ಬಳ್ಳಾರಿ ಇಬ್ಭಾಗವಾದ್ರೂ ಆತ್ಮ, ಹೃದಯ ಒಂದೇ: ವಿಜಯನಗರ ಜಿಲ್ಲೆ ಬಗ್ಗೆ ರಾಮುಲು ಮಾತು

By Suvarna NewsFirst Published Oct 2, 2021, 10:19 PM IST
Highlights

* 31ನೇ ಜಿಲ್ಲೆಯಾಗಿ ವಿಜಯನಗರವನ್ನು ಅಧಿಕೃತವಾಗಿ ಘೋಷಣೆ 
* ನೂತನ ಜಿಲ್ಲೆಯನ್ನು ಉದ್ಘಾಟಿಸಿದ ಬಸವರಾಜ ಬೊಮ್ಮಾಯಿ
* ವಿಜಯನಗರ ಜಿಲ್ಲೆ ಬಗ್ಗೆ ಶ್ರೀರಾಮುಲು ಮಾತು

ವಿಜಯನಗರ,(ಅ.02): ರಾಜ್ಯದ 31ನೇ ಜಿಲ್ಲೆಯಾಗಿ ವಿಜಯನಗರವನ್ನು (Vijayanagara) ಅಧಿಕೃತವಾಗಿ ಇಂದು (ಅ,02) ಘೋಷಣೆ ಮಾಡಲಾಗಿದೆ. 

ಜಿಲ್ಲಾ ಕೇಂದ್ರ ಹೊಸಪೇಟೆಯಲ್ಲಿ ಆಯೋಜಿಸಿದ್ದ ಅದ್ಧೂರಿ ಕಾರ್ಯಕ್ರಮದಲ್ಲಿ ನೂತನ ಜಿಲ್ಲೆಯನ್ನು ಇಂದು (ಅ.02) ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಯಡಿಯೂರಪ್ಪ ಉದ್ಘಾಟಿಸಿದರು.

ವಿಜಯನಗರ ಸಾಮ್ರಾಜ್ಯದ ಗತವೈಭವವನ್ನು ಸಾರಿ ಹೇಳುವ ವಿದ್ಯಾರಣ್ಯ ವೇದಿಕೆಯಲ್ಲಿ 464 ಕೋಟಿ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸಿಎಂ ಚಾಲನೆ ನೀಡಿದರು. 

ಹೊಸಪೇಟೆ ಹೊಸ ಜಿಲ್ಲೆ: ಹೊಸ ಗುಟ್ಟು ಹೇಳಿದ ಶ್ರೀರಾಮುಲು

ಈ ವೇಳೆ ಮಾತನಾಡಿದ ಸಾರಿಗೆ ಸಚಿವ ಶ್ರೀರಾಮುಲು,  ಯಾವ ರೀತಿ ವಿಜಯನಗರ ಸಾಮ್ರಾಜ್ಯ ಸಂಪತ್ತು ಭರಿತವಾಗಿತ್ತು ಅದೇ ರೀತಿ ಹೊಸ ವಿಜಯನಗರ ‌ಜಿಲ್ಲೆ ಅಭಿವೃದ್ಧಿ ಹೊಂದಲಿ. ಜಿಲ್ಲೆ ಬೇರೆಯಾದ್ರು ನಾವೆಲ್ಲ ಒಂದೇ ದೇಹ, ಎರಡಾಡದ್ರೂ ಆತ್ಮ ಒಂದೇ. ಬಳ್ಳಾರಿ ಇಬ್ಭಾಗವಾದ್ರೂ ಆತ್ಮ ಮತ್ತು ಹೃದಯ ಒಂದೇ, ನಾವೆಲ್ಲರೂ ಅಣ್ಣ ತಮ್ಮಂದಿರಂತೆ ಇರೋಣ. ಅಭಿವೃದ್ಧಿ ದೃಷ್ಟಿಯಿಂದ ಮಾತ್ರ ಜಿಲ್ಲೆ ಇಬ್ಭಾಗವಾಗಿದೆ. ಆದ್ರೆ ಮಾನಸಿಕವಾಗಿ ನಾವು ಒಂದಾಗಿರೋಣ ಎಂದರು.

ಹೊಸ ಜಿಲ್ಲೆಯ ಉದ್ಘಾಟನೆ ಕಾರಣಿಭೂತರಾದ ಆನಂದ ಸಿಂಗ್ ಅಭಿನಂದನೆ. ಸುವರ್ಣ ಅಕ್ಷರದಲ್ಲಿ ಬರೆದಿಡೋ ದಿನ ಇದಾಗಿದೆ ಎಂದು ವಿಜಯನಗರ ಸಾಮಾಜ್ಯದ ಬಗ್ಗೆ ಗುಣಗಾನ ಮಾಡಿದರು. 

ಆನಂದ ಸಿಂಗ್ ಅವರ ಹಠದಿಂದಲೇ ಜಿಲ್ಲೆ ಘೋಷಣೆಯಾಗಿದೆ. ವಿಜಯನಗರ ಬಳ್ಳಾರಿ ಎರಡು ಕಣ್ಣಿದ್ದಂತೆ. ಜನರ ಅನುಕೂಲ ಮಾಡಲು ಮಾತ್ರ ಜಿಲ್ಲೆ ‌ವಿಭಜನೆ ಮಾಡಲಾಗಿದೆ ಹೊರತು ನಮ್ಮ ‌ಮಧ್ಯೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ ಎಂದು ಸ್ಪಷ್ಟಪಡಿಸಿದರು.

ಬಳ್ಳಾರಿಯಿಂದ ಬೇರ್ಪಡಿಸಿ ವಿಜಯನಗರವನ್ನು ಜಿಲ್ಲೆಯನ್ನಾಗಿಸುವುದಕ್ಕೆ ಸೋಮಶೇಖರ್ ರೆಡ್ಡಿ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಇನ್ನು ಶ್ರೀರಾಮುಲು ನೇರವಾಗಿ ಇಲ್ಲದಿದ್ದರೂ ಪರೋಕ್ಷವಾಗಿ ವಿರೋಧಿಸಿದ್ದರು.

click me!