ತೋಟದ ಕೆಲಸ ಅಡುಗೆ ಕೆಲಸ ಮಾಡುತ್ತ ವಕೀಲರು ಕಲಾಪಕ್ಕೆ ಹಾಜರಾಗಿದ್ದು ಈ ಸಂಬಂಧ ಅಸಮಾಧಾನ ವ್ಯಕ್ತಪಡಿಸಲಾಗಿದೆ.
ಬೆಂಗಳೂರು (ಸೆ.09): ರಾಜ್ಯದಲ್ಲಿ ನ್ಯಾಯಾಲಯಗಳ ಕಲಾಪಗಳಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರಾದ ವೇಳೆ ಕೆಲ ವಕೀಲರು ನಿಗದಿತ ಸಮವಸ್ತ್ರವನ್ನು ಧರಿಸದಿರುವ, ಕಾರು ಮತ್ತು ಆಟೋದಲ್ಲಿ ಪ್ರಯಾಣಿಸುತ್ತಾ ಮತ್ತು ತೋಟದಲ್ಲಿ ಕೆಲಸ ಮಾಡುತ್ತಾ ವಿಚಾರಣೆಗೆ ಹಾಜರಾದ ಪ್ರಕರಣಗಳ ವಿರುದ್ಧ ಕರ್ನಾಟಕ ವಕೀಲರ ಪರಿಷತ್ತು ಅಸಮಾಧಾನ ವ್ಯಕ್ತಪಡಿಸಿದೆ.
ಅಲ್ಲದೆ, ಈ ಇಂತಹ ಪ್ರಕರಣಗಳು ಗಮನಕ್ಕೆ ಬಂದ ಪಕ್ಷದಲ್ಲಿ ವಕೀಲರ ಮೇಲೆ ವಕೀಲರ ಅಧಿನಿಯಮ ಕಲಂ 35 ಅಡಿಯಲ್ಲಿ ಶಿಸ್ತು ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಪರಿಷತ್ ಎಚ್ಚರಿಕೆ ಸಹ ನೀಡಿದೆ.
ಕೆಲ ವಕೀಲರು ಕಾರು, ಆಟೋದಲ್ಲಿ ಪ್ರಯಾಣಿಸುತ್ತಾ, ಅಡುಗೆ ಮನೆ ಮತ್ತು ತೋಟದಲ್ಲಿ ಕೆಲಸ ಮಾಡುತ್ತಾ ವಿಡಿಯೋ ಕಾನ್ಫರೆನ್ಸ್ನಲ್ಲಿ ಹಾಜರಾಗಿದ್ದಾರೆ. ಕಲಾಪದಲ್ಲಿದ್ದಾಗಲೇ ವಕೀಲರು ಆಡಿಯೋ ಮ್ಯೂಟ್ ಮಾಡದೆಯೇ ಕೆಟ್ಟಶಬ್ದ ಬಳಸಿ ಕಲಾಪಗಳಿಗೆ ತೊಂದರೆ ಮಾಡುತ್ತಿರುವುದು ಗಮನಕ್ಕೆ ಬಂದಿರುತ್ತದೆ ಎಂದು ಪರಿಷತ್ ತಿಳಿಸಿದೆ.