ಪಾರಿವಾಳ ಪ್ರಿಯರೇ ಎಚ್ಚರ: ಸಾರ್ವಜನಿಕ, ಖಾಸಗಿ ಸ್ಥಳದಲ್ಲಿ ಕಾಳು ಹಾಕಿದ್ರೆ ಹುಷಾರ್, ಸರ್ಕಾರದ ಹೊಸ ನಿಯಮ ಜಾರಿ!

Kannadaprabha News   | Kannada Prabha
Published : Jul 24, 2026, 02:22 PM IST
karnataka health department ban pigeon feeding

ಸಾರಾಂಶ

ಸಾರ್ವಜನಿಕ ಆರೋಗ್ಯದ ಹಿತದೃಷ್ಟಿಯಿಂದ, ಆರೋಗ್ಯ ಇಲಾಖೆಯು ಎಲ್ಲೆಂದರಲ್ಲಿ ಪಾರಿವಾಳಗಳಿಗೆ ಆಹಾರ ನೀಡುವುದನ್ನು ನಿರ್ಬಂಧಿಸಿ ಸುತ್ತೋಲೆ ಹೊರಡಿಸಿದೆ. ಇನ್ನು ಮುಂದೆ, ನಿಗದಿತ ಸ್ಥಳಗಳಲ್ಲಿ ಮತ್ತು ನಿಗದಿತ ಸಮಯದಲ್ಲಿ ಮಾತ್ರ ಆಹಾರ ನೀಡಲು ಅವಕಾಶವಿದ್ದು, ನಿಯಮ ಉಲ್ಲಂಘಿಸಿದರೆ ಕಾನೂನು ಕ್ರಮದ ಎಚ್ಚರಿಕೆ.

ಸೂಚನೆ - ನಿಗದಿತ ಸ್ಥಳದಲ್ಲಿ ಮಾತ್ರ ಆಹಾರಕ್ಕೆ ಅವಕಾಶ: ಆರೋಗ್ಯ ಇಲಾಖೆ

ಬೆಂಗಳೂರು (ಜು.24): ಸಾರ್ವಜನಿಕ ಮತ್ತು ಖಾಸಗಿ ಸ್ಥಳಗಳಲ್ಲಿ ಪಾರಿವಾಳಗಳಿಗೆ ಆಹಾರ ನೀಡುವುದರಿಂದ ಉಂಟಾಗುತ್ತಿರುವ ಸಾರ್ವಜನಿಕ ಆರೋಗ್ಯ ಸಮಸ್ಯೆಗಳು ಮತ್ತು ಉಸಿರಾಟದ ಕಾಯಿಲೆಗಳನ್ನು ತಡೆಗಟ್ಟುವ ಉದ್ದೇಶದಿಂದ ಎಲ್ಲೆಂದರಲ್ಲಿ ಪಾರಿವಾಳಗಳಿಗೆ ಆಹಾರ ನೀಡುವುದಕ್ಕೆ ನಿರ್ಬಂಧ ವಿಧಿಸಿ ಆರೋಗ್ಯ ಇಲಾಖೆ ಗುರುವಾರ ಸುತ್ತೋಲೆ ಹೊರಡಿಸಿದೆ.

ಪಾರಿವಾಳಗಳಿಗೆ ಆಹಾರ ಹಾಕಿದ್ರೆ ಕಾನೂನು ಕ್ರಮ

ಸುತ್ತೋಲೆ ನಿಯಮಗಳನ್ನು ಉಲ್ಲಂಘಿಸಿ ಪಾರಿವಾಳಗಳಿಗೆ ಆಹಾರ ಹಾಕುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಕೂಡ ಜಿಬಿಎ ಸೇರಿ ರಾಜ್ಯದ ಎಲ್ಲ ಪಾಲಿಕೆಗಳು, ಸ್ಥಳೀಯ ಸಂಸ್ಥೆಗಳಿಗೆ ಸೂಚನೆ ನೀಡಲಾಗಿದೆ.

ಪಾರಿವಾಳಗಳಿಗೆ ಆಹಾರ ಹಾಕಲು ನಿಗದಿಪಡಿಸಿದ ನಿರ್ದಿಷ್ಟ ಸ್ಥಳಗಳಲ್ಲಿ ಮಾತ್ರ ಅನುಮತಿ ನೀಡಲಾಗುತ್ತದೆ. ಈ ಸ್ಥಳಗಳನ್ನು ಎನ್‌ಜಿಒ ಮತ್ತಿತರ ಸಂಸ್ಥೆಗಳು ನಿರ್ವಹಣೆ ಮಾಡಬೇಕು. ಅದಕ್ಕೂ ಮುನ್ನ ಸ್ಥಳೀಯ ಸಂಸ್ಥೆಗಳು ಸ್ಥಳ ಪರಿಶೀಲನೆ ನಡೆಸಿ ವರದಿ ನೀಡಲಿದ್ದಾರೆ. ನಿಗದಿತ ಸ್ಥಳಗಳಲ್ಲಿ ಬೆಳಗ್ಗೆ 7 ಗಂಟೆಯಿಂದ 9 ಗಂಟೆಯವರೆಗೆ ಮಾತ್ರ ಆಹಾರ ಹಾಕಲು ಅವಕಾಶ ನೀಡಲಾಗಿದೆ. ಈ ನಿರ್ದಿಷ್ಟ ಸ್ಥಳಗಳ ನಿರ್ವಹಣೆ ಹಾಗೂ ಸ್ವಚ್ಛತೆ ಸಂಪೂರ್ಣ ಜವಾಬ್ದಾರಿ ಚಾರಿಟಬಲ್ ಸಂಸ್ಥೆಗಳು, ಎನ್‌ಜಿಒಗಳಿಗೆ ವಹಿಸಿಕೊಡಲಾಗುತ್ತದೆ. ಸಾರ್ವಜನಿಕರಿಂದ ದೂರುಗಳು ಬಂದರೆ ತಕ್ಷಣ ಕ್ರಮ ಕೈಗೊಳ್ಳಲಾಗುತ್ತದೆ.

ಫುಟ್‌ಪಾತ್ ಮತ್ತು ರಸ್ತೆಗಳಲ್ಲಿ ನಿಷೇಧ:

ಯಾವುದೇ ಸಾರ್ವಜನಿಕ ರಸ್ತೆ, ಫುಟ್‌ಪಾತ್ ಅಥವಾ ಇತರೆ ಅನಧಿಕೃತ ಖಾಸಗಿ, ಸಾರ್ವಜನಿಕ ಸ್ಥಳಗಳಲ್ಲಿ ಪಾರಿವಾಳಗಳಿಗೆ ಆಹಾರ ನೀಡುವಂತಿಲ್ಲ. ನಾಗರಿಕರು ಮತ್ತು ಅಪಾರ್ಟ್‌ಮೆಂಟ್ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳು ತಮ್ಮ ಮಹಡಿ, ಬಾಲ್ಕನಿ ಹಾಗೂ ಕಟ್ಟಡದ ಛಾವಣಿಗಳಲ್ಲಿ ಪಾರಿವಾಳಗಳಿಗೆ ಆಹಾರ ನೀಡುವುದನ್ನು ತಡೆಗಟ್ಟಬೇಕು ಮತ್ತು ಆ ಜಾಗಗಳನ್ನು ಸ್ವಚ್ಛವಾಗಿಡಬೇಕು ಎಂದು ಆರೋಗ್ಯ ಇಲಾಖೆ ಸೂಚಿಸಿದೆ.

ಏರ್‌ಪೋರ್ಟ್ ಸುತ್ತ ಸಂಪೂರ್ಣ ನಿರ್ಬಂಧ: ವಿಮಾನಯಾನ ಸುರಕ್ಷತೆ ದೃಷ್ಟಿಯಿಂದ, ವಿಮಾನ ನಿಲ್ದಾಣಗಳ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪಾರಿವಾಳಗಳಿಗೆ ಆಹಾರ ನೀಡುವುದನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ.

ಜಾಗೃತಿ ಅಭಿಯಾನ: ಪಾರಿವಾಳಗಳ ಹಿಕ್ಕೆ ಮತ್ತು ಗರಿಗಳಿಂದ ಹರಡುವ ಆರೋಗ್ಯದ ಅಪಾಯಗಳ ಬಗ್ಗೆ ಜಿಬಿಎ ಮತ್ತು ಸ್ಥಳೀಯ ಸಂಸ್ಥೆಗಳು ಸಾರ್ವಜನಿಕರಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಕೈಗೊಳ್ಳಬೇಕು ಎಂದು ಸೂಚಿಸಲಾಗಿದೆ.

ಪ್ರಮುಖ ಅಂಶಗಳು

- ಉದ್ಯಾನ, ಸಾರ್ವಜನಿಕ, ಖಾಸಗಿ ಸ್ಥಳಗಳಲ್ಲಿ ಆಹಾರ ಹಾಕುವಂತಿಲ್ಲ.

- ನಿಗದಿಪಡಿಸಿದ ಸ್ಥಳಗಳಲ್ಲಿ ಮಾತ್ರ ಪಾರಿವಾಳಗಳಿಗೆ ಆಹಾರ ಹಾಕಬೇಕು.

- ಆಹಾರ ಹಾಕುವ ಸ್ಥಳಗಳನ್ನು ನಿಯಮಿತವಾಗಿ ಸ್ವಚ್ಛವಾಗಿರಿಸಬೇಕು.

- ಬೆಳಗ್ಗೆ 7ರಿಂದ 9 ಗಂಟೆವರೆಗೆ ಮಾತ್ರ ಆಹಾರ ಹಾಕಬೇಕು.

- ಆಹಾರ ನೀಡುವ ಜವಾಬ್ದಾರಿ ಎನ್‌ಜಿಒ ಅಥವಾ ದತ್ತಿ ಸಂಸ್ಥೆಗಳಿಗೆ ವಹಿಸಬೇಕು.

- ಅಪಾರ್ಟ್‌ಮೆಂಟ್‌, ಮನೆಗಳ ಚಾವಣಿ, ಬಾಲ್ಕನಿ, ಕಟ್ಟಡಗಳ ಸುತ್ತ ಹೆಚ್ಚಿನ ಪ್ರಮಾಣದಲ್ಲಿ ಪಾರಿವಾಳಗಳಿಗೆ ಆಹಾರ ಹಾಕಬಾರದು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರಾಜ್ಯದಲ್ಲಿ ಹಲವು ಜಿಲ್ಲೆಗಳಲ್ಲಿ ಮಳೆ ಅಬ್ಬರ: ದೂಧಗಂಗಾ ನದಿಯಲ್ಲಿ ನೀರಿನ ಹರಿವು ಹೆಚ್ಚಳ; ರಾಜ್ಯದ ಜಲಾಶಯಗಳ ನೀರಿನ ಮಟ್ಟ ಎಷ್ಟು?
ಮನೆ ಖರ್ಚಿಗೆ 5000 ಕೇಳಿದ ವೃದ್ಧ ಪತ್ನಿಗೆ ಹೊಡೆದ ಪತಿಗೆ ಹೈಕೋರ್ಟ್ ಶಾಕ್, ಇನ್ಮುಂದೆ ತಿಂಗಳಿಗೆ 10,000 ನೀಡುವಂತೆ ಆದೇಶ!