ಪಾಳು ಭೂಮಿಗೂ ಬರ ಪರಿಹಾರ: ಯಾದಗಿರಿಯಲ್ಲಿ ಕೋಟ್ಯಂತರ ರುಪಾಯಿ ಅವ್ಯವಹಾರ

Published : Jul 07, 2024, 12:06 PM IST
ಪಾಳು ಭೂಮಿಗೂ ಬರ ಪರಿಹಾರ: ಯಾದಗಿರಿಯಲ್ಲಿ ಕೋಟ್ಯಂತರ ರುಪಾಯಿ ಅವ್ಯವಹಾರ

ಸಾರಾಂಶ

ಕೇಂದ್ರ ಸರ್ಕಾರ ನೀಡುವ ಬರ ಪರಿಹಾರ ವಿತರಣೆಯಲ್ಲಿ ಯಾದಗಿರಿ ಜಿಲ್ಲೆಯಲ್ಲಿ ಭಾರೀ ಪ್ರಮಾಣದಲ್ಲಿ ದೋಷಗಳ ಜೊತೆಗೆ, ಕೋಟ್ಯಂತರ ರುಪಾಯಿಗಳ ಅವ್ಯವಹಾರ ನಡೆದ ಬಗ್ಗೆ ದೂರುಗಳು ಕೇಳಿ ಬಂದಿವೆ. 

ಆನಂದ್‌ ಎಂ. ಸೌದಿ

ಯಾದಗಿರಿ (ಜು.07): ಕೇಂದ್ರ ಸರ್ಕಾರ ನೀಡುವ ಬರ ಪರಿಹಾರ ವಿತರಣೆಯಲ್ಲಿ ಯಾದಗಿರಿ ಜಿಲ್ಲೆಯಲ್ಲಿ ಭಾರೀ ಪ್ರಮಾಣದಲ್ಲಿ ದೋಷಗಳ ಜೊತೆಗೆ, ಕೋಟ್ಯಂತರ ರುಪಾಯಿಗಳ ಅವ್ಯವಹಾರ ನಡೆದ ಬಗ್ಗೆ ದೂರುಗಳು ಕೇಳಿ ಬಂದಿವೆ. ಹತ್ತಾರು ವರ್ಷಗಳಿಂದ ಪಾಳು ಬಿದ್ದ ಜಮೀನುಗಳಿಗೆ ಪರಿಹಾರ ಸಿಕ್ಕಿದೆ. ಸಾವಿರಾರು ಅರ್ಹ ಫಲಾನುಭವಿಗಳ ಹೆಸರನ್ನು ಪರಿಹಾರದ ಪಟ್ಟಿಯಿಂದ ಕೈಬಿಡಲಾಗಿದೆ. ನೀರಿನ ಕೊರತೆ ಹಿನ್ನೆಲೆಯಲ್ಲಿ ನಿಷೇಧ ಹೇರಿದ್ದರೂ ಭತ್ತ ಬೆಳೆಯಲಾಗಿತ್ತು. ಆದರೆ ಅಂಥ ಭೂಮಿಯಲ್ಲಿ ‘ಹತ್ತಿ’ ಬೆಳೆಯಲಾಗಿದೆ ಎಂದು ನಮೂದಿಸಿ ಅಂಥವರನ್ನು ಪರಿಹಾರಕ್ಕೆ ಅರ್ಹರನ್ನಾಗಿಸಲಾಗಿದೆ. 

ತೊಗರಿ-ಹತ್ತಿ ಬೆಳೆದ ರೈತರ ಜಮೀನುಗಳಲ್ಲಿ ನಿಷೇಧಿತ ಭತ್ತ ಹಾಗೂ ಮೆಣಸಿನಕಾಯಿ ಬೆಳೆಯಲಾಗಿದೆ ಎಂದು ದಾಖಲೆಗಳಲ್ಲಿ ಸೃಜಿಸಿ, ಪರಿಹಾರ ನೀಡದಿರುವುದು ಕೂಡ ಕಂಡು ಬಂದಿದೆ. ರಾಜ್ಯ ಸಣ್ಣ ಕೈಗಾರಿಕೆ ಖಾತೆ ಹಾಗೂ ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ಅವರ ತವರು ಕ್ಷೇತ್ರದಲ್ಲೇ ಇಂತಹ ಲೋಪಗಳು ನಡೆದಿವೆ ಎಂಬ ಬಲವಾದ ಆರೋಪಗಳು ಕೇಳಿ ಬರುತ್ತಿವೆ. ಇದಕ್ಕೆ ಪೂರಕ ಎನ್ನುವಂತೆ, ಮದ್ದರಕಿ ಗ್ರಾಮವೊಂದರಲ್ಲೇ ನೂರಾರು ಗೋಲ್ಮಾಲ್‌ ಪ್ರಕರಣಗಳು ಮೇಲ್ನೋಟಕ್ಕೆ ಕಂಡು ಬಂದಿವೆ. ಇಲ್ಲಿ ಪರಿಹಾರಕ್ಕಾಗಿ ಸಮೀಕ್ಷೆ ಮಾಡಲಾಗಿರುವ 2,606 ಜಮೀನುಗಳಲ್ಲಿ 599 ರೈತರಿಗೆ ಪರಿಹಾರ ನೀಡಲಾಗಿದೆ. 

ನಮ್ಮ ಕಾಲದಲ್ಲಿ ಯಾವುದೇ ಹಗರಣಗಳಾಗಿಲ್ಲ, ನಡೆದಿರುವುದು ಬಿಜೆಪಿ ಕಾಲದಲ್ಲೇ: ಡಿ.ಕೆ.ಶಿವಕುಮಾರ್‌

ಅಚ್ಚರಿಯೆಂದರೆ, ಇದರಲ್ಲಿ ನಿಷೇಧಿಸಲಾಗಿದ್ದ ಭತ್ತದ ಬೆಳೆ ಬೆಳೆದವರಿಗೂ ಪರಿಹಾರ ನೀಡಲಾಗಿದೆ. ಇನ್ನೊಂದೆಡೆ, ಪ್ರಾಮಾಣಿಕವಾಗಿ ಹಾನಿಗೊಳಗಾದ ಹತ್ತಿ ಹಾಗೂ ತೊಗರಿ ಬೆಳೆಗಾರರಿಗೆ ಪರಿಹಾರವೇ ಸಿಕ್ಕಿಲ್ಲ. ಅಂಥವರು ನಿಷೇಧಿತ ‘ಭತ್ತ’ ಬೆಳೆದಿದ್ದಾರೆಂದು ದಾಖಲೆಗಳಲ್ಲಿ ತೋರಿಸಿ ಪರಿಹಾರದಿಂದ ಅವರನ್ನು ವಂಚಿತರನ್ನಾಗಿಸಲಾಗಿದೆ. ದುಡ್ಡು ಕೊಟ್ಟವರಿಗೆ ಪರಿಹಾರ ಹಣ ನೀಡಲಾಗಿದೆಯೇ ಎಂಬ ಶಂಕೆ ಮೂಡುವಂತೆ ಇಲ್ಲಿನ ಪ್ರಕರಣಗಳು ಕಂಡು ಬಂದಿವೆ. ಈ ಮಧ್ಯೆ, ರಾಜ್ಯ ರೈತ ಸಂಘದ ಜಿಲ್ಲಾ ಸಮಿತಿ ಅಧ್ಯಕ್ಷ ಶರಣು ಮಂದರವಾಡಾ ನೇತೃತ್ವದ ನಿಯೋಗವೊಂದು ಶನಿವಾರ ಜಿಲ್ಲಾಧಿಕಾರಿ ಡಾ.ಸುಶೀಲಾ ಅವರನ್ನು ಭೇಟಿಯಾಗಿ ಈ ಸಂಬಂಧ ಮನವಿ ಸಲ್ಲಿಸಿದೆ.

ಎಫ್‌ಐಡಿ ಮಾಡಿಸಿದ ರೈತನ ಖಾತೆಗೆ ಜಮಾ ಆಗಬೇಕಾದ ಹಣವನ್ನು ಇನ್ನ್ಯಾರದ್ದೋ ಖಾತೆಗೆ ಜಮಾ ಮಾಡಲಾಗಿದೆ. ಕೇಳಿದರೆ, ಬ್ಯಾಂಕಿನವರು ಕೃಷಿ ಇಲಾಖೆಗೆ ಹೋಗಿ ಅಂತಾರೆ, ಕೃಷಿ ಇಲಾಖೆಯವರು ಕಂದಾಯ ಅಧಿಕಾರಿಗಳನ್ನು ಭೇಟಿಯಾಗಿ ಅಂತಾರೆ. ಯಾರ ಖಾತೆಗೆ ಹಣ ಜಮೆಯಾಗಿದೆ ಎಂಬುದರ ಬಗ್ಗೆ ಮಾಹಿತಿಯನ್ನೇ ನೀಡುತ್ತಿಲ್ಲ ಎಂದು ಮಂದರವಾಡಾ ದೂರಿದ್ದಾರೆ. ಈ ನಿಟ್ಟಿನಲ್ಲಿ ತನಿಖೆ ನಡೆಸಿದರೆ ಸತ್ಯ ಬಯಲಾಗಲಿದೆ ಎನ್ನುತ್ತಾರೆ ಮಂದರವಾಡಾ.

ಸಿಡಿ ಫ್ಯಾಕ್ಟರಿ ಬಂದ್ ಆಯ್ತು ಎಂಡಿಎ ಫ್ಯಾಕ್ಟರಿ ಶುರುವಾಯ್ತು: ಡಿಕೆಶಿ ವಿರುದ್ಧ ಎಚ್‌ಡಿಕೆ ಪರೋಕ್ಷ ಆರೋಪ

ಪರಿಹಾರಕ್ಕೆ ಅರ್ಹರಿಲ್ಲದ್ದಿದ್ದರೂ 5 ಸಾವಿರ ರು. ನೀಡಿದವರನ್ನು ಅರ್ಹರನ್ನಾಗಿಸಲಾಗಿದೆ. ಬೇರೆ ಜಾಗದಲ್ಲಿ ತೆಗೆದ ಫೋಟೋಕ್ಕೆ ಜಿಪಿಎಸ್‌ ಫೋಟೋ ಎಂದು ತೋರಿಸಿ ಸರ್ಕಾರಕ್ಕೆ ಕೋಟ್ಯಂತರ ರು.ವಂಚಿಸಲಾಗಿದೆ.
- ಶರಣು ಮಂದರವಾಡಾ, ರಾಜ್ಯ ರೈತ ಸಂಘದ ಜಿಲ್ಲಾ ಸಮಿತಿ ಸಂಘದ ಅಧ್ಯಕ್ಷರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

'ಅಹಿಂದ ಕಿಂಗ್ ಸಿದ್ದರಾಮಯ್ಯ' ಜೀವಂತ ಇರುವಾಗಲೇ ಪರ್ಯಾಯ ನಾಯಕತ್ವದ ಕೂಗು ಏಕೆ?: ಬೈರತಿ ಸುರೇಶ್
ಮಹಿಳಾ ನೌಕರರಿಗೆ ಬ್ಯಾಡ್ ನ್ಯೂಸ್: ಮುಟ್ಟಿನ ರಜೆಗೆ ಹೈಕೋರ್ಟ್ ತಡೆ: ಸರ್ಕಾರದ ಆದೇಶಕ್ಕೆ ಹಿನ್ನಡೆ?