Bengaluru Traffic: ನಗರದಲ್ಲಿ ಇನ್ಮುಂದೆ ಟ್ರಾಫಿಕ್ ಹೆಚ್ಚಿದ್ದರೆ ಬೇಗ ಗ್ರೀನ್ ಸಿಗ್ನಲ್!

By Kannadaprabha NewsFirst Published May 23, 2023, 4:39 AM IST
Highlights

ನಗರದ ಸಂಚಾರ ದಟ್ಟಣೆ ಸಮಸ್ಯೆ ನಿವಾರಣೆಗೆ ವಿಶೇಷ ಪೊಲೀಸ್‌ ಆಯುಕ್ತರನ್ನು ನೇಮಿಸಿ, ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ. ಅದರ ಜತೆಗೆ ಇದೀಗ ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ (ಕೆಆರ್‌ಡಿಸಿಎಲ್‌) ಸಂಚಾರ ಸಿಗ್ನಲ್‌ಗಳ ವ್ಯವಸ್ಥೆಯನ್ನೇ ಬದಲಿಸಲು ಮುಂದಾಗಿದೆ.

ಬೆಂಗಳೂರು (ಮೇ.23)

ನಗರದ ಸಂಚಾರ ದಟ್ಟಣೆ ಸಮಸ್ಯೆ ನಿವಾರಣೆಗೆ ವಿಶೇಷ ಪೊಲೀಸ್‌ ಆಯುಕ್ತರನ್ನು ನೇಮಿಸಿ, ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ. ಅದರ ಜತೆಗೆ ಇದೀಗ ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ (ಕೆಆರ್‌ಡಿಸಿಎಲ್‌) ಸಂಚಾರ ಸಿಗ್ನಲ್‌ಗಳ ವ್ಯವಸ್ಥೆಯನ್ನೇ ಬದಲಿಸಲು ಮುಂದಾಗಿದೆ.

ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ವಾಹನಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಂಚಾರ ದಟ್ಟಣೆ ಸಮಸ್ಯೆಯೂ ಉಲ್ಭಣಿಸುವಂತಾಗಿದೆ. ಅದರ ಜತೆಗೆ ಬಿಬಿಎಂಪಿ ಸೇರಿ ಇನ್ನಿತರ ಇಲಾಖೆಗಳು ನಡೆಸುವ ಕಾಮಗಾರಿಗಳಿಂದಾಗಿ ರಸ್ತೆಗಳು ಹಾಳಾಗಿ ವಾಹನಗಳು ಸಮರ್ಪಕವಾಗಿ ಸಂಚರಿಸದಂತಾಗಿದೆ. ಈ ಎಲ್ಲ ಕಾರಣಗಳಿಂದ ಬೆಂಗಳೂರು ಟ್ರಾಫಿಕ್‌ ನಗರಿಯಾಗಿ ಮಾರ್ಪಡುತ್ತಿದೆ. ಅದನ್ನು ತಡೆಯುವ ಸಲುವಾಗಿಯೇ ಕಳೆದ ಸರ್ಕಾರ ಬೆಂಗಳೂರು ಸಂಚಾರ ಪೊಲೀಸ್‌ ವಿಭಾಗಕ್ಕೆ ಎಂ.ಎ.ಸಲೀಂ ಅವರನ್ನು ವಿಶೇಷ ಪೊಲೀಸ್‌ ಆಯುಕ್ತರನ್ನು ನೇಮಿಸಿತ್ತು.

Bengaluru Traffic: ಜೀರೋ ಟ್ರಾಫಿಕ್‌ ಹಿಂಪಡೆದ ಸಿಎಂ ಸಿದ್ದರಾಮಯ್ಯ

ಸಲೀಂ ಅವರು ನಗರದಲ್ಲಿನ ಸಂಚಾರ ದಟ್ಟಣೆ ಸಮಸ್ಯೆ ನಿವಾರಣೆಗೆ ಹಲವು ಕ್ರಮಗಳನ್ನು ಕೈಗೊಂಡಿದ್ದಾರಾದರೂ, ಈವರೆಗೆ ಅದನ್ನು ಪೂರ್ಣ ಪ್ರಮಾಣದಲ್ಲಿ ನಿಯಂತ್ರಿಸಲು ಸಾಧ್ಯವಾಗಿಲ್ಲ. ಇದೀಗ ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ (ಕೆಆರ್‌ಡಿಸಿಎಲ್‌) ನಗರದಲ್ಲಿನ ಸಂಚಾರ ಸಿಗ್ನಲ್‌ಗಳನ್ನು ಮೇಲ್ದರ್ಜೆಗೇರಿಸಲು ಕ್ರಮ ಕೈಗೊಳ್ಳುತ್ತಿದೆ. ಆಮೂಲಕ ಸಿಗ್ನಲ್‌ಗಳಲ್ಲಿ ವಾಹನಗಳು ಹೆಚ್ಚಿನ ಅವಧಿ ನಿಲ್ಲುವುದನ್ನು ತಪ್ಪಿಸಿ, ಸಂಚಾರ ದಟ್ಟಣೆ ನಿಯಂತ್ರಿಸುವ ಯೋಜನೆ ಇದಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕೆಆರ್‌ಡಿಸಿಎಲ್‌ ಸಿದ್ಧಪಡಿಸಿರುವ ಯೋಜನೆಯಂತೆ ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಹಾಲಿ ಇರುವ 136 ಸಂಚಾರ ಸಿಗ್ನಲ್‌ಗಳು ಹಾಗೂ 29 ಹೊಸ ಸಿಗ್ನಲ್‌ಗಳನ್ನು ಅಡಾಪ್ಟಿವ್‌ ಟ್ರಾಫಿಕ್‌ ಕಂಟ್ರೋಲ್‌ ಸಿಗ್ನಲ್‌ ವ್ಯವಸ್ಥೆ(Adaptive traffic control signal system)ಯನ್ನು ಜಾರಿಗೊಳಿಸಲಾಗುತ್ತಿದೆ. ಅದಕ್ಕಾಗಿ .53.64 ಕೋಟಿ ವ್ಯಯಿಸಲಾಗುತ್ತಿದೆ. ನೂತನ ವ್ಯವಸ್ಥೆ ಮೂಲಕ ಸಂಚಾರ ಸಿಗ್ನಲ್‌ಗಳ ಸಮಯವನ್ನು ಸಂಚಾರ ಪೊಲೀಸರ ಕಂಟ್ರೋಲ್‌ ರೂಂಗಳ ಮೂಲಕ ನಿಯಂತ್ರಿಸುವಂತೆ ಮಾಡಲಾಗುತ್ತಿದೆ. ಅಲ್ಲದೆ, ಯಾವ ಸಿಗ್ನಲ್‌ನ, ಯಾವ ರಸ್ತೆಯಲ್ಲಿ ವಾಹನಗಳ ದಟ್ಟಣೆ ಹೆಚ್ಚಿದೆ ಎಂಬುದನ್ನು ಗಮನಿಸಿ ಆ ಭಾಗದ ಸಿಗ್ನಲನ್ನು ಹಸಿರು ಬಣ್ಣಕ್ಕೆ ತಿರುಗಿಸಿ ವಾಹನಗಳು ಸರಾಗವಾಗಿ ಸಂಚರಿಸುವಂತೆ ಮಾಡಲಾಗುತ್ತದೆ. ಅದರ ಜತೆಗೆ ಸಿಗ್ನಲ್‌ಗಳಲ್ಲಿನ ವಾಹನ ದಟ್ಟಣೆ ಕುರಿತು ಅಧ್ಯಯನ ನಡೆಸಿ, ಸಿಗ್ನಲ್‌ಗಳ ಸಮಯದಲ್ಲಿ ಬದಲಾವಣೆ ತರಲಾಗುತ್ತದೆ.

 

ಬೆಂಗಳೂರು ಟ್ರಾಫಿಕ್‌ ಕಥೆ-ವ್ಯಥೆ; ಆಟೋಗಾಗಿ 71 ನಿಮಿಷ ಕಾಯುವ ಪೋಸ್ಟ್‌ ವೈರಲ್‌

ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಸಂಬಂಧಿಸಿದಂತೆ ವಿವಿಧ ಇಲಾಖೆಗಳ ನಡುವೆ ಸಮನ್ವಯತೆ ಸಾಧಿಸುವುದು ಅವಶ್ಯಕವಾಗಿದೆ. ಅದರಂತೆ ರಸ್ತೆ ಸುರಕ್ಷತಾ ಪ್ರಾಧಿಕಾರ ಮತ್ತು ಸಂಚಾರ ಪೊಲೀಸರ ನಡುವೆ ಸಮನ್ವಯ ಸಾಧಿಸಲು ಕೆಆರ್‌ಡಿಸಿಎಲ್‌ ಅಥವಾ ಸಂಚಾರ ಪೊಲೀಸ್‌ ಇಲಾಖೆಯಿಂದ ನೋಡಲ್‌ ಅಧಿಕಾರಿಯನ್ನು ನೇಮಿಸಲಾಗುತ್ತದೆ.

click me!