ಆಸ್ಪತ್ರೆಗೆ ಹೋಗುವ ಸಾರ್ವಜನಿಕರೇ ಎಚ್ಚರ: ಇಂದಿನಿಂದ ಸರ್ಕಾರಿ ಆಸ್ಪತ್ರೆಗಳಲ್ಲಿ ಆರೋಗ್ಯ ಸೇವೆ ವ್ಯತ್ಯಯ

By Sathish Kumar KHFirst Published Feb 6, 2023, 11:17 AM IST
Highlights

ರಾಜ್ಯದ ಎಲ್ಲ ಸಮುದಾಯ, ಪ್ರಾಥಮಿಕ ಆರೋಗ್ಯ ಕೇಂದ್ರ, ತಾಲೂಕು ಆಸ್ಪತ್ರೆಗಳು ಹಾಗೂ ಜಿಲ್ಲಾ ಆಸ್ಪತ್ರೆಗಳಲ್ಲಿ ಸಾರ್ವಜನಿಕರ ಆರೋಗ್ಯ ಸೇವೆಯಲ್ಲಿ ವ್ಯತ್ಯಯ ಉಂಟಾಗಲಿದೆ. 

ಬೆಂಗಳೂರು (ಫೆ.06): ರಾಜ್ಯದ ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ಹೊರ ಗುತ್ತಿಗೆ ಆಧಾರದಲ್ಲಿ ಕಾರ್ಯ ನಿರ್ವಹಿಸುವ ನರ್ಸ್, ಆಯುಷ್ ವೈದ್ಯರು, ಲ್ಯಾಬ್ ಟೆಕ್ನಿಷಿಯನ್, ಫಾರ್ಮಸಿಸ್ಟ್, ಗ್ರೂಪ್ ಡಿ ಸಿಬ್ಬಂದಿ ಹಾಗೂ ಆರೋಗ್ಯ ಸಂಯೋಜಕರು ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಬೆಂಗಳೂರಿನಲ್ಲಿ ಅನಿರ್ಧಿಷ್ಟಾವಧಿ ಪ್ರತಿಭಟನೆ ಆರಂಭಿಸಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲ ಸಮುದಾಯ, ಪ್ರಾಥಮಿಕ ಆರೋಗ್ಯ ಕೇಂದ್ರ, ತಾಲೂಕು ಆಸ್ಪತ್ರೆಗಳು ಹಾಗೂ ಜಿಲ್ಲಾ ಆಸ್ಪತ್ರೆಗಳಲ್ಲಿ ಸಾರ್ವಜನಿಕರ ಆರೋಗ್ಯ ಸೇವೆಯಲ್ಲಿ ವ್ಯತ್ಯಯ ಉಂಟಾಗಲಿದೆ. 

ಇನ್ನು ರಾಜ್ಯದ ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ಖಾಯಂ ಸೇವೆಯಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿಗಿಂತ ಹೊರಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿ ಪ್ರಮಾಣವೇ ಹೆಚ್ಚಾಗಿದೆ. ಹೀಗಾಗಿ, ಪ್ರತಿದಿನ ಆಸ್ಪತ್ರೆಗಳಿಗೆ ಹೋಗುವ ಸಾರ್ವಜನಿಕರಿಗೆ ಇವರೇ ಬಹುತೇಕ ಆಸರೆ ಆಗಿದ್ದಾರೆ. ಈ ಸಿಬ್ಬಂದಿ ಲಭ್ಯತೆ ಇಲ್ಲವಾದರೆ ಒಂದಲ್ಲಾ ಒಂದು ಸಮಸ್ಯೆ ಕಾಡುವುದಂತೂ ಗ್ಯಾರಂಟಿ. ಆದರೆ, ಈಗ ಎಲ್ಲ ಹೊರಗುತ್ತಿಗೆ ಆರೋಗ್ಯ ಸಿಬ್ಬಂದಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಪ್ರತಿಭಟನೆಗೆ ಇಳಿದಿದ್ದಾರೆ. ಇದರಿಂದ ಆರೋಗ್ಯ ಸೇವೆಯಲ್ಲಿ ಭಾರಿ ವ್ಯತ್ಯಯ ಉಂಟಾಗಲಿದೆ.

ಯಾರ ಬಗ್ಗೆಯೂ ನನಗೆ ಹೆದರಿಕೆ ಇಲ್ಲ: ಸಚಿವ ಡಾ.ಕೆ.ಸುಧಾಕರ್‌

20 ಸಾವಿರಕ್ಕೂ ಅಧಿಕ ಸಿಬ್ಬಂದಿ: ಇನ್ನು ಸರ್ಕಾರಿ ಆಸ್ಪತ್ರೆಗಳ ಹೊರಗುತ್ತಿಗೆ ಆರೋಗ್ಯ ಸಿಬ್ಬಂದಿಗಳಿಂದ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ (ಫ್ರೀಡಂ ಪಾರ್ಕ್‌) ಅನಿರ್ದಿಷ್ಟವಧಿ ಪ್ರತಿಭಟನೆಗೆ ಇಂದಿನಿಂದ ಆರಂಭವಾಗಿದೆ. BMS, KSHCOEA, ಕರ್ನಾಟಕ ಸ್ಟೇಟ್ ಹೆಲ್ತ್ ಕಾಂಟ್ರಾಕ್ಟ್ ಅಂಡ್ ಔಟ್ ಸೋರ್ಸ್ ಎಂಪಾಯ್ಲಿಸ್ ಅಸೋಸಿಯೇಷನ್ ನೇತೃತ್ವದಲ್ಲಿ ಪ್ರತಿಭಟನೆ ಮಾಡಲಾಗುತ್ತಿದೆ. ಬರೋಬ್ಬರಿ ಸುಮಾರು ೨೦ ಸಾವಿರಕ್ಕೂ ಅಧಿಕ ಸಿಬ್ಬಂದಿ ಇಲ್ಲಿ ಒಟ್ಟುಗೂಡಿ ಪ್ರತಿಭಟನೆ ಮಾಡಲು ಸಿದ್ಧತೆ ಮಾಡಿಕೊಂಡಿದ್ದಾರೆ. 

ಶ್ರೀನಿವಾಸಚಾರಿ ವರದಿ ಜಾರಿಗೆ ಆಗ್ರಹ: ಸತತ ಮೂರು ವರ್ಷಗಳಿಂದ ಪ್ರತಿಭಟನೆ ನಡೆಸಿಕೊಂಡು ಬರಲಾಗುತ್ತಿದೆ. ಈ ಬಗ್ಗೆ ಸರ್ಕಾರ ವರದಿಯನ್ನೂ ರಚಿಸಿದೆ. ರಾಜ್ಯದಲ್ಲಿ ಹೊರ ಗುತ್ತಿದೆವ ಆರೋಗ್ಯ ಸಿಬ್ಬಂದಿಯ ಸಮಸ್ಯೆಗಳ ಕುರಿತು ಹಾಗೂ ಅವರ ಬೇಡಿಕೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಶ್ರೀನಿವಾಸಚಾರಿ ರಚಿಸಿರುವ ವರದಿಯನ್ನು ಜಾರಿಗೊಳಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸುತ್ತಿದ್ದಾರೆ. ಆರೋಗ್ಯ ಸಿಬ್ಬಂದಿಗೆ ವೇತನ ಕಡಿಮೆ ಇದೆ. ಶೇ.15 ವೇತನ ಹೆಚ್ಚಳ ಮಾಡಿ ಎಂದು ಶ್ರೀನಿವಾಸಚಾರಿ ವರದಿಯಲ್ಲಿ ಸೂಚಿಸಲಾಗಿದೆ. ಹೀಗಾಗಿ, ಇಂದಿನಿಂದ ಶ್ರೀನಿವಾಸಚಾರಿ ವರದಿ ಜಾರಿಗೆ ಆಗ್ರಹ ಮಾಡಲಾಗುತ್ತಿದೆ. 

ಸಚಿವರು ಕೊಟ್ಟ ಭರವಸೆ ಈಡೇರಿಲ್ಲ:  ಈಗಾಗಲೇ ಕಳೆದ ವರ್ಷ 7-7-2022ರಲ್ಲಿ ಬೆಂಗಳೂರು ಚಲೋ ಮಾಡಲಾಗಿತ್ತು. ಈ ವೇಳೆ ಆರೋಗ್ಯ ಸಚಿವರು ಭರವಸೆ ಹಿನ್ನೆಲೆಯಲ್ಲಿ ಪ್ರತಿಭಟನೆಯನ್ನು ಕೈಬಿಟ್ಟ ಆರೋಗ್ಯ ಸಿಬ್ಬಂದಿ ಆಸ್ಪತ್ರೆಗಳಲ್ಲಿ ಸಾಮಾನ್ಯದಂತೆ ಕಾರ್ಯ ನಿರ್ವಹಣೆಗೆ ಮುಂದಾಗಿದ್ದರು. ಒಂದು ವಾರದಲ್ಲಿ ಬೇಡಿಕೆಗಳು ಈಡೇರಿಸುತ್ತೇನೆ ಎಂದಿದ್ದ ಸಚಿವ ಡಾ.ಸುಧಾಕರ್ ಹೇಳಿದ್ದರು. ಇವತ್ತಿಗೆ 7 ತಿಂಗಳು ಕಳೆದರೂ ಬೇಡಿಕೆ ಈಡೇರಿರಲಿಲ್ಲ. ಈ‌ ಹಿನ್ನೆಲೆ ಇಂದಿನಿಂದ ಪ್ರತಿಭಟನೆಯನ್ನು ಆರಂಭಿಸಲಾಗಿದೆ. ಇದರಲ್ಲಿ ಹೊರ ಗುತ್ತಿಗೆ ಆರೋಗ್ಯ ಸಿಬ್ಬಂದಿಯಾದ ನರ್ಸ್, ಆಯುಷ್ ವೈದ್ಯರು, ಲ್ಯಾಬ್ ಟೆಕ್ನಿಷಿಯನ್, ಫಾರ್ಮಸಿಸ್ಟ್, ಗ್ರೂಪ್ ಡಿ ಸಿಬ್ಬಂದಿಗಳು, ಸಂಯೋಜಕರು ಭಾಗವಹಿಸಿದ್ದಾರೆ.

Union Budget: ಕೇಂದ್ರ ಬಜೆಟ್‌ನಲ್ಲಿ ಅಕ್ಷರ, ಆರೋಗ್ಯ, ಅನ್ನ ಕಡೆಗಣನೆ: ಎಚ್‌. ವಿಶ್ವನಾಥ್‌ ಕಿಡಿ

ಆರೋಗ್ಯ ಸಿಬ್ಬಂದಿ ಬೇಡಿಕೆಗಳು

  • ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು.
  • ಜಿಲ್ಲೆ ಮತ್ತು ಅಂತರ ಜಿಲ್ಲೆಯ ಸಿಬ್ಬಂದಿಗೆ ವರ್ಗಾವಣೆ ಅವಕಾಶ ನೀಡಬೇಕು.
  • ಆಸ್ಪತ್ರೆಗಳಲ್ಲಿ ಕಾರ್ಯ ನಿರ್ವಹಿಸಲು ಸೇವಾ ಭದ್ರತೆ
  • ಎಲ್ಲ ಆರೋಗ್ಯ ಸಿಬ್ಬಂದಿಗೆ ವಿಮೆ ಒದಗಿಸಬೇಕು. 
  • ಸರ್ಕಾರಿ ನೌಕರರಿಗೆ ಇರುವಂತೆ ವೈದ್ಯಕೀಯ ಚಿಕಿತ್ಸಾ ವೆಚ್ಚ ಮರುಪಾವತಿ ಮಾಡಬೇಕು.
  • ಆರೋಗ್ಯ ಸೇವೆಯ ವೇಳೆ ಮೃತಪಡುವ ನೌಕರರ ಕುಟುಂಬಕ್ಕೆ ಪರಿಹಾರ ಕೊಡಬೇಕು
click me!