Corona, Omicron Update: ಕರ್ನಾಟಕದಲ್ಲಿ ಕೊರೋನಾ ಏರಿಳಿತ, ಒಮಿಕ್ರಾನ್ ಸಂಖ್ಯೆ ಏರಿಕೆ

By Suvarna NewsFirst Published Dec 16, 2021, 11:02 PM IST
Highlights

* ರಾಜ್ಯದಲ್ಲಿ ಕೊರೋನಾ ಆತಂಕದ ಮಧ್ಯೆ ಒಮಿಕ್ರಾನ್ ಭೀತಿ
* ಕರ್ನಾಟಕದಲ್ಲಿ ಏರಿಕೆ ಕಾಣುತ್ತಿರುವ ಒಮಿಕ್ರಾನ್ ಸಂಖ್ಯೆ
* ಮತ್ತೆ ಐವರಲ್ಲಿ ಒಮಿಕ್ರಾನ್ ಸೋಂಕು ಪತ್ತೆ

ಬೆಂಗಳೂರು, (ಡಿ,16): ಕರ್ನಾಟಕದಲ್ಲಿ ಕೊರೋನಾ ಪಾಸಿಟಿವ್ ಕೇಸ್‌ ಸಂಖ್ಯೆ ಕಡಿಮೆಯಾಗುತ್ತಿದ್ದರೆ, ರೂಪಾಂತರಿ ವೈರಸ್ ಒಮಿಕ್ರಾನ್ ಸಂಖ್ಯೆ ಏರಿಕೆಯಾಗುತ್ತಿದೆ.

ಹೌದು..ಇಂದು (ಗುರುವಾರ)  5 ಒಮಿಕ್ರಾನ್ ಸೋಂಕು ದೃಢಪಟ್ಟಿದೆ. ಈ ಮೂಲಕ ರಾಜ್ಯದಲ್ಲಿ  ಈವರೆಗೆ ಒಟ್ಟು ಒಮಿಕ್ರಾನ್ ಸೋಂಕಿತರ ಸಂಖ್ಯೆ 8ಕ್ಕೆ ಏರಿಕೆಯಾಗಿದೆ.

Omicron variant : ಬೆಂಗಳೂರಿನ ಒಮಿಕ್ರೋನ್‌ ಸೋಂಕಿತ ಗುಣಮುಖ

ಈ ಪೈಕಿ ನಾಲ್ಕು ಪ್ರಕರಣಗಳು ಹೈರಿಸ್ಕ್ ದೇಶದ ಸಂಪರ್ಕದಿಂದ ಬಂದಿವೆ. ಒಂದು ಪ್ರಕರಣದಲ್ಲಿ ಟ್ರಾವೆಲ್ ಹಿಸ್ಟರಿ ಇಲ್ಲದೆ ಸೋಂಕು ದೃಢಪಟ್ಟಿದೆ. ವಿದೇಶಿಯರ ಸಂಪರ್ಕದಿಂದ ಸೋಂಕು ಬಂದಿರುವ ಸಾಧ್ಯತೆಯಿದೆ ಎಂದು ಶಂಕಿಸಲಾಗಿದೆ. ಹೈರಿಸ್ಕ್ ದೇಶದಿಂದ ಬರುವ ಪ್ರಯಾಣಿಕರ ಮೇಲೆ ಹೆಚ್ಚು ನಿಗಾ ಇಡಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಅಧಿಕಾರಿಗಳಿಗೆ ಸೂಚಿಸಿದೆ.

ಬೆಳಗಾವಿಯಲ್ಲಿಯೂ ವ್ಯಕ್ತಿಯೊಬ್ಬರಲ್ಲಿ ಒಮಿಕ್ರಾನ್ ಸೋಂಕು ದೃಢಪಟ್ಟಿದೆ. 52 ವರ್ಷದ ಈ ವ್ಯಕ್ತಿಗೆ ನೈಜಿರಿಯಾದಿಂದ ಬೆಂಗಳೂರಿಗೆ ಬಂದಿದ್ದರು. ಬಳಿಕ ಬೆಳಗಾವಿಗೆ ಪ್ರಯಾಣ ಮಾಡಿದ್ದರು. ಪ್ರಸ್ತುತ ಸೋಂಕಿತ ವ್ಯಕ್ತಿಯು ಬೆಳಗಾವಿ ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದಾರೆ. 13ನೇ ತಾರೀಖು ಇವರಲ್ಲಿ ಒಮಿಕ್ರಾನ್ ಸೋಂಕು ದೃಢಪಟ್ಟಿತ್ತು. ಇವರೊಂದಿಗೆ ಸಂಪರ್ಕದಲ್ಲಿದ್ದ ಇಬ್ಬರು ಪ್ರಾಥಮಿಕ ಸಂಪರ್ಕಿತರನ್ನು ಗುರುತಿಸಲಾಗಿದೆ.

ಮದುವೆಗೆ ಹೋಗಿ ಬಂದಿದ್ದವರಿಗೆ ಒಮಿಕ್ರಾನ್
ದೆಹಲಿಯಲ್ಲಿ ನಡೆದ ಮದುವೆ ಕಾರ್ಯಕ್ರಮಕ್ಕೆ ಹೋಗಿಬಂದಿದ್ದ ಇಬ್ಬರಿಗೆ ಒಮಿಕ್ರಾನ್ ಸೋಂಕು ದೃಢಪಟ್ಟಿದೆ. ದೆಹಲಿಯಲ್ಲಿ ಒಮಿಕ್ರಾನ್ ದೃಢಪಟ್ಟ ಸೋಂಕಿತನ ಪ್ರಾಥಮಿಕ ಸಂಪರ್ಕಿತರು ಬೆಂಗಳೂರಿನ ಮಹದೇವಪುರ ನಿವಾಸಿಗಳು. 70 ವರ್ಷದ ಮಹಿಳೆ, 36 ವರ್ಷದ ಪುರುಷ ಸೋಂಕಿತರಿಗೆ ಒಮಿಕ್ರಾನ್ ದೃಢಪಟ್ಟಿತ್ತು. ಡಿಸೆಂಬರ್ 3ರಂದು ಇವರು ದೆಹಲಿಯಿಂದ ವಾಪಸ್ ಬಂದಿದ್ದರು. ಈ ಇಬ್ಬರಿಂದ ಮತ್ತೆ ನಾಲ್ವರಲ್ಲಿ ಸೋಂಕು ದೃಢಪಟ್ಟಿದೆ. ಮಹದೇವಪುರ ವಲಯದ ಒಮಿಕ್ರಾನ್ ಪ್ರಕರಣವು ಆತಂಕವನ್ನು ಹೆಚ್ಚಿಸಿದೆ.

ಇಂಗ್ಲೆಂಡ್​ನಿಂದ ಹಿಂದಿರುಗಿದ್ದ ಯುವತಿಗೆ ಒಮಿಕ್ರಾನ್
ಇಂಗ್ಲೆಂಡ್​ನಿಂದ ವಾಪಸಾಗಿದ್ದ ಯುವತಿಯಲ್ಲಿ ಒಮಿಕ್ರಾನ್​ ದೃಢಪಟ್ಟಿದೆ. ಯುವತಿಯು ಡಿ.13ರಂದು ಇಂಗ್ಲೆಂಡ್​ನಿಂದ ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಬಂದಿದ್ದರು. ಮೊದಲಿಗೆ ಟೆಸ್ಟ್​ ಮಾಡಿದಾಗ ಕೊವಿಡ್​ ಪಾಸಿಟಿವ್​ ಬಂದಿತ್ತು. ಡಿ.13ರಂದೇ ಬೆಂಗಳೂರಿನ ಬೌರಿಂಗ್​ ಆಸ್ಪತ್ರೆಗೆ ಆಕೆಯನ್ನು ದಾಖಲಿಸಲಾಗಿತ್ತು. ನಂತರ ಡಿ.14ರಂದು ಯುವತಿಯ ಮನವಿ ಮೇರೆಗೆ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ಸದ್ಯಕ್ಕೆ ಸೋಂಕಿತ ಯುವತಿಯ ಆರೋಗ್ಯ ಸ್ಥಿರವಾಗಿದೆ. ಒಮಿಕ್ರಾನ್​ ಸೋಂಕಿತೆ ಯಾರ ಜತೆಗೂ ಸಂಪರ್ಕದಲ್ಲಿರಲಿಲ್ಲ ಎಂದು ತಿಳಿದುಬಂದಿದೆ. 

ರಾಜ್ಯದಲ್ಲಿ 303 ಮಂದಿಗೆ ಕೊರೋನಾ
ರಾಜ್ಯದಲ್ಲಿ ಕೊರೋನಾ ಪ್ರಕರಣಗಳ ಏರಿಳಿತ ಮುಂದುವರೆದಿದೆ. ಕಳೆದ 24 ಗಂಟೆಗಳಲ್ಲಿ ರಾಜ್ಯದಲ್ಲಿ ಹೊಸದಾಗಿ 303 ಮಂದಿಗೆ ಕೊರೋನಾ ಸೋಂಕು ತಗುಲಿದೆ. ಇಬ್ಬರು ಮೃತಪಟ್ಟಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಈವರೆಗೆ 30,01,554 ಮಂದಿಗೆ ಸೋಂಕು ತಗುಲಿದ್ದು, ಈವರೆಗೆ ಮಾರಕ ಕೊರೋನಾಕ್ಕೆ 38,279 ಜನ ಪ್ರಾಣ ಕಳೆದುಕೊಂಡಿದ್ದಾರೆ.  

ರಾಜ್ಯದಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ 322 ಸೋಂಕಿತರು ಗುಣಮುಖರಾಗಿದ್ದಾರೆ. ಈ ಮೂಲಕ ಕೊರೋನಾ ಸೋಂಕಿನಿಂದ ಚೇತರಿಸಿಕೊಂಡವರ ಸಂಖ್ಯೆ 29,56,088ಕ್ಕೇರಿದೆ. ರಾಜ್ಯದಲ್ಲಿ ಶೇ.0.23ರಷ್ಟು ಪಾಸಿಟಿವಿಟಿ ಪ್ರಮಾಣವಿದ್ದು, 0.66 ರಷ್ಟು ಸಾವಿನ ಪ್ರಮಾಣವಿದೆ. ಸದ್ಯ ರಾಜ್ಯದಲ್ಲಿ 7,158 ಸಕ್ರಿಯ ಪ್ರಕರಣಗಳಿವೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ. ಬೆಂಗಳೂರಿನಲ್ಲಿ 197 ಹೊಸ ಪ್ರಕರಣಗಳು ದಾಖಲಾಗಿದ್ದು, ಇಬ್ಬರು ಮೃತಪಟ್ಟಿದ್ದಾರೆ.

ಜಿಲ್ಲಾವಾರು ಪ್ರಕರಣಗಳನ್ನು ನೋಡುವುದಾದರೆ ಬಾಗಲಕೋಟೆ 01,ಬೆಳಗಾವಿ05, ಚಾಮರಾಜನಗರ 01, ಚಿಕ್ಕಮಗಳೂರು 06, ಚಿತ್ರದುರ್ಗ 01, ದಕ್ಷಿಣ ಕನ್ನಡ 15, ಧಾರವಾಡ 04, ಗದಗ01 ಹಾಸನ 07, ಕೊಡಗು 13, ಕೋಲಾರ 01, ಮಂಡ್ಯ 03, ಮೈಸೂರು 21, ರಾಯಚೂರು 03, ಶಿವಮೊಗ್ಗ 06, ತುಮಕೂರು 06, ಉಡುಪಿ,03, ಉತ್ತರ ಕನ್ನಡ 09 ಪ್ರಕರಣಗಳು ದಾಖಲಾಗಿವೆ. ಉಳಿದಂತೆ ಬೆಂಗಳೂರು ಹೊರತುಪಡಿಸಿ ಎಲ್ಲಾ ಜಿಲ್ಲೆಗಳಲ್ಲಿ ಯಾವುದೇ ಸಾವು ದಾಖಲಾಗಿಲ್ಲ,.

click me!