
ಬೆಂಗಳೂರು (ಜು.07): ಸಬ್ ಇನ್ಸ್ಪೆಕ್ಟರ್ ನೇಮಕಾತಿ ಹಗರಣದಲ್ಲಿ ಬಂಧಿತರಾಗಿರುವ ರಾಜ್ಯ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಎಡಿಜಿಪಿ) ಅಮೃತ್ ಪಾಲ್ ಅವರ ಮನೆ ರಾಜ್ಯ ಅಪರಾಧ ತನಿಖಾ ದಳವು (ಸಿಐಡಿ) ದಾಳಿ ನಡೆಸಿ ಬರಿಗೈಯಲ್ಲಿ ಮರಳಿದ ಘಟನೆ ಬುಧವಾರ ನಡೆಯಿತು. ಬೆಂಳೂರಿನ ಸಹಕಾರ ನಗರದಲ್ಲಿರುವ ಎಡಿಜಿಪಿ ಮನೆ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟತಾಲೂಕಿನ ತೋಟದ ಮನೆ ಮೇಲೆ ಬೆಳಗ್ಗೆ 10 ಗಂಟೆಗೆ ಸುಮಾರಿಗೆ ದಾಂಗುಡಿಯಿಟ್ಟಸಿಐಡಿ ತನಿಖಾ ತಂಡವು, ಪಿಎಸ್ಐ ಅಕ್ರಮ ಕೃತ್ಯದ ಪುರಾವೆಗೆ ನಾಲ್ಕು ತಾಸಿಗೂ ಅಧಿಕ ಹೊತ್ತು ಅಮೃತ್ ಪಾಲ್ ಅವರ ಮನೆಯನ್ನು ಜಾಲಾಡಿದೆ.
ಆದರೆ ಕೆಲ ದಾಖಲೆಗಳ ಹೊರತು ಮಹತ್ವದ ಸಾಕ್ಷ್ಯಗಳು ಲಭಿಸದೆ ಕೊನೆಗೆ ಮಧ್ಯಾಹ್ನ ಬಂದ ದಾರಿಗೆ ಸುಂಕವಿಲ್ಲ ಎನ್ನುವಂತೆ ಸಿಐಡಿ ತಂಡ ಮರಳಿದೆ ಎಂದು ಮೂಲಗಳು ‘ಕನ್ನಡಪ್ರಭ’ಕ್ಕೆ ತಿಳಿಸಿವೆ. ಪಿಎಸ್ಐ ನೇಮಕಾತಿ ಅಕ್ರಮದಲ್ಲಿ ಲಕ್ಷಾಂತರ ರುಪಾಯಿ ಹಣ ಕೈ ಬದಲಾಗಿದೆ. ಇದಕ್ಕೆ ಪೂರಕ ಎನ್ನುವಂತೆ ಕಲುಬರಗಿಯಲ್ಲಿ 1.4 ಕೋಟಿ ರು. ಹಾಗೂ ಬೆಂಗಳೂರಿನಲ್ಲಿ ನೇಮಕಾತಿ ವಿಭಾಗದ ಡಿವೈಎಸ್ಪಿ ಶಾಂತಕುಮಾರ್ ಹಾಗೂ ಆರ್ಎಸ್ಐ ಶ್ರೀಧರ್ ಬಳಿ 2 ಕೋಟಿ ರು. ಹಣ ಪತ್ತೆಯಾಗಿದೆ. ಈ ಹಣದಲ್ಲಿ ಎಡಿಜಿಪಿ ಅವರಿಗೆ ಸೇರಿದ ಪಾಲಿನ ಬಗ್ಗೆ ವಿಚಾರಣೆ ವೇಳೆ ಇತರೆ ಆರೋಪಿಗಳು ಬಾಯ್ಬಿಟ್ಟಿದ್ದಾರೆ.
PSI Scam: ಎಡಿಜಿಪಿ ಅಮೃತ್ ಪಾಲ್, ಡಿವೈಎಸ್ಪಿ ದುಡ್ಡಿನ ಡೀಲ್ ಬಗ್ಗೆ ಸಿಐಡಿ ತನಿಖೆ
ಆದರೆ ಹಣ ಸ್ವೀಕಾರದ ಬಗ್ಗೆ ಎಡಿಜಿಪಿ ಬಾಯ್ಬಿಡುತ್ತಿಲ್ಲ ಎಂದು ಸಿಐಡಿ ಅಧಿಕಾರಿಗಳು ಹೇಳಿದ್ದಾರೆ. ಮನೆ ತಪಾಸಣೆ ಬಳಿಕ ಎಡಿಜಿಪಿ ಅವರನ್ನು ಮತ್ತೆ ವಿಚಾರಣೆ ನಡೆಸಲಾಯಿತು. ಆದರೆ ವಿಚಾರಣೆಗೆ ನಿರೀಕ್ಷಿತ ಪ್ರಮಾಣದಲ್ಲಿ ಎಡಿಜಿಪಿ ಸಹಕರಿಸುತ್ತಿಲ್ಲ. ಯಾವುದೇ ಪ್ರಶ್ನೆಗಳಿಗೆ ನಿಖರ ಉತ್ತರ ನೀಡುತ್ತಿಲ್ಲ. ತಾವು ಯಾವುದೇ ತಪ್ಪು ಮಾಡಿಲ್ಲ ಎಂದೇ ವಾದಿಸುತ್ತಿದ್ದಾರೆ. ಹೀಗಾಗಿ ಇದುವರೆಗೆ ಪತ್ತೆಯಾಗಿರುವ ಸಾಕ್ಷ್ಯ ಆಧಾರದ ಮೇರೆಗೆ ಮುಂದಿನ ತನಿಖೆ ನಡೆಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಂಜೆ 4ಕ್ಕೆ ಮನೆಗೆ: ನೇಮಕಾತಿ ವಿಭಾಗದ ಮಹತ್ವದ ಜವಾಬ್ದಾರಿ ಹೊತ್ತಿದ್ದ ಎಡಿಜಿಪಿ ಅಮೃತ್ ಪಾಲ್ ಅವರು, 545 ಪಿಎಸ್ಐ ಹುದ್ದೆಗಳ ನೇಮಕಾತಿ ಸಂಬಂಧ ಪ್ರತಿ ಹಂತದಲ್ಲೂ ಉದಾಸೀನತೆ ತೋರಿರುವುದು ಗೊತ್ತಾಗಿದೆ. ಪ್ರಶ್ನೆ ಪತ್ರಿಕೆಗಳು ರಚನೆ ಮತ್ತು ವಿತರಣೆ ಹಾಗೂ ಪರೀಕ್ಷಾ ಕೇಂದ್ರಗಳಿಂದ ಒಎಂಆರ್ಶೀಟ್ಗಳು ಸ್ಟ್ರಾಂಗ್ ರೂಂ ತಲುಪಿದ ಸಂದರ್ಭದಲ್ಲೂ ಸಂಜೆ 4 ಗಂಟೆಗೆ ಕಚೇರಿಯಿಂದ ಮನೆಗೆ ಅವರು ಹೊರಟಿದ್ದರು. ಡಿವೈಎಸ್ಪಿ ಶಾಂತಕುಮಾರ್ನನ್ನು ಸಂಪೂರ್ಣವಾಗಿ ಎಡಿಜಿಪಿ ನಂಬಿದ್ದರು. ಈ ಹಿನ್ನೆಲೆಯಲ್ಲಿ ಪರೋಕ್ಷವಾಗಿ ಇಡೀ ನೇಮಕಾತಿ ಪ್ರಕ್ರಿಯೆಯನ್ನು ಶಾಂತಕುಮಾರ್ ನಡೆಸುತ್ತಿದ್ದ ಎಂದು ಮೂಲಗಳು ತಿಳಿಸಿವೆ.
PSI Recruitment Scam: ಕಿಂಗ್ಪಿನ್ಗಳನ್ನು ಸಿಐಡಿ ಬಂಧಿಸಲಿ: ಎಚ್ಡಿಕೆ ಆಗ್ರಹ
ಡಿವೈಎಸ್ಪಿ ಕ್ಯಾಬಿನ್ನಲ್ಲೇ ಸ್ಟ್ರಾಂಗ್ ರೂ: ಬೆಂಗಳೂರಿನ ಅರಮನೆ ರಸ್ತೆಯಲ್ಲಿರುವ ಸಿಐಡಿ ಕೇಂದ್ರ ಕಚೇರಿಯ ಅನೆಕ್ಸ್-1 ಕಟ್ಟಡದ ಸೆಲ್ಲರ್ನಲ್ಲಿರುವ ನೇಮಕಾತಿ ವಿಭಾಗದ ಡಿವೈಎಸ್ಪಿ ಹಾಗೂ ಇತರೆ ಕಚೇರಿ ಸಿಬ್ಬಂದಿ ಕ್ಯಾಂಬೀನ್ ಹೊಂದಿಕೊಂಡಂತೆ ಸ್ಟ್ರಾಂಗ್ ರೂಂ ಇದೆ. ಹೀಗಾಗಿ ಸ್ಟ್ರಾಂಗ್ ರೂಂಗೆ ಹೋಗಲು ಥಂಬಿಂಗ್ ಇಂಪ್ರೆನ್ಷನ್ಗೆ ಡಿವೈಎಸ್ಪಿಗೆ ಸುಲಭವಾಗಿದೆ ಎಂದು ತಿಳಿದು ಬಂದಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ