ಬ್ರಹ್ಮಾಂಡ ಭ್ರಷ್ಟಾಚಾರ ನಡೆಸಿದ ಎಚ್‌ಡಿಕೆ, ಬಿಎಸ್‌ವೈ, ಕುಮಾರಸ್ವಾಮಿ ರಾಜೀನಾಮೆಗೆ 'ಕೈ' ಆಗ್ರಹ

By Kannadaprabha NewsFirst Published Sep 20, 2024, 8:18 AM IST
Highlights

ಕುಮಾರಸ್ವಾಮಿ ಅವರು 100 ಕೋಟಿ ರು. ಬೆಲೆಯ ಸರ್ಕಾರಿ ಜಾಗವನ್ನು ಕಬಳಿಸಿ ಸಂಬಂಧಿಕರಿಗೆ ನೀಡಿದ್ದಾರೆ. ಇದಕ್ಕೆ ಮಾಜಿ ಮುಖ್ಯಮಂತ್ರಿ ಜಿ.ಎಸ್. ಯಡಿಯೂರಪ್ಪ ಅವರೂ ಸಹಕರಿಸಿದ್ದಾರೆ' ಎಂದು ಆರೋಪಿಸಿದ ಸಚಿವರಾದ ಕೃಷ್ಣ ಬೈರೇಗೌಡ, ದಿನೇಶ್ ಗುಂಡೂರಾವ್ ಹಾಗೂ ಸಂತೋಷ್ ಲಾಡ್ 

ಬೆಂಗಳೂರು(ಸೆ.20):  'ಬೆಂಗಳೂರಿನ ಗಂಗೇನಹಳ್ಳಿಯಲ್ಲಿನ 100 ಕೋಟಿ ರು. ಬೆಲೆ ಬಾಳುವ ಬಾಳುವ 1.11 ಎಕರೆ ಸರ್ಕಾರಿ ಜಾಗವನ್ನು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹಾಗೂ ಬಿ.ಎಸ್. ಯಡಿಯೂರಪ್ಪ ಅವರು ಅಕ್ರಮವಾಗಿ ಡಿನೋಟಿಫಿಕೇಷನ್ ಮಾಡಿದ್ದಾರೆ. ಡಿನೋಟಿಫೈ ಆದ ಜಮೀನನ್ನು ಕುಮಾರಸ್ವಾಮಿ ಅವರ ಸಂಬಂಧಿಕರಿಗೆ ಕೇವಲ 60 ಲಕ್ಷ ರು.ಗಳಿಗೆ ಕ್ರಯ ಮಾಡುವ ಮೂಲಕ ಬ್ರಹ್ಮಾಂಡ ಭ್ರಷ್ಟಾಚಾರ ನಡೆಸಿದ್ದಾರೆ' ಎಂದು ಕಾಂಗ್ರೆಸ್ ಸಚಿವರು ಗಂಭೀರ ಆರೋಪ ಮಾಡಿದ್ದಾರೆ. ಅಲ್ಲದೆ, ಗಂಭೀರ ಪ್ರಕರಣದಲ್ಲಿ ಆರೋಪಿ ಆಗಿರುವ ಕುಮಾರಸ್ವಾಮಿ ಕೂಡಲೇ ಕೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಪ್ರಕರಣದ ಬಗ್ಗೆ ಲೋಕಾಯುಕ್ತ ಪೊಲೀಸರು ತನಿಖೆ ನಡೆಸಬೇಕೆಂದು ಆಗ್ರಹಿಸಿದ್ದಾರೆ.

ಸಚಿವರಾದ ಕೃಷ್ಣ ಬೈರೇಗೌಡ, ದಿನೇಶ್ ಗುಂಡೂರಾವ್ ಹಾಗೂ ಸಂತೋಷ್ ಲಾಡ್ ಅವರು ಗುರುವಾರ ಜಂಟಿ ಸುದ್ದಿಗೋಷ್ಠಿ ನಡೆಸಿ, 'ಕುಮಾರಸ್ವಾಮಿ ಅವರು 100 ಕೋಟಿ ರು. ಬೆಲೆಯ ಸರ್ಕಾರಿ ಜಾಗವನ್ನು ಕಬಳಿಸಿ ಸಂಬಂಧಿಕರಿಗೆ ನೀಡಿದ್ದಾರೆ. ಇದಕ್ಕೆ ಮಾಜಿ ಮುಖ್ಯಮಂತ್ರಿ ಜಿ.ಎಸ್. ಯಡಿಯೂರಪ್ಪ ಅವರೂ ಸಹಕರಿಸಿದ್ದಾರೆ' ಎಂದು ಆರೋಪಿಸಿದರು. 

Latest Videos

ಹಳೇ ದುಷ್ಮನ್‌ಗಳಿಗೆ ಟಕ್ಕರ್ ಕೊಡಲು ದೇವೇಗೌಡರು ಹಣೆದ ರಣವ್ಯೂಹದ ರಹಸ್ಯ

ಅಕ್ರಮ ಹೇಗೆ?: 

ಸಚಿವ ಕೃಷ್ಣ ಬೈರೇಗೌಡ ಮಾತನಾಡಿ, 'ಬೆಂಗಳೂರಿನ ಮಠದಹಳ್ಳಿ ವ್ಯಾಪ್ತಿಯ ಗಂಗೇನಹಳ್ಳಿಯ ಸರ್ವೇ 7 (1ಸಿ), 7 ಜಿ, 7 ಸಿ, ನಂಬರ್‌ ಗಳ 1.11 ಎಕರೆ ಭೂಮಿ ಯನ್ನು ಬಿಡಿಎ ಬಡಾವಣೆ ನಿರ್ಮಾಣಕ್ಕಾಗಿ 1976 ರಲ್ಲಿ ಸ್ವಾಧೀನ ಮಾಡಿಕೊಂಡಿದ್ದು, 1978 ಕ್ಕೆ ಸಂಪೂರ್ಣ ಭೂಸ್ವಾಧೀನ ಮುಗಿದು ಹೋಗಿರುತ್ತದೆ' ಎಂದರು. 'ಈ ಭೂಮಿಗೆ ಸಂಬಂಧವೇ ಇಲ್ಲದ, ಜಮೀನು ಮೂಲ ಮಾಲೀಕರಿಗೂ ಸಂಬಂಧ ಪಡದ ಅನಾಮಧೇಯ ರಾಜಶೇಖರಯ್ಯ ಎನ್ನುವ ವ್ಯಕ್ತಿ 2007ರಲ್ಲಿ ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿರುವಾಗ ಡಿ-ನೋಟಿಫಿ ಕೇಷನ್ ಮಾಡಲು ಅರ್ಜಿ ನೀಡುತ್ತಾರೆ. 30 ವರ್ಷಗಳ ಹಿಂದಿನ ಪ್ರಕರಣ ಎಂದು ಅಧಿಕಾರಿ ಗಳು ಆಕ್ಷೇಪಿಸಿದರೂ ಕುಮಾರ ಸ್ವಾಮಿ ಕ್ರಮಕ್ಕೆ ಮುಂದಾಗಿದ್ದರು' ಎಂದು ಆರೋಪಿಸಿದರು. 'ಇದರ ನಡುವೆ ಈ ಭೂಸ್ವಾ ಧೀನ ಆಗಿರುವ ಭೂಮಿಯ ನಿಜವಾದ ಮಾಲೀಕರಾದ 21 ಜನರ ಜೊತೆಗೆ ಕುಮಾರಸ್ವಾಮಿ ಅವರ ಅತ್ತೆ (ವಿಮಲಾ) ಜಿಪಿಎ ಮಾಡಿಕೊಂಡಿ ದ್ದಾರೆ. ಆಮೇಲೆ ಸಮ್ಮಿಶ್ರ ಬಿದ್ದು ಹೋದ ಮೇಲೆ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆದ ನಂತರ ಯಡಿಯೂರಪ್ಪ ಅವರು ಕಡತವನ್ನು ಮುಂದುವರಿಸುತ್ತಾರೆ' ಎಂದರು. 

ಅಧಿಕಾರಿಗಳು ಬೇಡ ಎಂದರೂ ಡಿನೋಟಿಫಿಕೇಷನ್: 

'ಆಗ ಅಂದಿನ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಾದ ಜ್ಯೋತಿ ರಾಮಲಿಂಗಂ ಅವರು ಈ ಪ್ರಕರಣ ಡಿ ನೋಟಿಫಿಕೇಶನ್ ಗೆ ಅರ್ಹವಲ್ಲ ಎಂದು ಷರಾ ಬರೆಯುತ್ತಾರೆ. ಅಧಿಕಾರಿಗಳ ಎಲ್ಲಾ ಸೂಚನೆಗಳನ್ನು ಗಾಳಿಗೆ ತೂರಿದ ಯಡಿಯೂರಪ್ಪ ಅವರು ಈ ಭೂಮಿಯನ್ನು ಭೂಸ್ವಾಧೀನದಿಂದ ಕೈ ಬಿಡಲಾಗಿದೆ ಎಂದು 2009ರಲ್ಲಿ ತಮ್ಮ ಕೈಯಾರೇ ಬರೆಯುತ್ತಾರೆ. ಡಿನೋಟಿಫಿಕೇಷನ್ ಆದ ಜಮೀನು ಕೆಲವೇ ದಿನಗಳಲ್ಲಿ ಕುಮಾರಸ್ವಾಮಿ ಅವರ ಬಾಮೈದನ ಹೆಸರಿಗೆ ಜಮೀನು ಕ್ರಯ (ರಿಜಿರ್ಸ್ಟ) ಆಗುತ್ತದೆ. ಇದೊಂದು ವ್ಯವಸ್ಥಿತವಾದ ದರೋಡೆ. ಸತ್ತವರಿಂದ ಕುಮಾರಸ್ವಾಮಿ ಅವರ ಅತ್ತೆಯ ಹೆಸರಿಗೆ ಜಿಪಿಎ ಆಗುತ್ತದೆ, ಆನಂತರ ಬಾಮೈದನ ಹೆಸರಿಗೆ ರಿಜಿಸ್ಟರ್‌ ಆಗುತ್ತದೆ ಎಂದರೆ ಎಷ್ಟು ವ್ಯವಸ್ಥಿತ ಹಗರಣವಿದು' ಎಂದು ಕೃಷ್ಣಬೈರೇಗೌಡ ಪ್ರಶ್ನಿಸಿದರು. 

ಲೋಕಾಯುಕ್ತ ತನಿಖೆ ಪೂರ್ಣಗೊಳಿಸಲಿ: 

ಲೋಕಾಯುಕ್ತ ಈ ಪ್ರಕರಣದ ತನಿಖೆ ನಡೆಸುತ್ತದೆ. ಈ ಪ್ರಕರಣವನ್ನು ವಜಾ ಮಾಡಬೇಕೆಂದು ಯಡಿಯೂರಪ್ಪನವರು ಹೈಕೋರ್ಟಿಗೆ ಅರ್ಜಿ ಸಲ್ಲಿಸುತ್ತಾರೆ. ಹೈಕೋರ್ಟ್ ಯಡಿಯೂರಪ್ಪನವರ ಅರ್ಜಿಯನ್ನು ವಜಾ ಮಾಡಿ ಅವರಿಗೆ 25,000 ರು. ದಂಡ ಹಾಕುತ್ತದೆ. ಹೀಗಿದ್ದರೂ ಲೋಕಾಯುಕ್ತದವರು ತನಿಖೆಗೆ ವೇಗ ನೀಡುತ್ತಿಲ್ಲ. ಕೂಡಲೇ ಲೋಕಾಯುಕ್ತದವರು ತಮ್ಮ ತನಿಖೆಯನ್ನು ಪೂರೈಸಿ ತಕ್ಷಣ ವರದಿಯನ್ನು ನೀಡಬೇಕು. ತಪ್ಪು ಮಾಡಿದವರಿಗೆ ಶಿಕ್ಷೆಯಾಗಬೇಕು ಎಂದು ಆಗ್ರಹ ಮಾಡುತ್ತೇವೆ ಎಂದು ಆಗ್ರಹಿಸಿದರು. ಇದು ಆರಂಭ ಮಾತ್ರ- ಲಾಡ್: ಸಚಿವ ಸಂತೋಷ್ ಲಾಡ್ ಮಾತನಾಡಿ, ಕುಮಾರಸ್ವಾಮಿ ಹಾಗೂ ಬಿ.ಎಸ್. ಯಡಿಯೂರಪ್ಪ ಅವರ ಆಕ್ರಮ ಡಿನೋಟಿಫಿಕೇಷನ್‌ಗೆ ದಾಖಲೆ ಗಳಿವೆ. ಆದರೆ ಸಿದ್ದರಾಮಯ್ಯ ವಿರುದ್ಧದ ಆರೋಪಕ್ಕೆ ಯಾವುದೇ ದಾಖಲೆಗಳು ಕುಮಾರಸ್ವಾಮಿ ಹಾಗೂ ಯಡಿಯೂರಪ್ಪ ವಿರುದ್ಧ ಈಗ ಬಿಡುಗಡೆ ಮಾಡಿರುವುದು ಮೊದಲ ಹಂತದ ದಾಖಲೆಗಳು ಮಾತ್ರ. ಮುಂದೆ ಇನ್ನೂ ಹಲವು ದಾಖಲೆ ಬಿಡುಗಡೆಯಾಗಲಿವೆ ಎಂದು ಎಚ್ಚರಿಕೆ ನೀಡಿದರು. 

25 ವರ್ಷದ ಹಿಂದಿನದು, ತಪ್ಪಿಲ್ಲ ಎಂದು ತೀರ್ಪು ಬಂದಿದೆ, ಈಗ ವಿವಾದ ಏಕೆ?: ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್

ಸಮಗ್ರ ತನಿಖೆ ನಡೆಯಲಿ: 

ಸಚಿವ ದಿನೇಶ್ ಗುಂಡೂರಾವ್ ಮಾತನಾಡಿ, 'ಪ್ರಕರಣದ ಬಗ್ಗೆ ದೂರು ದಾಖಲಾಗಿ 3 ವರ್ಷವಾದರೂ ತನಿಖೆ ನಡೆಯುತ್ತಿಲ್ಲ. ಲೋಕಾಯುಕ್ತರು ತ್ವರಿತವಾಗಿ ಪ್ರಕರಣವನ್ನು ತೆಗೆದುಕೊಂಡು ಸಮಗ್ರ ತನಿಖೆ ನಡೆಸಬೇಕು. ಕುಮಾರಸ್ವಾಮಿ ಕೂಡಲೇ ಪ್ರಕರಣದ ಬಗ್ಗೆ ಉತ್ತರ ನೀಡಬೇಕು. ಇಲ್ಲದಿದ್ದರೆ ಕೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು' ಎಂದು ಆಗ್ರಹಿಸಿದರು.

ಆರೋಪ ಏನು? 

• ಬೆಂಗಳೂರಿನ ಗಂಗೇನಹಳ್ಳಿಯಲ್ಲಿ 1.11 ಎಕರೆ ಜಾಗ ಬಿಡಿ ಎಯಿಂದ 1976ರಲ್ಲೇ ಸ್ವಾಧೀನ 
• 2007ರಲ್ಲಿ ಎಚ್‌ಡಿಕೆ ಸಿಎಂ ಆಗಿದ್ದಾಗ ಅನಾಮಧೇಯ ವ್ಯಕ್ತಿ ಯಿಂದ ಡಿನೋಟಿಫೈಗೆ ಅರ್ಜಿ 21 ನೈಜ ಮಾಲೀಕರಿಂದ ಎಚ್ ಡಿಕೆ ಅತ್ತೆ ಹೆಸರಿಗೆ ಜಿಪಿಎ. ಬಿಎಸ್‌ವೈರಿಂದ ಡಿನೋಟಿಫೈ
 • 100 ಕೋಟಿ ರು. ಬೆಲೆಯ ಜಾಗ ಕೇವಲ 60 ಲಕಕೆ ಎಚ್ ಡಿಕೆ ಭಾಮೈದನ ಹೆಸರಿನಲ್ಲಿ ನೋಂದಣಿಯಾಗಿದೆ - ಎಚ್‌ಡಿಕೆ ರಾಜೀನಾಮೆಗೆ ಸಚಿವರಾದ ಕೃಷ್ಣ ಬೈರೇಗೌಡ, ದಿನೇಶ್, ಲಾಡ್ ಆಗ್ರಹ

click me!