ಕಣ್ಮುಂದೆ ಪತ್ನಿ ಜೀವ ಬಿಟ್ಟರೂ ಅಸಹಾಯನಾಗಿ ನಿಂತಿದ್ದೆ!

By Kannadaprabha NewsFirst Published Jul 7, 2020, 8:01 AM IST
Highlights

ಕಣ್ಮುಂದೆ ಪತ್ನಿ ಜೀವ ಬಿಟ್ಟರೂ ಅಸಹಾಯನಾಗಿ ನಿಂತಿದ್ದೆ| ಸಣ್ಣ ಕಾಯಿಲೆಗೆ ಚಿಕಿತ್ಸೆ ಕೊಡಿಸಲು ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದಾಡಿದೆ

ಬೆಂಗಳೂರು(ಜು.07): ‘ಸಣ್ಣ ಕಾಯಿಲೆಗೆ ಚಿಕಿತ್ಸೆ ಕೊಡಿಸಲಾಗಿದೆ, ಕಣ್ಣ ಮುಂದೆ ಪತ್ನಿ ಜೀವ ಬಿಟ್ಟರೂ ಅಸಹಾಯಕನಾಗಿ ನಿಂತಿದ್ದೆ. ಸರ್ಕಾರಿ ಆಸ್ಪತ್ರೆ ಸೇರಿದಂತೆ ಸುಮಾರು 20ಕ್ಕೂ ಹೆಚ್ಚು ಆಸ್ಪತ್ರೆಗೆ ಭೇಟಿ ನೀಡಿದರೂ ಯಾವೊಬ್ಬ ವೈದ್ಯರು ಸ್ಪಂದಿಸಲಿಲ್ಲ. ಕೊರೋನಾ ಇಲ್ಲದಿದ್ದರೂ ಚಿಕಿತ್ಸೆ ನೀಡಲು ಖಾಸಗಿ ಆಸ್ಪತ್ರೆಗಳು ಮುಂದಾಗಲಿಲ್ಲ. ಇದನ್ನು ಸರಿಪಡಿಸಬೇಕಾದ ಜನಪ್ರತಿನಿಧಿಗಳ ಕಣ್ಣು ಕುರುಡಾಗಿದೆ. ಇಂತಹ ವ್ಯವಸ್ಥೆಯಲ್ಲಿ ನಾವೆಲ್ಲಾ ಬದುಕಿದ್ದು ಏನು ಪ್ರಯೋಜನ?’

ಸುಮಾರು 64 ವರ್ಷದ ಪತ್ನಿಯನ್ನು ಕಳೆದುಕೊಂಡಿರುವ ಬಿಳೇಕಳ್ಳಿಯ ನಿವಾಸಿ ಜೋಸೆಫ್‌ ಎಂಬುವರು ನೋವಿನ ಮಾತುಗಳಿವು.

ಕೊರೋನಾ ಅಟ್ಟಹಾಸ: ರಾಜ್ಯದಲ್ಲಿ ಮತ್ತೊಂದು ಆತಂಕಕಾರಿ ಬೆಳವಣಿಗೆ!

ಶುಕ್ರವಾರ ಬೆಳಗ್ಗೆ ಉಸಿರಾಟದ ತೊಂದರೆ ಕಾಣಿಸಿಕೊಳ್ಳುತ್ತಿದ್ದಂತೆ, ಬಿಳೇಕಹಳ್ಳಿಯ ವಿವೇಕಾನಂದ ಆಸ್ಪತ್ರೆಗೆ ಕರೆದುಕೊಂಡು ಹೋದೆ. ಪರೀಕ್ಷಿಸಿದ ವೈದ್ಯರು ತಕ್ಷಣ ಸಂಜಯ್‌ಗಾಂಧಿ ಆಸ್ಪತ್ರೆಗೆ ಹೋಗಲು ಹೇಳಿದರು. ಸಂಜಯ್‌ ಗಾಂಧಿ ಆಸ್ಪತ್ರೆಯಲ್ಲಿ ಮಧ್ಯಾಹ್ನ 3ರ ತನಕ ಕಾಯಿಸಿ, ರೋಗಿಗೆ ನ್ಯುಮೋನಿಯಾ ಇದೆ, ಬೆಡ್‌ ಇಲ್ಲ. ಬೇರೆ ಕಡೆ ಹೋಗಿ ಎಂದರು.

ನಂತರ ಕಿಮ್ಸ್‌ಗೆ ಬಂದರೆ ವಿಕ್ಟೋರಿಯಾಗೆ ಹೋಗಲು ಸೂಚಿಸಿದರು. ಕೊರೋನಾ ಇದ್ದರೆ ಮಾತ್ರ ಚಿಕಿತ್ಸೆ ಎಂದು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ತಿಳಿಸಿದರು. ಅಲ್ಲಿಂದ ಬಸವನಗುಡಿಯ ಖಾಸಗಿ ಆಸ್ಪತ್ರೆ, ಕೋರಮಂಗಲದ ಸೇಂಟ್‌ ಜಾನ್‌ ಆಸ್ಪತ್ರೆಗೆ ಹೋದರೆ ಕೊರೋನಾ ಪರೀಕ್ಷೆ ಮಾಡಿಸಿ ವರದಿ ತನ್ನಿ ಎಂದರು.

ಕೊರೋನಾ ಅಟ್ಟಹಾಸ: ರಾಜ್ಯದಲ್ಲಿ ಮತ್ತೊಂದು ಆತಂಕಕಾರಿ ಬೆಳವಣಿಗೆ!

ಅಲ್ಲಿಂದ ಮತ್ತೆ ವಿಕ್ಟೋರಿಯಾಗೆ ಬಂದು ಸ್ವಾ ಬ್‌ ನೀಡಿಸಿದೆ. ಸ್ವಾ ಬ್‌ ಪಡೆದ ವೈದ್ಯರು ಮೂರು ದಿನದ ಬಳಿಕ ಬರಲು ಸೂಚನೆ ನೀಡಿದರು. ಇದಾದ ನಂತರ ಕೆ.ಸಿ.ಜನರಲ್‌, ಸಾಯಿರಾಮ್‌ ಆಸ್ಪತ್ರೆ ಸೇರಿದಂತೆ ಇಡೀ ಬೆಂಗಳೂರು ಸುತ್ತಾಡಿದರೂ ಚಿಕಿತ್ಸೆ ಕೊಡಿಸಲಾಗಿಲ್ಲ. ಸೋಮವಾರ ಬೆಳಗ್ಗೆ ಪತ್ನಿ ಕೊನೆಯುಸಿರೆಳೆದಳು.

ಶವಸಂಸ್ಕಾರ ನಡೆಸಿ ಮನೆಗೆ ಬಂದರೆ ಕೊರೋನಾ ನೆಗೆಟಿವ್‌ ಎಂದು ವರದಿ ಬಂದಿದೆ ಎಂದು ವೈದ್ಯರು ತಿಳಿಸುತ್ತಾರೆ. ಇದರಿಂದ ಪ್ರಯೋಜನ ಏನು ಎಂದು ‘ಕನ್ನಡಪ್ರಭ’ದ ಜತೆ ತಮ್ಮ ನೋವನ್ನು ಹಂಚಿಕೊಂಡರು.

click me!