ಉತ್ತರದ 8 ಜಿಲ್ಲೆಯಲ್ಲಿ ಭಾರಿ ಮಳೆ: ಜನಜೀವನ ಅಸ್ತವ್ಯಸ್ತ

By Govindaraj SFirst Published Jul 29, 2022, 5:00 AM IST
Highlights

ಉತ್ತರ ಮತ್ತು ಮಧ್ಯ ಕರ್ನಾಟಕಗಳ ಬಹುತೇಕ ಕಡೆ ಬುಧವಾರ ರಾತ್ರಿಯಿಂದೀಚೆಗೆ ಭಾರೀ ಮಳೆಯಾಗುತ್ತಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ತುಂಗಭದ್ರಾ ಜಲಾಶಯಕ್ಕೆ ಮತ್ತೆ ಹೆಚ್ಚಿನ ಪ್ರಮಾಣದಲ್ಲಿ ನೀರು ಬಂದಿದೆ.

ಹುಬ್ಬಳ್ಳಿ (ಜು.29): ಉತ್ತರ ಮತ್ತು ಮಧ್ಯ ಕರ್ನಾಟಕಗಳ ಬಹುತೇಕ ಕಡೆ ಬುಧವಾರ ರಾತ್ರಿಯಿಂದೀಚೆಗೆ ಭಾರೀ ಮಳೆಯಾಗುತ್ತಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ತುಂಗಭದ್ರಾ ಜಲಾಶಯಕ್ಕೆ ಮತ್ತೆ ಹೆಚ್ಚಿನ ಪ್ರಮಾಣದಲ್ಲಿ ನೀರು ಬಂದಿದ್ದು, ಜಲಾಶಯದಿಂದ 1 ಲಕ್ಷ ಕ್ಯುಸೆಕ್‌ ನೀರನ್ನು ಹೊರ ಬಿಡುತ್ತಿರುವುದಿಂದ ಹಂಪಿಯ ಪುರಂದರ ಮಂಟಪ ಸೇರಿದಂತೆ ಹಲವು ಸ್ಮಾರಕ ಜಲಾವೃತವಾಗಿದ್ದು ಆನೆಗೊಂದಿಯ ನವಬೃಂದಾವನಕ್ಕೆ ಸಂಪರ್ಕ ಕಡಿತಗೊಂಡಿದೆ. ಧಾರವಾಡ, ಹಾವೇರಿ, ಗದಗ, ಉತ್ತರ ಕನ್ನಡ, ಕೊಪ್ಪಳ, ಬಳ್ಳಾರಿ, ವಿಜಯನಗರ ದಾವಣಗೆರೆ ಸೇರಿದಂತೆ ಬಹುತೇಕ ಎಲ್ಲೆಡೆ ಮಳೆ ಸುರಿದಿದೆ.

ವಿಜಯನಗರ ಜಿಲ್ಲೆಯ ಹೂವಿನಹಡಗಲಿಯಲ್ಲಿ ಭಾರೀ ಮಳೆಗೆ 11 ಮಣ್ಣಿನ ಮನೆಗಳು ಭಾಗಶಃ ಕುಸಿದಿದಿದ್ದರೆ, ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನಲ್ಲಿ 26ಕ್ಕೂ ಹೆಚ್ಚು ಮನೆ ಬಿದ್ದಿವೆ. ಗದಗ ನಗರದ ಹುಡ್ಕೋ ಕಾಲನಿಯ ಸರ್ಕಾರಿ ಗಂಡು ಮಕ್ಕಳ ಶಾಲೆ ನಂ.15ರಲ್ಲಿ ನೀರು ನುಗ್ಗಿದ್ದು, ಮಕ್ಕಳ ಕಲಿಕಾ ಸಾಮಗ್ರಿಗಳು ಹಾನಿಗೀಡಾಗಿವೆ.

ಗದಗ ಮಳೆ ಅವಾಂತರ : ಪೆಟ್ರೋಲ್ ಬಂಕ್, ಹಾಸ್ಟೆಲ್‌ಗೆ ನುಗ್ಗಿದ ನೀರು..!

ಇನ್ನೂ 2 ದಿನ ಭಾರಿ ಮಳೆ?: ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಗೆ ಶುಕ್ರವಾರದವರೆಗೆ ಆರೆಂಜ್‌ ಅಲರ್ಚ್‌ ನೀಡಲಾಗಿದೆ. ಬೆಳಗಾವಿ, ಧಾರವಾಡ, ಹಾವೇರಿ, ಗದಗ, ದಾವಣಗೆರೆ, ಚಿತ್ರದುರ್ಗ, ತುಮಕೂರು, ಹಾಸನ, ಮಂಡ್ಯ, ಮೈಸೂರು, ಕೊಡಗು ಮತ್ತು ಚಾಮರಾಜನಗರಗಳಿಗೆ ಯೆಲ್ಲೋ ಅಲರ್ಚ್‌ ನೀಡಲಾಗಿದೆ.

ಮಳೆ ಗಾಳಿಗೆ 11 ಮನೆ ಭಾಗಶಃ ಕುಸಿತ: ಭಾರಿ ಪ್ರಮಾಣದ ಮಳೆ ಗಾಳಿಗೆ 11 ಮಣ್ಣಿನ ಮನೆಗಳು ಭಾಗಶಃ ಕುಸಿದಿದ್ದು, ಹಳ್ಳದ ನೀರಿನ ರಭಸಕ್ಕೆ ನೂರಾರು ಎಕರೆ ಬೆಳೆ ಜಲಾವೃತ್ತವಾಗಿದೆ. ಹಿರೇಹಡಗಲಿ ಹೋಬಳಿಯಲ್ಲಿ 72.2 ಮಿಮೀ, ಹೂವಿನಹಡಗಲಿ ಹೋಬಳಿಯಲ್ಲಿ 61.4 ಮಿಮೀ ಮಳೆ ದಾಖಲಾಗಿದೆ. ತಾಲೂಕಿನ ಶಿವಪುರ ಹಾಗೂ ಮಾಗಳ ಮಧ್ಯೆ ಹರಿಯುತ್ತಿರುವ ಕರೇಹಳ್ಳ ಅಪಾಯ ಮಟ್ಟಮೀರಿ ಹರಿಯುತ್ತಿದ್ದು.ಇದರಿಂದ 5 ತಾಸಿಗೂ ಹೆಚ್ಚು ರಸ್ತೆ ಸಂಚಾರ ಸ್ಥಗಿತಗೊಂಡಿತ್ತು. ಉಪನಾಯಕನಹಳ್ಳಿ, ಶಿವಪುರ, ಹೊನ್ನೂರು ಬಳಿ ಹರಿಯುತ್ತಿರುವ ಹಿರೇಹಳ್ಳದ ನೀರು ರೈತರ ಜಮೀನುಗಳಲ್ಲಿ ನುಗ್ಗಿತ್ತು. ತೆಂಗಿನ ಮರ, ಕೊಯ್ಲಿಗೆ ಬಂದಿದ್ದ ಮೆಕ್ಕೆಜೋಳ ಸೇರಿದಂತೆ ಇತರೆ ಬೆಳೆಗಳು ಮಳೆ ನೀರಿನಲ್ಲಿ ಮುಳುಗಿ ಹೋಗಿದ್ದು, ಅಪಾರ ಪ್ರಮಾಣದ ನಷ್ಟಉಂಟಾಗಿದೆ.

ತಾಲೂಕಿನ ಮಾಗಳ ಗ್ರಾಮದ ಕರೇಹಳ್ಳದ ನೀರು ನೂರಾರು ಎಕರೆ ಪ್ರದೇಶದ ಭತ್ತದ ಗದ್ದೆಗಳಿಗೆ ನುಗ್ಗಿದೆ. ಕಳೆದೊಂದು ವಾರದಿಂದ ನಾಟಿ ಮಾಡಿದ ಭತ್ತದ ಸಸಿಗಳು ನೀರಿನ ರಭಸಕ್ಕೆ ಕೊಚ್ಚಿ ಹೋಗಿದೆ. ಇನ್ನು ಕೆಲವಡೆ ಜಲಾವೃತ್ತವಾಗಿದೆ. ಈಗಾಗಲೇ ಭತ್ತದ ನಾಟಿ ಮಾಡಿರುವ ರೈತರು ಲಕ್ಷಾಂತರ ರುಗಳ ಹಾನಿ ಅನುಭವಿಸುವಂತಾಗಿದೆ.

ಕೆರೆಯಂತಾದ ಕಾಲೇಜು ಆವರಣ: ಪಟ್ಟಣದ ಸೊಪ್ಪಿನ ಕಾಳಮ್ಮ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು, ಆವರಣದ ನೀರು ಹೊರಗಡೆ ಹೋಗಲು ಮಾರ್ಗ ಇಲ್ಲದೇ ಅಪಾರ ಪ್ರಮಾಣದಲ್ಲಿ ಸಂಗ್ರಹವಾಗಿತ್ತು. ವಿಧಿ ಇಲ್ಲದೇ ಕಾಲೇಜು ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರು ಕೆಸರು ನೀರಿನಲ್ಲೇ ತರಗತಿಗೆ ಹೋಗುತ್ತಿದ್ದರು. ಪ್ರತಿ ಬಾರಿಯೂ ಕಾಲೇಜು ಆವರಣದಲ್ಲಿ ನೀರು ತುಂಬಿಕೊಳ್ಳುತ್ತಿದೆ. ಕೆಸರು ಮೆತ್ತಿಕೊಂಡೇ ತರಗತಿಗೆ ಹೋಗುವ ಸ್ಥಿತಿ ಇದೆ. ಮೈ ಮೇಲಿನ ಬಟ್ಟೆಯೂ ಕೆಸರು ಮೆತ್ತಿಕೊಳ್ಳುತ್ತಿದೆ. ಇದರಿಂದ ನಾವು ಮರಳಿ ಗಲೀಜು ಬಟ್ಟೆಯಲ್ಲೇ ಊರಿಗೆ ಹೋಗುವಂತಹ ಸ್ಥಿತಿ ಇದೆ. 

ಮಲೆನಾಡಿನಲ್ಲಿ ಮಳೆ ಬಿಡುವು , ರೈತರಿಗೆ ಕೃಷಿ ಇಲಾಖೆಯಿಂದ ಸಲಹೆ

ಈ ಕುರಿತು ಸಂಬಂಧಪಟ್ಟಅಧಿಕಾರಿಗಳು ಇತ್ತ ಗಮನ ಹರಿಸಿ ಮಳೆ ನೀರು ಸರಾಗವಾಗಿ ಹೊರಗೆ ಹೋಗಲು ಕ್ರಮ ಕೈಗೊಳ್ಳಬೇಕೆಂದು ವಿದ್ಯಾರ್ಥಿಗಳು ಒತ್ತಾಯಿಸಿದ್ದಾರೆ. ಕಾಲೇಜು ಆವರಣದಲ್ಲಿ ನಿರಂತರವಾಗಿ ನೀರು ನಿಲ್ಲುತ್ತಿರುವುದರಿಂದ,ಕಾಲೇಜು ಕಟ್ಟಡಗಳಿಗೆ ಹಾನಿ ಉಂಟಾಗುವ ಸಾಧ್ಯತೆ ಹೆಚ್ಚಿದೆ. ಕಾಲೇಜು ವಿದ್ಯಾರ್ಥಿಗಳ ಕ್ರೀಡಾ ಚಟುವಟಿಕೆಗಳಿಗೆ ಆಟದ ಮೈದಾನವೇ ಇಲ್ಲದಂತಾಗಿದೆ.ಆದರಿಂದ ಕೂಡಲೇ ಸಂಬಂಧ ಪಟ್ಟವರು ಸ್ಥಳಕ್ಕೆ ಭೇಟಿ ನೀಡಿ ವಿದ್ಯಾರ್ಥಿಗಳ ಬೇಡಿಕೆ ಈಡೇರಿಸಬೇಕೆಂದು ಒತ್ತಾಯಿಸಿದ್ದಾರೆ.

click me!