ಕಟ್ಟಡ ಕಾರ್ಮಿಕರಿದ್ದಲ್ಲಿಗೇ ತೆರಳಿ ಉಚಿತ ಚಿಕಿತ್ಸೆ: ಸಂಚಾರಿ ಕ್ಲಿನಿಕ್‌ ಆರಂಭ

By Kannadaprabha NewsFirst Published Jul 1, 2022, 4:45 AM IST
Highlights

*  ಕಟ್ಟಡ ಕಾರ್ಮಿಕರ ಸಂಚಾರಿ ಕ್ಲಿನಿಕ್‌ ಆರಂಭ
*  ‘ಶ್ರಮಿಕ್‌ ಸಂಜೀವಿನಿ - ಸಂಚಾರಿ ಚಿಕಿತ್ಸಾ ಕೇಂದ್ರ’ಗಳಿಗೆ ಚಾಲನೆ ನೀಡಿದ ಶಿವರಾಂ ಹೆಬ್ಬಾರ್‌ 
*  ಇದರಿಂದ ಕಾರ್ಮಿಕರ ಸಮಯ ಮತ್ತು ಹಣ ಎರಡೂ ಉಳಿತಾಯ
 

ಬೆಂಗಳೂರು(ಜು.01):  ಶ್ರಮಿಕ ವರ್ಗ ಮಾತ್ರವಲ್ಲದೆ ಅವರ ಕುಟುಂಬ ವರ್ಗದ ಆರೋಗ್ಯ ಸೇವೆಗೆ ಮೊಬೈಲ್‌ ಕ್ಲಿನಿಕ್‌ ಅತ್ಯಾಧುನಿಕ ಸಲವತ್ತುಗಳನ್ನು ಹೊಂದಿದೆ ಎಂದು ಕಾರ್ಮಿಕ ಸಚಿವ ಶಿವರಾಂ ಹೆಬ್ಬಾರ್‌ ಅಭಿಪ್ರಾಯಪಟ್ಟಿದ್ದಾರೆ.

ರಾಜ್ಯದ ಕಟ್ಟಡ ನಿರ್ಮಾಣ ಮತ್ತು ಇತರೆ ಕಾರ್ಮಿಕರು ಇದ್ದಲ್ಲಿಗೇ ಚಿಕಿತ್ಸಾಲಯವನ್ನು ಕೊಂಡೊಯ್ಯುವ ಮಹತ್ವಾಕಾಂಕ್ಷಿ ಯೋಜನೆಯಡಿ ‘ಶ್ರಮಿಕ್‌ ಸಂಜೀವಿನಿ - ಸಂಚಾರಿ ಚಿಕಿತ್ಸಾ ಕೇಂದ್ರ’ಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ಆಧುನಿಕ ಸ್ಟ್ರೆಚ್ಚರ್‌, ಹಾಸಿಗೆ, ಆಕ್ಸಿಜನ್‌ ಪರಿಕರಗಳು, ಇಸಿಜಿ ಸೌಲಭ್ಯ, ಕೋವಿಡ್‌ ಪರೀಕ್ಷಾ ಸಲಕರಣೆಗಳು, ಪ್ರಯೋಗಾಲಯ ಸಲಕರಣೆಗಳು, ಸಿಬ್ಬಂದಿಗೆ ಆಸನ ವ್ಯವಸ್ಥೆ ಸೇರಿದಂತೆ ಅಗತ್ಯ ಸಲಕರಣೆಗಳನ್ನು ಶ್ರಮಿಕ್‌ ಸಂಜೀವಿನಿ ಹೊಂದಿದೆ. ಚಿಕಿತ್ಸೆಗೆ ಬರುವ ಪ್ರತಿ ಕಾರ್ಮಿಕರಿಗೆ ಕ್ರಮ ಸಂಖ್ಯೆ ನೀಡಿ ಪ್ರತ್ಯೇಕ ಒಪಿಡಿ ದಾಖಲೆ ನಿರ್ವಹಣೆ, ನೋಂದಾಯಿತ ಕಟ್ಟಡ ಕಾರ್ಮಿಕರು ಮತ್ತು ಅವರ ಅವಲಂಬಿತರಿಗೆ ಔಷಧೋಪಚಾರಗಳನ್ನು ಒದಗಿಸಲಿದೆ ಎಂದು ಹೇಳಿದರು.

Latest Videos

Sirsi-Hubballi ರಾಜ್ಯ ಹೆದ್ದಾರಿ ಶೀಘ್ರ ಮೇಲ್ದರ್ಜೆಗೆ: ಸಚಿವ ಹೆಬ್ಬಾರ

2020-21ನೇ ಸಾಲಿನ ಬಜೆಟ್‌ನಲ್ಲಿ 10 ಮತ್ತು 21-22ನೇ ಸಾಲಿನಲ್ಲಿ 32 ಸಂಚಾರಿ ಕ್ಲಿನಿಕ್‌ಗಳನ್ನು ಆರಂಭಿಸುವ ಘೋಷಣೆ ಮಾಡಲಾಗಿತ್ತು. ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರು ದಿನನಿತ್ಯ ದುಡಿತದಲ್ಲಿ ಇರುವ ಕಾರಣದಲ್ಲಿ ಆರೋಗ್ಯ ಸಮಸ್ಯೆಗಳು ಎದುರಾಗುತ್ತವೆ. ಹೀಗೆ ಅನಾರೋಗ್ಯವಾದಾಗ ವೈದ್ಯರ ಬಳಿ ತೆರಳಲು ಸಮಯ ಮತ್ತು ಹಣವಿಲ್ಲದೆ ತೊಂದರೆಗೊಳಗಾಗಬಾರದು ಎಂಬ ಸದುದ್ದೇಶದಿಂದ ಈ ಯೊಜನೆ ಮೂಲಕ ಅವರಿದ್ದೆಡೆಗೆ ಕ್ಲಿನಿಕ್‌ ಕೊಂಡೊಯ್ಯುವ ವ್ಯವಸ್ಥೆಯನ್ನು ಮಾಡಲಾಗಿದೆ. ಇದರಿಂದ ಕಾರ್ಮಿಕರ ಸಮಯ ಮತ್ತು ಹಣ ಎರಡೂ ಉಳಿತಾಯವಾಗಲಿದೆ ಎಂದು ಮಾಹಿತಿ ನೀಡಿದರು.

ಆಕರ್ಷಕವಾಗಿ ರೂಪಿಸಿ ವಿನ್ಯಾಸಗೊಳಿಸಲಾಗಿರುವ ಶ್ರಮಿಕ್‌ ಸಂಜೀವಿನಿ ಕ್ಲಿನಿಕ್‌ಗಳಲ್ಲಿ ಸೇವೆಗಳ ಅನ್‌ಲೈನ್‌ ವರದಿಗಾಗಿ ರಿಯಲ್‌ ಟೈಮ್‌ ರಿರ್ಪೋಟಿಂಗ್‌, ಜಿಪಿಎಸ್‌ ಟ್ರೇಸಿಂಗ್‌ ಸಿಸ್ಟಮ್‌, ರೋಗಿಯ ವಿವರಗಳನ್ನು ಎಂಐಎಂನಲ್ಲಿ ಆಪ್‌ಲೋಡ್‌ ಮಾಡಲಾಗುತ್ತಿದೆ. ಇದಕ್ಕಾಗಿ ಬಿಎಸ್‌-6 ಮಾದರಿಯ ವಾಹನಗಳನ್ನು ಇಲಾಖೆ ಬಳಸಿಕೊಂಡಿದೆ. ತುರ್ತು ಸಂದರ್ಭದಲ್ಲಿ ಶ್ರಮಿಕ್‌ ಸಂಜೀವಿನಿ ಸೇವೆಯನ್ನು ಸಹಾಯವಾಣಿ ಸಂಖ್ಯೆ 155214ಗೆ ಕರೆ ಮಾಡಿ ಪಡೆಯಬಹುದಾಗಿದೆ. ಯೋಜನೆಯ ತುರ್ತು ಜಾರಿಗೆ ಅನುವಾಗುವಂತೆ ಕಾರ್ಮಿಕ ವಿಮಾ ಸಂಸ್ಥೆಯ ವೈದ್ಯಕೀಯ ಮತ್ತು ಸಿಬ್ಬಂದಿ ಸೇವೆಯನ್ನು ಒದಗಿಸುತ್ತಿದೆ ಎಂದು ತಿಳಿಸಿದರು.

ಕಾರ್ಮಿಕ ಇಲಾಖೆ ಪ್ರಧಾನ ಕಾರ್ಯದರ್ಶಿ ಮನೋಜ್‌ ಜೈನ್‌, ಆಯುಕ್ತ ಅಕ್ರಂ ಪಾಷ, ಮಂಡಳಿ ಕಾರ್ಯದರ್ಶಿ ಗುರುಪ್ರಸಾದ್‌, ಜಂಟಿ ಕಾರ್ಯದರ್ಶಿ ಶಿವಪುತ್ರ ಪಾಟೀಲ್‌ ಸೇರಿದಂತೆ ಇತರರು ಉಪಸ್ಥಿತರಿದ್ದರು.
 

click me!