ಭಾರಿ ಮಳೆ ಮುನ್ಸೂಚನೆ: 2 ದಿನ ಕರಾವಳಿಗೆ ರೆಡ್‌ ಅಲರ್ಟ್‌, ಮಲೆನಾಡಿಗೆ ಆರೆಂಜ್‌ ಅಲರ್ಟ್‌

By Kannadaprabha NewsFirst Published Jul 6, 2024, 5:47 AM IST
Highlights

ಮುಂದಿನ 48 ಗಂಟೆಯಲ್ಲಿ ಕರಾವಳಿಯ ಮೂರು ಜಿಲ್ಲೆಗೆ ರೆಡ್‌ ಹಾಗೂ ಮಲೆನಾಡು ಜಿಲ್ಲೆಗಳಿಗೆ ಆರೆಂಜ್‌ ಅಲರ್ಟ್‌ನ ಎಚ್ಚರಿಕೆಯನ್ನು ಹವಾಮಾನ ಇಲಾಖೆ ನೀಡಿದೆ. 

ಬೆಂಗಳೂರು (ಜು.06): ಮುಂದಿನ 48 ಗಂಟೆಯಲ್ಲಿ ಕರಾವಳಿಯ ಮೂರು ಜಿಲ್ಲೆಗೆ ರೆಡ್‌ ಹಾಗೂ ಮಲೆನಾಡು ಜಿಲ್ಲೆಗಳಿಗೆ ಆರೆಂಜ್‌ ಅಲರ್ಟ್‌ನ ಎಚ್ಚರಿಕೆಯನ್ನು ಹವಾಮಾನ ಇಲಾಖೆ ನೀಡಿದೆ. ರಾಜ್ಯದಲ್ಲಿ ಮಳೆಯ ಅಬ್ಬರ ಮುಂದುವರೆದಿದ್ದು, ಮುಂದಿನ ಎರಡು ದಿನ ಕರಾವಳಿಯ ಜಿಲ್ಲೆಗಳಾದ ಉಡುಪಿ, ಉತ್ತರ ಕನ್ನಡ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ 20 ಸೆಂ.ಮೀ.ಗೂ ಅಧಿಕ ಮಳೆಯಾಗುವ ಸಾಧ್ಯತೆ ಇದೆ. ಹೀಗಾಗಿ, ರೆಡ್‌ ಅಲರ್ಟ್‌ನ ಎಚ್ಚರಿಕೆ ನೀಡಲಾಗಿದೆ.

ಮಲೆನಾಡು ಜಿಲ್ಲೆಗಳಾದ ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಯಲ್ಲಿ 15ರಿಂದ 20 ಸೆಂ.ಮೀ.ವರೆಗೆ ಮಳೆಯಾಗುವ ಲಕ್ಷಣ ಇರುವುದರಿಂದ ಆರೆಂಜ್‌ ಅಲರ್ಟ್‌ನ ಘೋಷಣೆ ಮಾಡಲಾಗಿದೆ. ಜುಲೈ 8ರಿಂದ 10ರ ವರೆಗೆ ಮೂರು ದಿನ ಮಲೆನಾಡು ಮತ್ತು ಕರಾವಳಿಯ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌ನ ಸೂಚನೆ ನೀಡಲಾಗಿದೆ. ಉಳಿದಂತೆ ದಕ್ಷಿಣ ಕರ್ನಾಟಕದ ಜಿಲ್ಲೆಗಳಲ್ಲಿ ಜುಲೈ 8ರಿಂದ, ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಜುಲೈ 9ರಿಂದ ಮಳೆ ಪ್ರಮಾಣ ಇನ್ನಷ್ಟು ತೀವ್ರಗೊಳ್ಳಲಿದೆ. ಒಟ್ಟಾರೆ ಜುಲೈ 12 ವರೆಗೆ ರಾಜ್ಯದಲ್ಲಿ ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

Latest Videos

ಚನ್ನಪಟ್ಟಣ ವಿಧಾನಸಭಾ ಕ್ಷೇತ್ರಕ್ಕೆ ಸಿ.ಪಿ.ಯೋಗೇಶ್ವ‌ರ್‌ ಬಿಜೆಪಿ ಅಭ್ಯರ್ಥಿಯಾದ್ರೂ ಜೆಡಿಎಸ್ ಬೆಂಬಲ!

ಶುಕ್ರವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡಿರುವ ವರದಿ ಪ್ರಕಾರ, ಉತ್ತರ ಕನ್ನಡದ ಮಂಕಿಯಲ್ಲಿ ಅತಿ ಹೆಚ್ಚು 15 ಸೆಂ.ಮೀ ಮಳೆಯಾದ ವರದಿಯಾಗಿದೆ. ಅಂಕೋಲಾ, ಕಾರವಾರದಲ್ಲಿ ತಲಾ 11, ಗೋಕರ್ಣ 9, ಶಿರಾಲಿ, ಕುಮಟಾದಲ್ಲಿ ತಲಾ 8, ಕದ್ರಾದಲ್ಲಿ 7, ಹೊನ್ನಾವರದಲ್ಲಿ 6, ಜಗಲಬೆಟ್‌, ಗೇರುಸೊಪ್ಪ, ಕೋಟ ಹಾಗೂ ಲೋಂಡಾದಲ್ಲಿ ತಲಾ 5, ಯಲ್ಲಾಪುರ, ಉಡುಪಿ, ಆಗುಂಬೆ, ಲಿಂಗನಮಕ್ಕಿಯಲ್ಲಿ ತಲಾ 4, ಕುಂದಾಪುರ, ಕಾರ್ಕಳ, ಮಾಣಿಯಲ್ಲಿ ತಲಾ 3, ಮಂಗಳೂರು, ಸಿದ್ದಾಪುರ, ಶೃಂಗೇರಿಯಲ್ಲಿ ತಲಾ 2 ಸೆಂ.ಮೀ ಮಳೆಯಾಗಿದೆ ಎಂದು ಹವಾಮಾನ ಇಲಾಖೆಯ ವರದಿ ಮಾಡಿದೆ.

ದೂರವಾಗದ ಕುಸಿತ ಭೀತಿ: ದ.ಕ. ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ ಮಳೆ ಕಡಿಮೆಯಾದರೂ ಗುಡ್ಡ ಕುಸಿತ, ತಡೆಗೋಡೆ ಕುಸಿತದ ಭೀತಿ ಇನ್ನೂ ದೂರವಾಗಿಲ್ಲ. ಈಗ ಮತ್ತ ಮಳೆ ಬಿರುಸು ಪಡೆಯುತ್ತಿದೆ. ಮಂಗಳೂರು-ಸೋಲಾಪುರ ರಾಷ್ಟ್ರೀಯ ಹೆದ್ದಾರಿ 169ರಲ್ಲಿ ಅಪಾಯ ಉಂಟಾಗಿದೆ. ಮಂಗಳೂರಿನ ವಾಮಂಜೂರು ಕೆತ್ತಿಕಲ್ ಬಳಿ ಭೂ ಕುಸಿತದ ಭೀತಿ ಎದುರಾಗಿದೆ. ಇಲ್ಲಿನ ಗುಡ್ಡದಿಂದ ಧುಮ್ಮಿಕ್ಕುವ ಕೃತಕ ಜಲಪಾತದಿಂದ ಕುಸಿತದ ಭೀತಿ ಉಂಟಾಗಿದೆ.

ಚತುಷ್ಪಥ‌ ಹೆದ್ದಾರಿ ಕಾಮಗಾರಿಗಾಗಿ ಗುಡ್ಡ ಕೊರೆದ ಪರಿಣಾಮ ಕುಸಿತ ಹೇಳಲಾಗಿದೆ. ಸುಮಾರು 50-60 ಅಡಿಗಳಷ್ಟು ಎತ್ತರದಲ್ಲಿ ಗುಡ್ಡ ಅಪಾಯದಲ್ಲಿದೆ. ಹೆದ್ದಾರಿಗೆ ತಾಗಿಕೊಂಡೇ ಇರುವ ಗುಡ್ಡದಲ್ಲಿ ಆಗಾಗ್ಗೆ ಮಣ್ಣು ಕುಸಿತ ಉಂಟಾಗುತ್ತಿದೆ. ಸುಮಾರು 50-60 ಅಡಿಗಳಷ್ಟು ಎತ್ತರದಲ್ಲಿ ಗುಡ್ಡ ಅಪಾಯದಲ್ಲಿದೆ. ಹೆದ್ದಾರಿಗೆ ತಾಗಿಕೊಂಡೇ ಇರುವ ಗುಡ್ಡದಲ್ಲಿ ಆಗಾಗ ಮಣ್ಣು ಕುಸಿತ ಸಂಭವಿಸುತ್ತಿದೆ. ಗುಡ್ಡದ ತುದಿ ಭಾಗದಲ್ಲಿ ಭಾರೀ ಗಾತ್ರದ ಬಂಡೆಗಳು ಉರುಳಿ ಬೀಳುವ ಆತಂಕ ಎದುರಾಗಿದೆ. ಭಾರಿ ಮಳೆಯಾದರೆ ಮಣ್ಣು ಸಡಿಲಗೊಂಡು ಗುಡ್ಡ ಕುಸಿದರೆ ಅಪಾಯ ತಳ್ಳಿಹಾಕುವಂತಿಲ್ಲ ಎನ್ನುತ್ತಾರೆ ಸ್ಥಳೀಯರು. ಗುಡ್ಡದ ಕೆಳಭಾಗದ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿತ್ಯ ಸಾವಿರಾರು ವಾಹನಗಳ ಸಂಚರಿಸುವುದರಿಂದ ಕೋಟಿಗಟ್ಟಲೆ ಮೊತ್ತ ವ್ಯಯಿಸಿ ನಿರ್ಮಿಸಿದ ತಡೆಗೋಡೆಯೂ ವ್ಯರ್ಥವಾಗಲಿದೆ.

ಡಿ.ಕೆ.ಸುರೇಶ್ ಸೋಲಿಂದ ಕ್ಷೇತ್ರದ ಜನರಿಗೆ ಪಶ್ಚಾತ್ತಾಪ: ಶಾಸಕ ಎಚ್.ಸಿ.ಬಾಲಕೃಷ್ಣ

ಸಮುದ್ರ ಪ್ರಕ್ಷುಬ್ದ: ಹೊಸಬೆಟ್ಟು, ಸುರತ್ಕಲ್, ಪಣಂಬೂರು ಭಾಗದಲ್ಲಿ ಸಮುದ್ರ ಪ್ರಕ್ಷುಬ್ದಗೊಂಡಿದೆ. ಸಮುದ್ರ ಅಲೆಗಳ ಅಬ್ಬರಕ್ಕೆ ಈಗಾಗಲೇ ಕುಳಾಯಿಯಲ್ಲಿ ನಿರ್ಮಾಣ ಹಂತದ ಮೀನುಗಾರಿಕಾ ಬಂದರಿನ ಕಲ್ಲುಗಳು ಕೊಚ್ಚಿಹೋಗಿವೆ. ಭಾರೀ ಅಲೆಗಳ ಅಬ್ಬರಕ್ಕೆ ಬ್ರೇಕ್ ವಾಟರ್ ಕಾಮಗಾರಿ ಸಮುದ್ರ ಪಾಲಾಗಿದೆ. ಸುಮಾರು 196 ಕೋಟಿ ರು. ವೆಚ್ಚದಲ್ಲಿ ಹೊಸ ಮೀನುಗಾರಿಕಾ ಬಂದರು ನಿರ್ಮಾಣವಾಗುತ್ತಿದ್ದು, ನಿರ್ಮಾಣ ಕಾಮಗಾರಿಯ ಭಾಗವಾಗಿ ಸಮುದ್ರದಲ್ಲಿ ಬ್ರೇಕ್ ವಾಟರ್ ಕಾಮಗಾರಿ ನಡೆಸಲಾಗಿತ್ತು. ಸಮುದ್ರದ ಮೇಲ್ಮೈಗೆ ಭಾರೀ ಗಾತ್ರದ ಕಲ್ಲುಗಳನ್ನು ಹಾಕಲಾಗಿತ್ತು. ಆದರೆ ಜಟ್ಟಿಯ ಬ್ರೇಕ್‌ ವಾಟರ್‌ನ ಒಂದು ಭಾಗ ಸಮುದ್ರದ ಅಬ್ಬರಕ್ಕೆ ಕೊಚ್ಚಿಹೋಗಿದೆ.

click me!