
ಬೆಂಗಳೂರು (ಡಿ.1) : ಕೃತಕ ಬುದ್ಧಿಮತ್ತೆ ದುರ್ಬಳಕೆ ತಡೆಗೆ ಶಾಸಕಾಂಗ ರಕ್ಷಣೆ ಒದಗಿಸಲು ಸರ್ಕಾರ ಬದ್ಧವಾಗಿದೆ ಎಂದು ಕೇಂದ್ರದ ಮಾಹಿತಿ ತಂತ್ರಜ್ಞಾನ, ಉದ್ಯಮಶೀಲತೆ, ಕೌಶಲ್ಯಾಭಿವೃದ್ಧಿ ರಾಜ್ಯ ಖಾತೆ ಸಚಿವ ರಾಜೀವ್ ಚಂದ್ರಶೇಖರ್ ಹೇಳಿದರು.
ಗುರುವಾರ ಸಂಜೆ ಬೆಂಗಳೂರು ಟೆಕ್ ಶೃಂಗಸಭೆ(Tech Summit 2023) ಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಕೃತಕ ಬುದ್ಧಿಮತ್ತೆ ಸಕಾರಾತ್ಮಕ ದಾರಿಯಲ್ಲಿ ಅಂದರೆ ಕೃಷಿ, ಆರೋಗ್ಯ ಕ್ಷೇತ್ರ, ಸರ್ಕಾರದ ಆಡಳಿತ, ಶೈಕ್ಷಣಿಕ ಕ್ಷೇತ್ರದಲ್ಲಿ ಬಳಕೆ ಆಗಬೇಕು. ಪ್ರಮುಖವಾಗಿ ಕೃತಕ ಬುದ್ಧಿಮತ್ತೆ ಯಾವುದೇ ಕಾರಣಕ್ಕೂ ದುರ್ಬಳಕೆ ಆಗದಂತೆ ಸುರಕ್ಷಿತವಾಗಿ ಇರುವಂತೆ ನೋಡಿಕೊಳ್ಳುವುದು ಹೇಗೆ? ಜಗತ್ತು ಭಾರತದಿಂದ ಬಯಸುತ್ತಿರುವಂತೆ ಕೃತಕ ಬುದ್ಧಿಮತ್ತೆ ಬಳಕೆಗೆ ಶಾಸಕಾಂಗ ರಕ್ಷಣೆಯನ್ನು ಒದಗಿಸುವುದು ಹೇಗೆ ಎಂಬ ಕುರಿತು ಗಂಭೀರ ಚಿಂತನೆ ನಡೆಯಲಿದೆ ಎಂದರು.
ಗ್ಲೋಬಲ್ ನಾರ್ತ್ ಆಚೆಗೆ ಎಲ್ಲರಿಗೂ ಸಿಗುವಂತಾಗುವ AI: ಭಾರತದ ಅವಕಾಶವೇನು?
ಜನವರಿ 10ರಂದು ಇಂಡಿಯಾ ಎಐ ಸಮ್ಮಿಟ್ ನಡೆಯಲಿದ್ದು, ಈ ವೇಳೆ ಪ್ರತಿಭೆ, ಎಐ ಚಿಪ್, ಎಐ ಕಂಪ್ಯೂಟ್, ಎಐ ಮಾದರಿ, ಎಲ್ಎಲ್ಎಂ ಮಾದರಿಗಳ ಕುರಿತು ಹೆಚ್ಚಿನ ಗಮನ ಹರಿಸಲಾಗುವುದು ಎಂದು ತಿಳಿಸಿದರು.
ಕಳೆದ ಆರೇಳು ವರ್ಷದಲ್ಲಿ ಸರ್ಕಾರದ ನೀತಿಯಿಂದಾಗಿ ಯುವ ಸಮುದಾಯದಲ್ಲಿ ಟೆಕ್ ಕ್ಷೇತ್ರದ ಸವಾಲು ಎದುರಿಸಲು, ಸ್ಟಾರ್ಟ್ಅಪ್ ವೇದಿಕೆಯಲ್ಲಿ ಹೊಸದನ್ನು ಆವಿಷ್ಕರಿಸಲು ಹಿಂದೆಂದಿಗಿಂತಲೂ ಹೆಚ್ಚಿನ ಆತ್ಮವಿಶ್ವಾಸ ಹೆಚ್ಚಿದೆ. ಇದರಿಂದಾಗಿಯೇ ಜಗತ್ತು ಭಾರತವನ್ನು ಟೆಕ್ ಕ್ಷೇತ್ರದಲ್ಲಿ ನಂಬಿಕಾರ್ಹ ಪಾಲುದಾರನಾಗಿ ನೋಡುತ್ತಿದೆ ಎಂದು ಹೇಳಿದರು.
ಕಳೆದ 18-24 ತಿಂಗಳಲ್ಲಿ ಸೆಮಿಕಂಡಕ್ಟರ್ ವಲಯದಲ್ಲಿ ಭಾರತ ಅಪೂರ್ವ ಹೆಜ್ಜೆ ಇರಿಸಿದ್ದೇವೆ. ಶೀಘ್ರದಲ್ಲೆ ನಮ್ಮಲ್ಲಿ ಸೆಮಿಕಂಡಕ್ಟರ್ ಸಂಶೋಧನಾ ಕೇಂದ್ರ ಸ್ಥಾಪನೆಯಾಗಲಿದ್ದು, ಇದು ಸೆಮಿಕಾನ್ ವಲಯದಲ್ಲಿ ಕ್ರಾಂತಿಕಾರಕ ಬೆಳವಣಿಗೆಗೆ ಕಾರಣವಾಗಲಿದೆ. ಹಾಗೆ ನೋಡಿದರೆ, 1960ರಲ್ಲೇ ಸೆಮಿಕಂಡಕ್ಟರ್ ಘಟಕ ಭಾರತದಲ್ಲಿ ಸ್ಥಾಪನೆ ಆಗಬೇಕಿತ್ತು. ಆದರೆ, ಆಗಿನ ಸರ್ಕಾರದ ಪಾಲಿಸಿಯಿಂದ ಇದು ಸಾಧ್ಯವಾಗಿಲ್ಲ. 2010ರಲ್ಲೂ ಹೀಗೇ ಆಯಿತು. ಹೀಗಾಗಿ ನಾವು ಒಂದು ತಲೆಮಾರಿನ ಬಳಿಕ ಈ ವಲಯಕ್ಕೆ ಕಾಲಿರಿಸುತ್ತಿದ್ದೇವೆ. ಆದರೆ, ಅದೇ ಸಂದರ್ಭದಲ್ಲಿ ಮುಂದಿನ ಒಂದು ದಶಕದ ಅವಧಿಯ ಅವಕಾಶವನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಕೆಲಸ ಮಾಡಲಾಗುತ್ತಿದೆ ಎಂದು ತಿಳಿಸಿದರು.
ವಿದ್ಯಾರ್ಥಿಗಳು ಕೋಡಿಂಗ್, ಪ್ರೋಗ್ರಾಮಿಂಗ್ ಜೊತೆಗೆ ಎಲೆಕ್ಟ್ರಾನಿಕ್ಸ್, ಎಲೆಕ್ಟ್ರಾನಿಕ್ಸ್ ಸಿಸ್ಟಂ ಡಿಸೈನ್, ಸೆಮಿಕಂಡಕ್ಟರ್ ಡಿಸೈನ್, ಸೆಮಿಕಂಡಕ್ಟರ್ ಉತ್ಪಾದನೆ, ಪ್ಯಾಕೆಜಿಂಗ್ ಕ್ಷೇತ್ರಗಳತ್ತಲೂ ಹೆಚ್ಚು ಗಮನಹರಿಸಬೇಕು. ಸ್ಟಾರ್ಟ್ ಅಪ್ ಸಾಮಾಜಿಕ, ಆರ್ಥಿಕ ದೃಷ್ಟಿಯಿಂದ ಹೆಚ್ಚಿನ ಮಹತ್ವ ಪಡೆದಿದ್ದು, ಅದಕ್ಕೆ ಸರ್ಕಾರ ಅಗತ್ಯ ಪ್ರೋತ್ಸಾಹ ನೀಡುತ್ತಿದೆ ಎಂದರು....
ಮೋದಿ ಭಾರತೀಯರ ಸುರಕ್ಷತೆ ಬಗ್ಗೆ ಬದ್ಧತೆ ಹೊಂದಿರುವ ನಾಯಕ: ರಾಜೀವ್ ಚಂದ್ರಶೇಖರ್
‘ಬೆಂಗ್ಳೂರು ಪ್ರತಿಭೆಗಳ ನೆಲೆ’
ಬೆಂಗಳೂರು ಹಿಂದೊಮ್ಮೆ ನಿವೃತ್ತರ ಸ್ವರ್ಗ ಎಂಬ ಮಾತಿತ್ತು. ಆದರೆ, ಈಗ ಬೆಂಗಳೂರು ಮುಂದಿನ ತಲೆಮಾರಿನ ಟೆಕ್ ಡಿವೈಸ್ಗಳು ಸಿದ್ಧವಾಗಿಸುವ ಎಂಜಿನಿಯರ್ಗಳ ನೆಲೆಯಾಗಿದೆ. ಹೈದ್ರಾಬಾದ್ ಹಾಗೂ ಬೆಂಗಳೂರು ನಡುವೆ ಐಟಿ ಸ್ಪರ್ಧೆ ಕೂಡ ಜೋರಾಗಿದೆ. ಆದರೆ, ಬೆಂಗಳೂರು ಹೊಂದಿರುವ ಪ್ರತಿಭೆ ಬೇರೆ ಇತರೆ ನಗರದಲ್ಲಿಲ್ಲ. ಇಲ್ಲಿ ಕಂಪನಿಗಳಿಗೆ ಒದಗಿಸಿರುವ ಮೂಲಸೌಲಭ್ಯ, ನೀಡಿರುವ ವ್ಯವಸ್ಥೆ ಕೂಡ ಬೇರೆ ಕಡೆ ಕಾಣಸಿಗುವುದಿಲ್ಲ. ಹೀಗಾಗಿ ಮುಂದಿನ ದಶಕದಲ್ಲಿ ಬೆಂಗಳೂರು ಸಿಲಿಕಾನ್ ವ್ಯಾಲಿ ಎಂಬ ಹೆಸರು ಮುಂದುವರಿದು ‘ಪಶ್ಚಿಮದ ಬೆಂಗಳೂರು’ ಎಂದು ಹೆಸರಿಸಿಕೊಳ್ಳುವಂತಾಗಬೇಕು. ಅಂದರೆ ಪಶ್ಚಿಮದ ದೇಶಗಳಲ್ಲಿ ಬೆಂಗಳೂರು ಹೆಸರನ್ನು ಉದಾಹರಣೆಯಾಗಿ ತೆಗೆದುಕೊಳ್ಳುವಂತಾಗಬೇಕು ಎಂದು ರಾಜೀವ್ ಚಂದ್ರಶೇಖರ್ ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ