ಪ್ರೇಯಸಿ ದಲಿತೆ ಎಂದು ತಿಳಿದು ಮದುವೆಗೆ ನಿರಾಕರಿಸಿದ್ದ ವ್ಯಕ್ತಿಗೆ ಕೈಕೋರ್ಟ್ ಜಾಮೀನು

By Kannadaprabha NewsFirst Published Oct 28, 2024, 4:36 AM IST
Highlights

ಮದುವೆಯಾಗುವುದಾಗಿ ಸುಳ್ಳು ಭರವಸೆ ನೀಡಿ ಲೈಂಗಿಕ ಸಂಪರ್ಕ ಬೆಳೆಸಿದ ಬಳಿಕ ಜಾತಿಯ ನೆಪವೊಡ್ಡಿ ವಿವಾಹವಾಗಲು ನಿರಾಕರಿಸಿದ ಹಾಗೂ ಯುವತಿಯ ಜಾತಿ ಹೆಸರು ತೆಗೆದು ನಿಂದನೆ ಮಾಡಿದ ಆರೋಪದ ಮೇಲೆ ಜೈಲು ಸೇರಿದ್ದ ಯುವಕನೋರ್ವನಿಗೆ ಹೈಕೋರ್ಟ್‌ ಜಾಮೀನು ನೀಡಿದೆ.

ಬೆಂಗಳೂರು (ಅ.28): ಮದುವೆಯಾಗುವುದಾಗಿ ಸುಳ್ಳು ಭರವಸೆ ನೀಡಿ ಲೈಂಗಿಕ ಸಂಪರ್ಕ ಬೆಳೆಸಿದ ಬಳಿಕ ಜಾತಿಯ ನೆಪವೊಡ್ಡಿ ವಿವಾಹವಾಗಲು ನಿರಾಕರಿಸಿದ ಹಾಗೂ ಯುವತಿಯ ಜಾತಿ ಹೆಸರು ತೆಗೆದು ನಿಂದನೆ ಮಾಡಿದ ಆರೋಪದ ಮೇಲೆ ಜೈಲು ಸೇರಿದ್ದ ಯುವಕನೋರ್ವನಿಗೆ ಹೈಕೋರ್ಟ್‌ ಜಾಮೀನು ನೀಡಿದೆ.

ಪ್ರಕರಣದಲ್ಲಿ ಜಾಮೀನು ನಿರಾಕರಿಸಿದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕಾಯ್ದೆಯಡಿ ಸ್ಥಾಪನೆಯಾದ ವಿಶೇಷ ನ್ಯಾಯಾಲಯದ ಆದೇಶ ಪ್ರಶ್ನಿಸಿ ರಾಜರಾಜೇಶ್ವರಿ ನಗರದ ನಿವಾಸಿ ಜಿ. ಸುನೀಲ್‌ ಕುಮಾರ್‌ (28) ಸಲ್ಲಿಸಿದ್ದ ಕ್ರಿಮಿನಲ್‌ ಮೇಲ್ಮವಿಯನ್ನು ಪುರಸ್ಕರಿಸಿದ ನ್ಯಾ.ಶಿವಶಂಕರ ಅಮರಣ್ಣನವರ್‌ ಅವರ ಪೀಠ ಈ ಆದೇಶ ಮಾಡಿದೆ.

Latest Videos

ಮಾತಾಡುವ ಹಕ್ಕಿರೋದು ರಾಜಕಾರಣಿಗಳಿಗೆ ಮಾತ್ರವಾ?; 'ಪುಡಿ ರಾಜಕಾರಣಿ' ಎಂದ ಬಿಕೆ ಹರಿಪ್ರಸಾದ್ ವಿರುದ್ಧ ಪೇಜಾವರಶ್ರೀ ವಾಗ್ದಾಳಿ

ಅರ್ಜಿದಾರ ಮತ್ತು ಸರ್ಕಾರಿ ವಕೀಲರ ವಾದ-ಪ್ರತಿವಾದ ಆಲಿಸುವ ಜತೆಗೆ ದೋಷಾರೋಪ ಪಟ್ಟಿಯ ದಾಖಲೆಗಳನ್ನು ಪರಿಶೀಲಿಸಿದ ನ್ಯಾಯಪೀಠ, ಅರ್ಜಿದಾರ ಮತ್ತು ಸಂತ್ರಸ್ತೆ ನಡುವೆ ಒಪ್ಪಿತ ಲೈಂಗಿಕ ಸಂಪರ್ಕ ಏರ್ಪಟ್ಟಿದೆ. ಮದುವೆಗೆ ನಿರಾಕರಿಸಿದ ನಂತರ ದೂರು ದಾಖಲಿಸಲಾಗಿದೆ. 2024ರ ಮಾ.5ರಂದು ಘಟನೆ ನಡೆದರೆ, ಏ.30ರಂದು ವಿಳಂಬವಾಗಿ ದೂರು ದಾಖಲಿಸಲಾಗಿದೆ. ಸಂತ್ರಸ್ತೆಗೆ 26 ವರ್ಷ ದೋಷಾರೋಪ ಪಟ್ಟಿ ಸಲ್ಲಿಸಿರುವ ಕಾರಣ ಅರ್ಜಿದಾರನ ಕಸ್ಟೋಡಿಯಲ್‌ ವಿಚಾರಣೆ ಅಗತ್ಯವಿಲ್ಲ. ದೂರುದಾರೆ ಮತ್ತು ಸಾಕ್ಷಿಗಳನ್ನು ಬೆದರಿಸದೇ ಇರುವುದಕ್ಕೆ ಅರ್ಜಿದಾರನಿಗೆ ಕಠಿಣ ಷರತ್ತು ವಿಧಿಸಬಹುದು. ಹಾಗಾಗಿ ಜಾಮೀನು ಮೇಲೆ ಅರ್ಜಿದಾರನನ್ನು ಬಿಡುಗಡೆ ಮಾಡಬೇಕೆಂದು ಆದೇಶಿಸಿದೆ.
ಅಲ್ಲದೆ, ಅರ್ಜಿದಾರ 1ಲಕ್ಷ ರು. ಮೊತ್ತದ ವೈಯಕ್ತಿಕ ಬಾಂಡ್‌ ಮತ್ತು ಒಬ್ಬರ ಭದ್ರತಾ ಖಾತರಿ ನೀಡಬೇಕು. ಪ್ರಾಸಿಕ್ಯೂಷನ್‌ ಸಾಕ್ಷಿಗಳ ಮೇಲೆ ಪ್ರಭಾವ ಬೀರಬಾರದು ಮತ್ತು ಬೆದರಿಸಬಾರದು. ಅಧೀನ ನ್ಯಾಯಾಲಯದ ವಿಚಾರಣೆಗೆ ತಪ್ಪದೇ ಹಾಜರಾಗಬೇಕು ಎಂದು ಅರ್ಜಿದಾರನಿಗೆ ನ್ಯಾಯಪೀಠ ಷರತ್ತು ವಿಧಿಸಿದೆ. ಪ್ರಕರಣದ 26 ವರ್ಷದ ಸಂತ್ರಸ್ತೆ ಹಾಗೂ ಸುನೀಲ್‌ ಕುಮಾರ್‌ ಅವರ ನೆರೆಯ ಮನೆಯವರಾಗಿದ್ದಾರೆ. ಮದುವೆಯಾಗುವುದಾಗಿ ಭರವಸೆ ನೀಡಿ ಸುನೀಲ್‌ ಆಕೆಯೊಂದಿಗೆ ಲೈಂಗಿಕ ಸಂಪರ್ಕ ಬೆಳೆಸಿದ್ದರು. ಈ ನಡುವೆ 2024ರ ಮೇ 21ರಂದು ಸಂತ್ರಸ್ತೆಯು ರಾಜರಾಜೇಶ್ವರಿ ನಗರ ಠಾಣೆಗೆ ದೂರು ನೀಡಿ ಮದುವೆಯಾಗುವಂತೆ ಒತ್ತಾಯಿಸಿದಾಗ ಅದಕ್ಕೆ ನಿರಾಕರಿಸಿದ ಅರ್ಜಿದಾರ ನನ್ನ ಜಾತಿ ಹೆಸರು ತೆಗೆದು ನಿಂದಿಸಿದ್ದರು, ಸುಮ್ಮನೆ ಇರದಿದ್ದರೆ ಪರಿಣಾಮ ಎದುರಿಸಬೇಕಾಗುತ್ತದೆ ಬೆದರಿಕೆ ಸಹ ಹಾಕಿದ್ದಾರೆ ಎಂದು ಆರೋಪಿಸಿದ್ದರು.

ಹಳೆ ಬಾಯ್​​ಫ್ರೆಂಡ್​​ ಕಥೆ ಮುಗಿಸಿದ ಪ್ರೇಯಸಿ! ಅವರಿಬ್ಬರ ಮದುವೆಗೆ ಅಡ್ಡ ಬಂದಿದ್ದು ಜಾತಿ!

ದೂರಿನನ್ವಯ ಸುನೀಲಕುಮಾರನನ್ನು ಬಂಧಿಸಿದ್ದ ಪೊಲೀಸರು ಭಾರತೀಯ ದಂಡ ಸಂಹಿತೆ (ಐಪಿಸಿ) ಸೆಕ್ಷನ್‌ 376 ಅಡಿಯಲ್ಲಿ ಅತ್ಯಾಚಾರ ಮತ್ತು ಕಲಂ 506 ಅಡಿಯಲ್ಲಿ ಜೀವ ಬೆದರಿಕೆ, ಪರಿಶಿಷ್ಪ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯಡಿ ಸೆಕ್ಷನ್‌ 3(2)(5-ಎ) ಅಡಿಯಲ್ಲಿ ಜಾತಿ ನಿಂದನೆ ಅಪರಾಧದಡಿ ಎಫ್‌ಐಆರ್‌ ದಾಖಲಿಸಿದ್ದರು. ಆರೋಪಿಯನ್ನು ಅಧೀನ ನ್ಯಾಯಾಲಯ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತ್ತು. ನಂತರ ಆರೋಪಿ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ತಿರಸ್ಕರಿಸಿ ನಗರದ 70ನೇ ಹೆಚ್ಚುವರಿ ಸಿಟಿ ಸಿವಿಲ್‌ ಮತ್ತು ಸೆಷನ್ಸ್‌ ನ್ಯಾಯಾಲಯ (ಎಸ್ಸಿ-ಎಸ್ಟಿ ದೌರ್ಜನ್ಯ ತಡೆ ಕಾಯ್ದೆಯಡಿ ಸ್ಥಾಪನೆಯಾದ ವಿಶೇಷ ಕೋರ್ಟ್‌) 2024ರ ಸೆ.2ರಂದು ಆದೇಶಿಸಿತ್ತು. ಇದರಿಂದ ಜಾಮೀನು ಕೋರಿ ಆರೋಪಿ ಹೈಕೋರ್ಟ್‌ಗೆ ಕ್ರಿಮಿನಲ್‌ ಮೇಲ್ಮನವಿ ಸಲ್ಲಿಸಿದ್ದರು.

click me!