕೊಳ್ಳುತ್ತಾನೆ. ಜೊತೆಗೆ, ಎಲ್ಲ ಆನೆಗಳೊಂದಿಗೆ, ಕಾವಾಡಿಗಳು ಮತ್ತು ಮಾವುತರೊಂದಿಗೆ ಸೌಮ್ಯವಾಗಿ ನಡೆದುಕೊಂಡು ಪ್ರೀತಿಯನ್ನು ಗಳಿಸಿದ್ದಲ್ಲಿ ದಸರಾ ಅಂಬಾರಿಯನ್ನು ಹೊರಲು ಅಗತ್ಯವಿರುವ ಎಲ್ಲ ಸಾಮರ್ಥ್ಯವನ್ನೂ ಗಳಿಸುತ್ತಾನೆ. ಈಗಾಗಲೇ ಮೈಸೂರಿನ ಜನತೆಯ ಮನಸ್ಸು ಗೆದ್ದಿರುವ ಭೀಮ ಆನೆಗೆ ಅಭಿಮಾನಿಗಳ ಬಳಗವೇ ಹುಟ್ಟಿಕೊಂಡಿವೆ. ಅವರೆಲ್ಲರ ಹಾರೈಕೆ ಭೀಮ ಆನೆ ಶೀಘ್ರವೇ ದಸರಾ ಅಂಬಾರಿ ಹೊರುವುದನ್ನು ನೋಡಬೇಕು ಎನ್ನುವುದಾಗಿದೆ.

ಇದನ್ನೂ ಓದಿ: ದಸರಾ ಆನೆಗಳ ತೂಕ ರಿವೀಲ್ ಮಾಡಿದ ಅರಣ್ಯ ಇಲಾಖೆ!

ಭೀಮನಿಗೆ ಆಪ್ತ ಸ್ನೇಹಿತ ಕಂಜನ್: ಮೈಸೂರು ದಸರಾ ಸೇರಿದಂತೆ ವಿವಿಧೆಡೆ ಭೀಮನೊಂದಿಗೆ ಸಾಥ್ ಕೊಡುವ ಆನೆ ಎಂದರೆ ಕಂಜನ್. ಈ ಕಂಜನ್ ಕೂಡ ಬಲಿಷ್ಠವಾಗಿದ್ದು, ಸೌಮ್ಯ ಸ್ವಭಾವದವನಾಗಿದ್ದಾನೆ. ತಾನಾಯ್ತು ತನ್ನ ಪಾಡಾಯ್ತು ಎಂದು ಇರುವ ಕಂಜನ್ಗೆ ಭೀಮ ಜೊತೆಗಿದ್ದರೆ ಸ್ವಲ್ಪ ತುಂಟತನವನ್ನೂ ಪ್ರದರ್ಶನ ಮಾಡುತ್ತಾನೆ. ಇನ್ನು ಭೀಮ ಏನೇ ಮಾಡಿದರೂ ಅದನ್ನು ಅನುಕರಣೆ ಮಾಡುತ್ತಾನೆ. ಇನ್ನು ಮೈಸೂರಿನ ದಸರಾ ಮಹೋತ್ಸವದಲ್ಲಿ ಜನರು ಭೀಮ ಆನೆಯನ್ನು ಕೂಗಿದಾಗ ಭೀಮ ನಿಂತು ಸೊಂಡೆಲೆತ್ತಿ ಪ್ರತಿಕ್ರಿಯೆ ನೀಡಿದರೆ, ಈ ಆನೆಯೊಂದಿಗೆ ಕಂಜನ್ ಆನೆ ಕೂಡ ತಾನೂ ಸೊಂಡೆಲೆತ್ತಿ ಜನರಿಗೆ ತೋರಿಸಿ ಪ್ರತಿಕ್ರಿಯೆ ನೀಡುತ್ತಿದ್ದನು. ಭೀಮ ಆನೆ ದಸರಾ ಮಹೋತ್ಸವಕ್ಕೂ ಮುನ್ನ ಮಾಡಿಸಿದ ತೂಕದ ಪರೀಕ್ಷೆಯಲ್ಲಿ 4,945 ಕೆ.ಜಿ. ಇತ್ತು. ಇನ್ನು ಭೀಮನ ಸ್ನೇಹಿತ ಕಂಜನ್ ಆನೆ 4,515 ಕೆ.ಜಿ. ತೂಕವನ್ನು ಹೊಂದಿತ್ತು. ದಸರಾದಲ್ಲಿ ಅರಮನೆ ಆವಣದಲ್ಲಿ ಕೊಟ್ಟ ಭೂರಿ ಭೋಜನ ಸವಿದ ಭೀಮ 5,000 ಕೆಜಿಗಿಂತ ಹೆಚ್ಚು ತೂಕವನ್ನು ಹೊಂದಿದ್ದಾನೆ.

ತುಂಟ ಭೀಮ 🐘 pic.twitter.com/ctWV4u6JDo

— ಸನಾತನ (@sanatan_kannada)
click me!