Coronavirus Alert ಕರ್ನಾಟಕದಲ್ಲಿ ಕೋವಿಡ್ ಅಲರ್ಟ್, ಕಳೆದೆರಡು ದಿನದಿಂದ ಮರಣ ದರ ಏರಿಕೆ!

By Suvarna NewsFirst Published Dec 15, 2021, 1:49 AM IST
Highlights
  • ರಾಜ್ಯದಲ್ಲಿ ಕೋವಿಡ್‌ ಮರಣ ದರ ಏಕಾಏಕಿ ಏರಿಕೆ
  • 2 ದಿನದಿಂದ ಮರಣದರ ಏರಿಕೆ,  7 ಮಂದಿ ಸಾವು
  • ಒಂದೂವರೆ ತಿಂಗಳಲ್ಲಿ ಇಷ್ಟುಸಾವು ದಾಖಲಾಗಿರಲಿಲ್ಲ

ಬೆಂಗಳೂರು(ಡಿ.15):  ರಾಜ್ಯದಲ್ಲಿ ಕಳೆದ ಮೂರು ವಾರಗಳಿಂದ ಕೋವಿಡ್‌-19 ಪ್ರಕರಣಗಳಲ್ಲಿ(Covid 19 cases) ತುಸು ಹೆಚ್ಚಳದ ಪ್ರವೃತ್ತಿ ಮುಂದುವರೆದಿದ್ದು, ಇದರ ಜತೆಗೆ, ಕಳೆದ ಎರಡು ದಿನಗಳಿಂದ ಕೋವಿಡ್‌ನಿಂದ ಮರಣವನ್ನಪ್ಪುತ್ತಿರುವವರ(Death Toll) ಸಂಖ್ಯೆಯಲ್ಲಿಯೂ ಏರಿಕೆ ಕಂಡು ಬಂದಿದೆ. ಮಂಗಳವಾರ 263 ಮಂದಿಯಲ್ಲಿ ಕೋವಿಡ್‌ ಪತ್ತೆಯಾಗಿದ್ದು, ಏಳು ಮಂದಿ ಈ ಮಹಾಮಾರಿಗೆ ಬಲಿಯಾಗಿದ್ದಾರೆ. ಸೋಮವಾರ ಶೇ.2.96 ರ ಮರಣ ದರ ವರದಿಯಾಗಿತ್ತು. ಮಂಗಳವಾರ ಶೇ.2.66ರ ಮರಣ ದರ ದಾಖಲಾಗಿದೆ. ರಾಜ್ಯದಲ್ಲಿ(Karnataka) ಕಳೆದ ಒಂದೂವರೆ ತಿಂಗಳಿನಿಂದ ಸತತ ಎರಡು ದಿನ ಇಷ್ಟೊಂದು ಪ್ರಮಾಣದ ಮರಣ ದರ ವರದಿಯಾಗಿಲ್ಲ.

ಉಳಿದಂತೆ ಮಂಗಳವಾರ 71,308 ಕೋವಿಡ್‌ ಪರೀಕ್ಷೆ(Covid test) ನಡೆದಿದ್ದು ಶೇ.0.36ರ ಪಾಸಿಟಿವಿಟಿ ದರ ದಾಖಲಾಗಿದೆ. 327 ಮಂದಿ ಚೇತರಿಸಿಕೊಂಡಿದ್ದಾರೆ. ಬೆಂಗಳೂರು(Bengaluru) ನಗರದಲ್ಲಿ 158, ಮೈಸೂರು 16, ಕೊಡಗು 14, ದಕ್ಷಿಣ ಕನ್ನಡ 13, ಚಿಕ್ಕಮಗಳೂರು 11 ಮತ್ತು ಬೆಳಗಾವಿಯಲ್ಲಿ 10 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಬಾಗಲಕೋಟೆ, ಬಳ್ಳಾರಿ, ಚಾಮರಾಜನಗರ, ದಾವಣಗೆರೆ, ಗದಗ, ಹಾವೇರಿ, ಕೋಲಾರ, ಕೊಪ್ಪಳ, ರಾಮನಗರ, ವಿಜಯಪುರ ಮತ್ತು ಯಾದಗಿರಿಯಲ್ಲಿ ಹೊಸ ಪ್ರಕರಣ ಪತ್ತೆಯಾಗಿಲ್ಲ. ಉಳಿದ ಜಿಲ್ಲೆಗಳಲ್ಲಿ ಒಂದಂಕಿಯಲ್ಲಿ ಪ್ರಕರಣವಿದೆ.

India Most Pro Vaccine Country: ವಿಶ್ವದ ಲಸಿಕೆ ಪರವಾಗಿರುವ ಜನರಲ್ಲಿ ಭಾರತವೇ ಟಾಪ್

ಚಿಕ್ಕಮಗಳೂರಿನಲ್ಲಿ ಇಬ್ಬರು, ಬೆಳಗಾವಿ, ಬೆಂಗಳೂರು ನಗರ, ಬೀದರ್‌, ತುಮಕೂರು ಮತ್ತು ಉತ್ತರ ಕನ್ನಡದಲ್ಲಿ ತಲಾ ಒಬ್ಬರು ಕೋವಿಡ್‌ನಿಂದ ಮರಣವನ್ನಪ್ಪಿದ್ದಾರೆ. ರಾಜ್ಯದಲ್ಲಿ ಈವರೆಗೆ ಒಟ್ಟು 30 ಲಕ್ಷಕ್ಕೂ ಹೆಚ್ಚು ಮಂದಿಯಲ್ಲಿ ಕೋವಿಡ್‌ ಕಾಣಿಸಿಕೊಂಡಿದ್ದು 29.55 ಲಕ್ಷ ಮಂದಿ ಚೇತರಿಸಿಕೊಂಡಿದ್ದಾರೆ. 7,165 ಸಕ್ರಿಯ ಪ್ರಕರಣಗಳಿವೆ. 38,275 ಮಂದಿ ಮರಣವನ್ನಪ್ಪಿದ್ದಾರೆ.

ಮರಣ ದರ ಏರಿಕೆ?:
ಕಳೆದೆರಡು ದಿನದಲ್ಲಿ ರಾಜ್ಯ ಆರೋಗ್ಯ ಇಲಾಖೆ(Health Ministry) ನೀಡುವ ದೈನಂದಿನ ಕೋವಿಡ್‌ ವರದಿಯಲ್ಲಿ(Report) ಒಟ್ಟು 14 ಕೋವಿಡ್‌ ಸಾವು ಉಲ್ಲೇಖಿಸಲಾಗಿದೆ. ಈ ಎಲ್ಲ ಸಾವುಗಳು ಡಿಸೆಂಬರ್‌ 6ರ ನಂತರ ಸಂಭವಿಸಿವೆ.

Covid Outbreak : ಶಾಲೆಗಳಲ್ಲಿ ಮತ್ತೆ ಮಕ್ಕಳಿಗೆ ವಕ್ಕರಿಸಿದ ಸೋಂಕು

ಸಾಮಾನ್ಯವಾಗಿ ಕೋವಿಡ್‌ ರೋಗಿಗಳ ಆರೋಗ್ಯ ಸ್ಥಿತಿ ರೋಗ ಲಕ್ಷಣಗಳು ಕಾಣಿಸಿಕೊಂಡ ಹತ್ತು ದಿನಗಳ ಬಳಿಕ ವಿಷಮಿಸಲು ಪ್ರಾರಂಭಿಸುತ್ತದೆ. ಆದ್ದರಿಂದ ಕೋವಿಡ್‌ ರೋಗಿಗಳು ಚಿಕಿತ್ಸೆಗೆಂದು ಆಸ್ಪತ್ರೆಗೆ ದಾಖಲಾದ(Hospital) ಎರಡನೇ ವಾರದಲ್ಲಿ ಮರಣವನ್ನಪ್ಪುವ ಸಂಭವ ಹೆಚ್ಚಿರುತ್ತದೆ. ನವೆಂಬರ್‌ ಕೊನೆಯ ವಾರದಲ್ಲಿ ಕೋವಿಡ್‌ ಪ್ರಕರಣಗಳ ಪತ್ತೆಯೂ ಹೆಚ್ಚಾಗಿದ್ದು, ಆ ಬಳಿಕದ ಎರಡನೇ ಮತ್ತು ಮೂರನೇ ವಾರದಲ್ಲಿ ಕೋವಿಡ್‌ನಿಂದ ಮರಣವನ್ನಪ್ಪುತ್ತಿರುವವರ ಸಂಖ್ಯೆಯಲ್ಲಿಯೂ ಹೆಚ್ಚಳವಾಗಿದೆ. ನವೆಂಬರ್‌ ಕೊನೆಯ ವಾರ ಆಸ್ಪತ್ರೆಗೆ ದಾಖಲಾಗಿದ್ದ ಇಬ್ಬರು ಡಿಸೆಂಬರ್‌ ಎರಡನೇ ವಾರದಲ್ಲಿ ಮರಣವನ್ನಪ್ಪಿರುವ ಮಾಹಿತಿಯನ್ನು ಆರೋಗ್ಯ ಇಲಾಖೆ ನೀಡಿದೆ.

ಇನ್ನೊಂದು ಪ್ರಮುಖ ಕಾರಣ ಎಂದರೆ ಕೋವಿಡ್‌ ರೋಗಿಗಳು ಕೋವಿಡ್‌ ಗುಣಲಕ್ಷಣಗಳನ್ನು ನಿರ್ಲಕ್ಷಿಸಿ ಆರೋಗ್ಯ ಪರಿಸ್ಥಿತಿ ಗಂಭೀರವಾದ ಬಳಿಕ ಆಸ್ಪತ್ರೆಗೆ ದೌಡಾಯಿಸುತ್ತಿರುವುದು. ಇಂತಹ ಸಂದರ್ಭದಲ್ಲಿ ಕೊರೋನಾ ವೈರಾಣು ಶ್ವಾಸಕೋಶಕ್ಕೆ ಸಾಕಷ್ಟುಹಾನಿ ಮಾಡಿರುವುದರಿಂದ ಅಂತವರಿಗೆ ಚಿಕಿತ್ಸೆ ನೀಡಿ ಬದುಕಿಸುವುದು ವೈದ್ಯರಿಗೂ ಸವಾಲಿನ ಸಂಗತಿಯಾಗುತ್ತಿದೆ. ಇದನ್ನು ಪುಷ್ಠಿಕರಿಸುವಂತೆ ಈ ಹದಿನಾಲ್ಕು ಸಾವಿನಲ್ಲಿ ಒಂದು ಸಾವು (ಮಂಗಳವಾರ, ಚಿಕ್ಕಮಗಳೂರಿನಲ್ಲಿ 22 ವರ್ಷದ ಯುವಕ) ಆಸ್ಪತ್ರೆಗೆ ದಾಖಲಾಗುವ ಮುಂಚಿತವಾಗಿ ಘಟಿಸಿದ್ದು ಆರು ಸಾವುಗಳು ಆಸ್ಪತ್ರೆಗೆ ದಾಖಲಾದ ಮೂರು ದಿನದೊಳಗೆ ಸಂಭವಿಸಿದೆ. ಮೃತಪಟ್ಟವರಲ್ಲಿ ಇಬ್ಬರುನ್ನು ಹೊರತು ಪಡಿಸಿ ಉಳಿದವರೆಲ್ಲ 60 ವರ್ಷ ಮೇಲ್ಪಟ್ಟವರಾಗಿದ್ದಾರೆ.

ಒಂದೇ ದಿನ 2.25 ಲಕ್ಷ ಮಂದಿಗೆ ಲಸಿಕೆ:
ಮಂಗಳವಾರ 2.25 ಲಕ್ಷ ಮಂದಿ ಕೋವಿಡ್‌ ಲಸಿಕೆ ಪಡೆದಿದ್ದಾರೆ. 1.63 ಲಕ್ಷ ಮಂದಿ ಎರಡನೇ ಮತ್ತು 61,214 ಮಂದಿ ಮೊದಲ ಡೋಸ್‌ ಲಸಿಕೆ ಸ್ವೀಕರಿಸಿದ್ದಾರೆ. ರಾಜ್ಯದಲ್ಲಿ ಈವರೆಗೆ ಒಟ್ಟು 8.09 ಕೋಟಿ ಡೋಸ್‌ ಲಸಿಕೆ ನೀಡಲಾಗಿದ್ದು 4.66 ಕೋಟಿ ಮೊದಲ ಮತ್ತು 3.42 ಕೋಟಿ ಎರಡನೇ ಡೋಸ್‌ ಲಸಿಕೆ ಪಡೆದಿದ್ದಾರೆ.

click me!