ಶಾಸಕ ಮಾಡಾಳ್‌ ವಿರುಪಾಕ್ಷಪ್ಪ ಮತ್ತೆ ಪರಾರಿ.?: ಲೋಕಾಯುಕ್ತ ಪೊಲೀಸರಿಗೆ ಚಳ್ಳೆ ಹಣ್ಣು!

By Sathish Kumar KHFirst Published Mar 27, 2023, 4:36 PM IST
Highlights

ಲೋಕಾಯುಕ್ತ ಪೊಲೀಸರ ಬಂಧನದ ಭೀತಿಯ ಹಿನ್ನೆಲೆಯಲ್ಲಿ ಶಾಸಕ ಮಾಡಾಳು ವಿರುಪಾಕ್ಷಪ್ಪ ಪುನಃ ತಪ್ಪಿಸಿಕೊಂಡು ಅಜ್ಞಾತ ಸ್ಥಳಕ್ಕೆ ತೆರಳಿದ್ದಾರೆ ಎನ್ನಲಾಗುತ್ತಿದೆ.

ಬೆಂಗಳೂರು (ಮಾ.27): ದಾವಣಗೆರೆಯ ಚನ್ನಗಿರಿಯಲ್ಲಿದ್ದ ಶಾಸಕ ಮಾಡಾಳು ವಿರುಪಾಕ್ಷಪ್ಪ ಎಸ್ಕೇಪ್‌. ಚುನಾವಣೆಯ ಮುನ್ನವೇ ಬಂಧನದ ಭೀತಿ ಎದುರಿಸುತ್ತಿದ್ದ ಮಾಡಾಳು ವಿರುಪಾಕ್ಷಪ್ಪ ಪುನಃ ತಪ್ಪಿಸಿಕೊಂಡು ಅಜ್ಞಾತ ಸ್ಥಳಕ್ಕೆ ತೆರಳಿದ್ದಾರೆ ಎಂದು ಕೇಳಿಬಂದಿದೆ.

ಅಕ್ರಮ ಹಣ ಸಂಪಾದನೆಯ ಪ್ರಕರಣದಡಿ ಎ1 ಆರೋಪಿ ಆಗಿದ್ದರೂ ಮಾಡಾಳು ವಿರುಪಾಕ್ಷಪ್ಪ ರಾಜಾರೋಷವಾಗಿ ಸಂಚಾರ ಮಾಡುತ್ತಿದ್ದರು. ಈ ಹಿನ್ನೆಲೆಯಲ್ಲಿ ಲೋಕಾಯುಕ್ತ ಪೊಲೀಸರು ಜಾಮೀನು ರದ್ದುಗೊಳಿಸುವಂತೆ ಸಲ್ಲಿಕೆ ಮಾಡಲಾಗಿದ್ದ ಆಕ್ಷೇಪಣಾ ಅರ್ಜಿಯನ್ನು ವಿಚಾರಣೆ ಮಾಡಿದ ಹೈಕೋರ್ಟ್‌, ಇಂದು ಮದ್ಯಂತರ ನಿರೀಕ್ಷಣಾ ಜಾಮೀನು ರದ್ದುಗೊಳಿಸಿದೆ. ಈ ವಿಚಾರ ತಿಳಿದ ಬೆನ್ನಲ್ಲೇ ಮಾಡಾಳು ವಿರುಪಾಕ್ಷಪ್ಪ ಚನ್ನಗಿರಿಯ ಮನೆಯಿಂದ ಪರಾರಿ ಆಗಿದ್ದಾರೆ. 

Breaking: ಶಾಸಕ ಮಾಡಾಳು ವಿರುಪಾಕ್ಷಪ್ಪ ಜಾಮೀನು ರದ್ದು: ಚುನಾವಣೆಗೆ ಮುನ್ನ ಬಂಧನ ಭೀತಿ

ಲೋಕಾಯುಕ್ತ ಪೊಲೀಸರಿಗೆ ಚಳ್ಳೆಹಣ್ಣು: ಕೆಲವೇ ಕ್ಷಣಗಳ ಹಿಂದೆ ಚನ್ನಗಿರಿ ಪಟ್ಟಣದಲ್ಲಿ ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಮಾಡಾಳು ವಿರುಪಾಕ್ಷಪ್ಪ ಸುದ್ದಿ ತಿಳಿಯುತ್ತಿದ್ದಂತಯೇ ಸಭೆಯಿಂದ ಮನೆಗೆ ಆಗಮಿಸಿದ್ದರು. ಮನೆಗೆ ಬಂದ ಮಾಡಾಳ್ ಮನೆಯಿಂದ ಕೆಲವೇ  ಕ್ಷಣಗಳಲ್ಲಿ ಪರಾರಿ ಆಗಿದ್ದಾರೆ. ತಮ್ಮ ವಕೀಲರಿಗೆ ಪೋನ್ ಮಾಡಿ ವಿಷಯ ತಿಳಿದುಕೊಂಡು  ಮುಂದಿನ ನಡೆ ಬಗ್ಗೆ ಮಾಡಾಳ್ ಚರ್ಚೆ ಮಾಡಿದ್ದಾರೆ ಎನ್ನಲಾಗಿದೆ. ಮನೆಗೆ ಆಗಮ ಇಸಿದ ಶಾಸಕ ಮಾಡಾಳು ವಿರುಪಾಕ್ಷಪ್ಪ ಬೇರೊಂದು ಕಾರಿನಲ್ಲಿ ಮನೆಯಿಂದ ಅಜ್ಞಾತ ಸ್ಥಳಕ್ಕೆ ತೆರಳಿದ್ದಾರೆ ಎಂಬ ಅನುಮಾನ ವ್ಯಕ್ತವಾಗುತ್ತಿದೆ.

ಕಳೆದ ಬಾರಿ 6 ದಿನ ಕಣ್ತಪ್ಪಿಸಿಕೊಂಡಿದ್ದ ವಿರುಪಾಕ್ಷಪ್ಪ: ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತ (ಕೆಎಸ್‌ಡಿಎಲ್‌) ಅಧ್ಯಕ್ಷರಾಗಿದ್ದ ಮಾಡಾಳು ವಿರುಪಾಕ್ಷಪ್ಪ ಖಾಸಗಿ ಕಂಪನಿಯೊಂದರ ಪ್ರಕರಣವನ್ನು ಖುಲಾಸೆ ಮಾಡುವ ಕಾರಣಕ್ಕೆ 40 ಲಕ್ಷ ರೂ. ಲಂಚ ಪಡೆಯುತ್ತಿದ್ದರು ಎಂಬ ಆರೋಪದಡಿ ಅವರನ್ನೇ 1 ಆರೋಪಿಯನ್ನಾಗಿ ಮಾಡಲಾಗಿತ್ತು. ಉಳಿದಂತೆ ಅವರ ಪುತ್ರ ಮಾಡಾಳು ಪ್ರಶಾಂತ, ಹಣ ಕೊಡಲು ಬಂದಿದ್ದ ಕಂಪನಿಯ ಇಬ್ಬರು ವ್ಯಕ್ತಿಗಳು ಹಾಗೂ ಮಾಡಾಳು ವಿರುಪಾಕ್ಷಪ್ಪ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು ಸಿಬ್ಬಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಆದರೆ, ಮಾಡಾಳು ವಿರುಪಾಕ್ಷಪ್ಪ ಮಾತ್ರ 6 ದಿನಗಳವರೆಗೆ ಯಾರ ಕೈಗೂ ಸಿಗದಂತೆ ತಪ್ಪಿಸಿಕೊಂಡಿದ್ದರು. ಇನ್ನು ಹೈಕೋರ್ಟ್‌ನಲ್ಲಿ ಜಾಮೀನು ಲಭ್ಯವಾದ ನಂತರವೇ ಬಹಿರಂಗವಾಗಿ ಪ್ರತ್ಯಕ್ಷ ಆಗಿದ್ದರು.

ಮಾಡಾಳ್ ವಿರುಪಾಕ್ಷಪ್ಪ ಬೇಲ್‌ ರದ್ದು ಮಾಡೋಕೆ ಅರ್ಜೆಂಟ್‌ ಯಾಕೆ?: ಲೋಕಾಯುಕ್ತಗೆ ಸುಪ್ರೀಂ ತರಾಟೆ

ಜಾಮೀನು ರದ್ದುಗೊಳಿಸಿದ ಹೈಕೋರ್ಟ್: ಲೋಕಾಯುಕ್ತರಿಂದ ಅಕ್ರಮ ಹಣ ಸಂಪಾದನೆ ಪ್ರಕರಣದ ಎ1 ಆರೋಪಿ ಶಾಸಕ ಮಾಡಾಳು ವಿರುಪಾಕ್ಷಪ್ಪ ಅವರ ಜಾಮೀನು ರದ್ದುಗೊಳಿಸುವಂತೆ ಸಲ್ಲಿಕೆ ಮಾಡಲಾದ ಅರ್ಜಿಯನ್ನು ಇಂದು ಹೈಕೋರ್ಟ್‌ನಲ್ಲಿ ವಿಚಾರಣೆಗೆ ಕೈಗೆತ್ತಿಕೊಂಡ ನ್ಯಾ.ಕೆ.ನಟರಾಜನ್ ಅವರು ಶಾಸಕರಿಗೆ ನೀಡಲಾಗಿದ್ದ ನಿರೀಕ್ಷಣಾ ಜಾಮೀನು ರದ್ದುಗೊಳಿಸಿ ಆದೇಶ ಹೊರಡಿಸಿದ್ದಾರೆ. ಆದರೆ, ಕಳೆದ ಬಾರಿ ಬಂಧನದ ವಾರೆಂಟ್‌ ಇದ್ದರೂ 6 ದಿನಗಳ ಕಾಲ ಲೋಕಾಯುಕ್ತ ಪೊಲೀಸರ ಕಣ್ತಪ್ಪಿಸಿಕೊಂಡು ಜಾಮೀನು ಸಿಕ್ಕಿದ ಮೇಲೆ ವಿರುಪಾಕ್ಷಪ್ಪ ಬಂದಿದ್ದರು. ಈಗಲೂ ಕೂಡ ಬಂಧನ ವಾರೆಂಟ್‌ ಹಿಡಿದು ಹೋಗುವ ಲೋಕಾಯುಕ್ತ ಪೊಲೀಸರಿಗೆ ಮಾಡಾಳು ವಿರುಪಾಕ್ಷಪ್ಪ ಸಿಗುತ್ತಾರೆಯೇ ಎಂಬುದನ್ನು ಕಾದು ನೋಡಬೇಕಿದೆ.

click me!