8 ತಿಂಗಳು ಕೋಮಾದಲ್ಲಿದ್ದ ರೋಗಿ ಗುಣಮುಖ: ವೈದ್ಯರ ಕಾರ್ಯಕ್ಕೆ ಸುಧಾಕರ್‌ ಶ್ಲಾಘನೆ

By Govindaraj SFirst Published Nov 10, 2022, 8:54 AM IST
Highlights

ಎಂಟು ತಿಂಗಳು ಪ್ರಜ್ಞಾಹೀನಾ ಸ್ಥಿತಿಯದಲ್ಲಿದ್ದವನಿಗೆ (ಕೋಮಾ) ಚಿಕಿತ್ಸೆ ನೀಡಿ ಗುಣಪಡಿಸಿದ ಭದ್ರಾವತಿ ತಾಲೂಕು ಆಸ್ಪತ್ರೆ ವೈದ್ಯರ ಸಾಧನೆಗೆ ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. 

ಬೆಂಗಳೂರು (ನ.10): ಎಂಟು ತಿಂಗಳು ಪ್ರಜ್ಞಾಹೀನಾ ಸ್ಥಿತಿಯದಲ್ಲಿದ್ದವನಿಗೆ (ಕೋಮಾ) ಚಿಕಿತ್ಸೆ ನೀಡಿ ಗುಣಪಡಿಸಿದ ಭದ್ರಾವತಿ ತಾಲೂಕು ಆಸ್ಪತ್ರೆ ವೈದ್ಯರ ಸಾಧನೆಗೆ ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕಿನ ಶಿವನಿ ಕ್ರಾಸ್‌ ಗ್ರಾಮದ 23 ವರ್ಷದ ವಾಸುದೇವ ಎಂಬುವವರು ಎಂಟು ತಿಂಗಳ ಹಿಂದೆ ಅಪಘಾತವಾಗಿ ಕೋಮಾ ಸ್ಥಿತಿ ತಲುಪಿದ್ದರು. ಆರ್ಥಿಕವಾಗಿ ಹಿಂದುಳಿದಿದ್ದ ಕುಟುಂಬವು ರೋಗಿಯನ್ನು ಬೆಂಗಳೂರಿನ ಪ್ರತಿಷ್ಠಿತ ಆಸ್ಪತ್ರೆಯಿಂದ ಆರು ವಾರಗಳ ಹಿಂದೆ ಭದ್ರಾವತಿ ಓಲ್ಡ್‌ ಟೌನ್‌ನಲ್ಲಿರುವ ತಾಲೂಕು ಆಸ್ಪತ್ರೆಗೆ ವರ್ಗಾಯಿಸಿತ್ತು. 

ಅಲ್ಲಿನ ವೈದ್ಯರ ಚಿಕಿತ್ಸೆ ಆರೈಕೆಯಿಂದ ಸದ್ಯ ರೋಗಿ ಸಂಪೂರ್ಣ ಚೇತರಿಸಿಕೊಂಡಿದ್ದಾರೆ. ಈ ಕುರಿತು ಬುಧವಾರ ಟ್ವೀಟ್‌ ಮಾಡಿರುವ ಸಚಿವರು, ‘ಕೋಮಾ ಸ್ಥಿತಿಯಲ್ಲಿದ್ದ ವ್ಯಕ್ತಿಗೆ 40 ದಿನಗಳ ಕಾಲ ಸತತವಾಗಿ ಚಿಕಿತ್ಸೆ ನೀಡಿ ಗುಣಪಡಿಸುವ ಮೂಲಕ ಭರವಸೆ ಕಳೆದುಕೊಂಡಿದ್ದ ಕುಟುಂಬಕ್ಕೆ ಬೆಳಕಾದ ಭದ್ರಾವತಿ ತಾಲೂಕು ಸಾರ್ವಜನಿಕ ಆಸ್ಪತ್ರೆ ವೈದ್ಯರ ಕರ್ತವ್ಯ ಪ್ರಜ್ಞೆ ಅಭಿನಂದನೀಯ. ಸರ್ಕಾರಿ ಕೆಲಸ ದೇವರ ಕೆಲಸ ಎಂಬ ಮಾತಿಗೆ ಅನ್ವರ್ಥನಾಮದಂತೆ ನಡೆದುಕೊಂಡಿರುವ ಈ ವೈದ್ಯರು ಇಡೀ ಸಮಾಜಕ್ಕೆ ಮಾದರಿ’ ಎಂದು ಶ್ಲಾಘಿಸಿದ್ದಾರೆ.

Chikkaballapur: ಪೊಲೀಸರ ಮೇಲೇ ಗುಂಡು ಹಾರಿಸಿ ಮನೆ ದರೋಡೆ!

ಆಗಿದ್ದೇನು?: 23 ವರ್ಷದ ಶಿವನಿ ಕ್ರಾಸ್‌ ನಿವಾಸಿ ವಾಸುದೇವ (ಗುರು) ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಚಾಲಕನಾಗಿದ್ದಾರೆ. 8 ತಿಂಗಳ ಹಿಂದೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದಾರೆ. ಅವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹಲವಾರು ತಿಂಗಳು ಚಿಕಿತ್ಸೆ ಪಡೆದರೂ ಗುಣಮುಖರಾಗಲಿಲ್ಲ. ಅನಂತರ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇಲ್ಲಿಯೂ ಯಾವುದೇ ರೀತಿ ಗುಣಮುಖ ಕಾಣದೇ ಕೋಮಾಸ್ಥಿತಿಯಲ್ಲಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದರು. ಚಿಕಿತ್ಸೆ ನೀಡುತ್ತಿದ್ದ ವೈದ್ಯರು ಬದುಕುವುದು ಕಷ್ಟಎಂದು ಕೈ ಚೆಲ್ಲಿದ್ದರು. ದಿಕ್ಕು ತೋಚದೇ ಕುಟುಂಬಸ್ಥರು ಆತಂಕಕ್ಕೆ ಒಳಗಾಗಿದ್ದರು.

ಸಾರ್ವಜನಿಕ ಆಸ್ಪತ್ರೆಗೆ ದಾಖಲು: ತಾಲೂಕಿನ ಉಕ್ಕುಂದ ಗ್ರಾಮದ ಸಾಮಾಜಿಕ ಹೋರಾಟಗಾರ ಶಿವಕುಮಾರ್‌ ಮತ್ತು ತಾಲೂಕು ಆರೋಗ್ಯ ರಕ್ಷಾ ಸಮಿತಿ ಸದಸ್ಯ ಪಿ.ಗಣೇಶ್‌ ರಾವ್‌ ಕುಟುಂಬಸ್ಥರ ನೆರವಿಗೆ ಧಾವಿಸಿದ್ದು, ವೈದ್ಯರಿಗೆ ಕುಟುಂಬಸ್ಥರ ಪರಿಸ್ಥಿತಿ ಮನವರಿಕೆ ಮಾಡಿಕೊಟ್ಟರು. ಬಳಿಕ ಕೋಮಾಸ್ಥಿತಿಯಲ್ಲಿದ್ದ ವಾಸುದೇವನಿಗೆ ಹಳೇ ನಗರದ ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸುವಲ್ಲಿ ಯಶಸ್ವಿಯಾದರು. 

ಕರ್ನಾಟಕದಲ್ಲಿದ್ದಾರೆ 5.09 ಕೋಟಿ ಮತದಾರರು: ಆಯೋಗದಿಂದ ಮತದಾರರ ಕರಡು ಪಟ್ಟಿ ಬಿಡುಗಡೆ

ಆಸ್ಪತ್ರೆ ಹಿರಿಯ ಶಸ್ತ್ರಚಿಕಿತ್ಸಾ ತಜ್ಞ ಹಾಗೂ ಉದರ ತಜ್ಞ ಡಾ. ಡಿ.ಎಸ್‌. ಶಿವಪ್ರಕಾಶ್‌, ಡಾ.ಮಂಜುನಾಥ್‌ ಮತ್ತು ಡಾ. ಕವಿತಾ ಅವರನ್ನು ಒಳಗೊಂಡ ವೈದ್ಯರ ತಂಡ 1 ತಿಂಗಳು 10 ದಿನಗಳವರೆಗೆ ನಿರಂತರವಾಗಿ ಚಿಕಿತ್ಸೆ ನೀಡಿದರು. ಈ ಮಧ್ಯೆ ಆಶ್ಚರ್ಯವೆಂಬಂತೆ ವಾಸುದೇವ ಅವರು ಕೋಮಾಸ್ಥಿತಿಯಿಂದ ಮರಳಿ ಸಂಪೂರ್ಣ ಚೇತರಿಕೆ ಹಂತಕ್ಕೆ ಬಂದರು. ಇದರಿಂದಾಗಿ ಕುಟುಂಬಸ್ಥರು ಮಾತ್ರವಲ್ಲ, ಇತರರು ಸಹ ಇಲ್ಲಿಯ ವೈದ್ಯರ ಕಾಳಜಿ ಹಾಗೂ ಚಿಕಿತ್ಸೆ ಪರಿಗೆ ಬೆರಗಾಗಿದ್ದಾರೆ. ಇದರಿಂದ ಸಂತಸ ಗೊಂಡಿರುವ ಕುಟುಂಬಸ್ಥರು ನೆರವಾದ ಎಲ್ಲರಿಗೂ ಕೃತಜ್ಞತೆ ಅರ್ಪಿಸಿದರು.

click me!