
ವರದಿ: ಷಡಕ್ಷರಿ ಕಂಪೂನವರ್ ಏಷ್ಯಾನೆಟ್ ಸುವರ್ಣ ನ್ಯೂಸ್
ವಿಜಯಪುರ/ಮಂಗಳೂರು (ಮಾ.27): ಜನರ ಜೀವನಾಡಿಯಾಗಿರುವ ನದಿಗಳಲ್ಲಿ ಅಕ್ರಮ ಮರಳುಗಣಿಗಾರಿಕೆ ನಡೆಸಿ ಜೈಲು ಸೇರಿದವರು ಅದೆಷ್ಟೋ ಜನ. ಅದೆಷ್ಟೋ ಕಡೆಗಳಲ್ಲಿ ನಡೆಯುತ್ತಿದ್ದ ಗಣಿಗಾರಿಕೆಗೆ ನ್ಯಾಯಾಲಯ ಸಹ ಫುಲ್ ಸ್ಟಾಪ್ ಇಟ್ಟಿರುವ ಉದಾಹರಣೆಗಳು ಕಣ್ಮುಂದಿವೆ. ಈ ನಡುವೆ ಮಂಗಳೂರು ಜಿಲ್ಲೆಯ ಎರಡು ನದಿಗಳಲ್ಲಿ ನಡೆಯುತ್ತಿದ್ದ ಮರಳು ಗಣಿಗಾರಿಕೆಗೆ ಹಸಿರು ನ್ಯಾಯಪೀಠ ಬ್ರೇಕ್ ಹಾಕಿ ಗಣಿಗಾರಿಕೆಗೆ ಅನುಮತಿ ನೀಡಿದ್ದ ಸರ್ಕಾರಕ್ಕೆ ಛಾಟಿ ಬೀಸಿದೆ. ಅಷ್ಟೆ ಅಲ್ಲದೆ ಮರಳು ಗಣಿಗಾರಿಕೆಗೆ ಜಿಲ್ಲಾಧಿಕಾರಿ ನೀಡಿದ್ದ ಅನುಮತಿಯನ್ನು ರದ್ದು ಪಡಿಸಿ, ನೀರಾವರಿ ಇಲಾಖೆಗೆ 50 ಕೋಟಿ ರೂಪಾಯಿ ದಂಡ ವಿಧಿಸಿದೆ.
ಏನಿದು ಮರಳು ಗಣಿಗಾರಿಕೆ, ದಂಡ ಪ್ರಕರಣ:
ಅಷ್ಟಕ್ಕೂ ಈ ಮರಳು ಗಣಿಗಾರಿಕೆ ನಡೆಯುತ್ತಿದ್ದದ್ದು ಎಲ್ಲಿ? ಮತ್ತೆ ಸರ್ಕಾರವೇ ಪರವಾಣಿಗೆ ನೀಡಿದ್ದರು ಹಸಿರು ನ್ಯಾಯಪೀಠ ಕೋಟಿ ಕೋಟಿ ದಂಢ ವಿಧಿಸಿದ್ದು ಯಾಕೆ ಅಂದರೆ, ಕಳೆದ ಕೆಲ ತಿಂಗಳ ಹಿಂದೆ ಮಂಗಳೂರು ಜಿಲ್ಲೆಯ ನೇತ್ರಾವತಿ ಹಾಗೂ ಫಾಲ್ಗುಣಿ ನದಿಗಳಲ್ಲಿ ಮರಳು ಗಣಿಗಾರಿಕೆಗೆ ಅಲ್ಲಿನ ಮಂಗಳೂರು ಜಿಲ್ಲಾಧಿಕಾರಿ ಅನುಮತಿಯನ್ನ ನೀಡಿದ್ದರು. ಇದನ್ನ ಪ್ರಶ್ನಿಸಿ ವಿಜಯಪುರ ಜಿಲ್ಲೆಯ ಇಂಡಿ ಮಾಜಿ ಶಾಸಕ ಸೌರಭೌಮ ಬಗಲಿ ಹಸಿರು ಪೀಠಕ್ಕೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.
ಡ್ಯಾಂಗಳ ಪಕ್ಕದಲ್ಲೆ ನಡೆಯುತ್ತಿತ್ತು ಗಣಿಗಾರಿಕೆ!
ಕೇವಲ ಅನುಮತಿಯನ್ನ ನೀಡಿದ್ದಕ್ಕೆ ಇಲ್ಲಿ ಪ್ರಶ್ನಿಸುವ ಅವಶ್ಯಕತೆ ಇರಲಿಲ್ಲ. ಆದ್ರೆ ಇಲ್ಲಿ ಡೆಂಜರಸ್ ವಿಚಾರ ಅಂದ್ರೆ ಡ್ಯಾಂಗಳ ಪಕ್ಕದಲ್ಲೆ ಮರಳು ಗಣಿಗಾರಿಕೆ ನಡೆಸಲಾಗ್ತಿತ್ತು. ನೇತ್ರಾವತಿ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ಶಂಭೂರ ಡ್ಯಾಂ ಹಾಗೂ ಫಾಲ್ಗುಣಿ ನದಿಗೆ ಅಡ್ಡಲಾಗಿ ನಿರ್ಮಿಸಿಲಾಗಿರುವ ಅಡಿಪಾಡಿ ಡ್ಯಾಂ ಸುತ್ತವೆ ಮರಳು ಗಣಿಗಾರಿಕೆ ನಡೆಸಲಾಗ್ತಿತ್ತು. ಇದು ಅಲ್ಲಿನ ಡ್ಯಾಂಗಳಿಗೆ ಮರಣ ಶಾಸನ ಬರೆಯುವ ಹಂತದಲ್ಲಿತ್ತು. ಇದನ್ನ ಅರಿತ ಸೌರಭೌಮ ಬಗಲಿ ಚೆನ್ನೈನ ದಕ್ಷಿಣ ವಿಭಾಗೀಯ ರಾಷ್ಟ್ರೀಯ ಹಸಿರು ಪೀಠಕ್ಕೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆ ಮಾಡಿದ್ದರು.
ನಾಲ್ಕೇ ತಿಂಗಳಲ್ಲಿ PIL ಪರಿಗಣಿಸಿ ಆದೇಶ:
ಕಳೆದ 2022 ಡಿಸೆಂಬರ್ 6ರಂದು ಸೌರಭೌಮ ಬಗಲಿ ದಕ್ಷಿಣ ವಿಭಾಗೀಯ ರಾಷ್ಟ್ರೀಯ ಹಸಿರು ಪೀಠಕ್ಕೆ PIL ಸಲ್ಲಿಕೆ ಮಾಡಿದ್ದರು. ಈ ಅರ್ಜಿಯನ್ನ ಕೂಲಂಕುಷವಾಗಿ ಅವಲೋಕಿಸಿದ ಹಸಿರು ಪೀಠ ಕಳೆದ ಮಾರ್ಚ್ 23 ರಂದು ರಾಜ್ಯ ನೀರಾವರಿ ಇಲಾಖೆಗೆ 50 ಕೋಟಿ ದಂಡ ವಿಧಿಸಿ ಆದೇಶ ಹೊರಡಿಸಿದೆ.
ಸರ್ಕಾರದ ಅನುಮತಿ ಕಾನೂನು ಬಾಹಿರ:
ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಗಂಭೀರವಾಗಿ ಪರಿಗಣಿಸಿದ ಹಸಿರು ಪೀಠ ನೀರಾವರಿ ಇಲಾಖೆಗೆ ದಂಡ ವಿಧಿಸಿದೆ. ಜೊತೆಗೆ ಮಂಗಳೂರು ಜಿಲ್ಲಾಧಿಕಾರಿಗಳು ನೀಡಿದ್ದ ಮರಳು ಗಣಿಗಾರಿಕೆಗೆ ಆದೇಶವನ್ನ ರದ್ದು ಪಡಿಸಿದೆ. ಈ ಮೂಲಕ ಕಾನೂನನ್ನು ಗಾಳಿಗೆ ತೂರಿ ಮರಳು ಗಣಿಗಾರಿಕೆಗೆ ಅನುಮತಿ ನೀಡಿದವರಿಗೆ ಹಸಿರು ಪೀಠ ಛೀಮಾರಿ ಹಾಕಿದೆ. ತಕ್ಷಣವೇ ಮರಳು ಗಣಿಗಾರಿಕೆ ನಿಲ್ಲಿಸಲು ಆದೇಶಿಸಿದೆ.
ಗಣಿಗಾರಿಕೆ ಮಾರ್ಗ ಬದಲಿಸಿದ ಮಾಲೀಕರು: ರಸ್ತೆಗಾಗಿ ರೈತರ ಭೂಮಿ ಕಬಳಿಕೆ
SEIAA ಸಮ್ಮತಿ ಪಡೆಯದೆ ಗಣಿಗಾರಿಕೆಗೆ ಅನುಮತಿ ನೀಡಿದ್ದ ಡಿಸಿ!
ನೇತ್ರಾವತಿ ಹಾಗೂ ಪಾಲ್ಗುಣಿ ನದಿಗಳಲ್ಲಿ ಮರಳು ಗಣಿಗಾರಿಕೆಗೆ ಅನುಮತಿ ನೀಡುವಾಗ ಕಾನೂನು ಗಾಳಿಗೆ ತೂರಲಾಗಿದೆ ಎಂದು ಅರ್ಜಿದಾರರು ಆರೋಪಿಸಿದ್ದರು. ಗಣಿಗಾರಿಕೆಯಿಂದ ಎರಡು ಡ್ಯಾಂಗಳಿಗೆ ಹಾನಿಯಾಗುವುದು ಅಲ್ಲದೆ, ಬೆಂಗಳೂರಿನ SEIAA ಯಿಂದಲು ಸಮ್ಮತಿ ಪಡೆದಿಲ್ಲ. ಗಣಿಗಾರಿಕೆಗೆ ಅನುಮತಿ ನೀಡುವ ವೇಳೆ ಕಾನೂನುಗಳನ್ನು ಸಂಪೂರ್ಣ ಗಾಳಿಗೆ ತೂರಲಾಗಿತ್ತು. ಈ ವಿಚಾರವನ್ನು ಹಸಿರು ಪೀಠ ಗಂಭೀರವಾಗಿ ಪರಿಗಣಿಸಿದೆ.
Bengaluru news: ಅಕ್ರಮ ಗಣಿಗಾರಿಕೆ ಪ್ರಕರಣ: 5.21 ಕೋಟಿ ರೂ. ಮೌಲ್ಯದ ಆಸ್ತಿ ಜಪ್ತಿ ಮಾಡಿದ ಇ.ಡಿ
ನೀರಾವರಿ ಇಲಾಖೆಗೆ ತೀವ್ರ ಮುಜುಗರ:
ಇಡೀ ಪ್ರಕರಣ ಗಮನಿಸಿದಾಗ ಹಸಿರು ಪೀಠ 50 ಕೋಟಿಯಷ್ಟು ಬೃಹತ್ ಮೊತ್ತದ ದಂಡ ಯಾಕೆ ನೀರಾವರಿ ಇಲಾಖೆಗೆ ವಿಧಿಸಿದೆ ಅನ್ನೋದು ಪ್ರಶ್ನೆಯಾಗಿದೆ. ಆದ್ರೆ ಡ್ಯಾಂಗಳ ಜವಾಬ್ದಾರಿಯನ್ನು ನೀರಾವರಿ ಇಲಾಖೆ ವಹಿಸಿಕೊಂಡಿರುತ್ತದೆ. ಗಣಿಗಾರಿಕೆಗೆ ಡ್ಯಾಂ ಪಕ್ಕದಲ್ಲೇ ನಡೆಯುವಾಗ ನೀರಾವರಿ ಇಲಾಖೆ ಯಾಕೆ ಸುಮ್ಮನಾಗಿತ್ತು. ಈ ನಿರ್ಲಕ್ಷ್ಯಕ್ಕೆ 50 ಕೋಟಿಯಷ್ಟು ಬಾರೀ ದಂಡ ವಿಧಿಸಿದಂತಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ