ಆಡಿಯೋ ವೈರಲ್: ಕಾನೂನು ಕುಣಿಕೆಯಲ್ಲಿ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ

By Ramesh BFirst Published Sep 11, 2022, 5:57 PM IST
Highlights

ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಹಾಗೂ ಜೆಡಿಎಸ್ ಶಾಸಕ ಸಾರಾ ಮಹೇಶ್ ನಡುವಿನ ಮುಸುಕಿನ ಗುದ್ದಾಟ ಮುಗಿಯುವಂತೆ ಕಾಣುತ್ತಿಲ್ಲ. ಇದೀಗ ಸಾರಾ ಮಹೇಶ್ ರೋಹಿಣಿ ಸಿಂಧೂರಿ ವಿರುದ್ಧ ಕನೂನು ಸಮರಕ್ಕೆ ಇಳಿದಿದ್ದಾರೆ.
 

ಮೈಸೂರು, (ಸೆಪ್ಟೆಂಬರ್.11): ಐಎಎಸ್ ಅಧಿಕಾರಿ, ಮುಜರಾಯಿ ಇಲಾಖೆ ಆಯುಕ್ತೆ ಆಗಿರುವ  ರೋಹಿಣಿ ಸಿಂಧೂರಿ ವಿರುದ್ಧ ಮಾನನಷ್ಟ ಮೊಕದ್ದಮೆ ಪ್ರಕರಣ ದಾಖಲಾಗಿದೆ.

ಜೆಡಿಎಸ್‌ ಶಾಸಕ ಸಾರಾ ಮಹೇಶ್ ಪರ ವಕೀಲ ಅರುಣ್ ಕುಮಾರ್  ಎನ್ನುವರು ಮೈಸೂರಿನ 2ನೇ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆ ಪ್ರಕರಣ ದಾಖಲಿಸಿದ್ದಾರೆ. ಈ ಹಿನ್ನೆಲೆಯಲ್ಲಿ ರೋಹಿಣಿ ಸಿಂಧೂರಿ ಅವರು ನ್ಯಾಯಾಲಯಕ್ಕೆ ಬಂದು ಹೇಳಿಕೆ ನೀಡಬೇಕಾದ ಇಕ್ಕಟ್ಟಿಗೆ ಸಿಲುಕಿದ್ದಾರೆ.

ಈ ಹಿಂದೆ ಮೈಸೂರು ಜಿಲ್ಲಾಧಿಕಾರಿಯಾಗಿದ್ದಾಗ ಶಾಸಕ ಸಾ.ರಾ.ಮಹೇಶ್ ವಿರುದ್ಧ ಭೂಕಬಳಿಕೆ ಆರೋಪ ಮಾಡಿದ್ದರು. ಸಾ‌.ರಾ.ಮಹೇಶ್ ಜೈಲಿನಲ್ಲಿ ಇರಬೇಕಿತ್ತು, ಕಂಬಿ ಎಣಿಸಬೇಕಿತ್ತು ಎಂದೆಲ್ಲ ಮಾತನಾಡಿದ್ದ ಆಡಿಯೋ ವೈರಲ್ ಆಗಿತ್ತು. ಅದರ ಆಧಾರದ ಮೇಲೆ  ಹಿರಿಯ ವಕೀಲ ಅರುಣ್ ಕುಮಾರ್ ನೋಟಿಸ್ ಜಾರಿ ಮಾಡಿದ್ದರು. ಇದೀಗ ಈ ಪ್ರಕರಣ ನ್ಯಾಯಾಲಯದ ಮೆಟ್ಟಿಲು ಹತ್ತಿದ್ದು, ಒಂದು ಕೋಟಿ ರೂ. ವಸೂಲಿಗೆ ಒತ್ತಾಯಿಸಿ ದಾವೆ ಹೂಡಿದ್ದಾರೆ.

ರೋಹಿಣಿ ಸಿಂಧೂರಿ ವಿರುದ್ಧ 1200 ಪುಟಗಳ ಎಲ್ಲಾ ದಾಖಲೆ ಸಲ್ಲಿಕೆ

ವಕೀಲ ಅರುಣ್ ಕುಮಾರ್ ಹೇಳಿಕೆ
ಇನ್ನು ಈ ಬಗ್ಗೆ ಸಾರಾ ಮಹೇಶ್ ಪರ ವಕೀಲ ಅರುಣ್ ಕುಮಾರ್ ಮಾಧ್ಯಮಗಳಿಗೆ ಪ್ರಕ್ರಿಯಿಸಿದ್ದು, ಐಎಎಸ್ ಅಧಿಕಾರಿಗಳಿಗೆ ಬುದ್ದಿ ಜಾಸ್ತಿ ಇರುತ್ತೆ. ರೋಹಿಣಿ ಸಿಂಧೂರಿ ಅವರು ಆಡಿಯೋದಲ್ಲಿ ಸಾ.ರಾ.ಮಹೇಶ್ ಜೈಲಲ್ಲಿ ಇರುತ್ತಾರೆ ಎಂದು ಆರೋಪ ಮಾಡಿದ್ದಾರೆ.  ಈ ಸಂಬಂಧ ಸಾ.ರಾ.ಮಹೇಶ್ ಪರವಾಗಿ ಲೀಗಲ್ ನೋಟಿಸ್ ಜಾರಿ ಮಾಡಿದ್ದೆವು. 01-07-21ರಂದು ನೋಟಿಸ್ ನೀಡಲಾಗಿತ್ತು.  ಸಾಮಾಜಿಕ ಜಾಲತಾಣದ ಆಡಿಯೋದಲ್ಲಿ ನಿಮ್ಮ ದ್ವನಿಯೇ, ಉದ್ದೇಶ ಪೂರ್ವಕವಾಗಿ ಮಾತನಾಡಿದ್ದೀರ ಎಂದು ಎರಡು ಪ್ರಶ್ನೆ ಕೇಳಿದ್ದೆವು.  ಖಾಸಗಿ ಸಂಭಾಷಣೆ ಅಂತ ಒಪ್ಪಿಕೊಂಡಿದ್ದಾರೆ. ಅದರ ಆಧಾರದ ಮೇಲೆ 2ನೇ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆ ಹಾಕಿದ್ದೇವೆ ಎಂದು ಮಾಹಿತಿ ನೀಡಿದರು.

ಒಂದು ಕೋಟಿ ರೂ. ನಷ್ಟ ಭರಿಸುವಂತೆ ಮೊಕದ್ದಮೆ ದಾವೆ ಹೂಡಿದ್ದೇವೆ. 20-10-2022ರಂದು ರೋಹಿಣಿ ಸಿಂಧೂರಿ ನ್ಯಾಯಾಲಯಕ್ಕೆ ಉತ್ತರ ಕೊಡಬೇಕಾಗುತ್ತೆ. ಈಗಾಗಲೇ ಖಾಸಗಿ ಸಂಭಾಷಣೆ ಅಂತ ಒಪ್ಪಿಕೊಂಡಿರುವುದರಿಂದ ಬೇರೆ ಹೇಳಿಕೆ ನೀಡಲು ಅವಕಾಶ ಇಲ್ಲ.  ಆ ಸಂಭಾಷಣೆಯ ಹಿನ್ನೆಲೆ, ಉದ್ದೇಶವನ್ನೂ ಕೇಸ್‌ಗೆ ಸೇರಿಸಿಕೊಳ್ಳಲು ಕಾನೂನಿನಲ್ಲಿ ಅವಕಾಶ ಇದೆ ಎಂದರು.

ರೋಹಿಣಿ ಸಿಂಧೂರಿ ವಿರುದ್ಧ ತನಿಖೆಗೆ ಆದೇಶಿಸಿದ ಕರ್ನಾಟಕ ಸರಕಾರ

ಶಾಸಕ ಸಾ.ರಾ.ಮಹೇಶ್ ಹೇಳುವುದೇನು?
ಇದರ ಬಗ್ಗೆ ಮೈಸೂರಿನಲ್ಲಿ ಶಾಸಕ ಸಾ.ರಾ.ಮಹೇಶ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದು, ಮೈಸೂರು ಜಿಲ್ಲಾಧಿಕಾರಿಯಾಗಿದ್ದಾಗ ನನ್ನ ವಿರುದ್ಧ ಭೂಕಬಳಿಕೆ ಆರೋಪ ಮಾಡಿದ್ದರು. ಪ್ರಾದೇಶಿಕ ಆಯುಕ್ತರು ಆರೋಪ ಸುಳ್ಳು ಎಂದು ಹೇಳಿದ್ದಾರೆ. ಅವರ ವಿರುದ್ಧ ಕಾನೂನು ಹೋರಾಟ ಮಾಡುವುದಾಗಿ ಹೇಳಿದ್ದೆ. ಆ ನಿಟ್ಟಿನಲ್ಲಿ ಸಿವಿಲ್ ಮತ್ತು ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಹೂಡಿದ್ದೇನೆ. ಮೈಸೂರು ನ್ಯಾಯಾಲಯದಲ್ಲಿ ದಾವೆ ಹೂಡಿದ್ದೇನೆ ಎಂದು ಸ್ಪಷ್ಟಪಡಿಸಿದರು.
 
ಹಿಂದಿನ ಜಿಲ್ಲಾಧಿಕಾರಿ ಐಶಾರಾಮಿ ಜೀವನ ನಡೆಸಿದ್ದಾರೆ. ಸರ್ಕಾರಿ ಹಣ ರ್ದುವಿನಿಯೋಗ, ಕೋವಿಡ್ ಸಂದರ್ಭದ ಕಾರ್ಯವೈಖರಿ ಪ್ರಾಮಾಣಿಕವಾಗಿ ಕೆಲಸ ಮಾಡದೆ ಬೇಜವಾಬ್ದಾರಿ ವರ್ತನೆ ಮಾಡಿದ್ದು, ಇದರಿಂದ ಸಾವಿರಾರು ಜನರಿಗೆ ಸಮಸ್ಯೆಯಾಗಿದೆ. ಇದನ್ನು ಮುಚ್ಚಿ ಹಾಕಲು ಟೆಸ್ಟಿಂಗ್ ಸಂಖ್ಯೆ ಸಾವಿನ ಸಂಖ್ಯೆ ಕಡಿಮೆ ತೋರಿಸಿದ್ದರು ಎಂದರು.

ಈ ಬಗ್ಗೆ ಚೀಪ್ ಸೆಕ್ರೆಟರಿ ವರದಿ ನಂತರ ವರ್ಗಾವಣೆ ಮಾಡಿದ್ದು, ವರ್ಗಾವಣೆ ಬೇಡ ಅಮಾನತು ಮಾಡುವಂತೆ ಒತ್ತಾಯಿಸಿದ್ದೆ. ಇದೇ ಕಾರಣಕ್ಕೆ ನನ್ನ ವಿರುದ್ದ ಭೂ ಹಗರಣದ ಆರೋಪ ಮಾಡಲಾಗಿದೆ. ಭೂ ಅಕ್ರಮದಿಂದ ನನ್ನ ವರ್ಗಾವಣೆ ಅಂತಾ ಬಿಂಬಿಸಲು ಹೊರಟಿದ್ದರು. ಈಗಾಗಲೇ ಆರ್ ಸಿ ಈ ಬಗ್ಗೆ ವರದಿ ನೀಡದ್ದಾರೆ. ಸರ್ಕಾರ ಉನ್ನತಮಟ್ಟದ ತನಿಖೆ ನಡೆಸುತ್ತಿದೆ. ಅದರ ವರದಿ ಕೂಡ ಬರಲಿದೆ ಎಂದು ತಿಳಿಸಿದರು.

click me!