Umesh Katti: ಮಣ್ಣಲ್ಲಿ ಮಣ್ಣಾದ ಹ್ಯಾಟ್ರಿಕ್‌ ಗೆಲುವಿನ ಸರದಾರ; ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ

By BK AshwinFirst Published Sep 7, 2022, 9:38 PM IST
Highlights

ಬಿಜೆಪಿ ಹಿರಿಯ ನಾಯಕ, ರಾಜ್ಯ ಸಚಿವರಾಗಿದ್ದ ಉಮೇಶ್‌ ಕತ್ತಿಯವರ ಅಂತ್ಯಕ್ರಿಯೆಯನ್ನು ಬೆಳಗಾವಿ ಜಿಲ್ಲೆಯ ಅವರ ಸ್ವಾಗ್ರಾಮ ಬೆಲ್ಲದ ಬಾಗೇವಾಡಿಯಲ್ಲಿ ನೆರವೇರಿಸಲಾಗಿದೆ. ಲಿಂಗಾಯತ ವಿಧಿವಿಧಾನಗಳೊಂದಿಗೆ ಅಂತ್ಯಕ್ರಿಯೆ ನಡೆದಿದೆ.

ಬಿಜೆಪಿ ಹಿರಿಯ ನಾಯಕ, ರಾಜ್ಯ ಸಚಿವರಾಗಿದ್ದ ಉಮೇಶ್‌ ಕತ್ತಿ (61) ಅವರು ಮಣ್ಣಲ್ಲಿ ಮಣ್ಣಾಗಿದ್ದಾರೆ. ಬೆಳಗಾವಿ ಜಿಲ್ಲೆಯ ಅವರ ಸ್ವಗ್ರಾಮ ಬೆಲ್ಲದ ಬಾಗೇವಾಡಿಯ ತೋಟದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಯಿತು. ತಂದೆ ವಿಶ್ವನಾಥ ಕತ್ತಿ ಅವರ ಸಮಾಧಿ ಪಕ್ಕದಲ್ಲೇ ಅಂತ್ಯಕ್ರಿಯೆ ನಡೆದಿದೆ. ಹೃದಯಾಘಾತದಿಂದ ಮೃತರಾಗಿದ್ದ ಸಚಿವ ಉಮೇಶ ಕತ್ತಿಯವರ ಅಂತ್ಯಕ್ರಿಯೆಯನ್ನು ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿಸಲಾಯಿತು. ಈ ವೇಳೆ ಕುಟುಂಬಸ್ಥರು ಹಾಗೂ ಅಭಿಮಾನಿಗಳ ಆಕ್ರಂದನ ಮುಗಿಲು ಮುಟ್ಟಿತ್ತು. ಅಲ್ಲದೆ ಪಕ್ಷಾತೀತವಾಗಿ ಎಲ್ಲ ಪಕ್ಷಗಳ ನಾಯಕರು, ಸಾವಿರಾರು ಜನರು ಉಮೇಶ ಕತ್ತಿಯವರ ಅಂತಿಮ ದರ್ಶನ ಪಡೆದುಕೊಂಡಿದ್ದಾರೆ. ಇದಕ್ಕೂ ಮುನ್ನ, ಸಿಎಂ ಬಸವರಾಜ ಬೊಮ್ಮಾಯಿ ಉಮೇಶ್‌ ಕತ್ತಿಯವರ ಮೃತದೇಹದ ಮೇಲೆ ಹೊದಿಸಿದ್ದ ರಾಷ್ಟ್ರಧ್ವಜವನ್ನು ಅವರ ಪತ್ನಿಗೆ ಹಸ್ತಾಂತರ ಮಾಡಲಾಗಿದೆ. 

ತೋಟದಲ್ಲಿ ಅಂತ್ಯಕ್ರಿಯೆಗೂ ಮುನ್ನ ಉಮೇಶ್‌ ಕತ್ತಿ ಅವರ ಬೆಳಗಾವಿ ಜಿಲ್ಲೆಯ ಬೆಲ್ಲದ ಬಾಗೇವಾಡಿ ನಿವಾಸದಲ್ಲಿ ರಜ್ಯ ಸಚಿವರಾಗಿದ್ದ ಕತ್ತಿಯವರ ಪಾರ್ಥಿವ ಶರೀರಕ್ಕೆ ಪೂಜೆ ಸಲ್ಲಿಸಲಾಯಿತು. ಶಿವಲಿಂಗ ಸ್ವಾಮೀಜಿಗಳಿಂದ ಪೂಜೆ ನಡೆದಿದ್ದು, ಈ ವೇಳೆ ಅಷ್ಟದಿಕ್ಕುಗಳಲ್ಲಿ ಪೂರ್ಣಕುಂಭ ಇಟ್ಟು ಪೂಜೆ ನೆರವೇರಿಸಲಾಯಿತು. ಪೂಜೆಯ ಬಳಿಕ ತೋಟದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಯಿತು. ಇನ್ನು, ವೀರಶೈವ ಲಿಂಗಾಯತ ಸಂಪ್ರದಾಯದಂತೆ ಉಮೇಶ್‌ ಕತ್ತಿಯವರ ಅಂತ್ಯಕ್ರಿಯೆ ವಿಧಿವಿಧಾನಗಳೊಂದಿಗೆ ನೆರವೇರಿದೆ. 

ಇದನ್ನು ಓದಿ: Umesh Katti Death: ಮೋದಿ, ಆರ್ಸಿ, ಸಿದ್ದರಾಮಯ್ಯ ಸೇರಿ ಗಣ್ಯರ ಸಂತಾಪ

ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಸಚಿವರಾಗಿದ್ದ  ಉಮೇಶ್ ಕತ್ತಿ ನಿಧನಕ್ಕೆ ರಾಜ್ಯ ಸರಕಾರ ಈಗಾಗಲೇ 3 ದಿನಗಳ ಕಾಲ ಶೋಕಾಚರಣೆ ಘೋಷಿಸಿದೆ. ಸೆಪ್ಟೆಂಬರ್‌ 7 ರಿಂದ ಸೆ.9ರವರೆಗೆ ಯಾವುದೇ ಮನರಂಜನಾ ಕಾರ್ಯಕ್ರಮ ಇರುವುದಿಲ್ಲ. ಹಾಗೂ, ನಿಯಮಿತವಾಗಿ ಸರಕಾರಿ ಕಟ್ಟಡಗಳಲ್ಲಿ ಹಾರಿಸುವ  ರಾಷ್ಟ್ರಧ್ವಜವನ್ನು ಅರ್ಧಕ್ಕೆ ಹಾರಿಸುವಂತೆ ಆದೇಶ ಹೊರಡಿಸಿದೆ. ಜೊತೆಗೆ ಬೆಳಗಾವಿಯ ಎಲ್ಲಾ ಶಾಲೆ ಕಾಲೇಜುಗಳು ಮತ್ತು ಸರ್ಕಾರಿ ಕಚೇರಿಗಳಿಗೆ ಇಂದು ರಜೆ ಘೋಷಿಸಲಾಗಿತ್ತು. ಜೊತೆಗೆ ಸಕಲ ಸರ್ಕಾರಿ ಗೌರವಗಳೊಂದಿಗೆ , ಕೋವಿಡ್ 19 ನಿಯಮಗಳನ್ನು ಪಾಲಿಸಿ ಮೃತರ ಅಂತ್ಯಕ್ರಿಯೆ ನಡೆಸಲು ಮಾರ್ಗಸೂಚಿಯನ್ನು ಕೂಡ ರಾಜ್ಯ ಸರ್ಕಾರ ಬಿಡುಗಡೆ ಮಾಡಿದೆ. ಬೆಳಗ್ಗೆ ರಾಜ್ಯ ಸರಕಾರ ಶೋಕಾಚರಣೆಯನ್ನು ಒಂದು ದಿನಕ್ಕೆ ಸೀಮಿತ ಗೊಳಿಸಿತ್ತು. ಇದಕ್ಕೆ ಸಿದ್ದರಾಮಯ್ಯ ಅಸಮಾಧಾನ ವ್ಯಕ್ತಪಡಿಸಿದ್ದರು. ಮೂರು ದಿನದ ಶೋಕಾಚರಣೆ ಒಂದೇ ದಿನಕ್ಕ. ಸರ್ಕಾರ  ಮೂರು ದಿನ ಶೋಕಾಚರಣೆ ಮಾಡಬೇಕು. ಆದ್ರೆ  ಒಂದೇ ದಿನಕ್ಕೆ ಯಾಕೆ ಸೀಮಿತಗೊಳಿಸಿದ್ದಾರೆ ಅಂತಾ ಮಾಹಿತಿ ಇಲ್ಲ.  ಬಿಜೆಪಿ ಜನೋತ್ಸವದ ಬಗ್ಗೆ ನಾನು ಮಾತನಾಡಲ್ಲ ಎಂದಿದ್ದರು. ಈಗ ಸರಕಾರ ಮೂರು ದಿನದ ಶೋಕಾಚರಣೆ ಘೋಷಿಸಿದೆ.

ಸಚಿವರಾಗಿದ್ದ ಉಮೇಶ್ ಕತ್ತಿ ಮಂಗಳವಾರ ರಾತ್ರಿ ಬೆಂಗಳೂರಿನ ಡಾಲರ್ಸ್ ಕಾಲೋನಿ ನಿವಾಸದಲ್ಲಿ ಹೃದಯಾಘಾತಕ್ಕೆ ಒಳಗಾಗಿದ್ದರು, ತಕ್ಷಣ ಎಂ.ಎಸ್‌.ರಾಮಯ್ಯ ಆಸ್ಪತ್ರೆಗೆ ಅವರನ್ನು ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆಗೆ ಸ್ಪಂದಿಸಿದೆ ರಾತ್ರಿಯೇ ಕೊನೆಯುಸಿರೆಳೆದಿದ್ದರು. 9 ಸಲ ಚುನಾವಣೆ ಎದುರಿಸಿ 8 ಬಾರಿ ಶಾಸಕರಾಗಿದ್ದರು ಉಮೇಶ್ ಕತ್ತಿ. 1985ರಲ್ಲಿ ರಾಜಕೀಯಕ್ಕೆ ಬಂದ ಉಮೇಶ್ ಕತ್ತಿ, 6 ಪಕ್ಷಗಳನ್ನು ಬದಲಿಸಿದ್ದರು. ಬೆಳಗಾವಿಯ ಕೆಎಲ್‌ಇ ಸೊಸೈಟಿಯ ಲಿಂಗರಾಜ್ ಕಾಲೇಜಿನಲ್ಲಿ ಪಿಯುಸಿ ತನಕ ವ್ಯಾಸಂಗ ಮಾಡಿರುವ ಹುಕ್ಕೇರಿ ಕ್ಷೇತ್ರದಿಂದ 1985ರಲ್ಲಿ ಮೊದಲ ಬಾರಿಗೆ ಜನತಾ ಪಕ್ಷದಿಂದ ಚುನಾವಣಾ ಕಣಕ್ಕಿಳಿದರು. ಮೊದಲ ಪ್ರಯತ್ನದಲ್ಲೇ ಗೆಲುವು ಕಂಡಿದ್ದರು. 

RIP UMESH KATTI ಉಮೇಶ್ ಕತ್ತಿ ನಿಧನದಿಂದ ರಮೇಶ್ ಕತ್ತಿ ಆರೋಗ್ಯದಲ್ಲಿ ಏರುಪೇರು, ಅಸ್ವಸ್ಥಗೊಂಡ ತಮ್ಮನಿಗೆ ಚಿಕಿತ್ಸೆ!

ಈ ಮಧ್ಯೆ, ಉಮೇಶ್ ಕತ್ತಿ ಅಕಾಲಿಕ ನಿಧನ ಹಿನ್ನೆಲೆ ರಮೇಶ್ ಕತ್ತಿ ಆರೋಗ್ಯದಲ್ಲಿ ಏರುಪೇರಾಗಿದೆ. ತೀವ್ರ ಅಸ್ವಸ್ಥಗೊಂಡಿರುವ ರಮೇಶ್ ಕತ್ತಿಗೆ ವೈದ್ಯರು ತುರ್ತು ಚಿಕಿತ್ಸೆ ನೀಡುತ್ತಿದ್ದಾರೆ.

click me!