
ಒಂದು ವರ್ಷದ ಹಿಂದೆ ಧರ್ಮಸ್ಥಳದ ವಿರುದ್ಧ ಆರೋಪ ಮಾಡಿದ್ದ 'ಮಾಸ್ಕ್ ಮ್ಯಾನ್' ಚಿನ್ನಯ್ಯ, ಇದೀಗ ತನ್ನದೇ ಸಹಚರರ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ್ದಾನೆ. ಇದು 200 ಕೋಟಿ ರೂಪಾಯಿಯ ಬೃಹತ್ ಷಡ್ಯಂತ್ರ ಎಂದು ಆರೋಪಿಸಿದ್ದು, ಈ ಬೆಳವಣಿಗೆಯು 'ಬುರುಡೆ ಗ್ಯಾಂಗ್'ನಲ್ಲೇ ಆಂತರಿಕ ಕಿತ್ತಾಟಕ್ಕೆ ಕಾರಣವಾಗಿದೆ.
ಬೆಂಗಳೂರು: ಸರಿಯಾಗಿ ಒಂದು ವರ್ಷದ ಹಿಂದೆ ಇಡೀ ಕರ್ನಾಟಕವೇ ಬೆಚ್ಚಿಬೀಳುವಂತೆ ಮಾಡಿದ್ದ ಧರ್ಮಸ್ಥಳದ 'ಮಾಸ್ಕ್ ಮ್ಯಾನ್' ಪ್ರಕರಣ ಈಗ ಮತ್ತೊಂದು ರೋಚಕ ತಿರುವು ಪಡೆದುಕೊಂಡಿದೆ. ಕೈಯಲ್ಲೊಂದು ಬುರುಡೆ ಹಿಡಿದು, 'ನೂರಾರು ಹೆಣಗಳನ್ನು ನಾನೇ ಹೂತು ಹಾಕಿದ್ದೇನೆ' ಎಂದು ಅಬ್ಬರಿಸಿದ್ದ ಮುಸುಕುಧಾರಿ ಮನುಷ್ಯ ಚಿನ್ನಯ್ಯ, ಈಗ ತನ್ನ ಹಳೆಯ ‘ಆಪ್ತರ’ ವಿರುದ್ಧವೇ ಸಮರ ಸಾರಿದ್ದಾನೆ. ಹೈಕೋರ್ಟ್ ಮೆಟ್ಟಿಲೇರಿರುವ ಈತ, ಇದೊಂದು 200 ಕೋಟಿ ರೂಪಾಯಿಯ ಬೃಹತ್ ಷಡ್ಯಂತ್ರ ಎಂದು ಸ್ಫೋಟಕ ಆರೋಪ ಮಾಡಿದ್ದಾನೆ.
ಅಂದು ಹೆಣದ ಕಥೆ, ಇಂದು ಷಡ್ಯಂತ್ರದ ವ್ಯಥೆ!
ಕಳೆದ ವರ್ಷ ಧರ್ಮಸ್ಥಳದ ಪವಿತ್ರ ಕ್ಷೇತ್ರಕ್ಕೆ ಮಸಿ ಬಳಿಯುವ ಪ್ರಯತ್ನವಾಗಿ ಈ 'ಬುರುಡೆ ಗ್ಯಾಂಗ್' ಸಕ್ರಿಯವಾಗಿತ್ತು. ಆವತ್ತು ಚಿನ್ನಯ್ಯನನ್ನು 'ಭೀಮ' ಎಂದು ಕರೆದು ಸುದ್ದಿಗೋಷ್ಠಿ ಮಾಡಿಸಿದ್ದ ಗ್ಯಾಂಗ್, ಈಗ ಆತನಿಂದಲೇ ಸಂಕಷ್ಟಕ್ಕೆ ಸಿಲುಕಿದೆ. ತಾನು ಸಲ್ಲಿಸಿರುವ ರಿಟ್ ಅರ್ಜಿಯಲ್ಲಿ ಚಿನ್ನಯ್ಯ, 'ನನ್ನನ್ನು ಕರೆದುಕೊಂಡು ಬಂದು ಈಗ ಕೈಬಿಟ್ಟಿದ್ದಾರೆ. ಇದರಲ್ಲಿ ದೊಡ್ಡ ವ್ಯಕ್ತಿಗಳ ಕೈವಾಡವಿದೆ' ಎಂದು ಉಲ್ಲೇಖಿಸಿದ್ದಾನೆ ಎನ್ನಲಾಗಿದೆ.
ಆರೋಪ ಪ್ರತ್ಯಾರೋಪಗಳ ಸುರಿಮಳೆ:
ಈ ಸಂಬಂಧ ಪ್ರತಿಕ್ರಿಯಿಸಿರುವ ಗಿರೀಶ್ ಮಟ್ಟೆಣ್ಣವರ್, ಜಯಂತ್ ಸೇರಿದಂತೆ ಬುರುಡೆ ಗ್ಯಾಂಗ್ನ ಪ್ರಮುಖರು, ಚಿನ್ನಯ್ಯ ಒಬ್ಬ ಸುಳ್ಳುಗಾರ ಎಂದು ಜರೆದಿದ್ದಾರೆ. ಅಲ್ಲದೆ, ಆತನ ವಿರುದ್ಧವೇ ಎಸ್ಐಟಿ (SIT) ಕಚೇರಿಗೆ ತೆರಳಿ ದೂರು ದಾಖಲಿಸಿದ್ದಾರೆ. ಅತ್ತ ಅರ್ಜಿಯಲ್ಲಿ ಹೆಸರಿಸಲಾದ ರಮಾ ನಾಗರಾಜ್ ಅವರು, 'ನಾನು ಆತನನ್ನು ಟಿವಿಯಲ್ಲಿ ನೋಡಿದ್ದೇ ಹೊರತು ನೇರವಾಗಿ ಭೇಟಿಯಾಗಿಲ್ಲ' ಎಂದು ಸ್ಪಷ್ಟನೆ ನೀಡಿದ್ದಾರೆ.
ಒಟ್ಟಿನಲ್ಲಿ, ಧರ್ಮಸ್ಥಳದ ಹೆಸರಿಗೆ ಮಸಿ ಬಳಿಯಲು ನಡೆದ ಈ ನಾಟಕ ಈಗ ಆ ಪಾತ್ರಧಾರಿಗಳ ನಡುವಿನ ಕಿತ್ತಾಟಕ್ಕೆ ನಾಂದಿಯಾಗಿದೆ. ಎಸ್ಐಟಿ ತನಿಖೆ ಚುರುಕುಗೊಂಡಿದ್ದು, ಈ 200 ಕೋಟಿಯ ಷಡ್ಯಂತ್ರದ ಹಿಂದೆ ಅಡಗಿರುವ ಅಸಲಿ ಮುಖಗಳು ಯಾವುವು? ಈ ಬುರುಡೆ ಗ್ಯಾಂಗ್ಗೆ ಜೈಲಾಗುತ್ತಾ? ಎಂಬ ಪ್ರಶ್ನೆಗಳಿಗೆ ಕಾಲವೇ ಉತ್ತರ ನೀಡಬೇಕಿದೆ.