ಸಚಿವ ಜಿ.ಟಿ.ದೇವೇಗೌಡ ನೀಡಿದ ಸುಳಿವೇನು..?

By Web DeskFirst Published Feb 6, 2019, 8:36 AM IST
Highlights

ಉನ್ನತ ಶಿಕ್ಷಣ ಸಚಿವ ಜಿ.ಟಿ ದೇವೇಗೌಡ ಸುಳಿವೊಂದನ್ನು ನೀಡಿದ್ದಾರೆ. ರಾಜ್ಯ ರಾಜಕಾರಣದಲ್ಲಿ ಅತೃಪ್ತರ ಗುಂಪೊಂದು ಸೃಷ್ಟಿಯಾಗಿದ್ದು, ಈ ಅತೃಪ್ತರು ಗೈರಾಗುವ ಸುಳಿವು ನೀಡಿದ್ದಾರೆ. 

ಬೆಂಗಳೂರು :  ರಾಜ್ಯ ಸಮ್ಮಿಶ್ರ ಸರ್ಕಾರದ ಈ ವರ್ಷದ ಮೊದಲ ಅಧಿವೇಶನದಲ್ಲಿ ಒಂದಿಬ್ಬರು ವೈಯಕ್ತಿಕ ಕಾರಣಗಳಿಗಾಗಿ ಗೈರಾಗಬಹುದೇ ಹೊರತು ಅಧಿವೇಶನಕ್ಕೆ ಯಾವುದೇ ಸಮಸ್ಯೆಯಾಗುವುದಿಲ್ಲ ಎಂದು ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಹೇಳುವ ಮೂಲಕ ಅತೃಪ್ತರು ಗೈರಾಗುವ ಸುಳಿವನ್ನು ನೀಡಿದ್ದಾರೆ.

ವಿಧಾನಸೌಧದಲ್ಲಿ ಮಂಗಳವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಬುಧವಾರದಿಂದ ಅಧಿವೇಶನ ಆರಂಭವಾಗಲಿದ್ದು, ಸುಗಮವಾಗಿ ನಡೆಯಲಿದೆ. ಕಳೆದ ಅಧಿವೇಶನದಲ್ಲಿಯೂ ಸರ್ಕಾರವನ್ನು ಪತನಗೊಳಿಸುತ್ತೇವೆ ಎಂದು ಬಿಜೆಪಿಯವರು ಇನ್ನಿಲ್ಲದ ಕಸರತ್ತು ನಡೆಸಿದರು. ಆದರೆ, ಯಾವುದೇ ಪ್ರಯೋಜನವಾಗಲಿಲ್ಲ. ಸದನಕ್ಕೆ ಎಲ್ಲಾ ಶಾಸಕರು ಹಾಜರಾಗಲಿದ್ದಾರೆ. ಕೆಲವರು ವೈಯಕ್ತಿಕ ಕಾರಣಗಳಿಗಾಗಿ ಹಾಜರಾಗದಿರಬಹುದು ಎಂದು ಹೇಳಿದರು.

ಬಿಜೆಪಿಯವರು ಶಾಸಕರಿಗೆ ಕೋಟ್ಯಂತರ ರು. ಆಮಿಷವೊಡ್ಡಿದ್ದಾರೆ. ಇದನ್ನು ರಾಜ್ಯದ ಜನ ಗಮನಿಸುತ್ತಿದ್ದಾರೆ. ಇದು ಪ್ರಧಾನಿ ನರೇಂದ್ರ ಮೋದಿ ಮೇಲೆ ಪ್ರಭಾವ ಬೀರುತ್ತೋ, ಇಲ್ಲವೋ ಗೊತ್ತಿಲ್ಲ. ಆದರೆ, ರಾಜ್ಯದ ಬಿಜೆಪಿ ಮೇಲೆ ಪ್ರಭಾವ ಬೀರಲಿದೆ. ಬಿಜೆಪಿಯವರು ರಾಜ್ಯದಲ್ಲಿ ತಮ್ಮ ಗುಂಡಿಯನ್ನು ತೋಡಿಕೊಳ್ಳುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

click me!