ಅಧಿವೇಶನಕ್ಕೆ ಬರುವ ಎಲ್ಲರಿಗೂ ಕೋವಿಡ್‌ ಟೆಸ್ಟ್‌

By Kannadaprabha NewsFirst Published Sep 9, 2020, 9:13 AM IST
Highlights

ಅಧಿವೇಶನಕ್ಕೆ ಹಾಜರಾಗುವ ಎಲ್ಲರಿಗೂ ಕೊರೋನಾ ಪರೀಕ್ಷೆ ಮಾಡಿಸುವುದು ಕಡ್ಡಾಯವಾಗಿದೆ. ಅಧಿವೇಶನಕ್ಕೆ ಹಾಜರಾಗುವ ಮೂರು ದಿನ ಮೊದಲೇ ಕೊರೋನಾ ಟೆಸ್ಟ್‌ಗೆ ಒಳಗಾಗಿರಬೇಕು.

ಬೆಂಗಳೂರು (ಸೆ.09):  ಇದೇ ತಿಂಗಳು 21ರಿಂದ ಆರಂಭವಾಗುವ ಮಳೆಗಾಲದ ಅಧಿವೇಶನ ಕಲಾಪದಲ್ಲಿ ಭಾಗವಹಿಸುವ ಮುಖ್ಯಮಂತ್ರಿಯಾದಿಯಾಗಿ ಸಚಿವರು, ಶಾಸಕರು, ಅಧಿಕಾರಿಗಳು ಮತ್ತು ಮಾಧ್ಯಮದವರು ಕಡ್ಡಾಯವಾಗಿ ಮೂರು ದಿನ ಮೊದಲೇ ಕೋವಿಡ್‌ ಪರೀಕ್ಷೆಗೊಳಬೇಕು ಎಂದು ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ನಿರ್ದೇಶನ ನೀಡಿದ್ದಾರೆ.

ವಿಧಾನಸೌಧದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊರೋನಾ ಸೋಂಕು ಒಬ್ಬರಿಂದ ಒಬ್ಬರಿಗೆ ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಸೆ.21ರಿಂದ ಅಧಿವೇಶನ ನಡೆಯಲಿದ್ದು, ಸೆ.18ರಂದು ವಿಧಾನಸೌಧದಲ್ಲಿ ಕೋವಿಡ್‌ ಪರೀಕ್ಷೆ ವ್ಯವಸ್ಥೆ ಮಾಡಲಾಗಿದೆ ಎಂದರು.

ಕೊರೋನಾ ಭೀತಿ ನಡುವೆಯೂ ಕರ್ನಾಟಕದಲ್ಲಿ ಚುನಾವಣೆಗೆ ಮುಹೂರ್ತ ಫಿಕ್ಸ್ ...

ವಿಧಾನಮಂಡಲ ಅಧಿವೇಶನ ಆರಂಭವಾಗುವ 72 ಗಂಟೆ ಮೊದಲು ಸಚಿವರು, ಶಾಸಕರು ತಮ್ಮ ಕ್ಷೇತ್ರದ ಆಸ್ಪತ್ರೆಯಲ್ಲಿ ಪರೀಕ್ಷೆ ಮಾಡಿಸಿಕೊಳ್ಳಬಹುದು. ಅದು ಸಾಧ್ಯವಾಗದಿದ್ದರೆ ವಿಧಾನಸೌಧದಲ್ಲಿ ಪರೀಕ್ಷೆ ವ್ಯವಸ್ಥೆ ಇರುತ್ತದೆ. ಅಲ್ಲಿ ಕಡ್ಡಾಯವಾಗಿ ಮಾಡಿಸಿಕೊಳ್ಳಬೇಕು. ಅಧಿವೇಶನದಲ್ಲಿ ಭಾಗವಹಿಸುವ ಮುಖ್ಯಮಂತ್ರಿ ಸೇರಿದಂತೆ ಸಚಿವರು, ಶಾಸಕರು, ಅಧಿಕಾರಿಗಳು ಮತ್ತು ಮಾಧ್ಯಮದವರು ಕಡ್ಡಾಯವಾಗಿ ಪರೀಕ್ಷೆ ಮಾಡಿಸಿಕೊಳ್ಳಬೇಕು. ಆರೋಗ್ಯ ಅಧಿಕಾರಿಗಳು ದೃಢೀಕರಿಸಿದ ಪ್ರಮಾಣ ಪತ್ರವನ್ನು ಪ್ರದರ್ಶಿಸಬೇಕು ಎಂದು ಹೇಳಿದರು.

ಪ್ರತಿಯೊಬ್ಬರು ಆರ್‌ಟಿಪಿಸಿಆರ್‌ ಪರೀಕ್ಷೆಗೊಳಪಡಬೇಕು. 70 ವರ್ಷದ ದಾಟಿದ ಹಿರಿಯರು ಕೂಡ ಕಲಾಪದಲ್ಲಿ ಭಾಗವಹಿಸಲು ಅವಕಾಶ ಇದೆ. ಅಧಿವೇಶನದಲ್ಲಿ ಕಡ್ಡಾಯವಾಗಿ ಸಾಮಾಜಿಕ ಅಂತರ, ಥರ್ಮಲ್‌ ಟೆಸ್ಟ್‌ ಮುಖ ಗವಸು ಧರಿಸುವುದು ಸೇರಿದಂತೆ ಕೊವಿಡ್‌ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕು. ಆರೋಗ್ಯ ಸಚಿವ ಶ್ರೀರಾಮುಲು, ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌ ಮತ್ತು ಆರೋಗ್ಯ ಇಲಾಖೆ ಅಧಿಕಾರಿಗಳ ಜತೆ ಸಭೆ ನಡೆಸಿ ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಕಲಾಪವು ಸುಸೂತ್ರವಾಗಿ ನಡೆಯುವ ಸಂಬಂಧ ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪಗೆ ಸಿದ್ದರಾಮಯ್ಯ ಪತ್ರ

ಪ್ರತಿಪಕ್ಷಗಳು ಪ್ರತಿಭಟನೆ, ಬಾವಿಗಿಳಿದು ಧರಣಿ ನಡೆಸಲು ಮುಕ್ತ ಅವಕಾಶ ಇದೆ. ಆದರೆ, ಕೋವಿಡ್‌ ಸಮಸ್ಯೆ ಇರುವ ಕಾರಣ ಪ್ರತಿಪಕ್ಷಗಳು ಸಹ ಅರ್ಥ ಮಾಡಿಕೊಳ್ಳಬೇಕು. ಒಟ್ಟೊಟ್ಟಿಗೆ ಸೇರುವುದು ಸೂಕ್ತವಲ್ಲ ಎಂಬುದು ಅವರಿಗೂ ತಿಳಿದಿದೆ. ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು ಪ್ರತಿಪಕ್ಷದ ಸದಸ್ಯರು ಕಲಾಪದಲ್ಲಿ ಭಾಗವಹಿಸಲಿದ್ದಾರೆ ಎಂಬ ವಿಶ್ವಾಸ ಇದೆ. ಇದಲ್ಲದೇ, ಸದನದಲ್ಲಿ ಈಗಾಗಲೇ ನಿಗದಿ ಮಾಡಿರುವಂತೆ ಪ್ರಶ್ನೋತ್ತರ ಅವಧಿ, ಗಮನ ಸೆಳೆಯುವ ಸೂಚನೆ ಸೇರಿದಂತೆ ಎಲ್ಲವು ನಡೆಯಲಿದೆ. ಪ್ರತಿಯೊಬ್ಬರು ಸಮಯ ನಿಗದಿ ಮಾಡಿಕೊಳ್ಳಬೇಕು. ಇದರಿಂದ ಪ್ರತಿಯೊಬ್ಬರಿಗೂ ಮಾತನಾಡಲು ಅವಕಾಶ ಸಿಗಲಿದೆ ಎಂದು ಅಭಿಪ್ರಾಯಪಟ್ಟರು.

ಕೋವಿಡ್‌ ಪರಿಸ್ಥಿತಿ ಹಿನ್ನೆಲೆಯಲ್ಲಿ ಕ್ಯಾಂಟೀನ್‌ ವ್ಯವಸ್ಥೆಯಲ್ಲಿಯೂ ಮಾರ್ಪಾಡು ಮಾಡಲಾಗಿದೆ. ಸಚಿವರ, ಶಾಸಕರ ಆಪ್ತಸಹಾಯಕರು, ಗನ್‌ಮ್ಯಾನ್‌ಗಳು, ಅಧಿಕಾರಿಗಳು ಸೇರಿದಂತೆ ಇತರರಿಗೆ ಕ್ಯಾಂಟೀನ್‌ ವ್ಯವಸ್ಥೆಯನ್ನು ಬೇರ್ಪಡಿಸಲಾಗಿದೆ. ಯಾರಿಗೆ ಯಾವ ಸ್ಥಳದಲ್ಲಿ ಕ್ಯಾಂಟೀನ್‌ ವ್ಯವಸ್ಥೆ ಮಾಡಲಾಗಿದೆಯೋ, ಅಲ್ಲಿಯೇ ತೆರಳಿ ಭೋಜನ ಮಾಡಬೇಕು ಎಂದರು.

click me!