ಲೋಕಸಭಾ ಚುನಾವಣೆಯಲ್ಲಿ ಈ ಎರಡು ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಿದ JDS ಹಾಗೂ ಕಾಂಗ್ರೆಸಿನ ಇಬ್ಬರು ನಾಯಕರ ಸೋಲು ಖಚಿತ ಎಂದು ನಾಯಕರೋರ್ವರು ಭವಿಷ್ಯ ನುಡಿದಿದ್ದಾರೆ.
ಹುಬ್ಬಳ್ಳಿ : ರಾಜ್ಯದ ಎರಡು ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಯುತ್ತಿದ್ದು, ಎರಡು ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಖಚಿತ ಎಂದು ಬಿ.ಎಸ್ ಯಡಿಯೂರಪ್ಪ ಹೇಳಿದ್ದಾರೆ.
ಚಿಂಚೋಳಿ ಮತ್ತು ಕುಂದಗೋಳ ಎರಡರಲ್ಲಿಯೂ ಸರ್ಕಾರವನ್ನು ಮನೆಗೆ ಕಳಿಸಲು ಜನರು ಸಿದ್ಧರಾಗಿದ್ದಾರೆ. ಆದರೆ ಲೂಟಿ ದರೋಡೆ ಮಾಡಿ ಕ್ಷೇತ್ರಗಳಲ್ಲಿ ಗೆಲುವು ಪಡೆಯಲು ಯತ್ನಿಸುತ್ತಿದ್ದಾರೆ. ಡಿ.ಕೆ.ಶಿವಕುಮಾರ್ ಎಷ್ಟೇ ಹಣದ ಚೀಲ ಚೆಲ್ಲಿದ್ರು ಕುಂದಗೋಳ ಗೆಲ್ಲವುದಿಲ್ಲ ಎಂದು ಯಡಿಯೂರಪ್ಪ ಭವಿಷ್ಯ ನುಡಿದಿದ್ದಾರೆ.
ಹಣದಿಂದ ಗೆಲ್ಲುವ ಭ್ರಮೆಯಲ್ಲಿದ್ದು, ಅದು ನಿಜವಾಗಲು ಸಾಧ್ಯವಿಲ್ಲ. ಎರಡು ಕ್ಷೇತ್ರದಲ್ಲಿ ದೊಡ್ಡ ಅಂತರದಿಂದ ಬಿಜೆಪಿ ಗೆಲ್ಲಲಿದೆ. ಸರ್ಕಾರದ ಕಚ್ಚಾದಿಂದ ರಾಜ್ಯದ ಜನತೆ ಬೇಸತ್ತಿದ್ದಾರೆ. ಒಬ್ಬರು ಕಾಲು ಇನ್ನೊಬ್ಬರು ಎಳೆಯುತ್ತಿದ್ದಾರೆ.
ಒಬ್ಬರು ರೇವಣ್ಣ ಎಂದರೆ ಮತ್ತೊಬ್ಬರು ಸಿದ್ದರಾಮಯ್ಯ ಅಂತಾರೆ. ಮತ್ತೆ ಮಲ್ಲಿಕಾರ್ಜುನ ಖರ್ಗೆ ಅಂತಾರೆ ಎಂದು ಬಿಎಸ್ ವೈ ವ್ಯಂಗ್ಯವಾಡಿದರು.
ರಾಜ್ಯದಲ್ಲಿ ಕಚ್ಚಾಟದಿಂದ ಅಭಿವೃದ್ಧಿ ನಿಂತು ಹೋಗಿದೆ. ರಾಜ್ಯದ ಜನ ಆಕ್ರೋಶಗೊಂಡಿದ್ದಾರೆ ಎಂದ ಯಡಿಯೂರಪ್ಪ ಮತ್ತೆ ಸರ್ಕಾರ ರಚನೆಯ ಬಗ್ಗೆ ಮಾತನಾಡಿದರು. ಕುಂದಗೋಳ ಚಿಂಚೋಳಿ ಎರಡು ಗೆದ್ದರೆ ಬಿಜೆಪಿ ಸಂಖ್ಯಾಬಲ 106 ಆಗಲಿದೆ. ಮೂರು ಜನ ಪಕ್ಷೇತರರು ಈಗಾಗಲೇ ನಮಗೆ ಬೆಂಬಲ ಸೂಚಿಸಿದ್ದಾರೆ ಎಂದು ಹೇಳಿದರು.
ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಹಿರಿಯ ನಾಯಕರಿಬ್ಬರು ಸೋಲುವುದು ಖಚಿತ. ತುಮಕೂರಲ್ಲಿ ದೇವೇಗೌಡ, ಕಲಬುರಗಿಯಲ್ಲಿ ಮಲ್ಲಿಕಾರ್ಜುನ್ ಖರ್ಗೆ ಸೋಲಲಿದ್ದಾರೆ. ಮೇ 23ರ ನಂತರ ರಾಜ್ಯದಲ್ಲಿ ಮೈತ್ರಿ ಸರ್ಕಾರ ಉಳಿಯುವುದಿಲ್ಲ ಎಂದು ಬಿ.ಎಸ್.ಯಡಿಯೂರಪ್ಪ ಹೇಳಿದರು.