
ಬೆಂಗಳೂರು (ಅ.22): ಕರ್ನಾಟಕದಲ್ಲಿ ಇಂದಿನಿಂದ ಮೂರು ದಿನಗಳ ಕಾಲ ಮಳೆಯಾಗಲಿದೆ. ಬಂಗಾಳ ಕೊಲ್ಲಿಯಲ್ಲಿ ಮೇಲ್ಮೈ ಸುಳಿಗಾಳಿ ಹೆಚ್ಚಳವಾಗಿದ್ದು, ಹೀಗಾಗಿ ಉತ್ತರ ಒಳನಾಡಿನಲ್ಲಿ ಇಂದಿನಿಂದ ಅ. 24ರವರೆಗೆ ಮಳೆಯಾಗಲಿದೆ. ಬೆಂಗಳೂರು, ಬಳ್ಳಾರಿ, ಚಾಮರಾಜನಗರ, ಚಿಕ್ಕಮಗಳೂರು, ಚಿತ್ರದುರ್ಗ, ಹಾಸನ, ಕೊಡಗು, ಮಂಡ್ಯ, ಶಿವಮೊಗ್ಗ, ತುಮಕೂರು ಜಿಲ್ಲೆಗಳಲ್ಲಿ ಇನ್ನೂ 3 ದಿನ ಯೆಲ್ಲೋ ಅಲರ್ಟ್ ಘೋಷಿಸಲಾಗಿದ್ದು, ಕರಾವಳಿ ಜಿಲ್ಲೆಗಳಾದ ಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡದಲ್ಲಿ ಚದುರಿದ ಮಳೆಯಾಗುವ ನಿರೀಕ್ಷೆಯಿದೆ. ಇಂದು ಕೂಡ ಬೆಂಗಳೂರಿನಲ್ಲೂ ಭಾರೀ ಮಳೆ ನಿರೀಕ್ಷೆಯಿದ್ದು, ಈ ವರ್ಷ ಬೆಂಗಳೂರಿನಲ್ಲಿ 1,706 ಮಿಮೀ ದಾಖಲೆಯ ಮಳೆಯಾಗಿದೆ. ಇನ್ನು 2017ರಲ್ಲಿ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ 1,696 ಮಿ.ಮೀ ಮಳೆಯಾಗಿತ್ತು.
ಭಾರೀ ಮಳೆಗೆ ಜನಜೀವನ ಅಸ್ತವ್ಯಸ್ತ: ದೇವರಹಿಪ್ಪರಗಿ ಪಟ್ಟಣ ಸೇರಿದಂತೆ ತಾಲೂಕಿನಲ್ಲಿ ಮಳೆಯ ಅಬ್ಬರ ಮುಂದುವರಿದಿದ್ದು, ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತವಾಗಿದೆ. ಸತತ ಎರಡು ದಿನಗಳಿಂದ ಸುಮಾರು 16 ಸೆಂಮೀ ಮಳೆಯಾಗಿದೆ. ಬಮ್ಮನಜೋಗಿ ಕೆರೆ ತುಂಬಿ ಹಳ್ಳಕೊಳ್ಳ ಹರಿದು ರಸ್ತೆ ಬಂದಾದ ಘಟನೆ ನಡೆದಿದೆ. ಹಲವಾರು ಜಮೀನುಗಳಿಗೆ ನೀರು ನುಗ್ಗಿ ಬೆಳೆ ಹಾನಿಯಾಗಿದ್ದು ಹಾಗೂ ಪಟ್ಟಣ ಸೇರಿದಂತೆ ಸಾತಿಹಾಳ ಗ್ರಾಮದ ಶಾಲೆಗಳಿಗೂ ನೀರು ನುಗ್ಗಿ ಅವಾಂತರ ಸೃಷ್ಟಿಸಿದೆ. ಆವರಣದಲ್ಲಿ ನೀರು ನಿಂತು ಕೆರೆಯಂತಾಗಿದೆ. ಮಳೆಯಿಂದ ಅಪಾರ ಪ್ರಮಾಣದ ಬೆಳೆಗಳು ನಾಶವಾಗಿದ್ದು ರೈತರು ಕಂಗಾಲಾಗಿದ್ದಾರೆ. ಈ ಕುರಿತು ರೈತರು ಅತಿವೃಷ್ಟಿ-ಪೀಡಿತ ಕ್ಷೇತ್ರ ಘೋಷಣೆಗೆ ಆಗ್ರಹಿಸಿದ್ದಾರೆ.
Karnataka Rains: ಮಂಡ್ಯದಲ್ಲಿ 17 ಸೆಂ.ಮೀ.ಮಳೆ: ಜನಜೀವನ ಅಸ್ತವ್ಯಸ್ತ
ಜಮೀನು ಜಲಾವೃತ: ಬಮ್ಮನಜೋಗಿ ಗ್ರಾಮದ ಕೆರೆ ತುಂಬಿ ಹಳ್ಳಕೊಳ್ಳ ತುಂಬಿ ಹರಿದು ಜಮೀನುಗಳು ಜಲಾವೃತವಾಗಿದ್ದು, ಅಪಾರ ಪ್ರಮಾಣದ ಬೆಳೆಗಳು ನಾಶವಾಗಿದೆ. ಕೆರೆಯ ಕೋಡಿ ಹರಿದ ಪರಿಣಾಮ ಹಳ್ಳದ ಅಕ್ಕಪಕ್ಕದ ಜಮೀನುಗಳಿಗೆ ನೀರು ನುಗ್ಗಿದೆ ಹಾಗೂ ಗ್ರಾಮದ ಹಲವು ಮನೆಗಳು ಬಿದ್ದರೂ ಗಮನಹರಿಸದ ಅಧಿಕಾರಿಗಳು. ತಾಂಡಾ ಗ್ರಾಮಕ್ಕೆ ಹೋಗಲು ರಸ್ತೆ ಬಂದ್ ಆದ ಘಟನೆ ನಡೆದಿದೆ. ಕೆರೆತುಂಬಿ ಹಳ್ಳ ಹರಿದಾಗ ಈ ರಸ್ತೆ ಬಂದಾಗುತ್ತಿದ್ದು ರಸ್ತೆ ಸೇತುವೆ ಮೇಲ್ದರ್ಜೆಗೇರಿಸಲು ಗ್ರಾಮಸ್ಥರ ಆಗ್ರಹವಾಗಿದೆ.
ಶಾಲೆಗಳಿಗೂ ನುಗ್ಗಿದ ನೀರು: ಮಳೆಯಿಂದ ಪಟ್ಟಣದ ಕೆಜಿಎಸ್ ಹಾಗೂ ಸಾತಿಹಾಳ ಶಾಲಾವರಣದಲ್ಲಿ ನೀರು ನುಗ್ಗಿ ಅವಾಂತರ ಸೃಷ್ಟಿಸಿದೆ. ಶಾಲಾ ಆವರಣದಲ್ಲಿ ನೀರು ನಿಂತು ಕೆರೆಯಂತಾಗಿದೆ. ಪಟ್ಟಣದ ಶಾಲಾವರಣದಲ್ಲಿ ನೀರು ಹೊರಗಡೆ ಹೋಗದೆ ನಿಂತ ಘಟನೆ ಕ್ಷೇತ್ರ ಶಿಕ್ಷಣಾಧಿಕಾರಿ ಎಚ್ ಎಂ ಹರನಾಳ ಭೇಟಿ ನೀಡಿ ಪರಿಶೀಲನೆ ನಡೆಸಿ ನೀರು ನಿಲ್ಲದ ಹಾಗೆ ಕ್ರಮಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಿದರು. ಸಾತಿಹಾಳ ಗ್ರಾಮದ ಶಾಲಾ ಆವರಣದಲ್ಲಿ ನೀರು ನುಗ್ಗಿ ಕೆರೆಯಂತಾಗಿತ್ತು. ಆದರೆ ಶಿಕ್ಷಕರು ಇದು ನಮಗೆ ಸಂಬಂಧವಿಲ್ಲದ ಹಾಗೆ ಮಧ್ಯಾಹ್ನ ಶಾಲೆಯಿಂದ ಮನೆಗೆ ಬಂದರು. ಸಾರ್ವಜನಿಕರು ವ್ಯವಸ್ಥೆಯ ವಿರುದ್ಧ ಹಿಡಿಶಾಪ ಹಾಕುತ್ತಿದ್ದರು.
Karnataka Rains: ಕರ್ನಾಟಕದಲ್ಲಿ ಮಳೆಗೆ ನಾಲ್ವರ ಬಲಿ
ಕಳೆದೆರಡು ದಿನಗಳಿಂದ ಪಟ್ಟಣದ ಸುತ್ತಮುತ್ತ ಮಳೆಯ ಅಬ್ಬರ ಮುಂದುವರೆದಿದ್ದು, ಜನ ಜೀವನ ಅಸ್ತವ್ಯಸ್ತವಾಗಿದೆ. ಪಟ್ಟಣದ ಸುತ್ತಮುತ್ತ ಇರುವ ಜಮೀನುಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಸಿದೆ. ಪಟ್ಟಣದ ಸಮೀಪ ಅಶೋಕ ಗುರಪ್ಪ ಗೊಲ್ಲರ ಎಂಬುವವರ ತೋಟದ 5.5 ಎಕರೆ ಜಮೀನಿನಲ್ಲಿ ಮೆಕ್ಕೆಜೋಳ, ವೀರೇಶ ಕುದುರಿ ಅವರ ತೋಟದ ಕಬ್ಬು ನೆಲಸಮವಾಗಿದೆ. ಹೀಗೆ ಹಲವಾರು ರೈತರ ಜಮೀನುಗಳಿಗೆ ನೀರು ನುಗ್ಗಿ ಬೆಳೆ ನಾಶವಾಗಿದೆ. ಅಧಿಕಾರಿಗಳು ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿ ಸರ್ಕಾರಕ್ಕೆ ವರದಿ ಸಲ್ಲಿಸಬೇಕು ಹಾಗೂ ಮಳೆಯಿಂದ ಅಪಾರ ಪ್ರಮಾಣದ ಬೆಳೆದ ಬೆಳೆಗಳು ನಾಶವಾಗಿದ್ದು ರೈತರು ಕಂಗಲಾಗಿದ್ದಾರೆ. ಈ ಕುರಿತು ರೈತರು ಅತಿವೃಷ್ಟಿಪೀಡಿತ ಕ್ಷೇತ್ರ ಘೋಷಣೆಗೆ ಆಗ್ರಹಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ