ಅಮೆರಿಕದಿಂದ ಯೋಗೇಶ್‌ ದಂಪತಿ ಶವ ತರಿಸಲು ಸಿಎಂ ಸಿದ್ದರಾಮಯ್ಯ ಸೂಚನೆ

By Kannadaprabha NewsFirst Published Aug 21, 2023, 11:39 PM IST
Highlights

ಅಮೆರಿಕದಲ್ಲಿ ಸಂಶಯಾಸ್ಪದವಾಗಿ ಮೃತಪಟ್ಟಿರುವ ದಾವಣಗೆರೆ ಮೂಲದ ಯೋಗೇಶ್‌, ಅವರ ಪತ್ನಿ ಹಾಗೂ ಪುತ್ರನ ಮೃತದೇಹಗಳನ್ನು ರಾಜ್ಯಕ್ಕೆ ವಾಪಸ್‌ ತರುವ ಬಗ್ಗೆ ಮೃತ ಯೋಗೇಶ್‌ ಅವರ ತಾಯಿ ಸೋಮವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ.

ಬೆಂಗಳೂರು (ಆ.21): ಅಮೆರಿಕದಲ್ಲಿ ಸಂಶಯಾಸ್ಪದವಾಗಿ ಮೃತಪಟ್ಟಿರುವ ದಾವಣಗೆರೆ ಮೂಲದ ಯೋಗೇಶ್‌, ಅವರ ಪತ್ನಿ ಹಾಗೂ ಪುತ್ರನ ಮೃತದೇಹಗಳನ್ನು ರಾಜ್ಯಕ್ಕೆ ವಾಪಸ್‌ ತರುವ ಬಗ್ಗೆ ಮೃತ ಯೋಗೇಶ್‌ ಅವರ ತಾಯಿ ಸೋಮವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದು, ಕೂಡಲೇ ಈ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿಗಳು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಅಮೆರಿಕದ ಮೇರಿಲ್ಯಾಂಡ್‌ನ ಬಾಲ್ಟಿಮೋರ್‌ನಲ್ಲಿ ನೆಲೆಸಿದ್ದ ದಾವಣಗೆರೆ ಜಿಲ್ಲೆಯ ಮೂವರು ಶುಕ್ರವಾರ ಸಂಶಯಾಸ್ಪದವಾಗಿ ಮೃತಪಟ್ಟಿದ್ದಾರೆ. 

ಮೃತ ಯೋಗೇಶ್‌ (37), ಪತ್ನಿ ಪ್ರತಿಭಾ (35) ಹಾಗೂ ಪುತ್ರ ಯಶ್‌ (6) ಅವರ ಮೃತದೇಹಗಳು ಇನ್ನೂ ರಾಜ್ಯಕ್ಕೆ ಬಂದಿಲ್ಲ. ಹೀಗಾಗಿ ಮೃತ ಯೋಗೇಶ್‌ ಅವರ ತಾಯಿ ಶೋಭಾ ಹಾಗೂ ಸಂಬಂಧಿಕರು ಸೋಮವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಸಹಾಯಕ್ಕೆ ಮನವಿ ಮಾಡಿದರು. ಈ ವೇಳೆ ಸಿದ್ದರಾಮಯ್ಯ ಅವರು ಮೃತದೇಹಗಳನ್ನು ವಾಪಸು ತರುವ ಭರವಸೆ ನೀಡಿ ಅಧಿಕಾರಿಗಳಿಗೆ ಸೂಚನೆ ನೀಡಿದರು ಎಂದು ಶೋಭಾ ಸುದ್ದಿಗಾರರಿಗೆ ತಿಳಿಸಿದರು. 

ನೌಕರರ ಬೇಡಿಕೆಗಳಿಗೆ ಐಎಎಸ್‌ ಅಧಿಕಾರಿಗಳು ಅಡ್ಡಗಾಲು ಹಾಕ್ತಾರೆ: ರೇಣುಕಾಚಾರ್ಯ

ಎಂಜಿನಿಯರ್‌ ಆಗಿದ್ದ ಯೋಗೇಶ್‌ ಕುಟುಂಬದೊಂದಿಗೆ ಕಳೆದ 9 ವರ್ಷಗಳಿಂದ ಬಾಲ್ಟಿಮೋರ್‌ನಲ್ಲಿ ನೆಲೆಸಿದ್ದರು. ಬಾಲ್ಟಿಮೋರ್‌ನ ಪೊಲೀಸರು ಶನಿವಾರ ಬೆಳಗ್ಗೆ ನಮಗೆ ಕರೆ ಮಾಡಿ ಮೂವರು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಮಾಹಿತಿ ನೀಡಿದ್ದಾರೆ. ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ. ಅಲ್ಲಿ ಏನಾಗುತ್ತಿದೆ ಎಂಬ ಬಗ್ಗೆಯೂ ನಮಗೆ ಮಾಹಿತಿ ಇಲ್ಲ ಎಂದು ಶೋಭಾ ಅಳಲು ತೋಡಿಕೊಂಡರು. ಯೋಗೇಶ್‌ ತಂದೆ ಹಾಗೂ ತಾಯಿ ಜಗಳೂರು ತಾಲೂಕಿನ ಹಾಲೇಕಲ್‌ ಗ್ರಾಮದವರಾಗಿದ್ದು, ಕಳೆದ 25 ವರ್ಷಗಳಿಂದ ಅವರು ದಾವಣಗೆರೆಯ ವಿದ್ಯಾನಗರದಲ್ಲಿ ನೆಲೆಸಿದ್ದಾರೆ. ಕೆಲ ವರ್ಷಗಳ ಹಿಂದೆ ಅವರ ತಂದೆ ನಿಧನರಾಗಿದ್ದಾರೆ ಎಂದು ತಿಳಿದುಬಂದಿದೆ.

ಪಾರ್ಥಿವ ಶರೀರ ತರಲು ಸಂಬಂಧಿಗೆ ಜವಾಬ್ದಾರಿ: ಅಮೆರಿಕದಲ್ಲಿ ನಿಗೂಢವಾಗಿ ಸಾವನ್ನಪ್ಪಿದ ಸಾಫ್ಟವೇರ್‌ ಇಂಜಿನಿಯರ್‌ ದಂಪತಿ ಯೋಗೇಶ್‌ ಹೊನ್ನಾಳ್‌, ಪ್ರತಿಭಾ ಹಾಗೂ ಪುತ್ರ ಯಶ್‌ರ ಪಾರ್ಥಿವ ಶರೀರಗಳ ಭಾರತಕ್ಕೆ ತರಲು ಕಾನೂನಾತ್ಮಕ ಕಾರ್ಯ ಕೈಗೊಳ್ಳಲು ಮೃತರ ಸಂಬಂಧಿ, ಅಲ್ಲಿನ ಡೆಲವೇರ್‌ ನಿವಾಸಿಯಾದ ಸೋಮಶೇಖರ್‌ ಎಂಬವರಿಗೆ ಯೋಗೇಶ್‌ ಸಹೋದರ ಪುನೀತ್‌ ಹೊನ್ನಾಳ್‌ ಜವಾಬ್ದಾರಿ ವಹಿಸಿದ್ದಾರೆ. ಮೂವರ ಪಾರ್ಥಿವ ಶರೀರಗಳ ಮರಣೋತ್ತರ ಪರೀಕ್ಷೆ ನಂತರ ಕಾನೂನಾತ್ಮಕ ಪ್ರಕ್ರಿಯೆ, ಔಪಚಾರಿಕ ಕಾರ್ಯಗಳ ಮುಗಿಸಲು ಪುನೀತ್‌ ಜವಾಬ್ದಾರಿ ನೀಡಿದ್ದಾರೆ. 

2 ದಿನದಲ್ಲಿ ನೈಸ್‌ ಅಕ್ರಮಗಳ ದಾಖಲೆ ಬಹಿರಂಗ: ಡಿಕೆ ಬ್ರದರ್ಸ್‌ ವಿರುದ್ಧ ​ಎಚ್ಡಿಕೆ ವಾ​ಗ್ದಾಳಿ

ಮರಣೋತ್ತರ ಪರೀಕ್ಷೆ ನಡೆದು, ವರದಿ ಕೈಸೇರಿದ ನಂತರ ಪಾರ್ಥಿವ ಶರೀರಗಳನ್ನು ಭಾರತಕ್ಕೆ ತರುವ ಕಾರ್ಯ ಆಗಲಿದೆ. ಇದು ಆತ್ಮಹತ್ಯೆಯಾದ್ದರಿಂದ ಅಲ್ಲಿನ ಸರ್ಕಾರವು ತನಿಖೆ ನಡೆಸುತ್ತಿದ್ದು, ಮರಣೋತ್ತರ ಪರೀಕ್ಷೆ ಮುಗಿಯುತ್ತಿದ್ದಂತೆ ಪಾರ್ಥಿವ ಶರೀರಿಗಳ ಭಾರತಕ್ಕೆ ಕಳಿಸಲು ಅಲ್ಲಿನ ರಾಯಭಾರಿ ಕಚೇರಿ ಅಗತ್ಯ ಕ್ರಮ ಕೈಗೊಳ್ಳಲಿದೆ. ರಾಯಭಾರ ಕಚೇರಿಯೂ ಮೃತ ಯೋಗೇಶ್‌ರ ಸಹೋದರ ಪುನೀತ್‌ ಹೊನ್ನಾಳ್‌ರ ಸಂಪರ್ಕದಲ್ಲಿದೆ ಎಂದು ತಿಳಿದು ಬಂದಿದೆ.

click me!