
ಬೆಂಗಳೂರು (ನ.14): ಬಡವರಿಗೆ ಕೈಗೆಟಕುವ ದರದಲ್ಲಿ ಮನೆ ಸಿಗುವಂತಾಗಲು ವಸತಿ ಯೋಜನೆ ಕಾನೂನು ಇನ್ನಷ್ಟು ಸರಳಗೊಳಿಸಿ ಹೊಸ ಪಾಲಿಸಿ ರೂಪಿಸಲು ಯೋಜಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಅವರು ವಸತಿ ಇಲಾಖೆಯ ಕರ್ನಾಟಕ ಗೃಹ ಮಂಡಳಿ ವತಿಯಿಂದ ಕೆಂಗೇರಿ ವಡಗೇರಹಳ್ಳಿಯಲ್ಲಿ ಬೃಹತ್ ವಾಣಿಜ್ಯ ಸಂಕೀರ್ಣ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು. ಗೃಹ ಮಂಡಳಿಗೆ ಇನ್ನಷ್ಟುಜವಾಬ್ದಾರಿ ನೀಡುವ ದೃಷ್ಟಿಯಿಂದ, ಜಮೀನಿನ ಬೆಲೆಯನ್ನೂ ಇಳಿಸುವುದು ಸೇರಿ ಒಟ್ಟಾರೆ ವಸತಿ ಯೋಜನೆಯಲ್ಲಿ ಕಾನೂನು ಸರಳಗೊಳಿಸುವುದು ಅಗತ್ಯವಾಗಿದೆ. ಇದಕ್ಕಾಗಿ ಹೊಸ ಪಾಲಿಸಿ ಯೋಜಿಸಲಾಗಿದೆ ಎಂದು ಅವರು ತಿಳಿಸಿದರು.
ಹಿಂದಿನ ಸರ್ಕಾರ ನಾಲ್ಕು ಮಹಡಿಗಿಂತ ಹೆಚ್ಚಿನ ಫ್ಲಾಟ್ ನಿರ್ಮಿಸಿದರೆ ವಿದ್ಯುತ್ ಸಂಪರ್ಕ ನೀಡುವುದಿಲ್ಲ ಎಂಬ ನಿಯಮ ಜಾರಿಗೊಳಿಸಿತ್ತು. ಇದರಿಂದ ಹಲವರು ಎರಡು ವಿದ್ಯುತ್ ಬಿಲ್ ತುಂಬುವ ಪರಿಸ್ಥಿತಿ ಇತ್ತು. ಅದಲ್ಲದೆ ಕಟ್ಟಡದ ಪ್ಲಾನ್ ಅಪ್ರೂವಲ್ ಬಳಿಕ ಕಮೆನ್ಸ್ಮೆಂಟ್ ಸರ್ಟಿಫಿಕೆಟ್ ಪಡೆಯಲು ಪುನಃ ಬಿಡಿಎ, ಬಿಬಿಎಂಪಿಗೆ ಅಲೆದಾಡಬೇಕಿತ್ತು. ಇವೆರೆಡು ನಿಯಮವನ್ನೂ ನಮ್ಮ ಸರ್ಕಾರ ತೆರವು ಮಾಡಿ ಮನೆ ನಿರ್ಮಾಣ ಪ್ರಕ್ರಿಯೆ ಸರಳಗೊಳಿಸಿದೆ ಎಂದರು. ಜತೆಗೆ ಸ್ಲಂ ಬೋರ್ಡ್ನಿಂದ ವಿವಿಧ ನಗರ ಪ್ರದೇಶದಲ್ಲಿ 80 ಸಾವಿರ ಮನೆ ನಿರ್ಮಿಸಲಾಗುತ್ತಿದೆ. ಬೆಂಗಳೂರು ನಗರದಲ್ಲಿ 1ಲಕ್ಷ ಮನೆ ನಿರ್ಮಿಸುವ ಗುರಿಯಿದ್ದು, 40 ಸಾವಿರ ಮನೆಗಳ ಕೆಲಸ ಈಗಾಗಲೇ ಆರಂಭವಾಗಿದೆ.
ಸೇಡಂ: ಇಂದು ಅಖಿಲ ಭಾರತ 69ನೇ ಸಹಕಾರ ಸಪ್ತಾಹಕ್ಕೆ 1 ಲಕ್ಷ ಜನ
ಬರುವ ಒಂದು ತಿಂಗಳಲ್ಲಿ 20 ಸಾವಿರ ಮನೆ ಉದ್ಘಾಟನೆ ಮಾಡಿ ಜನತೆಗೆ ನೀಡಲಾಗುವುದು ಎಂದರು. 2018ರಲ್ಲಿ ಆಗಿನ ಸರ್ಕಾರದ ಅವಧಿ ಎರಡು ತಿಂಗಳು ಇರುವಾಗ 15ಲಕ್ಷ ಮನೆ ಮಂಜೂರು ಮಾಡಲಾಗಿತ್ತು. ಇದಕ್ಕೆ 15 ಸಾವಿರ ಕೋಟಿ ಇಡಬೇಕಿತ್ತು. ಆದರೆ ಆ ಸರ್ಕಾರ ಕೇವಲ ಎರಡೂವರೆ ಸಾವಿರ ಕೋಟಿ ಮಾತ್ರ ಮೀಸಟ್ಟಿತ್ತು. ಪ್ರಧಾನ ಮಂತ್ರಿ ಆವಾಸ್ ಯೋಜನೆಯಲ್ಲಿ ವ್ಯವಸ್ಥಿತ ನೋಂದಣಿಯೂ ಆಗಿರಲಿಲ್ಲ. ಸ್ವಪ್ರತಿಷ್ಠೆಗಾಗಿ ಕರ್ನಾಟಕವನ್ನು ಮೂರು ವರ್ಷ ಪಿಎಂಎವೈ ಯೋಜನೆಯಿಂದ ದೂರ ಇಡುವ ಧೋರಣೆ ಅನುಸರಿಸ ಲಾಗಿತ್ತು ಎಂದು ಟೀಕಿಸಿದರು.
ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಇದೆ ಪಿಎಂಎವೈ ಯೋಜನೆಯಡಿ 18 ಲಕ್ಷ ಮನೆಗಳನ್ನು ನೋಂದಣಿ ಮಾಡಲಾಯಿತು. ಬರುವ ದಿನಗಳಲ್ಲಿ ಇವಿಷ್ಟೂಮನೆಗಳ ನಿರ್ಮಾಣಕ್ಕೆ ಅನುದಾನ ಬರಲಿದೆ. ಈ ಮಧ್ಯೆ ಹಿಂದಿನ ಸರ್ಕಾರ ವಸತಿ ಯೋಜನೆಗೆ ನೀಡದಿದ್ದ ಅನುದಾನವನ್ನೂ ನಾವು ಬಿಡುಗಡೆ ಮಾಡಿದ್ದು, ಮನೆ ನಿರ್ಮಾಣ ಮಾಡಲಾಗುತ್ತಿದೆ ಎಂದರು. ಈ ವೇಳೆ ವಸತಿ ಸಚಿವ ವಿ. ಸೋಮಣ್ಣ, ಸಹಕಾರ ಸಚಿವ ಎಸ್. ಟಿ. ಸೋಮಶೇಖರ್, ಗೃಹ ಮಂಡಳಿ ಆಯುಕ್ತರಾದ ಕವಿತಾ ಮಣ್ಣಿಕೇರಿ ಮತ್ತಿತರರು ಹಾಜರಿದ್ದರು.
ನವ ಬೆಂಗಳೂರು: ವೇಗವಾಗಿ ಬೆಳೆಯುತ್ತಿರುವ ಬೆಂಗಳೂರಲ್ಲಿ ಪ್ರತಿನಿತ್ಯ 5 ಸಾವಿರ ವಾಹನಗಳು ಹೊಸದಾಗಿ ನೋಂದಣಿ ಆಗುತ್ತಿದೆ. 1.20ಕೋಟಿ ಜನಸಂಖ್ಯೆ ಇದ್ದರೆ 1.3ಲಕ್ಷ ವಾಹನಗಳಿವೆ. ನಗರದ ಟ್ರಾಫಿಕ್ ನಿಯಂತ್ರಣ, ದಟ್ಟಣೆ ತಪ್ಪಿಸುವ ಅಗತ್ಯವಿದೆ. ಈಗಾಗಲೆ ಪರಿಣಿತರ ಜೊತೆ ಚರ್ಚೆ ನಡೆದಿದ್ದು, ಬರುವ ದಿನಗಳಲ್ಲಿ ನವ ಬೆಂಗಳೂರು ನಿರ್ಮಾಣಕ್ಕೆ ವಿಶೇಷ ಯೋಜನೆ ರೂಪಿಸಿ ಸಾರ್ವಜನಿಕರ ಮುಂದಿಡುತ್ತೇವೆ. ಅದರ ಚರ್ಚೆಗೆ ಅವಕಾಶ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬೊಮ್ಮಾಯಿ ತಿಳಿಸಿದರು.
ಮಾತೃ ಭಾಷೆಯಲ್ಲೇ ಮಾಹಿತಿ ಸಿಗಲಿ: ಸಿಎಂ ಬೊಮ್ಮಾಯಿ
ಡಬಲ್ ಎಂಜಿನ್ ಸೋಮಣ್ಣ: ಕ್ಷೇತ್ರದಲ್ಲಿ ವಸತಿ ಸಚಿವ ವಿ. ಸೋಮಣ್ಣ, ಸಹಕಾರ ಸಚಿವ ಎಸ್. ಟಿ. ಸೋಮಶೇಖರ್ ಎಂಬ ಡಬಲ್ ಎಂಜಿನ್ ರೀತಿಯ ಸೋಮಣ್ಣರಿದ್ದಾರೆ. ಇವರಿಂದ ಕ್ಷೇತ್ರದ ಸಮಗ್ರ ಅಭಿವೃದ್ಧಿಯಾಗುತ್ತಿದೆ ಎಂದು ಮುಖ್ಯಮಂತ್ರಿಗಳು ಬಣ್ಣಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ