Smart City: ಗಡುವಿಗೂ ಮೊದಲೇ ಸ್ಮಾರ್ಟ್‌ಸಿಟಿ ಪೂರ್ಣಗೊಳಿಸುತ್ತೇವೆ: ಸಚಿವ ಬೈರತಿ

Kannadaprabha News   | Asianet News
Published : Jan 25, 2022, 08:35 AM ISTUpdated : Jan 25, 2022, 12:59 PM IST
Smart City: ಗಡುವಿಗೂ ಮೊದಲೇ ಸ್ಮಾರ್ಟ್‌ಸಿಟಿ ಪೂರ್ಣಗೊಳಿಸುತ್ತೇವೆ: ಸಚಿವ ಬೈರತಿ

ಸಾರಾಂಶ

ಕೇಂದ್ರ ಸರ್ಕಾರ ನಮಗೆ ವಿಧಿಸಿರುವ ಗಡುವಿಗೂ ಮೊದಲೇ ರಾಜ್ಯದ ಎಲ್ಲಾ ಏಳೂ ಸ್ಮಾರ್ಟ್‌ ಸಿಟಿ ಯೋಜನೆಗಳ ಕಾಮಗಾರಿಗಳನ್ನು ಪೂರ್ಣಗೊಳಿಸುತ್ತೇವೆ ಎಂದು ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜು ತಿಳಿಸಿದ್ದಾರೆ.

ಬೆಂಗಳೂರು (ಜ.25): ಕೇಂದ್ರ ಸರ್ಕಾರ ನಮಗೆ ವಿಧಿಸಿರುವ ಗಡುವಿಗೂ ಮೊದಲೇ ರಾಜ್ಯದ ಎಲ್ಲಾ ಏಳೂ ಸ್ಮಾರ್ಟ್‌ ಸಿಟಿ (Smart City) ಯೋಜನೆಗಳ ಕಾಮಗಾರಿಗಳನ್ನು ಪೂರ್ಣಗೊಳಿಸುತ್ತೇವೆ ಎಂದು ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜು (Byrathi Basavaraj) ತಿಳಿಸಿದ್ದಾರೆ.

ವಿಕಾಸಸೌಧದಲ್ಲಿ ಸೋಮವಾರ ಸ್ಮಾರ್ಟ್‌ ಸಿಟಿ ಯೋಜನೆ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರು, ಶಿವಮೊಗ್ಗ, ಮಂಗಳೂರು, ತುಮಕೂರು, ದಾವಣಗೆರೆ, ಹುಬ್ಬಳ್ಳಿ-ಧಾರವಾಡ ಮತ್ತು ಬೆಳಗಾವಿ ಈ ಏಳು ಜಿಲ್ಲೆಗಳಲ್ಲಿ ನಡೆಯುತ್ತಿರುವ ಸ್ಮಾರ್ಟ್‌ ಸಿಟಿ ಯೋಜನೆಯ ಕಾಮಗಾರಿಗಳನ್ನು 2023ರ ಜುಲೈ ಅಂತ್ಯಕ್ಕೆ ಮುಕ್ತಾಯಗೊಳಿಸಲು ಕೇಂದ್ರ ಸರ್ಕಾರ ಗಡುವು (Deadline) ನೀಡಿದೆ. ಆದರೆ, ನಾವು 2023ರ ಮಾರ್ಚ್ ಅಂತ್ಯದ ವೇಳೆಗೆ ಪೂರ್ಣಗೊಳಿಸಲು ತೀರ್ಮಾನಿಸಿದ್ದೇವೆ ಎಂದರು.

2020ರ ಫೆಬ್ರವರಿ ವೇಳೆಗೆ 855 ಕೋಟಿ ರೂ. ವೆಚ್ಚದಷ್ಟು ಯೋಜನೆಗಳು ಮಾತ್ರ ನಡೆದಿದ್ದವು. ನಾನು ಇಲಾಕೆ ಸಚಿವನಾದ ಬಳಿಕ ಅಲ್ಲಿಂದ ಇಲ್ಲಿಯವರೆಗೆ 2646 ಕೋಟಿ ರೂ. ಕಾಮಗಾರಿಗಳು ನಡೆದಿವೆ. ಕೊರೋನಾ ಸೋಂಕು, ಲಾಕ್‌ಡೌನ್‌, ಕಾರ್ಮಿಕರ ವಲಸೆ, ಅಭಾವದಂತಹ ಸಮಸ್ಯೆ ಎದುರಿಸಿದ್ದರೂ, ಯಾವುದೇ ಕಾಮಗಾರಿಗಳಿಗೆ ಹಣಕಾಸಿನ ವೆಚ್ಚ ಏರಿಕೆಯಾಗಿಲ್ಲ. ಕಾಮಗಾರಿಗಳ ವೀಕ್ಷಣೆ ಮತ್ತು ಪ್ರಗತಿ ಪರಿಶೀಲನೆಗಾಗಿ ನಾನು ಪ್ರತಿ ನಗರಕ್ಕೆ ಎಂಟರಿಂದ ಹತ್ತು ಬಾರಿ ಭೇಟಿ ನೀಡಿದ್ದೇನೆ. ಕೋವಿಡ್‌ನಿಂದಾಗಿ ಕೆಲ ತಿಂಗಳು ಮಾತ್ರ ಕಾಮಗಾರಿಗಳಲ್ಲಿ ಕುಂಠಿತವಾಗಿತ್ತು. ಬಳಿಕ ಕಾಮಗಾರಿಗಳ ವೇಗ ಹೆಚ್ಚಿಸಲು ಎಲ್ಲಾ ರೀತಿಯ ಕ್ರಮ ಕೈಗೊಂಡಿದ್ದೇನೆ. ಕಾಮಗಾರಿಗಳ ಗುಣಮಟ್ಟಕಾಪಾಡಲು ಕೆಲಸ ಮಾಡುತ್ತಿದ್ದೇವೆ. ಇದರ ಜೊತೆಗೆ ಪ್ರತಿ ತಿಂಗಳು ನಾನು ಪರಿಶೀಲನಾ ಸಭೆ ನಡೆಸುತ್ತಿದ್ದೇನೆ ಎಂದರು.

Smart City: ಯೋಜನೆ ನೆಪದಲ್ಲಿ ಕದ್ರಿ ಪಾರ್ಕ್‌ನ ಕಿಷ್ಕಿಂದೆ ಮಾಡಲು ಹೊರಟ MCC..!

ಕೇಂದ್ರಕ್ಕೆ 4 ಮಹಾನಗರಗಳ ಪ್ರಸ್ತಾವನೆ: ರಾಜ್ಯದ ಇತರೆ ನಾಲ್ಕು ಮಹಾನಗರಗಳಾದ ಮೈಸೂರು, ಬಳ್ಳಾರಿ, ಕಲಬುರಗಿ ಮತ್ತು ವಿಜಯಪುರವನ್ನು ಸ್ಮಾರ್ಟ್‌ ಸಿಟಿ ಯೋಜನೆಯಡಿ ಸೇರಿಸಬೇಕು ಎಂದು ಕೇಂದ್ರ ಸರ್ಕಾರಕ್ಕೆ ಈಗಾಗಲೇ ಪತ್ರ ಸಲ್ಲಿಸಲಾಗಿದೆ. ಇತ್ತೀಚೆಗೆ ಉತ್ತರ ಪ್ರದೇಶದ ಲಕ್ನೋಗೆ ತೆರಳಿದ್ದ ವೇಳೆ ಕೇಂದ್ರ ವಸತಿ ಮತ್ತು ನಗರಾಭಿವೃದ್ಧಿ ವ್ಯವಹಾರಗಳ ಸಚಿವರಾದ ಹರದೀಪ್‌ ಸಿಂಗ್‌ ಪುರಿ ಅವರೊಂದಿಗೂ ಈ ಸಂಬಂಧ ಮಾತನಾಡಿದ್ದೇನೆ. ಅವರಿಂದ ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ಇದೇ ವೇಳೆ ಸಚಿವ ಬೈರತಿ ಬಸವರಾಜು ಹೇಳಿದರು.

ನನ್ನನ್ನು ಸಂಪುಟದಿಂದ ಕೈಬಿಡಲ್ಲ: ನನ್ನನ್ನು ಸಚಿವ ಸಂಪುಟದಿಂದ ಕೈಬಿಡುವುದಿಲ್ಲ ಎಂಬ ವಿಶ್ವಾಸವಿದೆ. ಒಂದು ವೇಳೆ ಕೈಬಿಡಬೇಕೆಂದರೆ ಒಪ್ಪಿಕೊಳ್ಳಲೂಬೇಕಾಗುತ್ತದೆ. ಸಚಿವ ಸಂಪುಟ ವಿಸ್ತರಣೆ, ಪುನಾರಚನೆ ಮುಖ್ಯಮಂತ್ರಿ ಅವರ ಪರಮಾಧಿಕಾರ. ನನ್ನ ಇಲಾಖೆಯ ಕಾರ್ಯವನ್ನು ಸಮರ್ಥವಾಗಿ ನಿಭಾಯಿಸಿದ್ದೇನೆ. ನನ್ನನ್ನು ಸಂಪುಟದಲ್ಲಿ ಮುಂದುವರೆಸುತ್ತಾರೆ ಎಂಬ ವಿಶ್ವಾಸವಿದೆ. ಮುಖ್ಯಮಂತ್ರಿಗಳು ಕೈಗೊಳ್ಳುವ ನಿರ್ಧಾರಕ್ಕೆ ಬದ್ಧನಾಗಿರುತ್ತೇನೆ ಎಂದು ಸಚಿವ ಬೈರತಿ ಬಸವರಾಜು ಹೇಳಿದರು.

ನನ್ನನ್ನು ಪಕ್ಷದಿಂದ ಹೊರಹಾಕಲಿ ಎಂದ ಸಚಿವ: ರಾಜ್ಯ ರಾಜಕಾರಣದಲ್ಲಿ ಆಗಾಗ ಈ ಪಿಸು-ಪಿಸು ಗುಸುಗುಸು ಭಾರೀ ಸದ್ದು ಮಾಡುತ್ತಿದೆ. ಇತ್ತೀಚೆಗೆ ಕಾಂಗ್ರೆಸ್ ನಾಯಕರ ಪಿಸುಮಾತು ಭಾರಿ ಸಂಚಲನ ಮೂಡಿಸಿತ್ತು. ಇದೀಗ ಬಿಜೆಪಿ ನಾಯಕರ ಸರದಿ ಹೌದು! ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜುಗೆ ಸಂಸದ ಜಿ.ಎಸ್.ಬಸವರಾಜು ಅವರು ಸುದ್ದಿಗೋಷ್ಠಿಯಲ್ಲೇ ಜೆಸಿ ಮಾಧುಸ್ವಾಮಿ ವಿರುದ್ಧ ಚಾಡಿ ಹೇಳುತ್ತಿದ್ದ ಗುಸು-ಗುಸು ವೈರಲ್ ಆಗಿದೆ.  ನಗರದಲ್ಲಿ ವಿವಿಧ ಕಟ್ಟಡಗಳ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಭಾಗವಹಿಸುವ ಮುನ್ನ ಗುರುವಾರ ಸುದ್ದಿಗೋಷ್ಠಿಗೆ ಸಂಸದ ಜಿ.ಎಸ್.ಬಸವರಾಜು ಮತ್ತು ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜು ಆಗಮಿಸಿದ್ದರು. 

Karnataka Politics: ಪ್ರಿಯಾಂಕ ಖರ್ಗೆ ಅಪ್ರಬುದ್ಧ ರಾಜಕಾರಣಿ: ಸಚಿವ ಬೈರತಿ

ಇಬ್ಬರೂ ಪಕ್ಕದಲ್ಲೇ ಕುಳಿತು ಕುಶಲೋಪರಿ ವಿಚಾರಿಸುತ್ತಾ ಗುಸುಗುಸು ಮಾತನಾಡಲು ಶುರು ಮಾಡಿದರು.  ಆ ವೇಳೆ ಸಚಿವರ ಕಿವಿಯಲ್ಲಿ ಪಿಸುಗುಟ್ಟಿದ ಜಿಎಸ್​ಬಿ, 'ಈ ನನ್​ ಮಗ, ನಮ್​ ಮಂತ್ರಿ(ಜೆ.ಸಿ.ಮಾಧುಸ್ವಾಮಿ) ಹೇಂಗೆ ಗೊತ್ತಾ? ದಕ್ಷಿಣ ಕೋರಿಯಾದ ಕಿಂಗ್ ಪಿನ್ ಇದಾನಲ್ಲ ಅವನಂತೆ. ಕೆಟ್ಟ ನನ್ಮಗ. ಇವನಿಂದ ಜಿಲ್ಲೆಯಲ್ಲಿ ಒಂದು ಸೀಟ್ ಬರೋಲ್ಲ… ಹಾಳು ಮಾಡಿಬಿಟ್ಟಿದ್ದಾನೆ ನಮ್ಮ ಜಿಲ್ಲೆಯನ್ನ…' ಎಂದು ಚಾಡಿ ಹೇಳುತ್ತಾ ಬೈಯ್ಯುತ್ತಲೇ ಇದ್ದರು. 'ಸುಮ್ಮನಿರು ಆಮೇಲೆ ಮಾತಾಡೋಣ' ಎಂದು ಬೈರತಿ ಹೇಳಿದರೂ ಸಂಸದರು ಮಾತ್ರ ಬೈಯ್ಯುತ್ತಲೇ ಇದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಸಿಎಂ, ಡಿಸಿಎಂ ನಡುವೆ ಬೂದಿ ಮುಚ್ಚಿದ ಕೆಂಡದ ಪರಿಸ್ಥಿತಿ: ಸಂಸದ ಜಗದೀಶ್ ಶೆಟ್ಟರ್
ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಮತ್ತು ಬೆಳಗಾವಿ ವಿಭಜನೆ; ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮಹತ್ವದ ಮಾಹಿತಿ