ಒಳಮೀಸಲಾತಿ ಜಾರಿಯ ಬೆನ್ನಲ್ಲೇ ಉದ್ಯೋಗಾಂಕ್ಷಿಗಳಿಗೆ ಶಾಕ್! ನೇರ ನೇಮಕಾತಿ ರದ್ದು!

Published : Sep 05, 2025, 05:14 PM IST
Vidhana soudha

ಸಾರಾಂಶ

ಕರ್ನಾಟಕ ಸರ್ಕಾರವು ಒಳಮೀಸಲಾತಿ ಜಾರಿಗೆ ಸಂಬಂಧಿಸಿದಂತೆ 80 ಸಾವಿರ ಹುದ್ದೆಗಳ ನೇಮಕಾತಿ ಅಧಿಸೂಚನೆಗಳನ್ನು ರದ್ದುಪಡಿಸಿದೆ. ಹೊಸ ನೇಮಕಾತಿ ಅಧಿಸೂಚನೆಗಳನ್ನು ಪರಿಶಿಷ್ಟ ಜಾತಿ ಒಳಮೀಸಲಾತಿಯನ್ನು ಅನ್ವಯಿಸಿ ಹೊರಡಿಸಲಾಗುವುದು.

ಬೆಂಗಳೂರು: ಕರ್ನಾಟಕ ಸರ್ಕಾರವು ಒಳಮೀಸಲಾತಿ ಜಾರಿಗೆ ಸಂಬಂಧಿಸಿದಂತೆ ಮಹತ್ವದ ತೀರ್ಮಾನ ತೆಗೆದುಕೊಂಡಿದ್ದು, ಅದರ ಪರಿಣಾಮವಾಗಿ ರಾಜ್ಯದ ವಿವಿಧ ಇಲಾಖೆಗಳ ನೇಮಕಾತಿ ಪ್ರಕ್ರಿಯೆ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ. ಸೆ.4ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ನಿರ್ಧಾರ ಕೈಗೊಳ್ಳಲಾಗಿದ್ದು, ಈಗಾಗಲೇ ಹೊರಡಿಸಲಾಗಿದ್ದ ಸುಮಾರು 80 ಸಾವಿರ ಹುದ್ದೆಗಳ ನೇಮಕಾತಿ ಅಧಿಸೂಚನೆಗಳನ್ನು ರದ್ದುಪಡಿಸುವ ನಿರ್ಧಾರ ಕೈಗೊಳ್ಳಲಾಗಿದೆ. ಈ ತೀರ್ಮಾನದ ಪ್ರಕಾರ, ಸರ್ಕಾರದ ವಿವಿಧ ಇಲಾಖೆ/ಮಂಡಳಿ/ನಿಗಮ/ಸ್ವಾಯತ್ತ ಸಂಸ್ಥೆಗಳ ನೇರ ನೇಮಕಾತಿಗೆ ಸಂಬಂಧಿಸಿದಂತೆ ಹಿಂದಿನ ದಿನಗಳಲ್ಲಿ ಹೊರಡಿಸಲಾಗಿದ್ದ ಅಧಿಸೂಚನೆಗಳನ್ನು ರದ್ದುಪಡಿಸುವಂತೆ ಸೂಚಿಸಲಾಗಿದೆ.

ಪ್ರಮುಖ ನಿರ್ಧಾರಗಳು

  • 28.10.2024ರ ನಂತರ ಸರ್ಕಾರದ ಯಾವುದೇ ಇಲಾಖೆ/ಮಂಡಳಿ/ನಿಗಮ/ಸ್ವಾಯತ್ತ ಸಂಸ್ಥೆಗಳ ಹುದ್ದೆಗಳಿಗೆ ನೇರ ನೇಮಕಾತಿಗಾಗಿ ಹೊರಡಿಸಲಾದ ಎಲ್ಲಾ ಅಧಿಸೂಚನೆಗಳನ್ನು ತಕ್ಷಣದಿಂದಲೇ ರದ್ದುಪಡಿಸಲು ಸರ್ಕಾರ ಆದೇಶಿಸಿದೆ.
  • ಪರಿಶಿಷ್ಟ ಜಾತಿ ಒಳಮೀಸಲಾತಿ (Sub-Classification Reservation) ಜಾರಿಗೆ ತಂದ ನಂತರ, ಹೊಸದಾಗಿ ನೇಮಕಾತಿ ಅಧಿಸೂಚನೆಗಳನ್ನು ಕಾಲಬದ್ಧವಾಗಿ (Time Bound) ಹೊರಡಿಸಲು ಸಂಬಂಧಿತ ನೇಮಕಾತಿ ಪ್ರಾಧಿಕಾರಗಳಿಗೆ ನಿರ್ದೇಶನ ನೀಡಲಾಗಿದೆ.
  • 28.10.2024ರ ಹಿಂದೆಯೇ ನೇರ ನೇಮಕಾತಿ ಅಧಿಸೂಚನೆ ಹೊರಡಿಸಿದ್ದರೂ, ಅದರ ನಂತರ ತಿದ್ದುಪಡಿ ಅಧಿಸೂಚನೆಗಳು ಹೊರಬಿದ್ದಿದ್ದರೆ, ಅಂತಹ ಅಧಿಸೂಚನೆಗಳನ್ನೂ ಸಹ ರದ್ದುಪಡಿಸಬೇಕೆಂದು ಸರ್ಕಾರ ಸ್ಪಷ್ಟಪಡಿಸಿದೆ.
  • ರದ್ದುಗೊಂಡ ಅಧಿಸೂಚನೆಗಳ ಬದಲು, ಪರಿಶಿಷ್ಟ ಜಾತಿ ಒಳಮೀಸಲಾತಿಯನ್ನು ಅನ್ವಯಿಸಿ ಹೊಸ ಅಧಿಸೂಚನೆಗಳನ್ನು ಹೊರಡಿಸುವುದು ಕಡ್ಡಾಯವಾಗಿರುತ್ತದೆ.

ಸಚಿವ ಸಂಪುಟ ಸಭೆಯಲ್ಲಿ ಕೈಗೊಳ್ಳಲಾದ ಈ ತೀರ್ಮಾನವು, ರಾಜ್ಯದಲ್ಲಿ ಸಮಾನತೆ, ನ್ಯಾಯಸಮ್ಮತ ಮೀಸಲು ಹಂಚಿಕೆ ಹಾಗೂ ಸಮಗ್ರ ಸಮಾಜ ನಿರ್ಮಾಣವನ್ನು ಸಾಧಿಸಲು ತೆಗೆದುಕೊಳ್ಳಲಾದ ಮಹತ್ವದ ಹೆಜ್ಜೆ ಎಂದು ಸರ್ಕಾರ ತಿಳಿಸಿದೆ. ಎಲ್ಲಾ ನೇಮಕಾತಿ ಪ್ರಾಧಿಕಾರಗಳು ಹಾಗೂ ಆಯ್ಕೆ ಮಂಡಳಿಗಳು ಈ ನಿರ್ದೇಶನಗಳನ್ನು ಕಡ್ಡಾಯವಾಗಿ ಪಾಲಿಸಬೇಕೆಂದು ಸೂಚಿಸಲಾಗಿದೆ.

ಹಳೆಯ ನಿರ್ಣಯಕ್ಕೆ ಗ್ರಹಣ

ಕಳೆದ ಅಕ್ಟೋಬರ್‌ನಲ್ಲಿ ಸರ್ಕಾರ ತೆಗೆದುಕೊಂಡಿದ್ದ ಹಳೆಯ ನಿರ್ಣಯವನ್ನು ಬದಲಿಸಲು ಈ ಹೊಸ ತೀರ್ಮಾನ ಕೈಗೊಳ್ಳಲಾಗಿದೆ. ಹಿಂದೆ ಪ್ರಕಟಿಸಿದ್ದ ಎಲ್ಲಾ ನೇಮಕಾತಿ ಅಧಿಸೂಚನೆಗಳನ್ನು ಹಿಂತೆಗೆದುಕೊಳ್ಳುವ ನಿರ್ಧಾರವೂ ಸಂಪುಟ ಸಭೆಯಲ್ಲಿ ಅಂಗೀಕರಿಸಲಾಯಿತು.

ಒಳಮೀಸಲಾತಿ ಕುರಿತ ನಿರ್ಧಾರ

ರಾಜ್ಯ ಸರ್ಕಾರವು ಪರಿಶಿಷ್ಟ ಜಾತಿಗಳನ್ನು 101 ವಿಭಾಗಗಳಲ್ಲಿ ಗುರುತಿಸಿ, ಅವುಗಳನ್ನು ಮೂರು ಗುಂಪುಗಳಲ್ಲಿ ವಿಂಗಡಿಸುವ ಮೂಲಕ ಶೇ. 17ರ ಮೀಸಲಾತಿಯನ್ನು ಹಂಚಿಕೆ ಮಾಡುವ ನಿರ್ಧಾರ ಕೈಗೊಂಡಿದೆ.

  • ಮೊದಲ ಗುಂಪಿಗೆ ಶೇ. 6%
  • ಎರಡನೇ ಗುಂಪಿಗೆ ಶೇ. 6%
  • ಮೂರನೇ ಗುಂಪಿಗೆ ಶೇ. 5%

ಇದಕ್ಕಾಗಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ರೋಸ್ಟರ್ ಬಿಂದುಗಳನ್ನು ನಿಗದಿಪಡಿಸಿ, ಅವುಗಳನ್ನು ಅನುಮೋದಿತ ಹುದ್ದೆಗಳಿಗೆ ಅನ್ವಯಿಸಲು ಸೂಚನೆ ನೀಡಿದೆ.

ನೇಮಕಾತಿ ಸ್ಥಗಿತ – ಯಾವ ಇಲಾಖೆಗೆ ಪರಿಣಾಮ?

ಹೊಸ ತೀರ್ಮಾನದಿಂದ ಪೊಲೀಸ್ ಇಲಾಖೆ, ಶಿಕ್ಷಣ ಇಲಾಖೆ, ಕೃಷಿ, ಪಶುಸಂಗೋಪನೆ, ಗ್ರಾಮೀಣಾಭಿವೃದ್ಧಿ ಸೇರಿದಂತೆ ಹಲವು ಇಲಾಖೆಗಳ 80 ಸಾವಿರಕ್ಕೂ ಹೆಚ್ಚು ಹುದ್ದೆಗಳ ನೇಮಕಾತಿ ಪ್ರಕ್ರಿಯೆ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ.

ಸರ್ಕಾರದ ನಿಲುವು

ಒಳಮೀಸಲಾತಿ ಕುರಿತ ಆಯೋಗದ ವರದಿ ಬರುವವರೆಗೂ ಹೊಸ ನೇಮಕಾತಿ ಅಧಿಸೂಚನೆ ಹೊರಡಿಸಲಾಗುವುದಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಹೀಗಾಗಿ, ಈಗಾಗಲೇ ಹೊರಡಿಸಿದ್ದ ಅಧಿಸೂಚನೆಗಳನ್ನು ರದ್ದುಪಡಿಸುವುದರೊಂದಿಗೆ ನೇಮಕಾತಿ ಪ್ರಕ್ರಿಯೆಗೆ ತಾತ್ಕಾಲಿಕ ಬ್ರೇಕ್ ಬಿದ್ದಿದೆ.

ಉದ್ಯೋಗಾಕಾಂಕ್ಷಿಗಳಿಗೆ ದೊಡ್ಡ ಆಘಾತ

ಈ ತೀರ್ಮಾನದಿಂದಾಗಿ ಹಲವು ತಿಂಗಳುಗಳಿಂದ ಸರ್ಕಾರಿ ಉದ್ಯೋಗಕ್ಕಾಗಿ ತಯಾರಿ ನಡೆಸುತ್ತಿದ್ದ ಸಾವಿರಾರು ಅಭ್ಯರ್ಥಿಗಳಿಗೆ ನಿರಾಶೆ ಉಂಟಾಗಿದೆ. ಈಗ ಸರ್ಕಾರ ಒಳಮೀಸಲಾತಿ ಉಪವರ್ಗೀಕರಣಕ್ಕೆ ಸಂಬಂಧಿಸಿದಂತೆ ಹೊಸ ಆದೇಶ ಹೊರಡಿಸುವವರೆಗೂ ಯಾವುದೇ ನೇಮಕಾತಿ ಪ್ರಕ್ರಿಯೆ ಆರಂಭವಾಗುವುದಿಲ್ಲ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ವರುಣಾ ಜನತೆಯ ಋಣ ತೀರಿಸಲು ಸಾಧ್ಯವಿಲ್ಲ, ಆದರೂ ಶ್ರಮಿಸುವೆ: ಯತೀಂದ್ರ ಸಿದ್ದರಾಮಯ್ಯ
ಮಹಾಮೇಳಾವ್ ಅನುಮತಿ ನಿರಾಕರಣೆ: ನಾಡದ್ರೋಹಿ ಎಂಇಎಸ್ ‌ಪುಂಡರಿಗೆ ಶಾಕ್ ಕೊಟ್ಟ ಬೆಳಗಾವಿ ಜಿಲ್ಲಾಡಳಿತ