ಕನಕ ಜಯಂತಿಗಾಗಿ ಈದ್ಗಾ ಮೈದಾನದಲ್ಲಿ ಗೋಮೂತ್ರ ಸಿಂಪಡಿಸಿ ಶುದ್ಧಿ

By Kannadaprabha NewsFirst Published Dec 1, 2023, 5:48 AM IST
Highlights

ನಗರದ ಚೆನ್ನಮ್ಮ ವೃತ್ತದ ಬಳಿಯ ಈದ್ಗಾ ಮೈದಾನದಲ್ಲಿ ಶ್ರೀರಾಮ ಸೇನೆಯ ಕಾರ್ಯಕರ್ತರು ಗುರುವಾರ ಸರಳವಾಗಿ ಕನಕದಾಸ ಜಯಂತಿ ಆಚರಿಸಿದರು.

ಹುಬ್ಬಳ್ಳಿ (ಡಿ.1) :  ನಗರದ ಚೆನ್ನಮ್ಮ ವೃತ್ತದ ಬಳಿಯ ಈದ್ಗಾ ಮೈದಾನದಲ್ಲಿ ಶ್ರೀರಾಮ ಸೇನೆಯ ಕಾರ್ಯಕರ್ತರು ಗುರುವಾರ ಸರಳವಾಗಿ ಕನಕದಾಸ ಜಯಂತಿ ಆಚರಿಸಿದರು.

ಬೆಳಗ್ಗೆ ಜೈ ಶ್ರೀರಾಮ ಘೋಷಣೆ ಹಾಕುತ್ತ ಮೈದಾನ ಪ್ರವೇಶಿಸಿದ ಕಾರ್ಯಕರ್ತರು, ಗಂಗಾಜಲ ಸಿಂಪಡಿಸಿ, ಮೈದಾನ ಶುದ್ಧೀಕರಿಸುತ್ತ ಪೆಂಡಾಲ್ ಬಳಿ ಬಂದರು‌. ಕನಕದಾಸರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಪೂರ್ವ ಸಾಮೂಹಿಕವಾಗಿ ಶ್ರೀರಾಮ ಮಂತ್ರ ಪಠಿಸಿದರು. ನಂತರ ಪುನಃ ಪೆಂಡಾಲ್ ಆವರಣದಲ್ಲಿ ಗಂಗಾಜಲ ಸಿಂಪಡಿಸಿದರು.

ಕನಕ ಜಯಂತಿ: ಕೀರ್ತನೆಗಳಿಂದ ಸಮಾಜ ತಿದ್ದಿದ ದಾರ್ಶನಿಕ

ಕಾರ್ಯಕ್ರಮದ ನೇತೃತ್ವ ವಹಿಸಿದ್ದ ಶ್ರೀರಾಮಸೇನಾ ರಾಜ್ಯಾಧ್ಯಕ್ಷ ಗಂಗಾಧರ ಕುಲಕರ್ಣಿ ಮಾತನಾಡಿ, ಸಂತಶ್ರೇಷ್ಠ ಕನಕದಾಸರ ಜಯಂತಿಯನ್ನು ಈ ಬಾರಿ ಈ ಮೈದಾನದಲ್ಲಿ ಆಚರಿಸಿದ್ದೇವೆ. ಕನಕದಾಸರು ಭಕ್ತಿಯ ಮೂಲಕ ಇಡೀ ಸಮಾಜಕ್ಕೆ ಭಗವಂತನ ರೂಪ, ವಿಶೇಷತೆ ತಿಳಿಸಿ ಕೊಟ್ಟಿದ್ದಾರೆ.ಆತ್ಮದ ಅನ್ವೇಷಣೆ ಮಾಡಬೇಕು ಎಂದಾಗ, ಸಂಸಾರ ತ್ಯಜಿಸಿ ಭಗವಂತನ ಕೀರ್ತನೆ ಮಾಡುತ್ತ ಸಮಾಜ ಪರಿವರ್ತನೆಗೆ ಮುಂದಾದರು. ಅಂತಹ ಮಹನೀಯರ ತತ್ವ, ಆದರ್ಶಗಳು ಇಂದಿನ ಯುವಸಮೂಹಕ್ಕೆ ಮಾದರಿ ಎಂದರು.

ಸತ್ಯಪ್ರಮೋದೇಂದ್ರ ಸರಸ್ವತಿ ಸ್ವಾಮೀಜಿ ಧಾರ್ಮಿಕ ಕಾರ್ಯಕ್ರಮ ನಡೆಸಿಕೊಟ್ಟರು. ಈ ಸಂದರ್ಭದಲ್ಲಿ ಅಣ್ಣಪ್ಪ ದಿವಟಗಿ, ಮಂಜುನಾಥ ಕಾಟಗರ, ಗಣೇಶ ಕದಂ, ಬಸವರಾಜ ಗೌಡರ, ಬಸು ದುರ್ಗದ, ಪ್ರವೀಣ ಎಂ., ಮಹಾಂತೇಶ ತುಂಬಳಿ, ಚಂದ್ರು ಕೋಳೂರು ಸೇರಿದಂತೆ ಹಲವು ಕಾರ್ಯಕರ್ತರು ಪಾಲ್ಗೊಂಡಿದ್ದರು.

ಜಯಂತಿಗೆ ಷರುತ್ತು ಬದ್ಧ ಅನುಮತಿ:

ಈದ್ಗಾ ಮೈದಾನದಲ್ಲಿ ಜಯಂತಿ ಆಚರಣೆಗೆ ಮಹಾನಗರ ಪಾಲಿಕೆ ಬುಧವಾರ ರಾತ್ರಿ ಷರತ್ತು ಬದ್ಧ ಅನುಮತಿ ನೀಡಿತ್ತು. ಮುಂಜಾಗ್ರತಾ ಕ್ರಮವಾಗಿ ಮೈದಾನದಲ್ಲಿ ವಾಹನ ಪಾರ್ಕಿಂಗ್ ನಿಷೇಧಿಸಿ ಈದ್ಗಾ ಕಾಣದಂತೆ ಮೈದಾನದ ಅರ್ಧಭಾಗ ಪರದೆ ಹಾಕಲಾಗಿತ್ತು. ಡಿಸಿಪಿ ರಾಜೀವ್ ಎಂ, ಎಸಿಪಿ ಬಲ್ಲಪ್ಪ ನಂದಗಾವಿ, ಇನ್ಸಪೆಕ್ಟರ್‌ ಎಂ.ಎಸ್. ಹೂಗಾರ, ಜಾಕ್ಸನ್ ಡಿಸೋಜಾ ನೇತೃತ್ವದಲ್ಲಿ ಬಿಗಿ ಬಂದೋಬಸ್ತ್ ಮಾಡಲಾಗಿತ್ತು.

ಧರ್ಮ ಇರುವುದು ನಮಗಾಗಿ, ನಾವು ಧರ್ಮಕ್ಕಾಗಿ ಅಲ್ಲ: ಸಿಎಂ ಸಿದ್ದರಾಮಯ್ಯ

ಈಚೆಗೆ ನಡೆದ ಗಣೇಶ ಚತುರ್ಥಿ ವೇಳೆ ಗಣೇಶ ಪ್ರತಿಷ್ಠಾಪನೆ ವಿಚಾರವಾಗಿ ಈದ್ಗಾ ಮೈದಾನ ಸಾಕಷ್ಟು ಸುದ್ದಿಯಾಗಿತ್ತು. ಇಲ್ಲಿ ಮೂರ್ತಿ ಪ್ರತಿಷ್ಠಾಪನೆಗೆ ಅವಕಾಶ ನೀಡುವಂತೆ ಬಿಜೆಪಿ ನಾಯಕರು ಪಾಲಿಕೆ ಎದುರು ಆಹೋರಾತ್ರಿ ಧರಣಿ ನಡೆಸಿದ್ದರು. ಕೊನೆಗೆ ಪಾಲಿಕೆ ಹಲವು ಷರತ್ತುಗಳನ್ನು ವಿಧಿಸಿ ಮೂರು ದಿನಗಳ ಕಾಲ ಗಣೇಶ ಪ್ರತಿಷ್ಠಾಪನೆ ಅವಕಾಶ ನೀಡಿತ್ತು.

click me!