
ಬೆಂಗಳೂರು (ಅ.24): ಕರ್ನಾಟಕದಲ್ಲಿ ಅದರಲ್ಲೂ ಬೆಂಗಳೂರಿನಲ್ಲಿ ಪರಭಾಷಿಕರ ಹಾವಳಿ ಬಗ್ಗೆ ಚರ್ಚೆಯಾಗುತ್ತಲೇ ಇರುತ್ತದೆ. ಅದರೆ, ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ಈ ವಿಚಾರದಲ್ಲಿ ಇನ್ನಷ್ಟು ಚರ್ಚೆಯಾಗೋದು ಸಾಮಾನ್ಯ. ಇತ್ತೀಚಿನ ವರ್ಷಗಳಲ್ಲಂತೂ ಬೆಂಗಳೂರಿನಲ್ಲಿ ಕನ್ನಡಿಗರೇ ನಾಪತ್ತೆಯಾಗಿದ್ದಾರೆ. ಮೊದಲು ಬೆಂಗಳೂರಿನ ಹೊರವಲಯಗಳಲ್ಲಿ ಮಾತ್ರವೇ ಕಾಣಿಸಿಕೊಳ್ಳುತ್ತಿದ್ದ ಪರಭಾಷಿಕರು ಇಂದು ಬೆಂಗಳೂರಿನ ಪ್ರಧಾನ ಭಾಗಗಳಲ್ಲಿ ಕಾಣಿಸಿಕೊಳ್ಳುತ್ತಿರುವುದು ಮಾತ್ರವಲ್ಲ ಆಯಕಟ್ಟಿನ ಹುದ್ದೆಯಲ್ಲೂ ಪ್ರಾಬಲ್ಯ ಸ್ಥಾಪಿಸಿದ್ದಾರೆ. ಐಟಿ-ಬಿಟಿಯ ಪ್ರಮುಖ ಮ್ಯಾನೇಜರ್ ಹುದ್ದೆಗಳಲ್ಲಿ ಪರಭಾಷಿಕರೇ ಇರುವ ಕಾರಣ ಕನ್ನಡದ ಮಕ್ಕಳಿಗೆ ಕೆಲಸ ಪಡೆದುಕೊಳ್ಳುವುದು ಕಷ್ಟವಾಗುತ್ತಿದೆ. ಈ ನಿಟ್ಟಿಯಲ್ಲಿ ಸಾಕಷ್ಟು ಹೋರಾಟಗಳು ನಡೆಯುತ್ತಿದೆ. ಆದರೆ, ಹೋರಾಟ ಎಂದಿಗೂ ತನ್ನ ನಿರಂತರತೆಯನ್ನು ಕಾಯ್ದುಕೊಂಡಿಲ್ಲ. ಕೆಲ ದಿನಗಳಷ್ಟೇ ಸುದ್ದಿಯಾಗಿ, ರಾಜಕೀಯ ಲಾಭ ಸಿಕ್ಕ ಬಳಿಕ ಸುಮ್ಮನಾಗುತ್ತಿವೆ. ಕೇವಲ ಹಿಂದಿ ಭಾಷಿಕರು ಮಾತ್ರವಲ್ಲ, ತಮಿಳು, ತೆಲುಗು, ಮಲಯಾಳಂ ಭಾಷಿಕರ ಅಬ್ಬರದ ನಡುವೆ ರಾಜಧಾನಿ ಬೆಂಗಳೂರಿನಲ್ಲಿ ಅಪ್ಪಟ ಕನ್ನಡಿಗರು ಮಾರತು ಯಾರಿಗೂ ಕೇಳದಂತಾಗಿದೆ.
ಈ ಬಗ್ಗೆ ಮಾತನಾಡಿರುವ ಕಿರಿಕ್ ಕೀರ್ತಿ, 'ಹಿಂದಿ ಭಾಷಿಕರು ಬಂದಿರೋದು ಎಲ್ಲಿಂದ ಅಂದ್ರೆ, ಪಾನಿಪೂರಿ ಮಾರೋ ವ್ಯಕ್ತಿ, ಟೀ ಮಾರೋ ವ್ಯಕ್ತಿಯಿಂದ ಹಿಡಿದು, ಐಟಿ-ಬಿಟಿ ಟೀಮ್ ಲೀಡರ್, ಬಾಸ್ ತನಕ ಅವರೇ ತುಂಬಿಕೊಂಡಿದ್ದಾರೆ. ಬೆಂಗಳೂರು ಬೆಳೆಸ್ತಾ ಇರೋದೇ ನಾವು. ಬೆಂಗಳೂರು ಉದ್ದಾರ ಆಗ್ತಿರೋದೇ ನಮ್ಮಿಂದ. ನಾವಿಲ್ಲ ಅಂದ್ರೆ ಬೆಂಗಳೂರೇ ಇಲ್ಲ.ನಾವಿಲ್ಲ ಅಂದ್ರೆ ಇಲ್ಲಿನ ಪಬ್ಗಳು ಕ್ಲೋಸ್ ಆಗಿ ಬಿಡುತ್ತೆ, ಇಲ್ಲಿನ ಹೋಟೆಲ್ಗಳು ಕ್ಲೋಸ್ ಆಗಿ ಬಿಡುತ್ತೆ. ಇಲ್ಲಿನ ಜೀವನವೇ ನಡೆಯಲ್ಲ.ಇಲ್ಲಿನ ಜನರೇ ಬದುಕಲ್ಲ ಅಂತಿದ್ದಾರೆ.
ಇನ್ನು ನಾವು ಕನ್ನಡಿಗರು ಕೂಡ ಇಂಥ ಆಟೋ ಡ್ರೈವರ್ಗಳಿಂದ ಕನ್ನಡಿಗರ ಮರ್ಯಾದೆ ಹೋಯ್ತು, ಅದು ಹೋಯ್ತು ಇದು ಹೋಯ್ತು ಅಂತಾ ಹೇಳ್ತಿರ್ತೇವೆ. ನಿಜವಾಗಿ ಕನ್ನಡವನ್ನು ಉಳಿಸ್ತಾ ಇರೋರೇ ಆಟೋ ಡ್ರೈವರ್ಗಳು. ಈ ಥರದ ಪರಿಸ್ಥಿತಿ ನಿರ್ಮಾಣವಾಗಿರೋದೇ ನಮ್ಮವರಿಂದ. ಕನ್ನಡಿಗರಿಂದಲೇ ಈ ಪರಿಸ್ಥಿತಿ ನಿರ್ಮಾಣವಾಗಿದೆ. ಇವತ್ತು ಕನ್ನಡಕ್ಕಾಗಿ ಕೈ ಎತ್ತಿ. ಕನ್ನಡಿಗರೇ ಬಂದು ಕೈ ಕಟ್ ಮಾಡ್ತಾರೆ. ಮುಂದಿನ ದಿನಗಳಲ್ಲಿ ಕನ್ನಡ ದಿನಪತ್ರಿಕೆಗಳು ಇರೋದಿಲ್ಲ. ಸಿನಿಮಾಗಳು ಇರೋದಿಲ್ಲ.ಕನ್ನಡ ಸಾಹಿತ್ಯ ಇರೋದಿಲ್ಲ.ಕನ್ನಡ ಪುಸ್ತಕ ಇರಲ್ಲ ಎಂದು ಹೇಳಿದ್ದಾರೆ.
ಹೀಗೇ ಹೋದರೆ ಮುಂದೊಂದು ದಿನ ಬೆಂಗಳೂರಿನಲ್ಲಿ ಹಿಂದಿ ಆಡಳಿತ ಭಾಷೆಯಾದ್ರೂ ಆಶ್ಚರ್ಯವೇನಿಲ್ಲ. ಎಲ್ಲಿಯವರೆಗೂ ಕನ್ನಡವನ್ನ ಮಾತನಾಡೋದು ಅಭಿಮಾನ ಅಂತಾ ನಾವು ಅಂದುಕೊಳ್ಳೋದಿಲ್ಲವೋ, ಅಲ್ಲಿಯವರೆಗೂ ನಾವು ಈ ಅವಮಾನಗಳನ್ನು ಸಹಿಸಿಕೊಳ್ಳಲೇಬೇಕು. ಕನ್ನಡವನ್ನು ಉಳಿಸಿ, ಕನ್ನಡವನ್ನು ಬೆಳೆಸಿ ಅನ್ನೋದನ್ನ ನಿಲ್ಲಿಸಿ ಮೊದಲು ಕನ್ನಡವನ್ನು ಬಳಸಿ ಎನ್ನುವ ಕೆಲಸವಾಗಬೇಕಿದೆ ಎಂದು ಕಿರಿಕ್ ಕೀರ್ತಿ ಹೇಳಿದ್ದಾರೆ.
ಅಪ್ಪ ದಯವಿಟ್ಟು ಬಾ.....; ಮಗನ ಮೆಸೇಜ್ ನೋಡಿ ಕಿರಿಕ್ ಕೀರ್ತಿ ಭಾವುಕ
ಇನ್ನು ಅವರ ಪೋಸ್ಟ್ಗೆ ಸಾಕಷ್ಟು ಕಾಮೆಂಟ್ಗಳು ಬಂದಿವೆ. 'ಬರೀ ಹಿಂದಿ ಒಂದೇ ಅಲ್ಲ ತಮಿಳು ತೆಲುಗು ಕೂಡಾ ಬೆಂಗಳೂರು ಬಾಷೆ ಆದ್ರೂ ಆಗಬಹುದು..' ಎಂದು ಕಾಮೆಂಟ್ ಮಾಡಿದ್ದಾರೆ. 'ಸರ್ಕಾರವೇ ಕಠಿಣ ಕ್ರಮ ತೆಗೆದುಕೊಳ್ಳುತ್ತಿಲ್ಲ ಏನು ಮಾಡೋದು. ಎಲ್ಲಾ ಕಡೆ ತಮಿಳುನಾಡು ಹಾಗೂ ಆಂಧ್ರ ಅವರ ರಾಜಕಾರಣ ನಡೆಯುತ್ತಿದೆ' ಎಂದು ಬರೆದುಕೊಂಡಿದ್ದಾರೆ. ಬೆಂಗಳೂರಿನ ಏರ್ಪೋರ್ಟ್ಗಳಲ್ಲಿ ಕನ್ನಡ ದಿನಪತ್ರಿಕೆಗಳೇ ಇರೋದಿಲ್ಲ.ಬರೀ ಇಂಗ್ಲೀಷ್ ಪತ್ರಿಕೆಗಳು ಇರುತ್ತದೆ ಎಂದು ಅಭಿಪ್ರಾಯ ಹಂಚಿಕೊಂಡಿದ್ದಾರೆ. 'ಒಂದು ಒಳ್ಳೆಯ ವಿಚಾರವನ್ನು ಇಟ್ಟುಕೊಂಡು ಮಾತನಾಡಿದ್ದೀರಿ, ಐಟಿ ಬಿಟಿ ಕಂಪನಿಯಲ್ಲಿ ಕನ್ನಡಿಗರಿಗೆ ಇಂತಿಷ್ಟು ಹುದ್ದೆಗಳನ್ನು ಮೀಸಲಿಡುವಂತಹ ಕಡ್ಡಾಯ ಆದೇಶ ಸರ್ಕಾರ ಹೊರಡಿಸಬೇಕು..'ಎಂದು ಮತ್ತೊಬ್ಬರು ಬರೆದಿದ್ದಾರೆ. 'ಬೆಂಗಳೂರು ಅಲ್ಲಿ 40-50% ಕನ್ನಡದವರು ಇಲ್ಲಾ.. ಬೆಂಗಳೂರಲ್ಲಿ ಇರೋ ಎಷ್ಟೋ ರಾಜಕಾರಣಿಗಳೇ ಕನ್ನಡದವರು ಅಲ್ಲ. ಐಟಿ ಬಿಟಿ ಅಲ್ಲಿ ಇರೋದು ಭಾಗಶಃ ತೆಲುಗು ಜನ. ಐಟಿ ಅಲ್ಲಿ ಆಗ್ತೀರೋ ರಾಜಕಾರಣ ಇದೆ ರೀತಿ ಹೋದ್ರೆ ಕನ್ನಡದವರಿಗೆ ಕೆಲಸ ಸಿಗಲ್ಲ.' ಎಂದು ವಿಚಾರ ಹಂಚಿಕೊಂಡಿದ್ದಾರೆ.
ಬಿಗ್ಬಾಸ್ ಕರೆಸಿಕೊಳ್ಳಲ್ಲ ಅಂತ ಗೊತ್ತಾದ್ಮೇಲೆ ಲಾಯರ್ ಜಗದೀಶ್ಗೆ ಮನೆಯಲ್ಲಿ ಈ ಸ್ಥಿತಿನಾ? ಅಯ್ಯೋ ಎಂದ ಫ್ಯಾನ್ಸ್
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ