ಸೈಬರ್‌ ಭದ್ರತೆಗಾಗಿ ರಾಜ್ಯಕ್ಕೆ ಪ್ರತ್ಯೇಕ ಸೈಬರ್‌ ನೀತಿ, ಬಸ್‌ಗಳಲ್ಲಿ ವೆಹಿಕಲ್‌ ಟ್ರ್ಯಾಕಿಂಗ್‌ ವ್ಯವಸ್ಥೆ

By Kannadaprabha NewsFirst Published Aug 11, 2023, 7:38 AM IST
Highlights

ಸೈಬರ್‌ ಅಪರಾಧ ತಡೆ, ಸೈಬರ್‌ ಭದ್ರತೆ ಹೆಚ್ಚಳಕ್ಕಾಗಿ ಪ್ರತ್ಯೇಕವಾದ ಸೈಬರ್‌ ನೀತಿ ರೂಪಿಸಲು ಸಚಿವ ಸಂಪುಟ ಸಭೆ  ಅನುಮೋದನೆ ನೀಡಿದೆ. ದತ್ತಾಂಶ ಖಾಸಗಿತನದ ಕುರಿತು ಇದರಡಿ ಜಾಗೃತಿ ಮೂಡಿಸಲಾಗುತ್ತದೆ. ಬಸ್‌ಗಳಲ್ಲಿ ವೆಹಿಕಲ್‌ ಟ್ರ್ಯಾಕಿಂಗ್‌ ವ್ಯವಸ್ಥೆಗೂ ಅಂಗೀಕಾರ.

ಬೆಂಗಳೂರು (ಆ.11): ಸೈಬರ್‌ ಭದ್ರತೆ, ಸೈಬರ್‌ ಅಪರಾಧ ತಡೆ ಹಾಗೂ ದತ್ತಾಂಶ ಖಾಸಗಿತನದ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ರಾಜ್ಯಕ್ಕೆ ಪ್ರತ್ಯೇಕ ಸೈಬರ್‌ ನೀತಿ 2023 ರಚನೆಗೆ ಸಚಿವ ಸಂಪುಟದಲ್ಲಿ ಅನುಮೋದನೆ ನೀಡಿದೆ.

ರಾಜ್ಯದಲ್ಲಿ ಇತ್ತೀಚೆಗೆ ಸೈಬರ್‌ ಅಪರಾಧಗಳ ಸಂಖ್ಯೆ ಹೆಚ್ಚುತ್ತಿದ್ದು, ಅದರ ನಿಯಂತ್ರಣ ಅಗತ್ಯವಿದೆ. ಹೀಗಾಗಿ ರಾಜ್ಯಕ್ಕೆ ಪ್ರತ್ಯೇಕ ಸೈಬರ್‌ ನೀತಿ ರಚಿಸಲಾಗುವುದು. ಈ ನೀತಿಯಿಂದಾಗಿ ಸೈಬರ್‌ ಅಪರಾಧ ತಡೆಗೆ ಕ್ರಮ ಕೈಗೊಳ್ಳಲಾಗುವುದು. ಜತೆಗೆ ಸೈಬರ್‌ ಭದ್ರತೆ, ದತ್ತಾಂಶ ಖಾಸಗಿತನದ ಕುರಿತಂತೆ ಜಾಗೃತಿ ಮೂಡಿಸಲಾಗುತ್ತದೆ. ಗ್ರಾಮ ಮಟ್ಟದಲ್ಲೂ ಸ್ವಯಂ ಸೇವಕರ ಮೂಲಕ ಜಾಗೃತಿ ಮೂಡಿಸಲಾಗುವುದು. ಜತೆಗೆ ನೂತನ ನೀತಿ ಅಡಿಯಲ್ಲಿ ಸೈಬರ್‌ ಭದ್ರತೆ ಹಾಗೂ ಅಪರಾಧ ತಡೆಗೆ ಹೊಸ ತಂತ್ರಾಂಶ ರೂಪಿಸಲಾಗುವುದು. ಅದರ ಮೂಲಕ ಸೈಬರ್‌ ಅಪರಾಧ ಪತ್ತೆ, ಅದರ ತಡೆಗೆ ಕ್ರಮ ಕೈಗೊಳ್ಳಲಾಗುತ್ತದೆ.

ಮಾಜಿ ಸಿಎಂ OSDಗೆ ವಿಡಿಯೋ ಕಾಲ್‌ ಮೂಲಕ ಹನಿಟ್ರ್ಯಾಪ್‌: ಲಕ್ಷಾಂತರ ರೂ. ಸುಲಿಗೆ ಮಾಡಿದ ವಂಚಕರು!

ಬಸ್‌ಗಳಲ್ಲಿ ವೆಹಿಕಲ್‌ ಟ್ರ್ಯಾಕಿಂಗ್‌ ವ್ಯವಸ್ಥೆ: ಕೆಎಸ್ಸಾರ್ಟಿಸಿ ಬಸ್‌ಗಳಲ್ಲಿ ವೆಹಿಕಲ್‌ ಟ್ರ್ಯಾಕಿಂಗ್‌ ವ್ಯವಸ್ಥೆ ಹಾಗೂ ಪ್ಯಾನಿಕ್‌ ಬಟನ್‌ ಅಳವಡಿಕೆ ಹಾಗೂ ಕೇಂದ್ರೀಕೃತ ಕಂಟ್ರೋಲ್‌ ರೂಂ ಸ್ಥಾಪನೆಗಾಗಿ 30.74 ಕೋಟಿ ರು. ವೆಚ್ಚದ ಅಂದಾಜು ಮೊತ್ತಕ್ಕೆ ಸಚಿವ ಸಂಪುಟದಲ್ಲಿ ಆಡಳಿತಾತ್ಮಕ ಅನುಮೋದನೆ ನೀಡಲಾಯಿತು.

ವೆಹಿಕಲ್‌ ಟ್ರ್ಯಾಕಿಂಗ್‌ ವ್ಯವಸ್ಥೆಯಿಂದಾಗಿ ಅಧಿಕಾರಿಗಳಿಗೆ ಬಸ್‌ಗಳ ಸಂಚಾರದ ಕುರಿತು ನೈಜ ಮಾಹಿತಿ ಸಿಗಲಿದೆ. ಬಸ್‌ ಎಲ್ಲಿದೆ, ಅದರಲ್ಲಿ ಎಷ್ಟುಪ್ರಯಾಣಿಕರಿದ್ದಾರೆ ಎಂಬಂತಹ ಮಾಹಿತಿಗಳು ದೊರೆಯಲಿದೆ. ಅದರ ಜತೆಗೆ ಪ್ಯಾನಿಕ್‌ ಬಟನ್‌ ಅಳವಡಿಕೆಯಿಂದ ಸುಧಾರಿತ ಪ್ರಯಾಣ ಹಾಗೂ ಅಪಘಾತ, ಅವಘಡದಂತಹ ಸಂದರ್ಭದಲ್ಲ ಸ್ಥಳೀಯ ಪೊಲೀಸ್‌ ಠಾಣೆ ಸೇರಿದಂತೆ ಮತ್ತಿತರ ಸೂಕ್ತ ಕಡೆಗಳಿಂದ ನೆರವು ಪಡೆಯಬಹುದಾಗಿದೆ.

ವಿಟಿಯುನಲ್ಲಿ ನೂತನ ಕೇಂದ್ರ: ಸೈಬರ್‌ ಅಪರಾಧ ತಡೆಗೆ 2017ರಲ್ಲಿ ಅನುಮೋದನೆ ನೀಡಿ ಬೆಂಗಳೂರಿನ ನಾಗರಬಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು)ದಲ್ಲಿ ಸ್ಥಾಪಿಸಲಾಗುತ್ತಿರುವ ಏರೋಸ್ಪೇಸ್‌ ಉತ್ಪಾದನೆ ಹಾಗೂ ರಕ್ಷಣಾ ಉತ್ಕೃಷ್ಟತಾ ಕೇಂದ್ರದ ಕಾರ್ಯಚಟುವಟಿಕೆಯನ್ನು ಖಾಸಗಿ ಸಹಭಾಗಿತ್ವದಲ್ಲಿ ಆರಂಭಿಸಲು ಸಚಿವ ಸಂಪುಟ ಒಪ್ಪಿಗೆ ನೀಡಿದೆ.

ಲಂಚಕ್ಕೆ ಕೈಯೊಡ್ಡಿ ಕೇರಳ ಪೊಲೀಸರಿಗೆ ಸಿಕ್ಕಿಬಿದ್ದ 4 ಮಂದಿ ಕರ್ನಾಟಕ ಪೊಲೀಸರು ಸಸ್ಪೆಂಡ್!

ಪಿಪಿಪಿ ಅಡಿ ಡಸ್ಸಾಲ್ಟ್‌ ಸಂಸ್ಥೆ ಸಹಭಾಗಿತ್ವದಲ್ಲಿ ಕೇಂದ್ರ ಕಾರ್ಯನಿರ್ವಹಿಸಲಿದೆ. ಈ ಯೋಜನೆಗೆ ಐಟಿ-ಬಿಟಿ ಇಲಾಖೆ 33.46 ಕೋಟಿ ರು., ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ 4.29 ಕೋಟಿ ರು. ಹಾಗೂ ಡಸ್ಸಾಲ್ಟ್‌ ಸಂಸ್ಥೆಯು 250 ಕೋಟಿ ರು. ಹೂಡಿಕೆ ಮಾಡುತ್ತಿದೆ. ವಿಟಿಯುನಲ್ಲಿ 3ಡಿ ಲ್ಯಾಬ್‌ ಸೇರಿದಂತೆ ಇನ್ನಿತರ ಕ್ರಮಗಳನ್ನು ಅನುಷ್ಠಾನಗೊಳಿಸಲಾಗುವುದು. ಸೈಬರ್‌ ಅಪರಾಧ ತಡೆ ಹಾಗೂ ಏರೋಸ್ಪೇಸ್‌ ಕ್ಷೇತ್ರಕ್ಕೆ ಸಂಬಂಧಿಸಿದ ಸಂಶೋಧನೆ ಮತ್ತು ಅಧ್ಯಯನಕ್ಕೆ ಈ ಕೇಂದ್ರ ಸಹಕಾರಿಯಾಗಲಿದೆ.

click me!