
ಬೆಂಗಳೂರು (ಜೂ.10): ರಾಜ್ಯದ ಜನತೆಗೆ ಕಾಂಗ್ರೆಸ್ ಸರ್ಕಾರದಿಂದ ಗ್ಯಾರಂಟಿಯಾಗಿ ಗೃಹಜ್ಯೋತಿ ಯೋಜನೆ (200 ಯೂನಿಟ್ ವಿದ್ಯುತ್ ಉಚಿತ) ಜಾರಿಗೊಳಿಸುವ ಮುನ್ನ ವಿದ್ಯುತ್ ದರವನ್ನು ಹೆಚ್ಚಳ ಮಾಡಿ ಶಾಕ್ ನೀಡಿದೆ. ಕಳೆದ ತಿಂಗಳು ಕಟ್ಟಿದ್ದಕ್ಕಿಂಎ ಜೂನ್ ತಿಂಗಳಲ್ಲಿ ದುಪ್ಪಟ್ಟು ಹಾಗೂ ಮೂರು ಪಟ್ಟು ವಿದ್ಯುತ್ ಬಿಲ್ ನೀಡಲಾಗಿದೆ.
ರಾಜ್ಯದ ರಾಜಧಾನಿ ಬೆಂಗಳೂರು, ರಾಮನಗರ, ಭಟ್ಕಳ, ಶಿರಸಿ, ಹಾವೇರಿ, ಬಳ್ಳಾರಿ, ತುಮಕೂರು ಸೇರಿದಂತೆ ರಾಜ್ಯಾದ್ಯಂತ ವಿದ್ಯುತ್ ಬಿಲ್ ನೋಡಿ ಜನರು ಶಾಕ್ ಆಗಿದ್ದಾರೆ. ಕರೆಂಟ್ ಬೇಡ, ಇದರ ಸಹವಾಸವೂ ಬೇಡ ಕತ್ತಲಿನಲ್ಲೇ ಇದ್ದುಬಿಡ್ತೇವೆ ನಮಗೆ ಸೀಮೆ ಎಣ್ಣೆಯನ್ನು ಕೊಡಿ ಎನ್ನುವಷ್ಟರ ಮಟ್ಟಿಗೆ ಬೇಸತ್ತು ಹೋಗಿದ್ದಾರೆ. ಇದಕ್ಕೆ ಕಾರಣ ಏಕಾಏಕಿ ಮನೆಯ ಕರೆಂಟ್ ಬಿಲ್ ದುಪ್ಪಟ್ಟು ಮತ್ತು ಮೂರು ಪಟ್ಟು ಆಗಿರುವುದೇ ಕಾರಣವಾಗಿದೆ. ಇನ್ನು ಕೆಲವೊಂದು ಗ್ರಾಮಗಳಲ್ಲಿ ಯಾರೊಬ್ಬರೂ ದುಬಾರಿಯಾದ ವಿದ್ಯುತ್ ಬಿಲ್ ಕಟ್ಟದಿರಲು ಹಾಗೂ ಎಸ್ಕಾಂಗಳ ಬಿಲ್ ಕಲೆಕ್ಟ್ ಮಾಡುವವರನ್ನು ಗ್ರಾಮದೊಳಗೆ ಪ್ರವೇಶಿಸದಂತೆ ನಿರ್ಬಂಧ ಹೇರಲು ತೀರ್ಮಾನಿಸಿದ್ದಾರೆ.
ರಾಜ್ಯದ ಜನತೆಗೆ ವಿದ್ಯುತ್ ಶಾಕ್: ಪ್ರತಿ ಯೂನಿಟ್ಗೆ 70 ಪೈಸೆ ಹೆಚ್ಚಳ
ಇತರೆ ಚಾರ್ಜ್ 400 ರೂ. ಹೇರಿಕೆ: ರಾಮನಗರದ ಹಲವೆಡೆ ದುಪ್ಪಟ್ಟು ಬಿಲ್ ನೀಡಿರೋ ಬೆಸ್ಕಾಂ ಸಿಬ್ಬಂದಿಯ ಕರೆಂಟ್ ಬಿಲ್ ನೋಡಿ ಗ್ರಾಹಕರು ಶಾಕ್ ಆಗಿದ್ದಾರೆ. ಕಳೆದ ತಿಂಗಳು 1,300ರೂ ಇದ್ದ ವಿದ್ಯುತ್ ಬಿಲ್, ಈ ತಿಂಗಳು 2,500ರೂ. ಬಿಲ್ ಬಂದಿದೆ. ಇನ್ನು 250 ರೂ. ಪಾವತಿಸುತ್ತಿದ್ದವರಿಗೆ 850 ರೂ. ಬಂದಿದೆ. ಸರ್ಕಾರದಿಂದ ಏಕಾಏಕಿ ವಿದ್ಯುತ್ ದರ ಹೆಚ್ಚಳವಾಗಿದ್ದರಿಂದ ಸಾರ್ವಜನಿಕರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿದ್ಯತ್ ಬಳಕೆ ಶುಲ್ಕದ ಜೊತೆಗೆ, ಇತರ ಚಾರ್ಜ್ ಎಂದು 300ರಿಂದ 400ರೂ ಹೆಚ್ಚಳ ಮಾಡಲಾಗಿದೆ. ಬೆಸ್ಕಾಂ ನಡೆಗೆ ಜನರು ಕಿಡಿಕಾರಿದ್ದಾರೆ. ಈ ಬಗ್ಗೆ ಬೆಸ್ಕಾಂ ಅಧಿಕಾರಿಗಳ ಕೇಳಿದರೆ ತಾಂತ್ರಿಕ ದೋಷ, ಸರ್ಕಾರದ ಆದೇಶ ಎಂಬ ಸಬೂಬು ನೀಡಿ ನೀವು ಬಿಲ್ ಪಾವತಿಸಲೇಬೇಕು ಎಂದು ಹೇಳಿ ಹೋಗುತ್ತಿದ್ದಾರೆ. ಜೊತೆಗೆ, ಮುಂದಿನ ತಿಂಗಳಿಂದ ವಿದ್ಯುತ್ ಉಚಿತ ಬರುತ್ತದೆ ಎಂದು ಆಸೆ ತೋರಿಸಿ ವಿದ್ಯುತ್ ಬಿಲ್ ಪಾವತಿಸಿಕೊಳ್ಳುತ್ತಿದ್ದಾರೆ.
ಹೆಚ್ಚಳವಾದ ವಿದ್ಯುತ್ ದರ ಪೂರ್ವಾನ್ವಯವಾಗಿ ಪಾವತಿಸಲು ಆದೇಶ: ರಾಜ್ಯದಲ್ಲಿ ವಿಧಾನಸಭಾ ಚುನಾವಣಾ ಫಲಿತಾಂಶ ಬರುವ ಮುನ್ನವೇ ರಾಜ್ಯ ಸರ್ಕಾರದಿಂದ ಪ್ರತಿ ಯೂನಿಟ್ಗೆ 70 ಪೈಸೆ ವಿದ್ಯುತ್ ದರವನ್ನು ಹೆಚ್ಚಳ ಮಾಡಲಾಗಿತ್ತು. ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ (ಕೆಇಆರ್ಸಿ)ವು (karnataka electricity regulatory commission- KERC) ಸಲ್ಲಿಸಿದ್ದ ಬೆಲೆ ಹೆಚ್ಚಳ ಪ್ರಸ್ತಾವನೆಗೆ ಒಪ್ಪಿಗೆ ಲಭಿಸಿದ್ದು, ಪ್ರತಿ ಯೂನಿಟ್ ಗೆ ಶೇ.16.83 ವಿದ್ಯುತ್ ದರ ಹೆಚ್ಚಳ ಮಾಡಿ ಆದೇಶ ಹೊರಡಿಸಲಾಗಿದೆ. ರಾಜ್ಯದಲ್ಲಿ ಏಪ್ರಿಲ್ 1 ರಿಂದ ಪೂರ್ವಾನ್ವಯ ಆಗುವಂತೆ ಪ್ರತಿ ಯೂನಿಟ್ಗೆ 1.46 ರೂ. ಹೆಚ್ಚಳ ಮಾಡುವಂತೆ ಎಲ್ಲ ಎಸ್ಕಾಂಗಳು ಬೇಡಿಕೆ ಸಲ್ಲಿಸಿದ್ದವು. ಆದರೆ, ಈಗ ಕೇವಲ 70 ಪೈಸೆಯನ್ನು ಹೆಚ್ಚಳ ಮಾಡಿ ಆದೇಶ ಹೊರಡಿಸಲಾಗಿದೆ. ಈ ಹೊಸ ದರ ಜಾರಿಯಾದ ಬೆನ್ನಲ್ಲೇ ವಿದ್ಯುತ್ ಗ್ರಾಹಕರ ಪ್ರತಿ ತಿಂಗಳ ಬಿಲ್ನಲ್ಲಿ ಶೇ.8.31ರಷ್ಟು ಹಣ ಪಾವತಿ ಹೆಚ್ಚಾಗಲಿದೆ ಎಂದು ತಿಳಿದುಬಂದಿದೆ. ಹೀಗಾಗಿ, ಹೊಸ ಬಿಲ್ನಲ್ಲಿ ಕಳೆದ ಎರಡು ತಿಂಗಳ ದುಬಾರಿ ದರವೂ ಕೂಡ ಅಳವಡಿಕೆ ಮಾಡಿದ್ದರಿಂದ ಬಾಕಿ ಕಾಲಂನಲ್ಲಿಯೂ ಹಣ ಪಾವತಿಯ ಮೊತ್ತವನ್ನು ನಮೂದಿಸಲಾಗಿದೆ.
ಸತತ 2ನೇ ತಿಂಗಳೂ ವಿದ್ಯುತ್ ದರ ಏರಿಕೆ ಶಾಕ್: ಗೃಹಜ್ಯೋತಿ ಫಲಾನುಭವಿಗಳಿಗೂ ಎಫೆಕ್ಟ್?
KERC ಬೆಲೆ ಏರಿಕೆ ನಿಯಂತ್ರಿಸದ ಸರ್ಕಾರ: ಕರ್ನಾಟಕ ವಿದ್ಯತ್ ನಿಯಂತ್ರಣ ಆಯೋಗ (ಕೆಇಆರ್ಸಿ) ವತಿಯಿಂದ ವಿದ್ಯುತ್ ಬೆಲೆ ಏರಿಕೆ ಮಾಡಿದ್ದರೂ, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಅದನ್ನು ನಿಯಂತ್ರಣ ಮಾಡಲು ಮುಂದಾಗಿಲ್ಲ. ಹೀಗಾಗಿ, ಏಪ್ರಿಲ್ 1 ರಿಂದ ಪೂರ್ವನ್ವಯ ದರದ ಆಧಾರದಲ್ಲಿ ವಿದ್ಯುತ್ ಬಿಲ್ನಲ್ಲಿ ಭಾರಿ ಪ್ರಮಾಣದ ಏರಿಕೆ ಕಂಡುಬಂದಿದೆ. ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಇಲಾಖೆಗಳು ನೀಡಿದ ಎಲ್ಲ ಶುಲ್ಕ ಪಾವತಿಸಿದ್ರೂ ಮತ್ತೆ ಬಿಲ್ ನಲ್ಲಿ ದುಪ್ಪಟ್ಟು ದರ ವಿಧಿಸಲಾಗಿದೆ. ಆದರೆ, ಬಹಳಷ್ಟು ಜನರಿಗೆ ಬಿಲ್ ಏರಿಕೆ ಬಗ್ಗೆ ಮಾಹಿತಿಯೇ ಇಲ್ಲದ್ದರಿಂದ ಬಿಲ್ನಲ್ಲಿ ಭಾರಿ ದೊಡ್ಡಮಟ್ಟದ ಹಣ ಪಾವತಿಸಬೇಕೆಂದು ಬಿಲ್ ನೀಡಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ