
ಬಂಟ್ವಾಳ (ಡಿ.10): ಪುತ್ತೂರು, ಸುಬ್ರಹ್ಮಣ್ಯ, ಕೊಲ್ಲೂರು ಸಹಿತ ವಿವಿಧ ದೇವಸ್ಥಾನಗಳಲ್ಲಿ ಈ ಹಿಂದೆ ಸಲಾಂ ಮಂಗಳಾರತಿ ಎಂಬ ಹೆಸರಿನಲ್ಲಿ ಸೇವೆಗಳು ನಡೆಯುತ್ತಿದ್ದು, ಅದರ ಹೆಸರು ಬದಲಾಯಿಸಲು ರಾಜ್ಯ ಧಾರ್ಮಿಕ ಪರಿಷತ್ತು ತೀರ್ಮಾನಿಸಿದೆ ಎಂದು ಧಾರ್ಮಿಕ ಪರಿಷತ್ ಸದಸ್ಯ ಕಶೆಕೋಡಿ ಸೂರ್ಯನಾರಾಯಣ ಭಟ್ ತಿಳಿಸಿದ್ದಾರೆ.
ಈ ಕುರಿತು ಶುಕ್ರವಾರ ಸುದ್ದಿಗಾರರ ಜತೆಗೆ ಮಾತನಾಡಿ, ಹಿಂದೆ ಟಿಪ್ಪು ಸುಲ್ತಾನ್ ಆಳ್ವಿಕೆ ಸಂದರ್ಭ ದೇವಸ್ಥಾನಗಳಲ್ಲಿ ತನ್ನ ಆಡಳಿತಕ್ಕೆ ಒಳ್ಳೆಯದಾಗಲೆಂದು ಸಲಾಂ ಮಂಗಳಾರತಿ ಹೆಸರಲ್ಲಿ ಸೇವೆ ಮಾಡಿಸಿಕೊಳ್ಳುತ್ತಿದ್ದ. ಆ ಪದ್ಧತಿ ಹಾಗೆಯೇ ಮುಂದುವರಿಯಿತು, ಆದರೆ ಇಂದು ಕೇವಲ ರಾಜ್ಯಾಡಳಿತಕ್ಕಷ್ಟೇ ಅಲ್ಲ, ಪ್ರಜೆಗಳಿಗೂ ಒಳ್ಳೆಯದಾಗಲೆಂದು ಹಾಗೂ ಸಲಾಂ ಎಂಬುದರ ಬದಲಾಗಿ ನಮಸ್ಕಾರ ಎಂಬ ಹೆಸರನ್ನಿಟ್ಟುಕೊಂಡು ಆ ಸೇವೆ ನಡೆಸಲಾಗುತ್ತದೆ ಎಂದು ಭಟ್ ಹೇಳಿದರು.
ಕಲಬುರಗಿಯಲ್ಲಿ ಇಂದು ಖರ್ಗೆ ಬೃಹತ್ ಶೋ: ಎಐಸಿಸಿ ಅಧ್ಯಕ್ಷರಾದ ಬಳಿಕ ಮೊದಲ ಸಲ ತವರಿಗೆ
ರಾಜ್ಯ ಧಾರ್ಮಿಕ ದತ್ತಿ ಇಲಾಖೆ ಅಧೀನಕ್ಕೆ ಒಳಪಟ್ಟದೇವಸ್ಥಾನಗಳಲ್ಲಿ ದೀವಟಿಗೆ, ಪಂಜು, ದೊಂದಿ ಹಿಡಿದು ದೇವಾಲಯಕ್ಕೆ ಮತ್ತು ದೇವರಿಗೆ ಆರತಿ ನಡೆಸುವ ದೀವಟಿಗೆ ಸಲಾಂ, ಸಲಾಂ ಆರತಿ ಎಂಬ ಹೆಸರಿನಲ್ಲಿ ಕರೆಯಲಾಗುತ್ತಿತ್ತು. ಸಲಾಂ ಎಂಬ ಪದವನ್ನು ತೆಗೆದು ಸಂಸ್ಕೃತ ಭಾಷೆಯ ಪದದಿಂದ ಸೇವಾ ಕಾರ್ಯಗಳನ್ನು ನಡೆಸಲು ಸೂಚಕವಾಗುವಂತೆ ಹೆಸರುಗಳನ್ನು ಸರಿಪಡಿಸಲು ಪರಿಷತ್ತಿನ ಸಭೆಯಲ್ಲಿ ಸದಸ್ಯರು ಪ್ರಸ್ತಾಪಿಸಿದ್ದರು, ಅದರಂತೆ ಸಲಾಂ ಎಂಬುದರ ಪದದ ಬದಲಾಗಿ ನಮಸ್ಕಾರ ಪದವನ್ನು ಬಳಸಿ ಪೂಜೆಗಳು ಹಾಗೆಯೇ ಮುಂದುವರಿಯುತ್ತದೆ ಎಂದು ಹೇಳಿದರು.
‘ಸಲಾಂ ಮಂಗಳಾರತಿ’ ಎಂಬುದೇ ಇಲ್ಲ: ನಾಡಿನ ಇತಿಹಾಸ ಪ್ರಸಿದ್ಧ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ ಟಿಪ್ಪು ಸುಲ್ತಾನ್ ಹೆಸರಿನಲ್ಲಿ ರಾತ್ರಿ ನಡೆಯುವ ಸಲಾಂ ಮಂಗಳಾರತಿ ಪೂಜೆಯ ಹೆಸರನ್ನು ಬದಲಾಯಿಸಬೇಕು ಎಂಬ ಹಿಂದೂ ಸಂಘಟನೆಗಳ ಆಗ್ರಹಕ್ಕೆ ಪ್ರತಿಕ್ರಿಯಿಸಿರುವ ದೇವಾಲಯದ ಅರ್ಚಕರಲ್ಲೊಬ್ಬರಾದ ಕೆ.ವಿ. ಶ್ರೀಧರ ಅಡಿಗ, ದೇವಾಲಯದಲ್ಲಿ ಸಲಾಂ ಮಂಗಳಾರತಿ ಹೆಸರಲ್ಲಿ ಯಾವುದೇ ಪೂಜೆ ನಡೆಯುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಮತಾಂಧ, ಹಿಂದೂ ವಿರೋಧಿ ಟಿಪ್ಪುವಿನ ಹೆಸರಲ್ಲಿ ನಡೆಯುವ ಪೂಜೆಯಿಂದ ದೇವಿಯ ಪಾವಿತ್ರ್ಯತೆಗೆ ಧಕ್ಕೆಯಾಗುತ್ತದೆ.
ಆದ್ದರಿಂದ ಟಿಪ್ಪುವಿನ ಬದಲು ದೇವಿಯ ಹೆಸರಲ್ಲಿ ಪೂಜೆ ನಡೆಸಬೇಕು ಎಂದು ವಿಶ್ವ ಹಿಂದು ಪರಿಷತ್ ನಾಯಕರು ಶನಿವಾರ ದೇವಾಲಯದ ಅಧಿಕಾರಿಗಳಿಗೆ ಮನವಿ ಮಾಡಿದ್ದರು. ಇಲ್ಲಿ ರಾತ್ರಿ ನಡೆಯುವ ಪೂಜೆಗೆ ಪ್ರದೋಷ ಪೂಜೆ ಎನ್ನುತ್ತಾರೆ. ಈ ಪೂಜೆಗೆ ಬಹಳ ಮಹತ್ವವಿದೆ, ಪ್ರದೋಷ ಕಾಲದಲ್ಲಿ ಎಲ್ಲ ದೇವಿ ದೇವತೆಗಳ ಸಾನ್ನಿಧ್ಯ ಇರುತ್ತದೆ. ಆಗ ದೇವಿಗೆ ವೈಭವೋಪೇತವಾಗಿ ರಾಜೋಪಚಾರ ದೀಪಾರಾಧನೆ ನಡೆಸುತ್ತೇವೆ ಹೊರತು ಅದು ಸಲಾಂ ಮಂಗಳಾರತಿಯಲ್ಲ ಎಂದು ಈ ಪೂಜೆಯನ್ನು ನಡೆಸುವ ಶ್ರೀಧರ ಅಡಿಗರು ಹೇಳಿದ್ದಾರೆ.
ಅರಣ್ಯ ಸಿಬ್ಬಂದಿಗೆ ವನ್ಯಜೀವಿ ನಿರ್ವಹಣೆ ತರಬೇತಿಯೇ ಇಲ್ಲ
ದೊರೆ ಟಿಪ್ಪು ಇಲ್ಲಿಗೆ ಬಂದಿದ್ದ ರಾತ್ರಿ ಪ್ರದೋಷ ಪೂಜೆಯಾಗುವಾಗ ಸಲಾಮ್ ಮಾಡಿದ್ದ. ಆದ್ದರಿಂದ ಈ ಪೂಜೆಯನ್ನು ಸಲಾಂ ಮಂಗಳಾರತಿ ಎಂದು ಆಡು ಭಾಷೆಯಲ್ಲಿ, ವಾಡಿಕೆಯಲ್ಲಿ ಹೇಳಲಾಗುತ್ತಿದೆ. ಅದಕ್ಕೆ ಯಾವುದೇ ದಾಖಲೆಗಳು ಇಲ್ಲ, ಆದರೆ ರಾತ್ರಿ ನಡೆಯುವ ಪ್ರದೋಷ ಪೂಜೆಗೆ ಪ್ರದೋಷ ಮಂಗಳಾರತಿ ಎಂಬ ದಾಖಲೆಯಿದೆ. ನಾಡಿನ ಯೋಗಕ್ಷೇಮಕ್ಕೋಸ್ಕರ ಈ ಪೂಜೆ ಸಂದರ್ಭದಲ್ಲಿ ಪ್ರಾರ್ಥನೆ ನಡೆಯುತ್ತದೆ ಎಂದವರು ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ