
ಬಳ್ಳಾರಿ: ಚೀಟಿ ಹೆಸರಲ್ಲಿ ಕೋಟಿ ಕೋಟಿ ಹಣ ಕೊಳ್ಳೆ ಹೊಡೆದು ಮೋಸ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊನೆಗೂ ಆರೋಪಿ ವೆಂಕಟೇಶ್ನನ್ನು ಬ್ರೂಸ್ಪೇಟೆ ಪೊಲೀಸರು ಬಂಧಿಸಿದ್ದಾರೆ. ಬಂಧಿತ ವೆಂಕಟೇಶ್ ಚೀಟಿ ವ್ಯವಹಾರ ನಡೆಸುತ್ತಿದ್ದ. ಈತನ ಬಳಿ ಅನೇಕರು ಹಣ ಹೂಡಿಕೆ ಮಾಡಿದ್ದರು. ಆದರೆ ಚೀಟಿ ವ್ಯವಹಾರ ನಡೆಸುತ್ತಿದ್ದ ವೆಂಕಟೇಶ್ ಕಳೆದ 4 ತಿಂಗಳ ಹಿಂದೆ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದ.
ಈಗ ಬಳ್ಳಾರಿಯ ಬ್ರೂಸ್ ಪೇಟ್ ಪೊಲೀಸರು ಕಡೆಗೂ ವೆಂಕಟೇಶ್ನನ್ನು ಬಂಧಿಸಿದ್ದಾರೆ. ವೆಂಕಟೇಶ್ ನಾಪತ್ತೆಯಾಗಿದ್ದರಿಂದ ಆತನ ಜೊತೆ ಚೀಟಿ ವ್ಯವಹಾರಕ್ಕೆ ಹಣ ಹೂಡಿಕೆ ಮಾಡಿದ್ದ ಜನರು ಕಂಗಾಲಾಗಿದ್ದರು. ಪೊಲೀಸರು ಈ ಆರೋಪಿ ವೆಂಕಟೇಶ್ನನ್ನು ಹುಡುಕುವಲ್ಲಿ ವಿಳಂಬ ಮಾಡ್ತಿದ್ದಾರೆಂದು ಕಳೆದ ಹದಿನೈದು ದಿನಗಳ ಹಿಂದೆ ಹಣ ಕಳೆದುಕೊಂಡ ಸಂತ್ರಸ್ತರು ಶಾಸಕ ಭರತ್ ರೆಡ್ಡಿ ಯೊಂದಿಗೆ ಠಾಣೆಗೆ ಬಂದಿದ್ದರು.
ಇದನ್ನೂ ಓದಿ: ಕಲಬುರಗಿ: 8 ದಿನದ ಕರುವನ್ನು ತೊಟ್ಟಿಲಲ್ಲಿ ಮಲಗಿಸಿ ಅದ್ದೂರಿ ನಾಮಕರಣ: ಗೋ ಸೇವಕರಿಗೆ ಸನ್ಮಾನ
ಈಗ ಕೊನೆಗೂ ಆರೋಪಿ ವೆಂಕಟೇಶ ಬಂಧಿಸುವಲ್ಲಿ ಪೊಲೀಸರು ಯಶಸ್ಸಿಯಾಗಿದ್ದಾರೆ. ಬಂಧಿತ ವೆಂಕಟೇಶ್ ಬಳ್ಳಾರಿ ಹವಂಬಾವಿ ಪ್ರದೇಶದ ನಿವಾಸಿಯಾಗಿದ್ದು, ವೆಂಕಟೇಶ ಜೊತೆಗಿದ್ದ ಪಾರ್ಟನರ್ ಸಲೀಂ, ವೆಂಕಟೇಶ ಅಳಿಯ ಸಚಿನ್ ಮತ್ತು ವೆಂಕಟೇಶ ಪತ್ನಿ ಸರೋಜ ಕೂಡ ನಾಪತ್ತೆಯಾಗಿದ್ದರು.
ಆರೋಪಿಗಳು ತರಕಾರಿ, ಹೂ, ಚಹಾ ಮಾರಾಟ ಮಾಡುವವರು, ಹಮಾಲಿ, ದಿನಗೂಲಿ ಕಾರ್ಮಿಕರು ಸೇರಿದಂತೆ ಮತ್ತಿತರ 700ಕ್ಕೂ ಹೆಚ್ಚಿನ ಜನರಿಂದ ಕಂತಿನ ಮೂಲಕ ಚೀಟಿ ಹಣ ಕಟ್ಟಿಸಿ ಕೊಂಡಿದ್ರು. ಆದರೆ ಚೀಟಿ ಎತ್ತಿದವರಿಗೆ ಹಣ ನೀಡುವ ಮುನ್ನವೇ ವೆಂಕಟೇಶ್ ಪರಾರಿಯಾಗಿದ್ದ.
ಆದರೆ ಈಗ ಚಿತ್ರದುರ್ಗದಲ್ಲಿ ಅರೋಪಿಯನ್ನು ಪೊಲೀಸರು ಬಂಧಿಸಿದ್ದು ವಿಚಾರಣೆ ನಡೆಸುತ್ತಿದ್ದಾರೆ. ಮದುವೆ, ಶಿಕ್ಷಣ, ವಸತಿ ನಿವೇಶನ ಖರೀದಿ, ಆಭರಣ ಕೊಳ್ಳುವುದು ಸೇರಿದಂತೆ ವಿವಿಧ ಕಾರಣಕ್ಕೆ ಈತನ ಬಳಿ ಚೀಟಿ ಕಟ್ಟಿರುವ ಜನರು ಇದೀಗ ಕಟ್ಟಿದ ಹಣ ಸಿಗದೇ ಗೋಳಾಡುತ್ತಿದ್ದಾರೆ. ಈತ ಹತ್ತು ಸಾವಿರದಿಂದ ಹತ್ತು ಲಕ್ಷದವರೆಗೂ ಚೀಟಿ ವ್ಯವಹಾರ ನಡೆಸುತ್ತಿದ್ದ.
ಇದನ್ನೂ ಓದಿ: ಆಹಾರ ಅರಸಿ ಬಂದ ಕರಡಿ ವಿದ್ಯುತ್ ತಂತಿ ಸ್ಪರ್ಶಿಸಿ ದಾರುಣ ಸಾವು
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ