Mekedatu Politics: ಇದು ಕೊರೋನಾ ಕರ್ಫ್ಯೂ ಅಲ್ಲ, ರಾಜಕೀಯ ಕರ್ಫ್ಯೂ: ಡಿಕೆಶಿ

By Kannadaprabha NewsFirst Published Jan 6, 2022, 1:50 AM IST
Highlights

*ಕರ್ಫ್ಯೂ ಮೂಲಕ ಬೀದಿ ವ್ಯಾಪಾರಿಗಳು, ವರ್ತಕರು, ಜನರ ಹತ್ಯೆ
*ಲಾಕ್ಡೌನ್‌, ಕರ್ಫ್ಯೂಗೆ ಹೆದರಿ ಪಾದಯಾತ್ರೆಯಿಂದ ಹಿಂದೆ ಸರಿಯಲ್ಲ
*ಸರ್ಕಾರದ ವಿರುದ್ಧ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಆಕ್ರೋಶ

ಬೆಂಗಳೂರು (ಜ.6): ಬಿಜೆಪಿ ಸರ್ಕಾರ ಮಂಗಳವಾರ ಸಭೆ ನಡೆಸಿ ಘೋಷಿಸಿರುವುದು ಕೊರೋನಾ ಕರ್ಫ್ಯೂ (Corona Curfew) ಅಲ್ಲ ಬದಲಿಗೆ ರಾಜಕೀಯಕರ್ಫ್ಯೂ. ಮೇಕೆದಾಟು ನಡಿಗೆ (Mekedatu Padayatre) ತಡೆಯುವ ಉದ್ದೇಶದಿಂದ, ಕೊರೋನಾ ಕರ್ಫ್ಯೂ ಹೆಸರಿನಲ್ಲಿ ಕಳೆದ ಎರಡು ವರ್ಷದಿಂದ ನೋವು ಅನುಭವಿಸಿರುವ ಬೀದಿ ಬದಿ ವ್ಯಾಪಾರಿ, ವರ್ತಕರು ಹಾಗೂ ಜನಸಾಮಾನ್ಯರ ಹತ್ಯೆ ಮಾಡಲು ಹೊರಟಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಕಿಡಿ ಕಾರಿದ್ದಾರೆ. 

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದು ಮೇಕೆದಾಟು ಪಾದಯಾತ್ರೆ ಅಥವಾ ಹೋರಾಟವಲ್ಲ. ನಾವು ನೀರಿಗಾಗಿ ನಡಿಗೆ ಮಾಡುವ ಮೂಲಕ ಮನವಿ ಮಾಡುತ್ತಿದ್ದೇವೆ. ನಾವು ರಸ್ತೆಯಲ್ಲಿ ನಡೆಯಲೂ ಅನಮತಿ ಪಡೆಯಬೇಕೆ? ರಾಜ್ಯದಲ್ಲಿ ಪ್ರಕರಣಗಳು ಹೆಚ್ಚಿಲ್ಲದಿದ್ದರೂ ವಾರಾಂತ್ಯದ ಲಾಕ್ಡೌನ್‌ ಹಾಗೂ ಕಠಿಣ ನಿಯಮ ಜಾರಿ ಮಾಡಿರುವುದು ರಾಜಕೀಯಕ್ಕಾಗಿ ಮಾತ್ರ. ಇದಕ್ಕೆ ಹೆದರಿ ನಾವು ಮೇಕೆದಾಟು ನಡಿಗೆಯಿಂದ ಹಿಂದೆ ಸರಿಯುವುದಿಲ್ಲ ಎಂದು ಸ್ಪಷ್ಟಪಡಿಸಿದರು.

"

ಇದನ್ನೂ ಓದಿ: Congress Padayatra: ಮೇಕೆದಾಟು ಬಳಿಕ ಕೃಷ್ಣೆ, ಮಹದಾಯಿಗಾಗಿಯೂ ಹೋರಾಟ: ಡಿಕೆಶಿ

ಒಂದೇ ದಿನ ಎರಡು-ಮೂರು ಸಾವಿರ ಪ್ರಕರಣ ಹೆಚ್ಚಾಗಿದೆ ಎಂದು ಸರ್ಕಾರ ಹೇಳುತ್ತಿದೆ. ಆ ಸೋಂಕಿತರು ಎಲ್ಲಿದ್ದಾರೆ ಎಂದು ಪಟ್ಟಿನೀಡಿದರೆ ನಾವು ಹೋಗಿ ಧೈರ್ಯ ತುಂಬುವ ಕೆಲಸ ಮಾಡುತ್ತೇವೆ. ನಮಗೆ ನಿರ್ಬಂಧ ಹಾಕಿ ಸರ್ಕಾರ ನೋಟಿಸ್‌ ಜಾರಿ ಮಾಡಿದೆ. ನಾವು ಹೋರಾಟ, ಪ್ರತಿಭಟನೆಮಾಡುತ್ತಿಲ್ಲ. ನೀರಿಗಾಗಿ ನಡೆಯುತ್ತಿದ್ದೇವೆ. ಅದನ್ನು ಹೇಗೆ ತಡೆಯಲು ಸಾಧ್ಯ? ಎಂದು ಪ್ರಶ್ನಿಸಿದರು.

ಬಿಜೆಪಿಯವರ ಮೇಲೆ ಪ್ರಕರಣ ದಾಖಲಿಸಿ:

ನಮಗೆ ನಿಯಮ ಹೇಳಿಕೊಡುವ ಸರ್ಕಾರ ಮೊದಲು ಮೊದಲ ಅಲೆಯಲ್ಲಿ ನಿಯಮ ಉಲ್ಲಂಘಿಸಿ ಈಜುಕೊಳದಲ್ಲಿ ಈಜಾಡಿದ ಡಾ.ಕೆ. ಸುಧಾಕರ್‌, ಮಾರ್ಗಸೂಚಿ ಉಲ್ಲಂಘಿಸಿದ್ದ ಬಿ. ಶ್ರೀರಾಮುಲು, ಮದುವೆ, ಸಭೆ ಸಮಾರಂಭಗಳಿಗೆ ಹೋಗಿದ್ದ ಯಡಿಯೂರಪ್ಪ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮೇಲೆ ಪ್ರಕರಣ ದಾಖಲಿಸಲಿ ಎಂದು ಒತ್ತಾಯಿಸಿದರು.

ಇವರೇನು ಮನುಷ್ಯರಾ?: ಕಿಡಿ

ನಾವು ನಡಿಗೆ ವೇಳೆ ಎಲ್ಲಾ ರೀತಿಯ ಮಾರ್ಗಸೂಚಿ ಪಾಲಿಸುತ್ತೇವೆ. 100 ಜನ ವೈದ್ಯರ ತಂಡವೇ ಅದಕ್ಕಾಗಿ ಸಿದ್ಧವಾಗಿದೆ. ಹೀಗಿದ್ದರೂ ವಿನಾಕಾರಣ ನನ್ನ ಹಾಗೂ ಶಾಸಕರ ಮೇಲೆ ವಿಪತ್ತು ನಿರ್ವಹಣೆ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ. ಇವರೇನು ಮನುಷ್ಯರಾ? ಎಂದು ಡಿ.ಕೆ. ಶಿವಕುಮಾರ್‌ ಕಿಡಿಕಾರಿದರು. ಬಿಜೆಪಿಯವರಿಗೆ ಜನರ ಪ್ರಾಣ ಮುಖ್ಯವಲ್ಲ. ಅವರ ಪಕ್ಷ ಮುಖ್ಯ. ಅವರ ಪಕ್ಷ ಹಾಗೂ ರಾಜಕೀಯಕ್ಕಾಗಿ ಜನರ ಪ್ರಾಣ ತೆಗೆಯುತ್ತಿದ್ದಾರೆ ಎಂದರು.

ಕರ್ಫ್ಯೂ ಮಧ್ಯೆ ಕಾಂಗ್ರೆಸ್ ಪಾದಯಾತ್ರೆ ಪ್ಲಾನ್ ಬಿಚ್ಚಿಟ್ಟ ಸಿದ್ದರಾಮಯ್ಯ

ಕೊರೊನಾ ಟಫ್‌ ರೂಲ್ಸ್‌ (Corona Rules) ಜಾರಿಯಾದರೂ ನಾವು ಪಾದಯಾತ್ರೆ ಮಾಡೇ ಮಾಡುತ್ತೇವೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.ಅಲ್ಲದೇ ಇನ್ನು ಈ ಬಗ್ಗೆ ವಿರೋಧ ಪಕ್ಷದ ನಾಯಕರ ಸಿದ್ದರಾಮಯ್ಯ ಅವರು ಫೇಸ್‌ಬುಕ್‌ನಲ್ಲಿ ಸುದೀರ್ಘವಾಗಿ ಬರೆದುಕೊಂಡಿದ್ದು, ಅದು ಈ ಕೆಳಗಿನಂತಿದೆ.

ಸಿದ್ದರಾಮಯ್ಯ ಬರೆದುಕೊಂಡಿದ್ದು ಹೀಗೆ

ನಾವು ಪಾದಯಾತ್ರೆ ಮಾಡಿದರೆ ಈ ಸರ್ಕಾರ ಜನರೆದುರು ಬೆತ್ತಲಾಗಲಿದೆ. ಹೀಗಾಗಿಯೇ ನಾವು ಪಾದಯಾತ್ರೆ ಮಾಡಬಾರದು ಎಂದು ಕೊವಿಡ್ ನಿರ್ಬಂಧಗಳೆಂಬ ಷಡ್ಯಂತ್ರ ರೂಪಿಸಿದ್ದಾರೆ. ನಮ್ಮ ಪಾದಯಾತ್ರೆಯಲ್ಲಿ ಭಾಗವಹಿಸುವ ಪ್ರತಿಯೊಬ್ಬರು ಕಡ್ಡಾಯವಾಗಿ ಮಾಸ್ಕ್ ಧರಿಸಿ, ಕನಿಷ್ಠ ಅಂತರ ಕಾಪಾಡಿಕೊಂಡು, ಗ್ಲೌಸ್, ಸ್ಯಾನಿಟೈಸರ್ ಬಳಕೆ ಹೀಗೆ ಎಲ್ಲಾ ರೀತಿಯ ಸುರಕ್ಷತಾ ಕ್ರಮಗಳನ್ನು ಅನುಸರಿಸುತ್ತಾರೆ. ನಾವು ಸರ್ಕಾರದ ನಿಯಮಗಳನ್ನು ಗೌರವಿಸಿ, ಎಲ್ಲಾ ಮುಂಜಾಗ್ರತಾ ಕ್ರಮಗಳೊಂದಿಗೆ ಪಾದಯಾತ್ರೆ ಮಾಡುತ್ತೇವೆ. ಕೊರೊನಾ ಸೋಂಕು ತಡೆಗಟ್ಟುವುದೇ ರಾಜ್ಯ ಸರ್ಕಾರದ ನಿಜವಾದ ಉದ್ದೇಶವಾಗಿದ್ದರೆ ಮುಖ್ಯಮಂತ್ರಿಗಳು ನಿನ್ನೆ ರಾಮನಗರದಲ್ಲಿ, ಇಂದು ನಾಗಮಂಗಲದಲ್ಲಿ ಸಾರ್ವಜನಿಕ ಸಮಾರಂಭಗಳಲ್ಲಿ ಭಾಗವಹಿಸುತ್ತಿದ್ದರೇ? ಎಂದು ಪ್ರಶ್ನಿಸಿದರು.

ಇದನ್ನೂ ಓದಿ: Congress Padayatra: ಮೇಕೆದಾಟು ಜಾರಿ ಶತಸಿದ್ಧ: ಅಶ್ವತ್ಥನಾರಾಯಣ

ತಮ್ಮದೇ ಸರ್ಕಾರದ ನಿಯಮಗಳನ್ನು ಗೌರವಿಸದ ಮುಖ್ಯಮಂತ್ರಿಯನ್ನು ಬೇರೆ ಎಲ್ಲಾದರೂ ನೋಡಿದ್ದೀರ?  ಇಂದು ಪ್ರಧಾನಿ ನರೇಂದ್ರ ಮೋದಿ ಅವರು ಪಂಜಾಬ್ ನಲ್ಲಿ ಚುನಾವಣಾ ರ‌್ಯಾಲಿಯಲ್ಲಿ ಭಾಗವಹಿಸುವವರಿದ್ದರು, ರೈತರ ಪ್ರತಿಭಟನೆ ಇಂದಾಗಿ ಸಭೆ ರದ್ದಾಯಿತು. ಒಂದು ವೇಳೆ ಯಾವುದೇ ಅಡ್ಡಿ ಆಗದೆ ಇದ್ದರೆ ಅವರು ಸಭೆ ಮಾಡುತ್ತಿರಲಿಲ್ಲವೇ? ಬಿಜೆಪಿ ಅವರು ಪ್ರಚಾರ ಸಭೆ ಮಾಡಿದರೆ ಕೊರೊನಾ ಬರೋದಿಲ್ವಾ? ಎಂದು ಟಾಂಗ್ ಕೊಟ್ಟರು. ಪೂರ್ತಿ ಸ್ಟೋರಿ ಇಲ್ಲಿ ಓದಿ

click me!