ಕರ್ನಾಟಕದಲ್ಲಿ ಇನ್ನೂ 4 ದಿನ ಭಾರೀ ಮಳೆ: ಆ.6ರವರೆಗೆ ರೆಡ್‌ ಅಲರ್ಟ್‌

By Kannadaprabha NewsFirst Published Aug 3, 2022, 3:00 AM IST
Highlights

ಒಳನಾಡಿನ ಹಲವು ಜಿಲ್ಲೆಗಳಿಗೆ ‘ಆರೆಂಜ್‌’ ಮತ್ತು ‘ಯೆಲ್ಲೋ ಅಲರ್ಟ್‌’

ಬೆಂಗಳೂರು(ಆ.03):  ರಾಜ್ಯಾದ್ಯಂತ ಮುಂದಿನ ನಾಲ್ಕು ದಿನಗಳ ಕಾಲ ಅತ್ಯಂತ ಭಾರಿ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದ್ದು, ಕರಾವಳಿ ಮತ್ತು ಮಲೆನಾಡಿನ ಜಿಲ್ಲೆಗಳಲ್ಲಿ ಮುಂದಿನ ಶನಿವಾರದವರೆಗೆ (ಆ.6) ‘ರೆಡ್‌ ಅಲರ್ಟ್‌’ ಘೋಷಿಸಿದೆ. ಉಳಿದಂತೆ ಒಳನಾಡಿನ ಹಲವು ಜಿಲ್ಲೆಗಳಿಗೆ ‘ಆರೆಂಜ್‌’ ಮತ್ತು ‘ಯೆಲ್ಲೋ ಅಲರ್ಟ್‌’ ನೀಡಲಾಗಿದೆ. ಕರಾವಳಿಯ ಉತ್ತರ ಕನ್ನಡ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗೆ ಶನಿವಾರ ಬೆಳಗ್ಗೆ 8.30ರ ತನಕ ‘ರೆಡ್‌ ಅಲರ್ಟ್‌’ ಇರಲಿದೆ. ಈ ಅವಧಿಯಲ್ಲಿ ಸಮುದ್ರದಲ್ಲಿ 40 ರಿಂದ 50 ಕಿ.ಮೀ. ವೇಗದ ಗಾಳಿ ಬೀಸುವ ಸಾಧ್ಯತೆ ಇರುವುದರಿಂದ ಮೀನುಗಾರರು ಸಮುದ್ರಕ್ಕೆ ಇಳಿಯಬಾರದು ಎಂದು ಎಚ್ಚರಿಕೆ ನೀಡಲಾಗಿದೆ. ಮಲೆನಾಡಿನ ಕೊಡಗು, ಚಿಕ್ಕಮಗಳೂರು ಜಿಲ್ಲೆಗೆ ಶುಕ್ರವಾರ ಬೆಳಗ್ಗೆ 8.30ರ ತನಕ ‘ರೆಡ್‌ ಅಲರ್ಟ್‌’ ಇರಲಿದೆ. ಶಿವಮೊಗ್ಗ ಜಿಲ್ಲೆಗೆ ಶುಕ್ರವಾರ ಮತ್ತು ಶನಿವಾರ ‘ರೆಡ್‌ ಅಲರ್ಚ್‌’ ನೀಡಲಾಗಿದೆ.

ಗುರುವಾರ ಬೆಳಗ್ಗೆ 8.30ರ ತನಕ ಶಿವಮೊಗ್ಗ ಜಿಲ್ಲೆಗೆ ‘ಆರೆಂಜ್‌ ಅಲರ್ಟ್‌’ ಇರಲಿದ್ದು ಉಳಿದಂತೆ ಮೈಸೂರು, ಹಾಸನ, ತುಮಕೂರು, ಹಾವೇರಿ, ಬೆಳಗಾವಿ, ಗದಗ, ಧಾರವಾಡ, ವಿಜಯಪುರ, ಕಲಬುರಗಿ ಮತ್ತು ಬೀದರ್‌ ಜಿಲ್ಲೆಗೆ ‘ಯೆಲ್ಲೋ ಅಲರ್ಟ್‌’ ನೀಡಲಾಗಿದೆ.

Heavy Rain Fall : ಚೇರ್ ಮೇಲೆ ರಾತ್ರಿ ಕಳೆದ ಆಪರೇಷನ್ ಆದ ವ್ಯಕ್ತಿ!

ಗುರುವಾರ ಹಾಗೂ ಶುಕ್ರವಾರ ಮಳೆ ಇನ್ನಷ್ಟು ವ್ಯಾಪಕವಾಗಿ ಅಬ್ಬರಿಸಲಿದ್ದು ಬೆಳಗಾವಿ, ಬಾಗಲಕೋಟೆ, ಮೈಸೂರು, ಚಾಮರಾಜನಗರ, ತುಮಕೂರು, ಚಿಕ್ಕಬಳ್ಳಾಪುರ ಜಿಲ್ಲೆಗೆ ‘ಆರೆಂಜ್‌ ಅಲರ್ಟ್‌’ ನೀಡಲಾಗಿದೆ. ಈ ಅವಧಿಯಲ್ಲಿ ಬೆಂಗಳೂರು ನಗರ ಮತ್ತು ಗ್ರಾಮಾಂತರ, ರಾಮನಗರ, ಮಂಡ್ಯ, ಹಾಸನ, ಹಾವೇರಿ, ಧಾರವಾಡ, ಗದಗ, ಬೀದರ್‌, ಕಲಬುರಗಿ, ವಿಜಯಪುರ, ಯಾದಗಿರಿ ಮತ್ತು ರಾಯಚೂರು ಜಿಲ್ಲೆಗೆ ‘ಯೆಲ್ಲೋ ಅಲರ್ಟ್‌’ ನೀಡಲಾಗಿದೆ. ಶುಕ್ರವಾರ ಮತ್ತು ಶನಿವಾರ ಧಾರವಾಡ, ಗದಗ, ತುಮಕೂರು, ಹಾಸನ, ಮೈಸೂರು, ಮಂಡ್ಯ, ರಾಮನಗರ ಜಿಲ್ಲೆಗೆ ‘ಆರೆಂಜ್‌ ಅಲರ್ಟ್‌’ ಪ್ರಕಟಿಸಲಾಗಿದೆ. ಬೆಂಗಳೂರು ನಗರ ಮತ್ತು ಗ್ರಾಮಾಂತರ, ಚಿಕ್ಕಬಳ್ಳಾಪುರ, ಹಾವೇರಿ, ಬೆಳಗಾವಿ, ಬೀದರ್‌ ಮತ್ತು ಕಲಬುರಗಿ ಜಿಲ್ಲೆಗೆ ‘ಯೆಲ್ಲೋ ಅಲರ್ಚ್‌’ ನೀಡಲಾಗಿದೆ.

ಶನಿವಾರದಿಂದ ಭಾನುವಾರ ಮುಂಜಾನೆ 8.30ರ ತನಕ ಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಚಿಕ್ಕಮಗಳೂರು, ಶಿವಮೊಗ್ಗ, ಹಾಸನ, ಹಾವೇರಿ, ಧಾರವಾಡ, ಗದಗ ಜಿಲ್ಲೆಗೆ ‘ಆರೆಂಜ್‌ ಅಲರ್ಟ್‌’, ಕೊಡಗು, ಬೆಳಗಾವಿ, ಬಾಗಲಕೋಟೆ, ವಿಜಯಪುರ, ಬೀದರ್‌ ಮತ್ತು ಕಲಬುರಗಿ ಜಿಲ್ಲೆಗೆ ‘ಯೆಲ್ಲೋ ಅಲರ್ಟ್‌’ ನೀಡಲಾಗಿದೆ.

ಛತ್ತೀಸ್‌ಗಢದಿಂದ ಕನ್ಯಾಕುಮಾರಿವರೆಗೆ ಹಬ್ಬಿರುವ ಟ್ರಫ್‌, ಆಂಧ್ರ ಕರಾವಳಿಯಲ್ಲಿ ಸೃಷ್ಟಿಯಾಗಿರುವ ಮೇಲ್ಮೈ ಸುಳಿಗಾಳಿ ಮತ್ತು ಗಾಳಿಯ ಬೀಸುವ ದಿಕ್ಕಿನಲ್ಲಿ ಆಗುತ್ತಿರುವ ಬದಲಾವಣೆಗಳು ರಾಜ್ಯದಲ್ಲಿ ವ್ಯಾಪಕ ಮಳೆಗೆ ಕಾರಣವಾಗುತ್ತಿದೆ ಎಂದು ಹವಾಮಾನ ಇಲಾಖೆ ಹೇಳಿದೆ.
 

click me!