ದಾನ ಕೊಟ್ಟ ವಸ್ತು ವಾಪಸ್ ಕೊಡುವೆ ಎಂದ ಸ್ವಾಮೀಜಿ ಹೇಳಿಕೆಗೆ ನಿರಾಣಿ ಹೇಳಿದ್ದಿಷ್ಟು

Published : Feb 04, 2022, 09:03 PM IST
ದಾನ ಕೊಟ್ಟ ವಸ್ತು ವಾಪಸ್ ಕೊಡುವೆ ಎಂದ ಸ್ವಾಮೀಜಿ ಹೇಳಿಕೆಗೆ ನಿರಾಣಿ ಹೇಳಿದ್ದಿಷ್ಟು

ಸಾರಾಂಶ

* ಮುರುಗೇಶ್ ನಿರಾಣಿ-ಜಯಮೃತ್ಯುಂಜಯ ಸ್ವಾಮೀಜಿ ಮುಸುಕಿನ ಗುದ್ದಟ * ಜಯಮೃತ್ಯುಂಜಯ ಸ್ವಾಮೀಜಿ ಹೇಳಿಕೆಗೆ ಪ್ರತಿಕ್ರಿಯಿಸಿದ ನಿರಾಣಿ  * ಪೀಠಕ್ಕೆ ದಾನವಾಗಿ ಕೊಟ್ಟ ವಸ್ತುಗಳನ್ನ ವಾಪಸ್ ಕೊಡುವೆ ಎಂದಿದ್ದ ಸ್ವಾಮೀಜಿ

ಮೈಸೂರು, (ಫೆ.04): ಸಚಿವ ಮುರುಗೇಶ್ ನಿರಾಣಿ (Murugesh Nirani) ಹಾಗೂ ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠದ ಪೀಠಾಧಿಪತಿ ಬಸವ ಜಯಮೃತ್ಯುಂಜಯ ಸ್ವಾಮೀಜಿ (Jaya Nruthyunjaya Swamiji ) ನಡುವಿನ ಮುಸುಕಿನ ಗುದ್ದಟ ಜೋರಾಗಿದೆ.

ಸಚಿವ ಮುರುಗೇಶ್ ನಿರಾಣಿ ಅವರು ಶ್ರೀ ಪೀಠಕ್ಕೆ ದಾನವಾಗಿ ಕೊಟ್ಟ ವಸ್ತುಗಳನ್ನ ವಾಪಸ್ ಅವರ ಮನೆಗೆ ಕಳುಹಿಸುವೆ ಎಂದ ಸ್ವಾಮೀಜಿ ಹೇಳಿಕೆಗೆ ಸಚಿವ ನಿರಾಣಿ ಪ್ರತಿಕ್ರಿಯೆ ಕೊಟ್ಟಿದ್ದಾರೆ.

ನಿರಾಣಿ ಮಠಕ್ಕೆ ದಾನವಾಗಿ ಕೊಟ್ಟಿರುವುದನ್ನು ವಾಪಸ್ ನೀಡುವೆ, ಜಯಮೃತ್ಯುಂಜಯ ಸ್ವಾಮೀಜಿ

ಮೈಸೂರಿನಲ್ಲಿ ಇಂದು (ಶುಕ್ರವಾರ) ಸುದ್ದಿಗಾರರೊಂದಿಗೆ ಮಾತನಾಡಿದ ನಿರಾಣಿ, ನಾನು ಪೀಠಕ್ಕೆ ಕೊಟ್ಟಿದ್ದೇನೆ ಹೊರತು ಯಾವುದೇ ಒಬ್ಬ ವ್ಯಕ್ತಿಗೆ ಕೊಟ್ಟಿಲ್ಲ. ಕೊಟ್ಟಿರುವ ವ್ಯಕ್ತಿಯೂ ಶಾಶ್ವತವಾಗಿರುವುದಿಲ್ಲ, ಆದರೆ ಮಠ ಮಾತ್ರ ಶಾಶ್ವತವಾಗಿರುತ್ತದೆ ಎಂದು ಪರೋಕ್ಷವಾಗಿ ಜಯಮೃತ್ಯುಂಜಯ ಸ್ವಾಮೀಜಿಗೆ ಟಾಂಗ್ ಕೊಟ್ಟರು.

ನಮ್ಮಂಥವರು ನೂರಾರು ವ್ಯಕ್ತಿಗಳು ಬರುತ್ತಾರೆ, ಹೋಗುತ್ತಾರೆ. ನಾನು ಮಠದ ಮೇಲಿನ ಗೌರವದಿಂದ ಕಾಣಿಕೆಗಳನ್ನು ಭಕ್ತಿ ರೂಪದಲ್ಲಿ ಕೊಟ್ಟಿದ್ದೇನೆ. ಇದು ನನಗೆ ನಮ್ಮ ಹಿರಿಯರು ಹೇಳಿಕೊಟ್ಟಿದ್ದು. ಭಕ್ತಿಭಾವದಿಂದ ಕೊಟ್ಟ ಕಾಣಿಕೆಯನ್ನು ಪ್ರಚಾರಕ್ಕಾಗಿ ಪಡೆಯುವ ವ್ಯಕ್ತಿ ನಾನಲ್ಲ ಎಂದು ಸ್ಪಷ್ಟಪಡಿಸಿದರು.

ನಮ್ಮ ಇಡೀ ಕುಟುಂಬವೇ ಸಮಾಜದಲ್ಲಿರುವ ಎಲ್ಲ ಮಠಗಳನ್ನು(Mutts) ಅತ್ಯಂತ ಪೂಜ್ಯ ಭಾವನೆಯಿಂದ ಕಾಣುತ್ತಾ ಬಂದಿದ್ದೇವೆ. ಎಂಥ ಸಂದರ್ಭದಲ್ಲೂ ಕೂಡ ಯಾರನ್ನು ಅಗೌರವದಿಂದ ಕಂಡಿಲ್ಲ, ಮಠಗಳಿಗೆ ಕೊಟ್ಟ ಕಾಣಿಕೆಯನ್ನು ಹಿಂಪಡೆಯುವಂತಹ ಸಣ್ಣ ಮನುಷ್ಯ ನಾನಲ್ಲ. ಅಂತಹ ಕೆಳಮಟ್ಟಕ್ಕೂ ನಾನು ಹೋಗುವುದಿಲ್ಲ. ಶ್ರೀಗಳು ಯಾಕೆ ಈ ರೀತಿ ಹೇಳಿದ್ದಾರೆ ಎಂಬುದು ನನಗೆ ಗೊತ್ತಿಲ್ಲ ಎಂದರು.

ಕಳೆದ ಹಲವಾರು ದಶಕಗಳಿಂದ ಸಾರ್ವಜನಿಕ ಜೀವನದಲ್ಲಿರುವ ನಾವು ನಾಡಿನ ಎಲ್ಲ ಮಠಗಳನ್ನು ಗೌರವದಿಂದ ನಡೆದುಕೊಂಡು ಬಂದಿದ್ದೇವೆ. ನನ್ನ ಕುಟುಂಬದ ಸದಸ್ಯರು ಕೂಡ ಇದೇ ಭಾವನೆಯನ್ನು ಇಟ್ಟುಕೊಂಡಿದ್ದಾರೆ ಎಂದು ತಿಳಿಸಿದರು.

ಕೂಡಲಸಂಗಮ ಮಠದ ಶ್ರೀಗಳಾದ ಶ್ರೀ ಜಯಮೃತ್ಯುಂಜಯ ಸ್ವಾಮೀಜಿಗಳ ಬಗ್ಗೆ ನನಗೆ ಮೊದಲಿನಿಂದಲೂ ಅಪಾರವಾದ ಗೌರವವಿದೆ. ಶ್ರೀಗಳು ನಮ್ಮ ಸಮುದಾಯದ ಏಳಿಗೆಗಾಗಿ ಸಾಕಷ್ಟು ಶ್ರಮಿಸಿದ್ದಾರೆ. ಅವರು ಹಾಕಿಕೊಟ್ಟ ಮಾರ್ಗದರ್ಶನದಲ್ಲೇ ಮುನ್ನಡೆಯುತ್ತಿದ್ದೇವೆ. ಅವರಿಗೆ ನನ್ನ ಬಗ್ಗೆ ತಪ್ಪು ಸಂದೇಶ ಮೂಡಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಪಂಚಮಶಾಲಿ ಸಮುದಾಯವನ್ನು ಜಯ ಮೃತ್ಯುಂಜಯ ಸ್ವಾಮೀಜಿಯವರು ಸಂಘಟಿಸಲು ಎಷ್ಟು ಹೋರಾಟ ನಡೆಸುತ್ತಿದ್ದಾರೆ ಎಂಬ ಅರಿವು ನನಗಿದೆ. ಅವರನ್ನು ಎಂಥ ಸಂದರ್ಭದಲ್ಲೂ ಕೂಡ ಅಗೌರವದಿಂದ ಕಂಡಿಲ್ಲ. ಅವರ ನಿಸ್ವಾರ್ಥ ಸೇವೆ ಬಗ್ಗೆ ನನಗೆ ಈಗಲೂ ಹೆಮ್ಮೆಯಿದೆ. ಆದರೆ ಕೆಲವರಿಂದ ತಪ್ಪು ಸಂದೇಶ ಮೂಡಿದೆ ಎಂದು ಹೇಳಿದರು.

ಒಂದು ವೇಳೆ ನಾನು ಏನಾದರೂ ತಪ್ಪು ಮಾಡಿದರೆ ಜಯಮೃತ್ಯುಂಜಯ ಸ್ವಾಮೀಜಿಗಳು ನನಗೆ ಶಿಕ್ಷೆ ನೀಡಲಿ. ಖಂಡಿತವಾಗಿ ನಾನು ಒಬ್ಬ ಭಕ್ತನಾಗಿ ಶ್ರದ್ದೆಯಿಂದ ಸ್ವೀಕರಿಸುತ್ತೇನೆ. ಆದರೆ ನನ್ನ ಬಗ್ಗೆ ಅನಗತ್ಯವಾಗಿ ತಪ್ಪು ಸಂದೇಶವನ್ನು ನೀಡಬೇಡಿ ಎಂದು ಮನವಿ ಮಾಡಿದರು.

ಪೀಠ ರಚನೆಯಾದರೆ ತಪ್ಪೇನು?:
ಪಂಚಮಸಾಲಿ ಸಮುದಾಯದ ಮೂರನೇ ಪೀಠ ರಚನೆಯಾದರೆ ತಪ್ಪೇನೂ ಇಲ್ಲ. ನನಗೂ ಈ ಮಠಕ್ಕೂ ಯಾವುದೇ ಸಂಬಂಧವೂ ಇಲ್ಲ. ನಾನು ಪೀಠ ರಚನೆ ಮಾಡುವಂತೆ ಎಲ್ಲಿಯೂ ಹೋಗಿಲ್ಲ. ಪ್ರಸ್ತುತ ನಾನು ಜವಾಬ್ದಾರಿಯುತ ಸಚಿವನಾಗಿ ಇಲಾಖೆ ಕಡೆ ಗಮನಹರಿಸಿದ್ದೇನೆ ಎಂದು ತಮ್ಮ ಮೇಲಿನ ಆರೋಪಗಳಿಗೆ ಸ್ಪಷ್ಟನೆ ನೀಡಿದರು.

ಮೂರನೇ ಪೀಠವನ್ನು ಭಕ್ತರು ಸೇರಿಕೊಂಡು ರಚನೆ ಮಾಡುತ್ತಿದ್ದಾರೆ. ಇದಕ್ಕೆ ಪದಾಕಾರಿಗಳು ಬೆಂಬಲ ಸೂಚಿಸಿದ್ದಾರೆ. ನಾನು ಯಾರಿಗೂ ಮಠ ರಚನೆ ಮಾಡುವಂತೆ ಬೆಂಬಲ ಕೊಡುತ್ತಿಲ್ಲ. ಭಕ್ತರ ಇಚ್ಛೆಯಂತೆ ಮಠ ಸ್ಥಾಪನೆಯದರೆ ತಪ್ಪೇನು ಎಂದು ನಿರಾಣಿ ಪ್ರಶ್ನಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಇನ್ಮುಂದೆ ನೂರು ಗ್ಯಾರಂಟಿ ಘೋಷಣೆ ಮಾಡಿದರೂ ಕಾಂಗ್ರೆಸ್ ಅಧಿಕಾರಕ್ಕೆ ಬರಲ್ಲ: ಛಲವಾದಿ ನಾರಾಯಣಸ್ವಾಮಿ
Breaking ಮಂಡ್ಯ ಬಸ್ ಅಪಘಾತದಲ್ಲಿ 23 ಪ್ರಯಾಣಿಕರಿಗೆ ಗಾಯ, ಇಬ್ಬರು ಗಂಭೀರ