ಮಹಾರಾಷ್ಟ್ರ-ಕರ್ನಾಟಕ ನಡುವೆ ಬಸ್‌ಗಳ ಓಡಾಟ ಭಾಗಶಃ ಶುರು

By Govindaraj SFirst Published Dec 10, 2022, 10:04 AM IST
Highlights

ಗಡಿ ವಿವಾದದ ಪ್ರತಿಭಟನೆ ಹಿನ್ನೆಲೆಯಲ್ಲಿ ಮಹಾರಾಷ್ಟ್ರ-ಬೆಳಗಾವಿ ನಡುವೆ ಕಳೆದ ನಾಲ್ಕು ದಿನಗಳಿಂದ ಸ್ಥಗಿತಗೊಂಡಿದ್ದ ಬಸ್‌ ಸಂಚಾರ ಶುಕ್ರವಾರ ಭಾಗಶಃ ಪುನರ್‌ ಆರಂಭಗೊಂಡಿವೆ. 

ಬೆಳಗಾವಿ (ಡಿ.10): ಗಡಿ ವಿವಾದದ ಪ್ರತಿಭಟನೆ ಹಿನ್ನೆಲೆಯಲ್ಲಿ ಮಹಾರಾಷ್ಟ್ರ-ಬೆಳಗಾವಿ ನಡುವೆ ಕಳೆದ ನಾಲ್ಕು ದಿನಗಳಿಂದ ಸ್ಥಗಿತಗೊಂಡಿದ್ದ ಬಸ್‌ ಸಂಚಾರ ಶುಕ್ರವಾರ ಭಾಗಶಃ ಪುನರ್‌ ಆರಂಭಗೊಂಡಿವೆ. ಮೊದಲಿಗೆ ಕರ್ನಾಟಕದ ಬಸ್‌ಗಳು ಮಾತ್ರ ಸಂಚಾರ ಆರಂಭಿಸಿದ್ದು, ನಂತರ ಮಹಾರಾಷ್ಟ್ರ ಸಾರಿಗೆಯ ಕೆಲ ಬಸ್‌ಗಳೂ ಓಡಾಟ ಶುರುಮಾಡಿವೆ. ಬೆಳಗಾವಿಯಿಂದ ಮಹಾರಾಷ್ಟ್ರದ ಕೊಲ್ಲಾಪುರಕ್ಕೆ ತೆರಳುವ ಬಸ್‌ಗಳು ಕೊಲ್ಲಾಪುರ ನಗರದ ಹೊರವಲಯದವರೆಗೆ ಮಾತ್ರ ಸಂಚರಿಸಿದ್ದು, ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 4ರಲ್ಲೇ ಪ್ರಯಾಣಿಕರನ್ನು ಇಳಿಸಿ ಹಿಂದಿರುಗುತ್ತಿವೆ. ಇದಾದ ಬಳಿಕ ಮಹಾರಾಷ್ಟ್ರ ಸಾರಿಗೆ ಸಂಸ್ಥೆಯ ಕೆಲ ಬಸ್‌ಗಳೂ ಕೊಲ್ಲಾಪುರದಿಂದ ಬೆಳಗಾವಿಗೆ ಸಂಚಾರ ಆರಂಭಿಸಿವೆ.

ನಾಲ್ಕು ದಿನಗಳಿಂದ ಮಹಾರಾಷ್ಟ್ರ ಹಾಗೂ ಕರ್ನಾಟಕ ರಾಜ್ಯಗಳ ಗಡಿಪ್ರದೇಶಗಳಲ್ಲಿ ಗಡಿ ವಿವಾದ ತಾರಕ್ಕೇರಿತ್ತು. ಮಹಾರಾಷ್ಟ್ರದಲ್ಲಿ ಶಿವಸೇನೆ, ಎಂಎನ್‌ಎಸ್‌, ಸ್ವರಾಜ್ಯ, ಪ್ರಹಾರ ಸೇರಿ ವಿವಿಧ ಸಂಘಟನೆಗಳು ಕರ್ನಾಟಕ ಬಸ್‌ಗಳಿಗೆ ಮಸಿ ಬಳಿದು ಪುಂಡಾಟ ನಡೆಸಿದರೆ, ಅದಕ್ಕೆ ಪ್ರತಿಯಾಗಿ ಕರ್ನಾಟಕದಲ್ಲೂ ಕನ್ನಡಪರ ಸಂಘಟನೆಗಳು ಮಹಾರಾಷ್ಟ್ರದ ಸಾರಿಗೆ ಬಸ್‌ಗಳಿಗೆ ಮಸಿ ಬಳಿದು ಆಕ್ರೋಶ ಹೊರಹಾಕಿದ್ದವು. ಇದರಿಂದಾಗಿ ಗಡಿ ವಿವಾದದ ಕಿಡಿ ಇನ್ನಷ್ಟುಹೊತ್ತಿಕೊಂಡು ಉಭಯ ರಾಜ್ಯಗಳ ನಡುವಿನ ಬಸ್‌ ಸಂಚಾರವನ್ನು ನಾಲ್ಕು ದಿನಗಳಿಂದ ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿತ್ತು.

ಕಲಬುರಗಿಯಲ್ಲಿ ಇಂದು ಖರ್ಗೆ ಬೃಹತ್‌ ಶೋ: ಎಐಸಿಸಿ ಅಧ್ಯಕ್ಷರಾದ ಬಳಿಕ ಮೊದಲ ಸಲ ತವರಿಗೆ

ಈ ಕುರಿತು ಮಾಹಿತಿ ನೀಡಿದ ಚಿಕ್ಕೋಡಿ ಸಾರಿಗೆ ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿ ಎಂ.ವಿ.ಶಶಿಧರ್‌, ಪರಿಸ್ಥಿತಿ ಅವಲೋಕಿಸಿ ಹಂತ ಹಂತವಾಗಿ ಬಸ್‌ಗಳ ಸಂಚಾರ ಆರಂಭಿಸಲಾಗುವುದು. ಇಂದಿನಿಂದ 140 ಬಸ್‌ಗಳ ಕಾರ್ಯಾಚರಣೆ ಪ್ರಾರಂಭ ಮಾಡಿದ್ದು, ಒಂದು ದಿನ ಬಸ್‌ ಸಂಚಾರ ನಿಂತರೆ .10 ಲಕ್ಷ ನಷ್ಟಆಗುತ್ತದೆ. ಕಳೆದ ನಾಲ್ಕು ದಿನಗಳಿಂದ ಬಸ್‌ ಸಂಚಾರ ಸ್ಥಗಿತವಾಗಿದ್ದರಿಂದ ಜನರಿಗೂ ಸಾಕಷ್ಟುತೊಂದರೆಯಾಗಿತ್ತು. ಇದೀಗ ನಾವು ಬಸ್‌ ಸಂಚಾರ ಆರಂಭಿಸಿದ್ದು, ಮಹಾರಾಷ್ಟ್ರ ಸಾರಿಗೆ ಸಂಸ್ಥೆಯ ಅಧಿಕಾರಿಗಳನ್ನೂ ಸಂಪರ್ಕಿಸಿ ಅಲ್ಲಿಂದಲೂ ಬಸ್‌ ಸಂಚಾರ ಪುನರ್‌ ಆರಂಭಿಸಲು ಮನವಿ ಮಾಡಿದ್ದೇವೆ ಎಂದರು. ಸಾಮಾನ್ಯವಾಗಿ ಪ್ರತಿನಿತ್ಯ ಬೆಳಗಾವಿ ಹಾಗೂ ಚಿಕ್ಕೋಡಿ ಸಾರಿಗೆ ವಿಭಾಗದ ಬೆಳಗಾವಿ, ಚಿಕ್ಕೋಡಿ, ಕಾಗವಾಡ, ನಿಪ್ಪಾಣಿ ಘಟಕಗಳಿಂದ ಸುಮಾರು 400ಕ್ಕೂ ಹೆಚ್ಚು ಬಸ್‌ಗಳು ಮಹಾರಾಷ್ಟ್ರಕ್ಕೆ ಸಂಚರಿಸುತ್ತವೆ.

ರಾಜ್ಯ ಬಿಜೆಪಿಯಲ್ಲಿ ಬಿರುಸಿನ ಚಟುವಟಿಕೆ: ಭಾರಿ ಕುತೂಹಲ

ಬೆಳಗಾವಿಯಲ್ಲಿ ಭೀತಿಯ ವಾತಾವರಣ: ಕರ್ನಾಟಕದ ಮರಾಠಿ ಮಾತನಾಡುವ ಪ್ರದೇಶದಗಳಲ್ಲಿ ಭಾರೀ ಪ್ರತಿಭಟನೆ, ಹೋರಾಟಗಳು ನಡೆಯುತ್ತಿದ್ದು, ಅಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ ಎಂದು ಏಕನಾಥ ಶಿಂಧೆ ಬಣದ ಶಿವಸೇನಾಯ ನಾಯಕ ಹಾಗೂ ಲೋಕಸಭಾ ಸದಸ್ಯ ಧೈರ್ಯಶೀಲ ಮಾನೆ ಶುಕ್ರವಾರ ಲೋಕಸಭೆಯಲ್ಲಿ ಆರೋಪಿಸಿದ್ದಾರೆ. ‘ಕರ್ನಾಟಕದ ಸರ್ಕಾರ ಹಾಗೂ ಅಲ್ಲಿನ ಮುಖ್ಯಮಂತ್ರಿ ನೀಡಿದ ಹೇಳಿಕೆಗಳಿಂದ ಜನರಲ್ಲಿ ಉದ್ವಿಗ್ನತೆ ಸೃಷ್ಟಿಯಾಗಿದೆ. ಗಡಿ ಭಾಗದಲ್ಲಿ ಅಶಾಂತಿ ಉಂಟಾಗಿದ್ದು, ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗುವ ಸಮಸ್ಯೆ ಸೃಷ್ಟಿಯಾಗಿದೆ’ ಎಂದು ಮಾನೆ ಹೇಳಿದ್ದಾರೆ. ಅಲ್ಲದೇ ಕರ್ನಾಟಕ ಪೊಲೀಸರು ದೊಡ್ಡಮಟ್ಟದಲ್ಲಿ ತೋಳ್ಬಲ ಪ್ರಯೋಗಿಸಲು ಮುಂದಾಗಿದ್ದು, ಕನ್ನಡ ವೇದಿಕೆ ಸಂಸ್ಥೆಯು ಮರಾಠಿ ಭಾಷಿಕರೊಂದಿಗೆ ಸರಿಯಾದ ರೀತಿಯಲ್ಲಿ ನಡೆದುಕೊಳ್ಳುತ್ತಿಲ್ಲ ಎಂದು ಆರೋಪಿಸಿದ್ದಾರೆ.

click me!