ರಾಮುಲು ಪಂಚವಟಿಯಲ್ಲಿ ಜನಾರ್ದನ ರೆಡ್ಡಿ ವಾಸ್ತವ್ಯ, ದೇಗುಲಗಳಿಗೆ ಭೇಟಿ

By Govindaraj SFirst Published Dec 7, 2022, 10:25 AM IST
Highlights

ಮುಂಬರುವ ಚುನಾವಣೆ ವೇಳೆ ಹೊಸ ಪಕ್ಷ ಘೋಷಿಸ್ತಾರೆ, ಗಂಗಾವತಿಯಿಂದಲೇ ಸ್ಪರ್ಧಿಸ್ತಾರೆ ಎಂಬ ಊಹಾಪೋಹಗಳ ನಡುವೆಯೇ ಮಾಜಿ ಸಚಿವ ಜಿ.ಜನಾರ್ದನರೆಡ್ಡಿ ಅವರು ಮಂಗಳವಾರ ನಗರದಲ್ಲಿ ಮಿಂಚಿನ ಸಂಚಾರ ನಡೆಸಿದರು. 

ಗಂಗಾವತಿ (ಡಿ.07): ಮುಂಬರುವ ಚುನಾವಣೆ ವೇಳೆ ಹೊಸ ಪಕ್ಷ ಘೋಷಿಸ್ತಾರೆ, ಗಂಗಾವತಿಯಿಂದಲೇ ಸ್ಪರ್ಧಿಸ್ತಾರೆ ಎಂಬ ಊಹಾಪೋಹಗಳ ನಡುವೆಯೇ ಮಾಜಿ ಸಚಿವ ಜಿ.ಜನಾರ್ದನರೆಡ್ಡಿ ಅವರು ಮಂಗಳವಾರ ನಗರದಲ್ಲಿ ಮಿಂಚಿನ ಸಂಚಾರ ನಡೆಸಿದರು. ಬೆಳಗ್ಗೆ ದೇಗುಲ, ಮಠಗಳಿಗೆ ತೆರಳಿ ದರ್ಶನ ಪಡೆದ ಅವರು, ಕೆಲ ಅಭಿಮಾನಿಗಳ ನಿವಾಸಕ್ಕೂ ತೆರಳಿ ಆತಿಥ್ಯ ಸ್ವೀಕರಿಸಿದರು. ಸೋಮವಾರ ರಾತ್ರಿ ಪಂಪಾಸರೋವರದ ಅತಿಥಿ ಗೃಹ ಪಂಚವಟಿಯಲ್ಲಿ ತಂಗಿದ್ದ ಜನಾರ್ದನ ರೆಡ್ಡಿ ಮಂಗಳವಾರ ಬೆಳಗ್ಗೆ ಪಂಪಾನಗರದ ಪಂಪಾಪತಿ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. ಅಲ್ಲದೆ ಕಲ್ಮಠಕ್ಕೆ ತೆರಳಿ ಕೊಟ್ಟೂರು ಸ್ವಾಮಿಗಳ ಆಶೀರ್ವಾದ ಪಡೆದರು.

ನಂತರ ಬಿಜೆಪಿ ನಗರಸಭಾ ಸದಸ್ಯರಾದ ಸುಚಿತ್ರ ಶಿರಿಗೇರಿ, ರಮೇಶ ಚೌಡ್ಕಿ, ನಗರ ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ಹೊಸಮಲಿ ಮಲ್ಲೇಶಪ್ಪ, ನಗರಸಭೆ ಮಾಜಿ ಉಪಾಧ್ಯಕ್ಷ ಹಾಗೂ ವೀರಶೈವ ಸಮಾಜದ ಮುಖಂಡ ಹೊಸಳ್ಳಿ ಶಂಕರಗೌಡ ಅವರ ನಿವಾಸಕ್ಕೆ ತೆರಳಿ ಕೆಲಕಾಲ ಕುಶಲೋಪರಿ ವಿಚಾರಿಸಿದರು. ಬಳಿಕ ನಗರಸಭಾ ಬಿಜೆಪಿ ಸದಸ್ಯ ರಮೇಶ ಚೌಡ್ಕಿ ನಿವಾಸಕ್ಕೆ ತೆರಳಿದರು. ತದನಂತರ ಖಾಸಗಿ ಶಾಲೆಯಲ್ಲಿ ಜರುಗಿದ ಕಾರ್ಯಕ್ರಮವೊಂದರಲ್ಲಿ ಭಾವಹಿಸಿದ್ದರು.

ಜನಾರ್ದನ ರೆಡ್ಡಿ ರಾಜಕೀಯ ರಿ-ಎಂಟ್ರಿ: 18ರ ನಂತರ ಕ್ಷೇತ್ರ ಪ್ರಕಟ?

ಶ್ರೀರಾಮುಲು ನಿರ್ಮಿಸಿದ್ದ ವಸತಿಗೃಹ: ಜನಾರ್ದನ ರೆಡ್ಡಿ ಸೋಮವಾರ ವಾಸ್ತವ್ಯ ಹೂಡಿರುವ ಪಂಚವಟಿ ವಸತಿಗೃಹವನ್ನು ಅವರ ಪರಮಾಪ್ತ ಬಿ. ಶ್ರೀರಾಮುಲು ನಿರ್ಮಿಸಿದ್ದು. ಕಳೆದೊಂದು ವರ್ಷದಿಂದ ಸಾರಿಗೆ ಶ್ರೀರಾಮುಲು ಅವರು ಪಂಪಾಸರೋವರ ಸೇರಿ ವಿಜಯಲಕ್ಷ್ಮೀ ದೇವಸ್ಥಾನ ಜೀರ್ಣೋದ್ಧಾರಕ್ಕೆ ಮುಂದಾಗಿದ್ದಾರೆ. ಅಲ್ಲದೆ ತಾವು ಬಂದರೆ ವಾಸ್ತವ್ಯ ಮಾಡಲು ಪಂಚವಟಿ ಎಂಬ ವಸತಿಗೃಹ ನಿರ್ಮಿಸಿದ್ದಾರೆ. ಇದೀಗ ರಾಜಕೀಯ ಕಾರಣಗಳಿಗಾಗಿ ಶ್ರೀರಾಮುಲು ಮತ್ತು ಜನಾರ್ದನ ರೆಡ್ಡಿ ನಾನೊಂದು ತೀರ, ನೀನೊಂದು ತೀರ ಎಂಬಂತೆ ಮುನಿಸಿಕೊಂಡಿದ್ದರೂ ಶ್ರೀರಾಮುಲು ನಿರ್ಮಿಸಿದ ಪಂಚವಟಿಯಲ್ಲೇ ವಾಸ್ತವ್ಯ ಮಾಡಿದ್ದು ಹಲವರು ಹುಬ್ಬೇರಿಸುವಂತೆ ಮಾಡಿದೆ.

ಗಂಗಾವತಿಯಲ್ಲಿ ಜನಾರ್ದನ ರೆಡ್ಡಿ ವಾಸ್ತವ್ಯ, ಶೀಘ್ರ ಗೃಹಪ್ರವೇಶ

ಇತ್ತೀಚಿಗೆ ಶ್ರೀರಾಮುಲು-ಜನಾರ್ದನ ರೆಡ್ಡಿ ಒಟ್ಟಿಗೆ ಕಾಣಿಸಿಕೊಳ್ಳುತ್ತಿಲ್ಲ. ಬೆಂಗಳೂರಿನಲ್ಲಿ ರೆಡ್ಡಿ ಮೊಮ್ಮಗಳ ನಾಮಕರಣ ಕಾರ್ಯಕ್ರಮದಲ್ಲೂ ಶ್ರೀರಾಮುಲು ಪಾಲ್ಗೊಂಡಿರಲಿಲ್ಲ. ಸೋಮವಾರ ರೆಡ್ಡಿ ಅಂಜನಾದ್ರಿಯಲ್ಲಿ ಹನುಮಾನ್‌ಮಾಲೆ ಧರಿಸಿ ಬೆಟ್ಟಏರಿ ದರ್ಶನ ಮಾಡಿದ್ದ ಸಂದರ್ಭದಲ್ಲೂ ಬಿಜೆಪಿಯ ಹಲವು ಮುಖಂಡರು ಜೊತೆಗಿದ್ದರೂ ರಾಮುಲು ಇರಲಿಲ್ಲ. ಗಂಗಾವತಿಯಲ್ಲಿ ರೆಡ್ಡಿ ಹೊಸ ಮನೆ ಖರೀದಿಸಿದ್ದು ಆ ಸಂದರ್ಭದಲ್ಲೂ ಅವರ ಜೊತೆ ಶ್ರೀರಾಮುಲು ಕಾಣಿಸಿಕೊಂಡಿಲ್ಲ.

click me!