ಆದಾಯ ಗಳಿಸಲು ನಮ್ಮ ಮೆಟ್ರೋ ಹೊಸ ಮಾರ್ಗ, ಇನ್ಮುಂದೆ ಪ್ರಯಾಣಿಕರಷ್ಟೇ ಅಲ್ಲ, ಸರಕು ಸಾಗಣೆಗೂ ಚಿಂತನೆ!

Published : Mar 20, 2025, 07:47 AM ISTUpdated : Mar 20, 2025, 07:54 AM IST
ಆದಾಯ ಗಳಿಸಲು ನಮ್ಮ ಮೆಟ್ರೋ ಹೊಸ ಮಾರ್ಗ, ಇನ್ಮುಂದೆ ಪ್ರಯಾಣಿಕರಷ್ಟೇ ಅಲ್ಲ, ಸರಕು ಸಾಗಣೆಗೂ ಚಿಂತನೆ!

ಸಾರಾಂಶ

ಬೆಂಗಳೂರು ಮೆಟ್ರೋ ರೈಲು ನಿಗಮವು ಆದಾಯ ಹೆಚ್ಚಿಸಲು ದೆಹಲಿ ಮೆಟ್ರೋ ಮಾದರಿಯಲ್ಲಿ ರೈಲಿನಲ್ಲಿ ಸರಕು ಸಾಗಣೆ ಆರಂಭಿಸುವ ಚಿಂತನೆ ನಡೆಸಿದೆ. ಸರಕು ಸಾಗಣೆ ಕಂಪನಿಗಳು ಮತ್ತು ಇ-ಕಾಮರ್ಸ್‌ ಕಂಪನಿಗಳೊಂದಿಗೆ ಸಭೆ ನಡೆಸಿ ಸಾಧ್ಯಾಸಾಧ್ಯತೆ ಪರಿಶೀಲಿಸಲಾಗುವುದು.

ಮಯೂರ್‌ ಹೆಗಡೆ

 ಬೆಂಗಳೂರು (ಮಾ.20): ಪ್ರಯಾಣಿಕ ಸಂಚಾರ ಹೊರತುಪಡಿಸಿ ಆದಾಯ ಗಳಿಕೆಯತ್ತ ದೃಷ್ಟಿ ನೆಟ್ಟಿರುವ ಬೆಂಗಳೂರು ಮೆಟ್ರೋ ರೈಲು ನಿಗಮ ದೆಹಲಿ ಮೆಟ್ರೋ ಮಾದರಿಯಲ್ಲಿ ರೈಲಿನಲ್ಲಿ ಸರಕು ಸಾಗಣೆ ಆರಂಭಿಸುವ ಚಿಂತನೆ ಹೊಂದಿದೆ.

ಸರಕು ಸಾಗಣೆ ಬಗ್ಗೆ ಈಚೆಗಷ್ಟೇ ದೆಹಲಿ ಮೆಟ್ರೋ ಸಂಸ್ಥೆಯು ಬ್ಲೂ ಡಾರ್ಟ್‌ ಕಾರ್ಗೊ ಕಂಪನಿ ಜೊತೆ ಒಡಂಬಡಿಕೆ ಮಾಡಿಕೊಂಡಿದೆ. ಇದೀಗ ಅದೇ ಮಾರ್ಗ ಅನುಸರಿಸುವ ಬಗ್ಗೆ ಬಿಎಂಆರ್‌ಸಿಎಲ್‌ ಪರಿಶೀಲಿಸುತ್ತಿದೆ. ಈ ಸಂಬಂಧ ಶೀಘ್ರವೇ ಸರಕು ಸಾಗಣೆ ಕಂಪನಿಗಳು, ಇ-ಕಾಮರ್ಸ್‌ ಕಂಪನಿಗಳ ಜೊತೆಗೆ ಸಭೆ ನಡೆಸಿ ಅವಕಾಶಗಳ ಸಾಧ್ಯಾಸಾಧ್ಯತೆ ಹಾಗೂ ವಿಸ್ತ್ರತ ಮಾಹಿತಿ ಪಡೆಯಲು ಮುಂದಾಗಿದೆ.

‘ಕನ್ನಡಪ್ರಭ’ ಜೊತೆ ಮಾತನಾಡಿದ ವ್ಯವಸ್ಥಾಪಕ ನಿರ್ದೇಶಕ ಎಂ.ಮಹೇಶ್ವರ್‌ ರಾವ್‌,‘ನಮ್ಮ ಮೆಟ್ರೋದಲ್ಲಿ ಸದ್ಯ ಎರಡು ಮಾರ್ಗಗಳಿವೆ, ಹಳದಿ, ಗುಲಾಬಿ ಸೇರಿ ಇತರೆ ಮಾರ್ಗಗಳು ತೆರೆದುಕೊಳ್ಳಲಿವೆ. ಮೆಟ್ರೋ ಸರಕು ಸಾಗಣೆ ಆರಂಭಿಸಿದಲ್ಲಿ ಬಿಎಂಆರ್‌ಸಿಎಲ್‌ ಕಾರ್ಯವ್ಯಾಪ್ತಿ ವಿಸ್ತಾರ ಆಗಲಿದೆ. ಎಷ್ಟು ಪ್ರಮಾಣದ ಸರಕು ಸಾಗಿಸಬಹುದು, ಸರಕಿನ ಸ್ವರೂಪ ಹೇಗಿರಬೇಕು? ಯಾವ ಸಮಯದಲ್ಲಿ ಸಾಗಾಟ ಮಾಡಲು ಸಾಧ್ಯವಿದೆ ಎಂಬುದರ ಬಗ್ಗೆ ಯೋಚಿಸಿ ತೀರ್ಮಾನ ಕೈಗೊಳ್ಳಬೇಕಾಗುತ್ತದೆ’ ಎಂದು ತಿಳಿಸಿದರು.

‘ಜನದಟ್ಟಣೆ ಇಲ್ಲದ ಸಮಯದಲ್ಲಿ ಸರಕು ಸಾಗಣೆ ಮಾಡುವ ಯೋಚನೆ ಇದೆ. ಬೈಯಪ್ಪನಹಳ್ಳಿಯನ್ನು ಕೇಂದ್ರವಾಗಿಟ್ಟುಕೊಂಡು ಈ ಸೇವೆ ಆರಂಭಿಸಬಹುದು. ಸದ್ಯ ನಾವು ಎಲ್ಲ ಅವಕಾಶಗಳ ಕುರಿತು ಪರಿಶೀಲನೆ ನಡೆಸುತ್ತಿದ್ದೇವೆ. ಖಾಸಗಿ ಕಾರ್ಗೋ ಕಂಪನಿಗಳ ಜೊತೆಗೆ ಚರ್ಚಿಸಬೇಕಾಗುತ್ತದೆ’ ಎಂದು ಹೇಳಿದರು.

ಸದ್ಯ 76 ಕಿಮೀ ವ್ಯಾಪ್ತಿಯ ನಮ್ಮ ಮೆಟ್ರೋ ಬಳಿ ಕೇವಲ 57 ರೈಲುಗಳಿವೆ. ಫೆಬ್ರವರಿಯಲ್ಲಿ ಪ್ರಯಾಣಿಕ ದರ ಹೆಚ್ಚಾದ ಬಳಿಕ ಒಂದಿಷ್ಟು ಪ್ರಮಾಣದಲ್ಲಿ ಪ್ರಯಾಣಿಕರನ್ನು ಕಳೆದುಕೊಂಡಿದೆ.

ಯಾವ ಸಮಯ ಸೂಕ್ತ?:

ಬೆಳಗ್ಗೆ 8ಗಂಟೆವರೆಗೆ ನಂತರ ಮಧ್ಯಾಹ್ನ 12ರಿಂದ 4ಗಂಟೆವರೆಗೆ ಹಾಗೂ ರಾತ್ರಿ 9ರಿಂದ ಕೊನೆಯ 11.30ರವರೆಗಿನ ಅವಧಿಯನ್ನು ನಾನ್‌ಪೀಕ್‌ ಅವರ್‌ ಎಂದು ಗುರುತಿಸಲಾಗಿದೆ. ಈ ಸಂದರ್ಭದಲ್ಲಿ ಸರಕು ಸಾಗಣೆ ಮಾಡುವ ಮೂಲಕ ಸಂಸ್ಥೆ ಆದಾಯ ಗಳಿಸಿಕೊಳ್ಳಬಹುದು ಎಂದು ಮೆಟ್ರೋ ಪ್ರಯಾಣಿಕರ ಸಂಘ ಅಭಿಪ್ರಾಯಪಟ್ಟಿದೆ. ಆರಂಭಿಕವಾಗಿ ಹಸಿರು, ನೇರಳೆ ಮಾರ್ಗದ ತಲಾ ಹತ್ತು ಮೆಟ್ರೋ ರೈಲಿನ ಹೊರಭಾಗದಲ್ಲಿ ಜಾಹೀರಾತು ಅಳವಡಿಸಲು ಬಿಎಂಆರ್‌ಸಿಎಲ್‌ ಯೋಜಿಸಿದೆ. ಜತೆಗೆ ನಿಲ್ದಾಣದಲ್ಲಿ ಜಾಹೀರಾತುಗಳ ಮೂಲಕ, ನಿಲ್ದಾಣಗಳ ಕೆಲ ಸ್ಥಳಗಳಿಗೆ ಕಂಪನಿಗಳ ನಾಮಕರಣದ ಮೂಲಕ, ನಿಲ್ದಾಣಗಳಿಗೆ ಪೂರ್ಣ ಹೆಸರಿನ ಹಕ್ಕನ್ನು ಕಂಪನಿಗಳಿಗೆ ನೀಡುವ ಮೂಲಕ ವಾರ್ಷಿಕ ₹100 ಕೋಟಿ ಆದಾಯ ಗಳಿಸುವ ಗುರಿ ಹೊಂದಿದೆ.

ದೆಹಲಿಯಂತೆ ಬೆಂಗಳೂರಿನ ನಮ್ಮ ಮೆಟ್ರೋದಲ್ಲಿ ಸರಕು ಸಾಗಣೆ ಸಾಧ್ಯವಿದೆ. ಈ ಸಂಬಂಧ ಕಾರ್ಗೋ ಕಂಪನಿಗಳ ಜೊತೆಗೆ ಚರ್ಚಿಸಲಾಗುವುದು.

- ಎಂ.ಮಹೇಶ್ವರ್‌ ರಾವ್‌, ಬಿಎಂಆರ್‌ಸಿಎಲ್‌ ವ್ಯವಸ್ಥಾಪಕ ನಿರ್ದೇಶಕರು

8 ತಿಂಗಳ ಮೊದಲೆ ನಾವು ಮೆಟ್ರೋದಲ್ಲಿ ಕೋರಿಯರ್‌ ಸರ್ವೀಸ್‌ ಆರಂಭಿಸುವಂತೆ ಮನವಿ ಮಾಡಿದ್ದೆವು. ಬಿಎಂಆರ್‌ಸಿಎಲ್‌ ಸಂಸ್ಥೆಗೆ ಇದು ಹೆಚ್ಚಿನ ಆದಾಯ ತರುವ ಜೊತೆಗೆ ನಗರದಲ್ಲಿ ಸರಕು ಸಾಗಣೆಗೆ ಅನುಕೂಲವಾಗಲಿದೆ.

- ಪ್ರಕಾಶ್‌ ಮಂಡೊತ್, ಅಧ್ಯಕ್ಷ ಬೆಂಗಳೂರು ಮೆಟ್ರೋ - ಸಬ್‌ಅರ್ಬನ್‌ ರೈಲ್ವೆ ಪ್ರಯಾಣಿಕರ ಸಮಿತಿ
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಡಿಕೆಶಿ ಸಿಎಂ ಆದ್ರೆ ಅವರ ಸಂಪುಟದಲ್ಲಿ ನಾನು ಸಚಿವ ಆಗೋಲ್ಲ: ಕೆಎನ್ ರಾಜಣ್ಣ ದೊಡ್ಡ ನಿರ್ಧಾರ!
'ಅಫಿಡವಿಟ್‌ನಲ್ಲಿ ಡಿಕ್ಲೇರ್ ಮಾಡಿದ್ದರೂ ಟೀಕೆ 'ಚಿಲ್ಲರ್ ಕೆಲಸ': ಸಿಎಂ ಡಿಸಿಎಂ ದುಬಾರಿ ವಾಚ್ ಬಗ್ಗೆ ಬಿಜೆಪಿ ಹೇಳಿಕೆಗೆ ಕಾಶೆಪ್ಪನವರು ಕಿಡಿ