
ಬೆಂಗಳೂರು (ನ.25): ಜೀವನದಲ್ಲಿ ಆರ್ಥಿಕ ಸ್ವಾತಂತ್ರ್ಯ ಮತ್ತು ಶಿಕ್ಷಣ ಮುಖ್ಯವಾಗಿದ್ದು, ಒತ್ತಾಯಪೂರ್ವಕವಾಗಿ ಮದುವೆ ಆಗಬೇಡಿ ಎಂದು ನಟಿ ಹಾಗೂ ಮಾಜಿ ಸಂಸದೆ ರಮ್ಯಾ ವಿದ್ಯಾರ್ಥಿಗಳಿಗೆ ಸಲಹೆ ನೀಡಿದ್ದಾರೆ. ಗುರುವಾರ ಕೆಂಗೇರಿಯ ಬಿಜಿಎಸ್ ಆರೋಗ್ಯ ಮತ್ತು ಶಿಕ್ಷಣ ಕ್ಯಾಂಪಸ್ನಲ್ಲಿ ಬಿಜಿಎಸ್ ಉತ್ಸವದ ಚಾಲನಾ ಸಮಾರಂಭದ ಬಳಿಕ ಅವರು ವಿದ್ಯಾರ್ಥಿಗಳ ಜತೆ ಸಂವಾದ ನಡೆಸಿದರು.
ವಿದ್ಯಾರ್ಥಿಯೊಬ್ಬರ ‘ನಿಮ್ಮ ಮದುವೆ ಯಾವಾಗ’ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ‘ಮದುವೆ ಯಾಕೆ ಆಗಬೇಕು ಎಂದು ನನಗೆ ಅರ್ಥವಾಗುತ್ತಿಲ್ಲ. ಮದುವೆ ಅಥವಾ ಸಂತೋಷ ಇವೆರಡರಲ್ಲಿ ಒಂದನ್ನು ಆಯ್ಕೆ ಮಾಡಬೇಕು. ನಾನು ಸಂತೋಷವಾಗಿರಬೇಕು ಎಂದು ಆಯ್ಕೆ ಮಾಡಿಕೊಳ್ಳುತ್ತೇನೆ’ ಎಂದು ಮುಗುಳುನಗೆ ಬೀರಿದರು. ಮುಂದುವರೆದು, ‘ಜೀವನದಲ್ಲಿ ಆರ್ಥಿಕ ಸ್ವಾತಂತ್ರ್ಯ ಮತ್ತು ಶಿಕ್ಷಣ ಮುಖ್ಯ. ನಿಮಗೆ ಯಾರಾದರೂ ಉತ್ತಮ ಸಂಗಾತಿ ಸಿಕ್ಕರೆ ಮದುವೆ ಆಗಿ. ಪ್ರೀತಿ ವಿಚಾರದಲ್ಲಿ ಹೊರತುಪಡಿಸಿ ಬೇರೆ ಯಾವುದೇ ಕಾರಣಕ್ಕೂ ಒತ್ತಾಯಪೂರ್ವಕವಾಗಿ ಮದುವೆ ಆಗಬೇಡಿ. ಇಲ್ಲಿಯವರೆಗೂ ನನಗೆ ಆತ್ಮ ಸಂಗಾತಿ ಸಿಕ್ಕಿಲ್ಲ. ಸಿಕ್ಕ ಕೂಡಲೇ ಮದುವೆ ಆಗುತ್ತೇನೆ’ ಎಂದರು.
ಮತ್ತೆ ಬಂದ ಪದ್ಮಾವತಿ: 2023ಕ್ಕೆ 'ಸ್ಯಾಂಡಲ್ ವುಡ್ ಕ್ವೀನ್' ದರ್ಬಾರ್ ಶುರು
‘ನಿಮ್ಮ ಸೌಂದರ್ಯದ ಗುಟ್ಟೇನು’ ಎಂಬ ವಿದ್ಯಾರ್ಥಿನಿಯೊಬ್ಬರ ಪ್ರಶ್ನೆಗೆ ಉತ್ತರಿಸಿದ ರಮ್ಯಾ, ‘ನಾನು ಸಾಧಾರಣ ಹುಡುಗಿ, ಮೇಕಪ್ ಮಾಡಿದ್ದೇನೆ. ಧ್ಯಾನ ಮಾಡುತ್ತೇನೆ ಮತ್ತು ಸದಾ ಖುಷಿಯಾಗಿರುತ್ತೇನೆ’ ಎಂದು ಹೇಳಿದರು. ಬಿಜಿಎಸ್ ಕ್ಯಾಂಪಸ್ಗೆ 2003ರಲ್ಲಿ ‘ಎಕ್ಸ್ಕ್ಯೂಸ್ ಮಿ’ ಚಿತ್ರದ ಚಿತ್ರೀಕರಣಕ್ಕೆ ಬಂದಾಗ ಒಂದೆರಡು ಬ್ಲಾಕ್ಗಳು ಇದ್ದವು. ಈಗ ವೈದ್ಯಕೀಯ, ಎಂಜಿನಿಯರಿಂಗ್, ಆರ್ಕಿಟೆಕ್ಚರ್, ಫ್ಯಾಷನ್ ಡಿಸೈನ್ ಸೇರಿದಂತೆ ಸಾಕಷ್ಟುವಿಷಯಗಳ ಅಧ್ಯಯನಕ್ಕೆ ಅವಕಾಶಗಳು ಇವೆ. ಈ ಮೂಲಕ ಬಿಜಿಎಸ್ ಅತ್ಯುತ್ತಮ ಸಂಸ್ಥೆಯಾಗಿ ಹೊರಹೊಮ್ಮಿದೆ. ಸದ್ಯ ಉತ್ತಮ ಗ್ರಂಥಾಲಯ ಕೂಡ ಸಿದ್ಧವಾಗಿದ್ದು, ವಿದ್ಯಾರ್ಥಿಗಳು ಸದುಪಯೋಗಪಡಿಸಿಕೊಳ್ಳಿ ಎಂದು ಸಲಹೆ ನೀಡಿದರು.
ಲಹರಿ ವಿರುದ್ಧ ರಮ್ಯಾ ಕಿಡಿ: ರಾಹುಲ್ ಗಾಂಧಿ ಅವರ ಭಾರತ್ ಜೋಡೋ ಯಾತ್ರೆಯ ವಿಡಿಯೋಗೆ ಕಾಂಗ್ರೆಸ್ ಕೆಜಿಎಫ್-2 ಹಾಡು ಬಳಸಿದ್ದಕ್ಕೆ ಹಕ್ಕು ಸ್ವಾಮ್ಯ ಕಾಯ್ದೆ (ಕಾಪಿ ರೈಟ್ ಆಕ್ಟ್) ಉಲ್ಲಂಘನೆ ದೂರು ದಾಖಲಿಸಿ ಕಾಂಗ್ರೆಸ್ನ ಟ್ವೀಟರ್ ಖಾತೆ ಬ್ಲಾಕ್ ಮಾಡಿರುವ ಪ್ರಕರಣ ಸಂಬಂಧ ಮಾಜಿ ಸಂಸದೆ ನಟಿ ರಮ್ಯಾ ಲಹರಿ ಆಡಿಯೋ ಕಂಪನಿ ಮುಖ್ಯಸ್ಥ ಲಹರಿ ವೇಲು ವಿರುದ್ಧ ಕಿಡಿ ಕಾರಿದ್ದಾರೆ.
ಡಾಲಿ ಧನಂಜಯ್ 'ಉತ್ತರಕಾಂಡ' ಚಿತ್ರಕ್ಕೆ ರಮ್ಯಾ ನಾಯಕಿ: ಸರಳವಾಗಿ ನೆರವೇರಿದ ಮುಹೂರ್ತ
ಹಕ್ಕು ಸ್ವಾಮ್ಯ ಕಾಯ್ದೆ ಉಲ್ಲಂಘನೆ ಹಿನ್ನೆಲೆಯಲ್ಲಿ ನ್ಯಾಯಾಲಯವೊಂದು ಕಾಂಗ್ರೆಸ್ ಟ್ವೀಟರ್ ಖಾತೆಯನ್ನು ತಾತ್ಕಾಲಿಕವಾಗಿ ಬ್ಲಾಕ್ ಮಾಡಲು ಮಾಡಿರುವ ಆದೇಶದ ಬಗ್ಗೆ ಪತ್ರಕರ್ತರೊಬ್ಬರು ಮಾಡಿರುವ ಟ್ವೀಟ್ಗೆ ಪ್ರತಿಕ್ರಿಯೆ ನೀಡಿರುವ ರಮ್ಯಾ, ಲಹರಿ ವೇಲು ಅವರಿಗೆ ಬಿಜೆಪಿ ಟಿಕೆಟ್ ಬೇಕಾಗಿರಬಹುದು. ಅದಕ್ಕಾಗಿ ಅವರು ಪ್ರಯತ್ನಿಸುತ್ತಿರಬಹುದು. ಆ ಕಾರಣಕ್ಕೆ ಈ ರೀತಿ ಮಾಡುತ್ತಿರುವುದು ಬೇಸರದ ಸಂಗತಿ. ಇತ್ತೀಚಿನ ದಿನಗಳಲ್ಲಿ ಕೆಜಿಎಫ್ ಚಿತ್ರದ ಹಾಡುಗಳನ್ನು ಎಲ್ಲರೂ ಬಳಕೆ ಮಾಡುತ್ತಿದ್ದಾರೆ. ಆದರೆ, ಇದೇ ಹಾಡನ್ನು ಕಾಂಗ್ರೆಸ್ ಬಳಕೆ ಮಾಡಿಕೊಂಡಿದ್ದೇ ಲಹರಿ ವೇಲು ಅವರಿಗೆ ಸಮಸ್ಯೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ