
ಬೆಂಗಳೂರು[ನ.29]: ದೇಶದ ಬ್ಯಾಂಕ್ಗಳಿಗೆ ಕೋಟ್ಯಂತರ ರು. ವಂಚನೆ ಮಾಡಿದ ಮದ್ಯದ ದೊರೆ ವಿಜಯ ಮಲ್ಯ ವಿದೇಶಕ್ಕೆ ಪರಾರಿಯಾಗಲು ನೆರವು ನೀಡಿದ್ದಾರೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ವಿರುದ್ಧ ಕಾಂಗ್ರೆಸ್ ಪಕ್ಷ ತೀವ್ರ ವಾಗ್ದಾಳಿ ನಡೆಸುತ್ತಿರುವಾಗಲೇ, ಕಾಂಗ್ರೆಸ್ನ ಪ್ರಮುಖ ನಾಯಕ ಹಾಗೂ ಮಾಜಿ ಸಚಿವ ಪಿ.ಚಿದಂಬರಂ ಅವರು ಮಲ್ಯ ಪರವಾಗಿ ಬುಧವಾರ ಹೈಕೋರ್ಟ್ನಲ್ಲಿ ವಾದ ಮಂಡನೆ ಮಾಡಿದರು.
ಮಲ್ಯ ಅವರ ಯುನೈಟೆಡ್ ಸ್ಪಿರಿಟ್ ಲಿಮಿಟೆಡ್ (ಯುಎಸ್ಎಲ್) ಕಂಪನಿ ತಾನು ಪಡೆದ ಸಾಲವನ್ನು ಮರುಪಾವತಿ ಮಾಡಿದ್ದರೂ ಐಡಿಬಿಐ ಬ್ಯಾಂಕ್ ವಿಜಯ್ ಮಲ್ಯ ಅವರ ಪ್ರಕರಣಗಳನ್ನು ಮುಂದಿಟ್ಟುಕೊಂಡು ಸಾಲ ಋುಣಮುಕ್ತ ಪತ್ರ ನೀಡುತ್ತಿಲ್ಲ ಎಂದು ಆರೋಪಿಸಿ ಯುಎಸ್ಎಲ್ ಕಂಪನಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದೆ.
ಈ ಪ್ರಕರಣದಲ್ಲಿ ಯುಎಸ್ಎಲ್ ಪರ ವಾದ ಮಂಡಿಸಿದ ಪಿ.ಚಿದಂಬರಂ, ಯುಎಸ್ಎಲ್ ಪ್ರತ್ಯೇಕ ಕಂಪನಿ. ಯುುಎಸ್ಎಲ್ಗೂ ವಿಜಯ್ ಮಲ್ಯ ಅವರ ಇತರ ಪ್ರಕರಣಗಳಿಗೂ ಸಂಬಂಧವಿಲ್ಲ. ಮಲ್ಯ ಯುಎಸ್ಎಲ್ನಲ್ಲಿ ಕೇವಲ ಶೇ.2ರಷ್ಟು ಷೇರು ಹೊಂದಿದ್ದಾರೆ. ವಿಜಯ್ ಮಲ್ಯ ಕಿಂಗ್ಫಿಷರ್ ವಿಮಾನಯಾನ ಕಂಪನಿಗಾಗಿ ಐಡಿಬಿಐನಿಂದ ಸಾಲ ಪಡೆದಿದ್ದರು. ಆಗ ಯುಎಸ್ಎಲ್ಗೂ ವಿಜಯ್ ಮಲ್ಯ ಅಧ್ಯಕ್ಷರಾಗಿದ್ದರು.
ಯುಎಸ್ಎಲ್ ತಾನು ಪಡೆದಿದ್ದ ಎಲ್ಲ ಸಾಲವನ್ನೂ ತೀರಿಸಿದೆ. ಆದರೂ ಐಡಿಬಿಐ ಬ್ಯಾಂಕ್ ಯುಎಸ್ಎಲ್ ಕಂಪನಿಗೆ ಸಾಲ ಋುಣಮುಕ್ತ ಪತ್ರ ನೀಡುತ್ತಿಲ್ಲ ಎಂದು ವಾದಿಸಿದರು. ಅಲ್ಲದೆ, ಸಾಲ ಪಾವತಿಸಿರುವ ಹಿನ್ನೆಲೆಯಲ್ಲಿ ಯುಎಸ್ಎಲ್ ಕಂಪನಿಯನ್ನು ಸಾಲದ ಹೊಣೆಯಿಂದ ಬಿಡುಗಡೆಗೊಳಿಸುವಂತೆ ಐಡಿಬಿಐಗೆ ನಿರ್ದೇಶನ ನೀಡಬೇಕು ಎಂದು ಪಿ.ಚಿದಂಬರಂ ಕೋರಿದರು.
ಈ ವಾದಕ್ಕೆ ಆಕ್ಷೇಪಿಸಿದ ಐಡಿಬಿಐ ಪರ ವಕೀಲರು, ಸಾಲ ನೀಡುವಾಗ ವಿಜಯ್ ಮಲ್ಯ ಯುಎಸ್ಎಲ್ ಅಧ್ಯಕ್ಷರಾಗಿದ್ದರು. ಹೀಗಾಗಿಯೇ ಕಿಂಗ್ಫಿಷರ್ ವಿಮಾನಯಾನ ಸಂಸ್ಥೆಗೆ ಸಾಲ ನೀಡಿದ್ದೇವೆ. ಆ ಸಾಲಕ್ಕೆ ಯುಎಸ್ಎಲ್ ಕಾರ್ಪೊರೇಟ್ ಗ್ಯಾರಂಟಿ ನೀಡಿದೆ. ಆದ್ದರಿಂದ ಸಾಲದ ಹೊಣೆಯಿಂದ ಬಿಡುಗಡೆ ಮಾಡಲಾಗದು ಎಂದು ತಿಳಿಸಿದರು.
ನಂತರ ಹೆಚ್ಚಿನ ವಾದ ಮಂಡನೆಗೆ ಐಡಿಬಿಐ ಪರ ವಕೀಲರು ಕಾಲಾವಕಾಶ ಕೋರಿದ ಹಿನ್ನೆಲೆಯಲ್ಲಿ ನ್ಯಾಯಮೂರ್ತಿ ಬಿ.ವೀರಪ್ಪ ಅವರಿದ್ದ ಏಕಸದಸ್ಯ ನ್ಯಾಯಪೀಠ ಅರ್ಜಿ ವಿಚಾರಣೆಯನ್ನು ಡಿ.17ಕ್ಕೆ ಮುಂದೂಡಿತು.
ರಾಜಕೀಯ ಬೇರೆ, ವೃತ್ತಿಯೇ ಬೇರೆ:
ಐಡಿಬಿಐ ಬ್ಯಾಂಕ್ ಹಾಗೂ ಕಿಂಗ್ಫಿಷರ್ ನಡುವಿನ ಪ್ರಕರಣದಲ್ಲಿ ಪಿ.ಚಿದಂಬರಂ ಅವರು ವೃತ್ತಿಪರ ವಕೀಲರಾಗಿ ಬಂದು ಕಿಂಗ್ಫಿಷರ್ ಪರ ವಾದ ಮಂಡಿಸಿದ್ದಾರೆ. ವೃತ್ತಿಯೇ ಬೇರೆ ರಾಜಕಾರಣವೇ ಬೇರೆ. ಕಕ್ಷೀದಾರರು ತಮ್ಮ ಬಳಿಗೆ ಬಂದು ನೀಡುವ ಮಾಹಿತಿ ಆಧಾರದ ಮೇಲೆ ಅವರಿಗೆ ಸರಿ ಎನಿಸಿದವರ ಪರ ವಾದಿಸಲು ವಕೀಲರು ಒಪ್ಪುತ್ತಾರೆ. ಇದು ಅವರ ವೃತ್ತಿಗೆ ಸಂಬಂಧಿಸಿದ ವಿಷಯವೇ ಹೊರತು ರಾಜಕೀಯಕ್ಕೂ ಇದಕ್ಕೂ ಸಂಬಂಧವಿಲ್ಲ. ಸರ್ಕಾರವು ಮೈಸೂರು ಅರಮನೆಯ ಆಸ್ತಿ ವಶಪಡಿಸಿಕೊಂಡ ಬಗ್ಗೆ ಸರ್ಕಾರ ಹಾಗೂ ದಿವಂಗತ ಶ್ರೀಕಂಠದತ್ತ ನರಸಿಂಹ ರಾಜ ಒಡೆಯರ್ ನಡುವಿನ ಪ್ರಕರಣದಲ್ಲಿ ಶ್ರೀಕಂಠದತ್ತ ಒಡೆಯರ್ ಪರವಾಗಿಯೂ ಪಿ.ಚಿದಂಬರಂ ವಾದ ಮಂಡಿಸುತ್ತಿದ್ದಾರೆ. ಇದರಲ್ಲಿ ವಿಶೇಷವೇನೂ ಇಲ್ಲ.
- ಬಿ.ಎಲ್. ಶಂಕರ್, ಕೆಪಿಸಿಸಿ ಉಪಾಧ್ಯಕ್ಷ
ಕಾಂಗ್ರೆಸ್ ಪಕ್ಷವು ರಾಷ್ಟ್ರಮಟ್ಟದಲ್ಲಿ ವಿಜಯ್ ಮಲ್ಯ ಅವರು ವಿದೇಶಕ್ಕೆ ಪರಾರಿಯಾಗಲು ಕೇಂದ್ರ ಸರ್ಕಾರ ಅದರಲ್ಲೂ ಮುಖ್ಯವಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ನೆರವಾಗಿದ್ದಾರೆ ಎಂದು ಪದೇ ಪದೇ ಆರೋಪ ಮಾಡುತ್ತಿದೆ. ದೇಶದ ಬ್ಯಾಂಕ್ಗಳ ಕೋಟ್ಯಂತರ ರು. ಸಾಲ ಮರುಪಾವತಿಸದೆ ವಂಚಿಸಿರುವ ಮಲ್ಯ ಅವರ ಪರಾರಿಗೆ ಕೇಂದ್ರದ ಹಣಕಾಸು ಸಚಿವ ಜೇಟ್ಲಿ ಅವರು ಮೋದಿ ಅವರ ಅಣತಿ ಮೇರೆಗೆ ನೆರವು ನೀಡಿದ್ದಾರೆ ಎಂದು ಆರೋಪಿಸುತ್ತಿದೆ. ಆದರೆ, ಕಾಂಗ್ರೆಸ್ ಪಕ್ಷದ ಪ್ರಮುಖ ನಾಯಕರಾದ ಹಾಗೂ ಹಿಂದಿನ ಯುಪಿಎ ಸರ್ಕಾರದಲ್ಲಿ ಪ್ರಭಾವಿ ಸಚಿವರಾಗಿದ್ದ ಪಿ.ಚಿದಂಬರಂ ಅವರು ಮಲ್ಯ ಪರ ನ್ಯಾಯಾಲಯದಲ್ಲಿ ವಾದ ನಡೆಸುತ್ತಿರುವುದು ಹುಬ್ಬೇರುವಂತೆ ಮಾಡಿದೆ. ಇದು ಕಾಂಗ್ರೆಸ್ ಪಕ್ಷದ ದ್ವಂದ್ವ ನೀತಿಯನ್ನು ತೋರಿಸುತ್ತದೆ. ಮಲ್ಯ ಅವರನ್ನು ದೇಶಕ್ಕೆ ವಂಚನೆ ಮಾಡಿದವರು ಎನ್ನುವ ಕಾಂಗ್ರೆಸ್ ಪಕ್ಷದ ಪ್ರಮುಖ ನಾಯಕರೇ ಮಲ್ಯ ಪರವಾಗಿ ವಾದ ನಡೆಸುವ ಮೂಲಕ ನೀಡುತ್ತಿರುವ ಸಂದೇಶವೇನು ಎಂದು ಪ್ರಶ್ನಿಸಲಾಗುತ್ತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ