
ವರದಿ: ರವಿ.ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್
ಕೊಡಗು (ಆ.26): ಬಿಜೆಪಿಯ ಈಗಿನ ರಾಜ್ಯ ನಾಯಕತ್ವದಲ್ಲಿ ಮುಂದಿನ ಲೋಕಸಭೆಯನ್ನೂ ಗೆಲ್ಲುವುದಕ್ಕೆ ಸಾಧ್ಯವಿಲ್ಲ ಎನ್ನುವುದು ಮೋದಿಯವರಿಗೆ ಗೊತ್ತಾಗಿದೆ. ಹೀಗಾಗಿಯೇ ಅವರು ಇಂದು ಬೆಂಗಳೂರಿಗೆ ಆಗಮಿಸಿದ್ದ ಸಂದರ್ಭ ಬಿಜೆಪಿಯ ಯಾರನ್ನೂ ಹತ್ತಿರ ಸೇರಿಸಿಲ್ಲ. ರಾಜ್ಯ ನಾಯಕರು ಕೂಡ ಜನ ಸಾಮಾನ್ಯರಂತೆ ಒಂದು ಮೂಲೆಯಲ್ಲಿ ನಿಂತು ಕೈಬೀಸುವ ಸ್ಥಿತಿ ಬಂದಿದೆ ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ಲೇವಡಿ ಮಾಡಿದರು.
ಕೊಡಗಿನ ಪೊನ್ನಂಪೇಟೆ ತಾಲ್ಲೂಕಿನ ತಿತಿಮತಿಗೆ ಭೇಟಿ ನೀಡಿದ್ದ ಸಂದರ್ಭ ಅವರು ಮಾಧ್ಯಮಗಳೊಂದಿಗೆ ಮಾತನಾಡಿದರು. ವಿಧಾನಸಭಾ ಚುನಾವಣೆ(Assembly election 2023)ಯಲ್ಲೂ ಬಿಜೆಪಿಯವರು ಹೀನಾಯವಾಗಿ ಸೋತಿದ್ದಾರೆ. ಲೋಕಸಭಾ ಚುನಾವಣೆ(Loksabha election 2024)ಯಲ್ಲೂ ಇದೆ ಸ್ಥಿತಿ ಅವರಿಗೆ ಮುಂದುವರಿಯಲಿದೆ. ಅದರ ಪ್ರತಿಬಿಂಬ ಇದು ಎಂದು ಈಶ್ವರ್ ಖಂಡ್ರೆ(Forest minister eshwar khandre) ಲೇವಡಿ ಮಾಡಿದರು. ಇನ್ನು ಇಸ್ರೋ(ISRO)ಗೆ ಪ್ರತೀ ವರ್ಷ ಕೇಂದ್ರ ಸರ್ಕಾರ ಅನುದಾನ ಕಡಿತ ಮಾಡುತ್ತಿರುವ ವಿಷಯಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಈಶ್ವರ್ ಖಂಡ್ರೆ ಅವರು ಇಸ್ರೋ ಸಂಸ್ಥೆ ಆರಂಭವಾಗಿದ್ದು ನಮ್ಮ ನೆಚ್ಚಿನ ಪ್ರಧಾನಿಯಾಗಿಧ್ದ ನೆಹರು ಅವರ ಸಂದರ್ಭದಲ್ಲಿ. ಆ ಕೀರ್ತಿ ಅವರಿಗೆ ಸಲ್ಲುತ್ತದೆ. ಇಂದು ಇಸ್ರೋ ವಿಜ್ಞಾನಿಗಳು ಅದ್ಭುತ ಕಾರ್ಯ ಮಾಡಿದ್ದಾರೆ. ಅವರನ್ನು ಪ್ರಸಂಶೆ ಮಾಡುವುದು ನಮ್ಮೆಲ್ಲರ ಆದ್ಯ ಕರ್ತವ್ಯ. ಹೀಗಾಗಿ ಇಸ್ರೋ ವಿಜ್ಞಾನಿಗಳಿಗೆ ನಮ್ಮ ಪಕ್ಷದ ಪರವಾಗಿ ಆರ್ಥಿಕ ಅಭಿನಂದನೆ ಸಲ್ಲಿಸುತ್ತೇನೆ ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ಹೇಳಿದರು.
ಇಸ್ರೋ ಅಭಿವೃದ್ಧಿ ಕೆಲಸದಲ್ಲಿ ನಾವು ರಾಜಕೀಯ ಮಾಡುವುದಿಲ್ಲ. ಆದರೆ ಇಸ್ರೋಗೆ ಅನುದಾನದ ಕೊರತೆ ಇದ್ದರೆ ಬಿಡುಗಡೆ ಮಾಡುವಂತೆ ಒತ್ತಾಯ ಮಾಡುತ್ತೇವೆ ಎಂದಿದ್ದಾರೆ. ಕೊಡಗು ಜಿಲ್ಲೆಯಲ್ಲಿ ಸಾವಿರಕ್ಕೂ ಅಧಿಕ ಆನೆಗಳಿದ್ದು, ಅವುಗಳ ಪೈಕಿ 200 ಕ್ಕೂ ಹೆಚ್ಚು ಆನೆಗಳು ನಿತ್ಯ ನಾಡಿನತ್ತ ನುಗ್ಗುತ್ತಿವೆ. ಹೀಗಾಗಿ ಅವುಗಳನ್ನು ಸ್ಥಳಾಂತರ ಮಾಡಲು ಚಿಂತನೆ ನಡೆಸಲಾಗಿದೆ ಎಂದು ಈಶ್ವರ್ ಕುಮಾರ್ ಖಂಡ್ರೆ ಹೇಳಿದರು.
ಕೊಡಗು: ಆನೆ ದಾಳಿಯಿಂದ ಜೀವಹಾನಿ ಆಗದಂತೆ ಕ್ರಮ ವಹಿಸಲು ಸಚಿವ ಖಂಡ್ರೆ ಸೂಚನೆ
ಕೊಡಗಿನಲ್ಲಿ ಕಳೆದ ಎರಡು ವಾರಗಳಲ್ಲಿ ಮೂರು ಜನರು ಕಾಡಾನೆ ದಾಳಿಗೆ ಮೃತಪಟ್ಟಿರುವ ಹಿನ್ನೆಲೆಯಲ್ಲಿ ಪೊನ್ನಂಪೇಟೆ ತಾಲ್ಲೂಕಿನ ತಿತಿಮತಿ ಹಾಗೂ ಬಂಬುಕಾಡು ಹಾಡಿಗೆ ಭೇಟಿ ನೀಡಿ ಬಳಿಕ ಮಾತನಾಡಿದರು. ಆನೆ ಮತ್ತು ಮಾನವ ಸಂಘರ್ಷಕ್ಕೆ ಇತಿಶ್ರೀ ಹಾಡಲು ರಾಜ್ಯ ಸರ್ಕಾರ ದಿಟ್ಟಹೆಜ್ಜೆ ಇಟ್ಟಿದೆ. ಕೊಡಗಿನಲ್ಲಿ ಸಾವಿರಕ್ಕೂ ಹೆಚ್ಚು ಆನೆಗಳಿದ್ದು, ಅದರಲ್ಲಿ 70 ಆನೆಗಳು ಈಗಾಗಲೇ ಕಾಡು ಬಿಟ್ಟು ನಾಡಿಗೆ ಬಂದು ಬೀಡುಬಿಟ್ಟಿರುವ ಮಾಹಿತಿ ಇದೆ. ಜೊತೆಗೆ 200 ಆನೆಗಳು ಕಾಡಿನಿಂದ ನಾಡಿಗೆ ಬಂದು ಹೋಗುತ್ತಿವೆ. ಹೀಗಾಗಿ 200 ಕಾಡಾನೆಗಳನ್ನು ಸ್ಥಳಾಂತರಿಸಲು ಚಿಂತನೆ ಇದೆ ಎಂದರು.
ಮಾನವ ಜೀವಹಾನಿ ಹಾಗೂ ಜನವಸತಿ ಪ್ರದೇಶಗಳಿಗೆ ಲಗ್ಗೆ ಇಡುತ್ತಿರುವುದರಿಂದ ಪುಂಡಾನೆಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ರೇಡಿಯೋ ಕಾಲರ್ ಅಳವಡಿಸಿ ನಾಡಿಗೆ ಬರುವುದನ್ನು ತಪ್ಪಿಸಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದಿದ್ದಾರೆ. ಈಗಾಗಲೇ ಜಿಲ್ಲೆಯಲ್ಲಿ ನಿರ್ಮಾಣವಾಗುತ್ತಿರುವ ರೈಲ್ವೇ ಬ್ಯಾರಿಕೇಡ್ ಜೊತೆಗೆ ಇನ್ನೂ ಹೆಚ್ಚುವರಿಯಾಗಿ 5 ಕಿಲೋ ಮೀಟರ್ ರೈಲ್ವೇ ಬ್ಯಾರಿಕೇಡ್ ನಿರ್ಮಿಸಲಾಗುವುದು ಎಂದರು. ಜೊತೆಗೆ ಜಿಲ್ಲೆಯಲ್ಲಿ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಹುದ್ದೆ ಖಾಲಿ ಇದ್ದು ಶೀಘ್ರ ನೇಮಕ ಮಾಡಲಾಗುವುದು ಎಂದು ಭರವಸೆ ನೀಡಿದರು.
ಅಕ್ರಮ ಕಟ್ಟಡ, ಸೈಟಿಗೆ ದುಪ್ಪಟ್ಟು ಆಸ್ತಿ ತೆರಿಗೆ?: ಸಚಿವ ಈಶ್ವರ ಖಂಡ್ರೆ
ಬಿಜೆಪಿ ಸರ್ಕಾರದ ಸಂದರ್ಭದಲ್ಲಿ ಕಾಡಾನೆ ಹಾವಳಿ ಸಮಸ್ಯೆಯನ್ನು ಬಿಜೆಪಿ ಬಗೆಹರಿಸುವ ಕಡೆಗೆ ಗಮನವನ್ನೇ ಹರಿಸಿಲ್ಲ. ಬಿಜೆಪಿ ಸರ್ಕಾರದ ಸಂದರ್ಭದಲ್ಲಿ ಯಾವುದೇ ಅಭಿವೃದ್ಧಿ ಕೆಲಸ ಮಾಡದೆ ಮಲಗಿತ್ತು. ಅರಣ್ಯ ಇಲಾಖೆಯಲ್ಲಿ ಯಾವುದೇ ಅಭಿವೃದ್ಧಿ ಕೆಲಸ ಆಗಿಲ್ಲ. ನಮ್ಮ ಸರ್ಕಾರ ಕಾಡಾನೆ ಸಮಸ್ಯೆಗೆ ಇತಿಶ್ರೀ ಹಾಡಲಿದೆ. ಈ ನಿಟ್ಟಿನಲ್ಲಿ ಅರಣ್ಯ ಇಲಾಖೆ ಹಿರಿಯ ಅಧಿಕಾರಿಗಳೊಂದಿಗೆ ಭೇಟಿ ನೀಡಿದ್ದೇನೆ ಎಂದು ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ