ಅಯೋಧ್ಯೆ ರಾಮಲಲ್ಲಾ ಕೆತ್ತನೆಗೆ ಕರಾವಳಿ ಶಿಲ್ಪಿ ಗಣೇಶ್!

By Kannadaprabha NewsFirst Published Dec 1, 2023, 11:36 AM IST
Highlights

ಮರ್ಯಾದಾ ಪುರುಷೋತ್ತಮ ಶ್ರೀ ರಾಮಚಂದ್ರನ ಭವ್ಯ ದೇಗುಲ ಅಯೋಧ್ಯೆಯಲ್ಲಿ ಉದ್ಘಾಟನೆಗೆ ದಿನ ನಿಗದಿಯಾಗಿದೆ. ಈ ಸಂಭ್ರಮದ ಕ್ಷಣಕ್ಕಾಗಿ ದೇಶಕ್ಕೆ ದೇಶವೇ ಕಾತರ ದಿಂದ ಕಾದಿದೆ. ಇತ್ತ ಅಯೋಧ್ಯೆಯಲ್ಲಿ ಪ್ರತಿಷ್ಠಾಪನೆಗೊಂಡು ಪೂಜಿಸುವ ಬಾಲ ರಾಮಲಲ್ಲಾನ ವಿಗ್ರಹವನ್ನು ಇಬ್ಬರು ಕನ್ನಡಿಗರು ಸೇರಿ ಮೂವರು ಶಿಲ್ಪಿಗಳು ರಚಿಸುತ್ತಿದ್ದು, ಮೂವರು ಶಿಲ್ಪಿಗಳಲ್ಲಿ ಇಬ್ಬರು ಕನ್ನಡಿಗರೇ ಆಗಿರುವುದು ನಾಡಿಗೆ ನಾಡೇ ಹೆಮ್ಮೆಪಡುವ ಸಂಗತಿ.

- ರಾಘವೇಂದ್ರ ಅಗ್ನಿಹೋತ್ರಿ

ಮಂಗಳೂರು (ಡಿ.1) :  ಮರ್ಯಾದಾ ಪುರುಷೋತ್ತಮ ಶ್ರೀ ರಾಮಚಂದ್ರನ ಭವ್ಯ ದೇಗುಲ ಅಯೋಧ್ಯೆಯಲ್ಲಿ ಉದ್ಘಾಟನೆಗೆ ದಿನ ನಿಗದಿಯಾಗಿದೆ. ಈ ಸಂಭ್ರಮದ ಕ್ಷಣಕ್ಕಾಗಿ ದೇಶಕ್ಕೆ ದೇಶವೇ ಕಾತರ ದಿಂದ ಕಾದಿದೆ. ಇತ್ತ ಅಯೋಧ್ಯೆಯಲ್ಲಿ ಪ್ರತಿಷ್ಠಾಪನೆಗೊಂಡು ಪೂಜಿಸುವ ಬಾಲ ರಾಮಲಲ್ಲಾನ ವಿಗ್ರಹವನ್ನು ಇಬ್ಬರು ಕನ್ನಡಿಗರು ಸೇರಿ ಮೂವರು ಶಿಲ್ಪಿಗಳು ರಚಿಸುತ್ತಿದ್ದು, ಮೂವರು ಶಿಲ್ಪಿಗಳಲ್ಲಿ ಇಬ್ಬರು ಕನ್ನಡಿಗರೇ ಆಗಿರುವುದು ನಾಡಿಗೆ ನಾಡೇ ಹೆಮ್ಮೆಪಡುವ ಸಂಗತಿ. ಇನ್ನು, ವಿಗ್ರಹವನ್ನು ಕಣ್ತುಂಬಿಕೊಳ್ಳಲು ಭಕ್ತರು ಕಾತರದಿಂದ ಕಾದಿದ್ದಾರೆ.

ಅಯೋಧ್ಯೆಯ ರಾಮಲಲ್ಲಾ ವಿಗ್ರಹ ಕೆತ್ತನೆಗೆ ದೇಶದ ವಿವಿಧೆಡೆಗಳ ಪ್ರಸಿದ್ಧ 12 ಮಂದಿ ಶಿಲ್ಪಶಾಸ್ತ್ರ ಪರಿಣತರನ್ನು ಕರೆಸಲಾಗಿತ್ತು. ಅವರಲ್ಲಿ ಮೂವರು ಶಿಲ್ಪಿಗಳನ್ನು ಆಯ್ಕೆ ಮಾಡಲಾಗಿದೆ. ಶಿಲ್ಪಿಗಳು ರಾಮಲಲ್ಲಾನ ಮೂರ್ತಿ ಕೆತ್ತನೆಯ ಕೈಂಕರ್ಯದಲ್ಲಿ ಕಳೆದ ಆರು ತಿಂಗಳುಗಳಿಂದ ತೊಡಗಿದ್ದು, ಹಗಲಿರುಳು ಶ್ರಮಿಸುತ್ತಿದ್ದಾರೆ. ಈ ಮೂವರು ಶಿಲ್ಪಿ ಗಳಲ್ಲಿ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಇಡಗುಂಜಿ ಮೂಲದ ಪ್ರಸ್ತುತ ಬೆಂಗಳೂರು ಬನಶಂಕರಿಯ ನಿವಾಸಿ ಗಣೇಶ್‌ ಭಟ್ ಒಬ್ಬರಾದರೆ, ಮೈಸೂರು ಮೂಲದ ಅರುಣ್‌ ರಾಜ್‌ ಮತ್ತೊಬ್ಬ ಕನ್ನಡಿಗ.

ಅಯೋಧ್ಯೆ ರಾಮಮಂದಿರಕ್ಕೆ ಬರಲಿದೆ ಥಾಯ್ಲೆಂಡ್‌ ಮಣ್ಣು, ಕಾರಣವೇನು?

ಇಡಗುಂಜಿಯಿಂದ ಅಯೋಧ್ಯೆವರೆಗೆ:

ಗಣೇಶ್‌ ದೇಶ ವಿದೇಶಗಳಲ್ಲಿ ಹಲವು ಪ್ರಾತ್ಯಕ್ಷಿಕೆ, ಶಿಬಿರಗಳನ್ನು ಸಂಯೋಜಿಸಿ ಪ್ರಸಿದ್ಧಿ ಪಡೆದಿದ್ದು, ಶಿಲ್ಪಕಲೆಗೆ ಅವರ ಕೊಡುಗೆಯನ್ನು ಗಮನಿಸಿ ಅಯೋಧ್ಯೆಯಲ್ಲಿ ರಾಮಲಲ್ಲಾ ವಿಗ್ರಹ ರಚನೆಗೆ ಆಹ್ವಾನ ಬಂದಿತ್ತು. ಇಡಗುಂಜಿಯ ಮುಖ್ಯ ಅರ್ಚಕರಾಗಿದ್ದ ದಿ.ಲಕ್ಷ್ಮೀನಾರಾಯಣ ಭಟ್ಟರ ದ್ವಿತೀಯ ಪುತ್ರ ಗಣೇಶ್‌ ಭಟ್‌ ಎಸ್ಸೆಸ್ಸೆಲ್ಸಿ ಮುಗಿಸಿ ಸಾಗರದಲ್ಲಿ ಶ್ರೀಗಂಧದ ಕೆತ್ತನೆ ಕಲಿತು, ಬಳಿಕ ಬೆಂಗಳೂರಿನಲ್ಲಿ ಖ್ಯಾತ ಶಿಲ್ಪಿ ವಾದಿರಾಜ ಅವರಲ್ಲಿ ಶಿಲ್ಪಶಿಕ್ಷಣ ಪಡೆದಿದ್ದಾರೆ. ಬಿಡದಿಯ ಕೆನರಾ ಬ್ಯಾಂಕ್‌ ಪ್ರಾಯೋಜಿತ ಕರಕುಶಲ ತರಬೇತಿ ಕೇಂದ್ರದಲ್ಲಿ ಶಿಲ್ಪಕಲಾ ಶಿಕ್ಷಕರಾಗಿ 600ಕ್ಕೂ ಹೆಚ್ಚು ಯುವ ಕಲಾವಿದರನ್ನು ತಯಾರು ಮಾಡಿದ ಹೆಗ್ಗಳಿಕೆ ಇವರದ್ದು. ದೇಶಾದ್ಯಂತ 46 ಶಿಲ್ಪಕಲಾ ಶಿಬಿರದಲ್ಲಿ ಪಾಲ್ಗೊಂಡಿದ್ದಲ್ಲದೇ ಇಂಗ್ಲೆಂಡ್‌ ಹಾಗೂ ಐರ್ಲೆಂಡ್‌ಗಳಲ್ಲಿ ಶಿಲ್ಪಕಲಾ ತರಗತಿಗಳನ್ನು ನಡೆಸುತ್ತಿದ್ದು, 42 ವಿದೇಶಿಯರಿಗೆ ಮಾರ್ಗದರ್ಶಕರಾಗಿದ್ದಾರೆ.

ಪ್ರಮುಖ ಶಿಲ್ಪಗಳು: ಇವರು ರಚಿಸಿದ ಹಲವು ಶಿಲ್ಪಕಲಾಕೃತಿಗಳು ನಾಡಿನಾದ್ಯಂತ ಪ್ರತಿಷ್ಠಾಪಿಸಿ ಪೂಜಿಸಲ್ಪಡುತ್ತಿವೆ. ಪ್ರಪಂಚದ ಮೊಟ್ಟ ಮೊದಲ ಯಕ್ಷನಾಟ್ಯ ವಿನಾಯಕ ಶಿಲ್ಪ ಉತ್ತರ ಕನ್ನಡದ ಸಿದ್ದಾಪುರದಲ್ಲಿ ಪೂಜಿಸಲ್ಪಡುತ್ತಿದೆ. ಇವರೇ ವಿನ್ಯಾಸಗೊಳಿಸಿದ 32 ಮುದ್ಗಲ ಪುರಾಣದ ಗಣಪತಿಶಿಲ್ಪಗಳು ಉಡುಪಿ ಜಿಲ್ಲೆಯ ಹಟ್ಟಿಯಂಗಡಿ ದೇವಾಲಯದಲ್ಲಿ ವೆ. 9 ಅಡಿ ಉದ್ದದ ಏಕಶಿಲೆಯ ಕಾಮಧೇನು ವಿಗ್ರಹ ಇಂಗ್ಲೆಂಡಿನ ಸಮ್ಮರ್‌ ಸೆಟ್‌ನಲ್ಲಿ, 7 ಅಡಿ ಎತ್ತರದ ಪಂಚಮುಖಿ ಆಂಜನೇಯ ವಿಗ್ರಹ ಅಮೆರಿಕದಲ್ಲಿ ಸ್ಥಾಪನೆಗೊಂಡಿದೆ. 14 ಅಡಿ ಎತ್ತರದ ಗರುಡನ ವಿಗ್ರಹ ಇಂಗ್ಲೆಂಡಿನ ಬರ್ಮಿಂಗ್‌ಹ್ಯಾಮ್‌ನಲ್ಲಿ ಸ್ಥಾಪಿತವಾಗಿದೆ.

ಅರಸಿ ಬಂದ ಪ್ರಶಸ್ತಿಗಳು: ಶಿಲ್ಪಕಲೆಯ ಸಾಧನೆಗೆ ಗಣೇಶ್‌ ಅವರು ಹಲವಾರು ಪ್ರಶಸ್ತಿಗೆ ಭಾಜನರಾಗಿದ್ದಾರೆ. 1993ರಲ್ಲಿ ಕರ್ನಾಟಕ ರಾಜ್ಯ ಪ್ರಶಸ್ತಿ, 1995ರಲ್ಲಿ ದ್ವಿತೀಯ ಶಿಲ್ಪಶ್ರೀ ಪ್ರಶಸ್ತಿ, ಮೈಸೂರು ದಸರಾ ಪ್ರಶಸ್ತಿ, ಆರ್ಯಭಟ ಅಂತಾರಾಷ್ಟ್ರೀಯ ಪ್ರಶಸ್ತಿ, ಶಿಲ್ಪಕಲಾ ಅಕಾಡೆಮಿ ಪ್ರಶಸ್ತಿ ಸೇರಿ ಹಲವು ಪ್ರಶಸ್ತಿಗಳು ಇವರ ಮುಡಿಗೇರಿವೆ.

ಗಣಪನ ಸ್ಫೂರ್ತಿ: ಚಿಕ್ಕವನಿದ್ದಾಗ ತಂದೆಯವರ ಜೊತೆಯಲ್ಲಿ ಇಡಗುಂಜಿಯ ಗಣಪತಿಯ ಪೂಜೆಗೆ ಹೋದಾಗ ಗಣಪತಿಯ ವಿಗ್ರಹ ರಚನೆಯೇ ಶಿಲ್ಪಕಲೆಯ ಕಡೆಗೆ ಸೆಳೆಯಿತು, ಮುಂದೆ ಅದುವೇ ಹೆಮ್ಮರವಾಗಿ ಗುರುಮುಖೇನ ಕಲಿತು ತನ್ನನ್ನು ಇಲ್ಲಿಯವರೆಗೆ ತಂದಿದೆ ಎಂದು ವಿನಮ್ರವಾಗಿ ಹೇಳುತ್ತಾರೆ ಗಣೇಶ್ ಭಟ್.

ಅಯೋಧ್ಯೆ ರಾಮ ಪ್ರತಿಷ್ಠಾಪನೆಗೆ ಜ.22ರ ಮಧ್ಯಾಹ್ನ 12.20ರ ಮುಹೂರ್ತ

ರಾಮನ 3 ವಿಗ್ರಹ: ಐದು ಅಡಿಯ ರಾಮಲಲ್ಲಾ ವಿಗ್ರಹ ಕೆತ್ತನೆಯ ಕೆಲಸ ಭರದಿಂದ ಸಾಗಿದ್ದು, ಅಂತಿಮ ಹಂತ ತಲುಪಿದೆ. ಈ ಮೂರು ವಿಗ್ರಹಗಳಲ್ಲಿ ಯಾವುದನ್ನು ಪ್ರತಿಷ್ಠಾಪನೆ ಮಾಡಲಾಗುತ್ತದೆ ಎಂಬುದು ಇನ್ನೂ ನಿರ್ಧಾರವಾಗಿಲ್ಲ. ಒಂದು ವಿಗ್ರಹವನ್ನು ಶ್ರೀ ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಆಯ್ಕೆ ಮಾಡಿ, ಪ್ರತಿಷ್ಠಾಪನೆ ಮಾಡಲು ಉದ್ದೇಶಿಸಲಾಗಿದೆ.

click me!